ಭಾರತ ಬಲಹೀನವಾಗಲು ಕಾರಣವೇನು?!
ಒಂದು ಮನೆಯಲ್ಲಿ 100 ಜನರಿರುತ್ತಾರೆ ಎಂದಿಟ್ಟುಕೊಳ್ಳಿ. ಅದರಲ್ಲಿ ಇಬ್ಬರು ಓದಬೇಕು, ಮೂವರು ಶಸ್ತ್ರ ಹಿಡಿಯಬೇಕು, ಮತ್ತೊಂದಿಬ್ಬರು ವ್ಯಾಪಾರ ಮಾಡಬೇಕು, ಉಳಿದವರೆಲ್ಲರೂ ಅಂದರೆ ಉಳಿಯುವ 93 ಜನರೂ ಇವ್ಯಾವುದನ್ನೂ ಕಡ್ಡಾಯವಾಗಿ ಮಾಡಬಾರದು. ಬದಲಿಗೆ ಆ ಏಳೂ ಜನರ ಸೇವೆ ಮಾಡುತ್ತ ಕೂರಬೇಕು. ಹೀಗೊಂದು ವ್ಯವಸ್ಥೆ ಇದೆ ಮತ್ತು ಆ ವ್ಯವಸ್ಥೆ ವಿರುದ್ಧ 1000 ಜನ ದಂಡೆತ್ತಿ ಬರುತ್ತಾರೆ ಎಂದಿಟ್ಟುಕೊಳ್ಳಿ. ಆಗ ಅಂತಹ ದಂಡಿನ ವಿರುದ್ಧ ಆ ನೂರು ಜನರ ಮನೆಯಲಿ,್ಲ ಆ ಮನೆಯಲ್ಲಿ ಶಸ್ತ್ರ ಹಿಡಿಯಲು ಹಕ್ಕು ಪಡೆದಿರುವ ಕೇವಲ ಆ ಮೂವರು ಮಾತ್ರ ನಿಂತರೆ, ನೂರು ಜನರ ಆ ಮನೆ 1000 ಜನರ ಆ ದಂಡಿನ ವಿರುದ್ಧ ಉಳಿಯುವುದು ಸಾಧ್ಯವೆ? ಮತ್ತು ಅದೇ ವ್ಯವಸ್ಥೆ ಒಂದು ದೇಶಕ್ಕೆ ಅನ್ವಯವಾದರೆ ಆ ದೇಶವಾದರೂ ಉಳಿಯುವುದು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಹೇಳುವುದಾದರೆ ಭಾರತಕ್ಕೊದಗಿದ ಗತಿಯೇ ಇದು. ಬ್ರಾಹ್ಮಣರಿಗೆ ಮಾತ್ರವೇ ಶಿಕ್ಷಣ, ಕ್ಷತ್ರಿಯರಿಗೆ ಮಾತ್ರ ಖಡ್ಗ ಹಿಡಿಯುವ ಹಕ್ಕು, ವೈಶ್ಯರಿಗೆ ಮಾತ್ರ ವ್ಯಾಪಾರ ಮಾಡುವ ಹಕ್ಕು, ಇನ್ನುಳಿದ ಶೇ.90ರಷ್ಟು ಶೂದ್ರರಿಗೆ ಇವರೆಲ್ಲರ ಸೇವೆ ಮಾಡುವ ಹಕ್ಕು, ಅಂದರೆ ವರ್ಣಾಶ್ರಮ ಧರ್ಮ ಕಟ್ಟುನಿಟ್ಟಾಗಿ, ಬಹಳ ನೀಟಾಗಿ ಜಾರಿಯಾದರೆ ವ್ಯವಸ್ಥೆ ಬಲಗೊಳ್ಳುವುದಾದರೂ ಹೇಗೆ? ಪರಿಣಾಮ ಭಾರತ 1,500 ವರ್ಷಕ್ಕೂ ಮಿಕ್ಕಿ ಪರಕೀಯರ ಆಳ್ವಿಕೆಯಲ್ಲಿ ಇರಬೇಕಾಯಿತು! ಆಶ್ವರ್ಯವೆಂದರೆ ವರ್ಣಾಶ್ರಮ ತುಂಬಿದ ಈ ದುರ್ಬಲತೆಯ ಆರೋಪವನ್ನು ಹಿಂದೂ ಮೂಲಭೂತವಾದಿಗಳು ಸಾಮ್ರಾಟ್ ಅಶೋಕನ ವಿರುದ್ಧ ತಿರುಗಿಸುತ್ತಿದ್ದಾರೆ. ಹೇಗೆಂದರೆ ‘ಅಶೋಕ ಚಕ್ರವರ್ತಿಯಾದ, ಭಾರತ ಬಲಹೀನವಾಯ್ತು’ ಎಂಬಂತೆ! ವರ್ಣಾಶ್ರಮ ಧರ್ಮ; ಅದು ಭಾರತವನ್ನು ಅದು ಹೇಗೆ ದುರ್ಬಲಗೊಳಿಸಿತು? ಹೇಗೆಂದರೆ ಭಾರತವನ್ನು ಅದು ಆಂತರಿಕವಾಗಿಯೂ, ಬಾಹ್ಯವಾಗಿಯೂ ದುರ್ಬಲಗೊಳಿಸಿತು. ಆಂತರಿಕವಾಗಿ ಅಂದರೆ ಭಾರತದ ಒಳಗೆ ಯಾರೂ ಸಮಾಜದ ಉನ್ನತ ವರ್ಗಗಳ ವಿರುದ್ಧ, ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ವಿರುದ್ಧ ಶೂದ್ರರು ದಂಗೆ ಏಳದಿರಲಿ ಎಂಬಂತೆ. ಖಂಡಿತ, ಅದು ಹಾಗೆಯೇ ಆಯಿತು. ಈ ಬಗ್ಗೆ ಬರೆಯುತ್ತ ಅಂಬೇಡ್ಕರರು ‘‘ಜನಸಾಮಾನ್ಯರು ಭಾರತದಲ್ಲಿ ತಮ್ಮ ಮೇಲೆ ಹೇರಲ್ಪಟ್ಟಿದ್ದ ಮೇಲು ಕೀಳು ಎಂಬ ಈ ಸಾಮಾಜಿಕ ಕೇಡನ್ನು ಸಹಿಸಿಕೊಂಡಿದ್ದರು. ಏಕೆಂದರೆ ಪ್ರಪಂಚದ ಬೇರೆಡೆಯೆಲ್ಲ ಸಾಮಾಜಿಕ ಕ್ರಾಂತಿಗಳಾಗಿವೆ, ಆದರೆ ಭಾರತದಲ್ಲಿ ಮಾತ್ರ ಸಾಮಾಜಿಕ ಕ್ರಾಂತಿಯಾಗಿಲ್ಲ ಮತ್ತು ಏಕೆ ಕ್ರಾಂತಿಯಾಗಿಲ್ಲ ಎಂಬ ಈ ಪ್ರಶ್ನೆ ನನ್ನನ್ನು ಬಹಳ ಕಾಡಿದೆ. ಇದಕ್ಕೆ ನಾನು ಕೊಡುವ ಒಂದು ಉತ್ತರವೆಂದರೆ ದರಿದ್ರ ಈ ಚಾತುರ್ವರ್ಣ ವ್ಯವಸ್ಥೆ ತಳವರ್ಗಗಳನ್ನು (ಮೇಲ್ವರ್ಗಗಳ ವಿರುದ್ಧ) ನೇರ ಕಾಯಾಚರಣೆಗಿಳಿಯದಂತೆ ಸಂಪೂರ್ಣ ಅಸಹಾಯಕರನ್ನಾಗಿಸಿದ್ದು. ಹೇಗೆಂದರೆ ಶೂದ್ರ ಆ ತಳ ಸಮುದಾಯಗಳು ಶಸ್ತ್ರ ಹಿಡಿಯುವ ಆಗಿರಲಿಲ್ಲ ಮತ್ತು ಶಸ್ತ್ರವಿಲ್ಲದೆ ಅವರು ಬಂಡೇಳುವಂತಿರಲಿಲ್ಲ! ಅವರು (ಶೂದ್ರರು) ಹೊಲ ಉಳುವ ರೈತರಾಗಿದ್ದರು ಅಥವಾ ಅವರು ರೈತರಾಗಿಯೇ ಇರುವಂತೆ ನಿರ್ಬಂಧಿಸಲಾಗಿತ್ತು. ಅಂದಹಾಗೆ ಹೊಲ ಉಳುವ ಆ ಶೂದ್ರ ರೈತರ ನೇಗಿಲ ಗುಳ ಖಡ್ಗವಾಗಿದ್ದರೆ? ಶೂದ್ರರ ಬಳಿ ಖಡ್ಗವಿರಲಿಲ್ಲ, ಬದಲಿಗೆ ಅವರು ಪ್ರತಿಯೊಬ್ಬರೂ ನೇಗಿಲನ್ನು ಆರಿಸಿಕೊಂಡರು ಮತ್ತು ಹಾಗೆಯೇ ಉಳಿದರು. ಚಾತುರ್ವರ್ಣದ ಈ ಕಾರಣಕ್ಕೆ ಶೂದ್ರರು ಶಿಕ್ಷಣ ಪಡೆಯಲಾಗಲಿಲ್ಲ. ಪರಿಣಾಮ ತಮ್ಮ ವಿಮೋಚನೆಗಾಗಿ ಅವರು ಯೋಚಿಸಲು ಅಥವಾ ಆ ಮಾರ್ಗ ತುಳಿಯಲು ಸಾಧ್ಯವಾಗಲಿಲ್ಲ. ಅಂದರೆ ಶೂದ್ರರನ್ನು ತಳಮಟ್ಟದಲ್ಲಿಯೇ ಇರುವಂತೆ ನಿರ್ಬಂಧಿಸಲಾಯಿತು. ತಪ್ಪಿಸಿಕೊಳ್ಳುವ ಹಾದಿ ತಿಳಿಯದೆ ಅಥವಾ ತಪ್ಪಿಸಿಕೊಳ್ಳುವ ಹಾದಿ ಇಲ್ಲದೆ ಶಾಶ್ವತವಾದ ದಾಸ್ಯಕ್ಕೆ ಅವರು ಒಳಗಾದರು ಮತ್ತು ಅದನ್ನು ಅವರು ತಮ್ಮ ಹಣೆಬರಹ ಎಂದುಕೊಂಡರು’’(ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.3, ಪು.70).
ಈ ನಿಟ್ಟಿನಲ್ಲಿ ಹೇಳುವುದಾದರೆ ವರ್ಣಾಶ್ರಮ ಧರ್ಮ ತಾನು ಯಾವುದಕ್ಕೋಸ್ಕರ ಅಸ್ತಿತ್ವದಲ್ಲಿತ್ತೋ ಅದರಲ್ಲಿ ಯಶಸ್ಸು ಕಂಡಿತು. ಅಂದರೆ ಬಹುಸಂಖ್ಯಾತ ಜನಸಾಮಾನ್ಯ ಶೂದ್ರರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿಕ್ಕೆ, ಗುಲಾಗಿರಿಯಲ್ಲಿಟ್ಟುಕೊಳ್ಳಲಿಕ್ಕೆ ಅದು ಯಶ ಕಂಡಿತು. ಆ ಮೂಲಕ ಇಡೀ ದೇಶವನ್ನು ಅದು ಆಂತರಿಕವಾಗಿ ದುರ್ಬಲಗೊಳಿಸಿತು. ಆದರೆ.....? ಏಕೆಂದರೆ ಒಂದು ದೇಶವೆಂದರೆ ಅದು ಬರೀ ಆಂತರಿಕವಷ್ಟೆ ಅಲ್ಲ, ಬಾಹ್ಯದೊಡನೆಯೂ ಕೂಡ ಅದು ಸಂಪರ್ಕವಿಟ್ಟುಕೊಳ್ಳಬೇಕಾಗುತ್ತದೆ ಮತ್ತು ಬಾಹ್ಯದಿಂದಲೂ ಕೂಡ ದಾಳಿಗಳಾಗುತ್ತವೆ. ವರ್ಣಾಶ್ರಮ ಧರ್ಮ ಅಥವಾ ಅದನ್ನು ಸೃಷ್ಟಿದವ ಅರಿಯದ ಸತ್ಯವೆಂದರೆ ಇದು! ಶೂದ್ರರನ್ನು ಹದ್ದುಬಸ್ತಿನಲ್ಲಿಡಲು ಅದು ಸವಾರಿಮಾಡಿತು ಮತ್ತು ಸವಾರಿಮಾಡಲು ಜನಸಂಖ್ಯೆಯಲ್ಲಿ ಶೇ.90ರಷ್ಟಿದ್ದ ಆ ಸಮುದಾಯಕ್ಕೆ ಅದು ಶಸ್ತ್ರ ಹಿಡಿಯಲು ಅವಕಾಶ ನಿರಾಕರಿಸಿತ್ತು. ಪರಿಣಾಮ ಪರಕೀಯರು ಭಾರತಕ್ಕೆ ಒಬ್ಬೊಬ್ಬರಾದ ಮೇಲೆ ಒಬ್ಬರಂತೆ ಸಾಲುಸಾಲಾಗಿ ಬರಲಾಂರಂಭಿಸಿದರು! ಅಂದಹಾಗೆ ಪರಕೀಯ ದಾಳಿಯಂತಹ ವಿಷಮಯ ಸನ್ನಿವೇಶದಲ್ಲಿ ದೇಶವೊಂದರ ಸರ್ವರೂ ಶಸ್ತ್ರ ಹಿಡಿಯುವ ಅಗತ್ಯಬೀಳುತ್ತದೆ, ದಾಳಿ ಹಿಮ್ಮೆಟ್ಟಿಸಬೇಕಾಗುತ್ತದೆ. ಆದರೆ ಭಾರತದಲ್ಲಿ ಆದದ್ದು? ವರ್ಣಾಶ್ರಮ ಧರ್ಮದ ಪರಿಣಾಮ, ಮತ್ತೆ ಹೇಳುವುದಾದರೆ 100ರಲ್ಲಿ ಮೂವರು ಮಾತ್ರ ಶಸ್ತ್ರ ಹಿಡಿದು ನಿಂತರು. ಈ ದಿಸೆಯಲ್ಲಿ ಸಾಮ್ರಾಟ್ ಅಶೋಕನನ್ನು ದೂರುವವರು ಇದಕ್ಕೆ ಉತ್ತರಿಸಬೇಕು, ಇಲ್ಲವೆ ಕಪೋಲಕಲ್ಪಿತ ಕಥೆಗಳನ್ನು ಕಟ್ಟದೆ ಅದನ್ನೆ ಇತಿಹಾಸ ಎನ್ನದೆ ಬಾಯ್ಮುಚ್ಚಿ ಹಾಗೇ ಕೂರಬೇಕು. ಈ ಬಗ್ಗೆ ಅಂದರೆ ವರ್ಣವ್ಯವಸ್ಥೆ ಪರಕೀಯ ದಾಳಿಗೆ ಭಾರತವನ್ನು ಹೇಗೆ ಈಡುಮಾಡಿತು ಎಂಬುದರ ಬಗ್ಗೆ ಬರೆಯುತ್ತಾ ಅಂಬೇಡ್ಕರರು ಹೇಳುತ್ತಾರೆ ‘‘(ಪರಕೀಯ ದಾಳಿಯಂಥ) ಮಹಾದುರಂತ ಸಂಭವಿಸಿದಾಗ ಇಡೀ ಸಮಾಜವೇ ತನ್ನ ಎಲ್ಲ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡು ಒಂದೆಡೆ ನಿಲ್ಲಬೇಕಾಗುತ್ತದೆ. ಯುದ್ಧದಂತಹ ಘೋರ ದುರಂತ ಎರಗಿದಾಗ ಇಡೀ ಸಮಾಜವೇ ತನ್ನ ಎಲ್ಲ ಮಾನವ ಸಂಪನ್ಮೂಲವನ್ನು ಸೈನ್ಯೀಕರಣಕ್ಕೆ ಸಜ್ಜುಗೊಳಿಸಿಕೊಳ್ಳಬೇಕಾಗುತ್ತದೆ ಮತ್ತು ಆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸೈನಿಕರಾಗಬೇಕಾಗುತ್ತದೆ, ಪ್ರತಿಯೊಬ್ಬರೂ ಯುದ್ಧ ಮಾಡಬೇಕಾಗುತ್ತದೆ. ಆದರೆ ಪ್ರಶ್ನೆ ಏನೆಂದರೆ ಜಾತಿ ತತ್ವದಲ್ಲಿ ಇದು ಸಾಧ್ಯವೆ? ಎಂಬುದು. ಖಂಡಿತ ಸಾಧ್ಯವಿಲ್ಲ. ಏಕೆಂದರೆ ಜಾತಿ ಸೈನ್ಯೀಕರಣಕ್ಕಾಗಿ ಇಂತಹ ಒಗ್ಗೂಡುವಿಕೆಯನ್ನು ತಡೆಯುತ್ತದೆ. ನಿಜ ಹೇಳಬೇಕೆಂದರೆ ಭಾರತದ ಇತಿಹಾಸದ ಉದ್ದಕ್ಕೂ ಅದಕ್ಕೆ ಸಂಭವಿಸಿರುವ ನಿರಂತರ ಸೋಲಿನ ಕಥೆಗೆ ಜಾತಿಯೇ ಕಾರಣ. ಜಾತಿ ಜನಸಾಮಾನ್ಯರು ಒಗ್ಗೂಡುವುದನ್ನು ತಡೆದಿದೆ ಅಥವಾ ಒಗ್ಗೂಡಿದರೂ ಸೀಮಿತ ಮಟ್ಟದಲ್ಲಷ್ಟೆ ಅದು ನಡೆದಿದೆ. (ಏಕೆಂದರೆ ಹಿಂದೆ ಹೀಗೆ ಪರಕೀಯ ದಾಳಿ ನಡೆದಾಗ) ಕೇವಲ ಕ್ಷತ್ರಿಯರು ಮಾತ್ರ ಯುದ್ಧ ಮಾಡುತ್ತಾರೆ ಎಂದುಕೊಳ್ಳಲಾಗುತ್ತಿತ್ತು ಉಳಿದವರು ಅಂದರೆ ಬ್ರಾಹ್ಮಣರು ಮತ್ತು ವೈಶ್ಯರು ಶಸ್ತ್ರ ಹಿಡಿಯುತ್ತಿರಲಿಲ್ಲ. ಅಲ್ಲದೆ ದೇಶದಲ್ಲಿ ಬಹುಸಂಖ್ಯೆಯಲ್ಲಿದ್ದ ಶೂದ್ರರೂ ಕೂಡ ನಿಶಸ್ತ್ರರಾಗಿದ್ದರು. ಪರಿಣಾಮ ಪರಕೀಯ ಶತೃಗಳು ಕ್ಷತ್ರಿಯರ ಒಂದು ಸಣ್ಣ ಬಣವನ್ನಷ್ಟೆ ಸೋಲಿಸಿದ್ದರೆ ಸಾಕಿತ್ತು ಇಡೀ ದೇಶವೇ ಅವರ ಪದತಲದಲ್ಲಿ ಬೀಳುತ್ತಿತ್ತು. ಹಾಗೆಯೇ ಅಲ್ಪಸಂಖ್ಯೆಯಲ್ಲಿದ್ದ ಕ್ಷತ್ರಿಯರಿಗೂ ಅಂತಹ ಪ್ರತಿರೋಧ ಒಡ್ಡುವುದು ಸಾಧ್ಯವಾಗುತ್ತಿರಲಿಲ್ಲ ಮತ್ತು ಅಂತಹ ಪ್ರತಿರೋಧ ಒಡ್ಡುವ ಸಾಮರ್ಥ್ಯವೂ ಕೂಡ ಅವರಿಗಿರಲಿಲ್ಲ. ಈ ದಿಸೆಯಲ್ಲಿ ಭಾರತದಲ್ಲಿ ನಡೆದಿರುವ ಯುದ್ಧಗಳು ಏಕಪಕ್ಷೀಯವಾಗಿರುತ್ತಿತ್ತು. ಇದಕ್ಕೆ ಕಾರಣವೆಂದರೆ ಒಬ್ಬ ಕ್ಷತ್ರಿಯ ಬಿದ್ದನೆಂದರೆ ಇಡೀ ವ್ಯವಸ್ಥೆಯೇ ಬಿದ್ದಂತಾಗುತ್ತಿತ್ತು ಎಂಬುದು’’ (ಅಂಬೇಡ್ಕರ್ ಬರಹಗಳು, ಇಂಗ್ಲೀಷ್ ಸಂ.3, ಪು.71). ದುರಂತವೆಂದರೆ ಭಾರತದ ಇತಿಹಾಸದ ವರ್ಣಾಶ್ರಮ ಧರ್ಮದ ಈ ಹುಳುಕನ್ನು ಗಮನಿಸದೆ ಕೆಲ ಹಿಂದೂ ಮೂಲಭೂತವಾದಿ ಲೇಖಕರು ‘‘ಅಶೋಕ ಧರ್ಮ ವಿಜಯದ ಕಾರಣಕ್ಕೆ ಕ್ಷಾತ್ರತೇಜದಿಂದ ದೂರವಾದ, ಭಾರತೀಯರೊಳಗೆ ಹೇಡಿತನ, ಆಲಸ್ಯತನ ಬೆಳೆಯಿತು, ಭಾರತ ದುರ್ಬಲವಾಯಿತು’’ ಎನ್ನುತ್ತಾರೆ. ಸರಿ, ಒಪ್ಪಿಕೊಳ್ಳೋಣ ಅಶೋಕನೇನೊ ಕ್ಷಾತ್ರ ತೇಜದಿಂದ ದೂರವಾದ. ಆದರೆ ತತಕ್ಷಣವೇ ಆತನ ನಂತರ ದೇಶದ ಇತರರು ಅಂದರೆ ಬ್ರಾಹ್ಮಣ, ವೈಶ್ಯ, ಶೂದ್ರರು ಕ್ಷಾತ್ರ ತೇಜ ಬೆಳೆಸಿಕೊಳ್ಳಬಹುದಿತ್ತಲ್ಲ? ಹೇಗೆ ಬೆಳೆಸಿಕೊಳ್ಳುತ್ತಾರೆ? ಏಕೆಂದರೆ ಅಶೋಕ ಸತ್ತ ಕೇವಲ 47 ವರ್ಷಗಳಲ್ಲೆ ಅಂದರೆ ಕ್ರಿ.ಪೂ.185ರಲ್ಲೆ ಶುಂಗ ವಂಶದ ಪುಷ್ಯಮಿತ್ರ ಶುಂಗ ತನ್ನ ಆಸ್ಥಾನದ ಸುಮತೀಭಾರ್ಗವ ಎಂಬುವವನಿಂದ ಮನುಸ್ಮತಿ ಬರೆಸಿದ್ದ! ಆ ಮೂಲಕ ವರ್ಣವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದ! ಹಾಗೆಯೇ ಮತ್ತೊಂದು ಪ್ರಶ್ನೆ. ಸಾಮ್ರಾಟ ಅಶೋಕ ಬದುಕಿದ್ದು 72 ವರ್ಷಗಳು. ಅಂದರೆ ಕ್ರಿ.ಪೂ.304ರಿಂದ ಕ್ರಿ.ಪೂ.232 ರವರೆಗೆ. ಆದರೆ ಅಶೋಕನ ಮರಣ ನಂತರ ಅಂದರೆ ಕ್ರಿ.ಪೂ.232ರಿಂದ ಕ್ರಿ.ಶ.1947 ರವರೆಗೆ ಭಾರತಕ್ಕೆ ಸುಮಾರು 2,179 ವರ್ಷಗಳ ಇತಿಹಾಸವಿತ್ತು ಮತ್ತು 2,179 ವರ್ಷಗಳ ಆ ಅಗಾಧ ಸಮಯದಲ್ಲಿ ಅಶೋಕ ಇರಲಿಲ್ಲ. ಮತ್ತೂ ಹೇಳುವುದಾದರೆ ಕ್ರಿ.ಶ.4ನೆ ಶತಮಾನದ ನಂತರ ಭಾರತದಲ್ಲಿ ಬೌದ್ಧ ಧರ್ಮವೂ ಇರಲಿಲ್ಲ. ಅಂದರೆ ಇವರ ಧರ್ಮವೇ ಇತ್ತು, ಇವರ ರಾಜರೇ ಇದ್ದರು. ಹೀಗಿರುವಾಗ ಇವರ್ಯಾರೂ ಯಾಕೆ ಪರಕೀಯ ದಾಳಿಗಳನ್ನು ತಡೆಯಲಿಲ್ಲ? ತಡೆಯಲಿಲ್ಲ, ಯಾಕೆಂದರೆ ಅಲ್ಲಿ ಬಾಬಾಸಾಹೇಬ್ ಅಂಬೇಡ್ಕರರು ಹೇಳಿದ ವರ್ಣವ್ಯವಸ್ಥೆ ಇತ್ತಲ್ಲ! ಹಿಂದೂ ಮೂಲಭೂತವಾದಿಗಳು ಹೇಳುವಂತೆ ಭಾರತ ದುರ್ಬಲವಾಗಲು ಸಾಮ್ರಾಟ್ ಅಶೋಕ ಕಾರಣನಲ್ಲ. ಬದಲಿಗೆ ಅಶೋಕನ ನಂತರ ಜಾರಿಗೆ ಬಂದು ಪ್ರಾಬಲ್ಯ ಹೊಂದಿದ ವರ್ಣಾಶ್ರಮ ಧರ್ಮ ಕಾರಣ. ವರ್ಣವ್ಯವಸ್ಥೆ ಕಾರಣ. ಈ ಬಗ್ಗೆ ಇತಿಹಾಸವನ್ನು ವ್ಯಾಖ್ಯಾನಿಸುವ ಅಂಬೇಡ್ಕರರು ‘‘ಭಾರತದ ಇತಿಹಾಸದಲ್ಲಿ ಕಗ್ಗತ್ತಲೆಯ ಮತ್ತು ಸೋಲಿನ ಯುಗ ಯಾವುದೆಂದರೆ ಚಾತುರ್ವರ್ಣ ಭಾರತದಲ್ಲಿ ಅರಳಿದ ಯುಗ’’ ಎನ್ನುತ್ತಾರೆ. ಹಾಗೆಯೇ ಅಶೋಕನ ಮೌರ್ಯ ಸಾಮ್ರಾಜ್ಯದ ಬಗ್ಗೆ ಮಾತನಾಡುವ ಅಂಬೇಡ್ಕರರು ‘‘ಭಾರತದ ಇತಿಹಾಸದಲ್ಲಿ ಕೇವಲ ಒಂದು ಯುಗ ಮಾತ್ರ ಸ್ವಾತಂತ್ರ್ಯ, ಶ್ರೇಷ್ಠತೆ ಮತ್ತು ವೈಭವದ ಯುಗವಾಗಿತ್ತು. ಆ ಯುಗ ಯಾವುದೆಂದರೆ ಮೌರ್ಯ ಸಾಮ್ರಾಜ್ಯದ ಯುಗ’’ ಎನ್ನುತ್ತಾರೆ. ಒಟ್ಟಾರೆ ಅಂಬೇಡ್ಕರರ ಈ ಬರಹಗಳ ಮೂಲಕ ಅರಿವಿಗೆ ಬರುವ ಇತಿಹಾಸದ ಕಠೋರ ಸತ್ಯವೆಂದರೆ ಭಾರತ ದುರ್ಬಲವಾಗಲು ಸಾಮ್ರಾಟ್ ಅಶೋಕ ಕಾರಣನಲ್ಲ ಅಥವಾ ಅವನು ಬೌದ್ಧ ಧರ್ಮ ಸ್ವೀಕರಿಸಿದ್ದೂ ಕೂಡ ಕಾರಣವಲ್ಲ, ಯುದ್ಧ ತ್ಯಜಿಸಿದ್ದೂ ಕೂಡ ಕಾರಣವಲ್ಲ. ಬದಲಿಗೆ ಅಶೋಕನ ನಂತರ ಪ್ರಾಬಲ್ಯಕ್ಕೆ ಬಂದ ವರ್ಣವ್ಯವಸ್ಥೆ, ಕ್ಷತ್ರಿಯರನ್ನು ಹೊರತು ಪಡಿಸಿ ಇತರರನ್ನು ಶಸ್ತ್ರ ಹಿಡಿಯದಂತೆ ಯುದ್ಧ ಮಾಡದಂತೆ ಅದು ಹಾಕಿದ್ದ ಬೇಲಿ ಕಾರಣ ಎಂಬುದು.