ಪ್ರಕಾಶಿಸುತ್ತಿವೆ ಜೋಡುಪಾಲ-ಅಬ್ಬಿಕೊಲ್ಲಿಯ ಗೂಡಂಗಡಿಗಳು
ಸಣ್ಣ ಜಲಪಾತದಲ್ಲೂ ವಿದ್ಯುತ್ ಸಂಚಲನ..!
ಸುಳ್ಯದಿಂದ ಮಡಿಕೇರಿ ರಸ್ತೆಯಲ್ಲಿ ಚಲಿಸುವಾಗ ಘಾಟ್'ನ ಮಧ್ಯೆ ಮದೆನಾಡು ಸಿಗುತ್ತದೆ. ಮದೆ ಗ್ರಾಮ ಪಂಚಾಯತ್'ಗೆ ಒಳಪಟ್ಟ ರಸ್ತೆಯ ದೊಡ್ಡ ತಿರುವಿನಲ್ಲಿ ಸಿಗುವ ಜೋಡುಪಾಲ-ಅಬ್ಬಿಕೊಲ್ಲಿ ನೀರಿನ ಜಲಪಾತವನ್ನು ನೋಡದವರು ಇರಲಾರರು. ಕಾರಣ ಅದು ಮುಖ್ಯ ರಸ್ತೆಯ ಬದಿಯಲ್ಲೇ ಇದ್ದು ಜನರನ್ನು ಆಕರ್ಷಿಸುತ್ತಿದೆ. ಆ ರಸ್ತೆಯಾಗಿ ಖಾಸಗಿ ವಾಹನದಲ್ಲಿ ಪ್ರಯಾಣಿಸುವವರು ಜಲಪಾತದ ಮೈಮಾಟಕ್ಕೆ ತಲೆದೂಗಿ ನಿಲ್ಲಿಸದೆ ಮುಂದೆ ಹೋಗಲಾರರು.
ಜೋಡುಪಾಲ-ಅಬ್ಬಿಕೊಲ್ಲಿ ನೀರಿನ ಝರಿ ಇರುವಲ್ಲಿ ರಸ್ತೆ ಅಗಲವಾಗಿರುವುದರಿಂದ ಅಲ್ಲಿ ವಾಹನ ನಿಲುಗಡೆಗೆ ಸ್ಥಳವಿದೆ. ಹಿಂದೆ ಈ ಪ್ರದೇಶ ಅಷ್ಟೊಂದು ಆಕರ್ಷಣೆ ಪಡೆದಿರಲಿಲ್ಲ. ಹೊಂಡಗುಂಡಿಗಳಿಂದ ಕೂಡಿದ್ದ ಮಡಿಕೇರಿ ಘಾಟ್ ರಸ್ತೆಗೆ ಡಾಮರಿನ ಕಾಯಕಲ್ಪವಾದಾಗ ಜಲಾಶಯವಿರುವ ಸ್ಥಳದಲ್ಲಿ ಕೂಡಾ ಬಹುತೇಕ ಪ್ರದೇಶಕ್ಕೆ ಡಾಮರು ಹಾಸಿ ಡಿವೈಡರ್ ನಿರ್ಮಿಸಲಾಯಿತು. ಆವಾಗ ಅಬ್ಬಿಕೊಲ್ಲಿ ಜಲಪಾತಕ್ಕೆ ಕಳೆ ಬಂತು. ಪ್ರಯಾಣಿಕರು ವಾಹನ ನಿಲ್ಲಿಸಿ ಪರಿಸರ ಆಸ್ವಾದಿಸಲು ಪ್ರಾರಂಭಿಸಿದರು. ಬರುಬರುತ್ತಾ ಜಲಪಾತ ಜನಾಕರ್ಷಣೆ ಕೇಂದ್ರವಾಗುವುದನ್ನು ಮನಗಂಡ ಸ್ಥಳೀಯರೊಬ್ಬರು ಚಾ ಮತ್ತು ಸ್ನ್ಯಾಕ್ಸ್ ನ ಗೂಡಂಗಡಿ ತೆರೆದರು. ಪ್ರಸ್ತುತ ಈ ಸ್ಥಳದಲ್ಲಿ ದಿನನಿತ್ಯ ನೂರಾರು ವಾಹನಗಳು ಪಾರ್ಕ್ ಮಾಡುತ್ತಿದ್ದು, ಐದಾರು ಗೂಡಂಗಡಿಗಳು ತಲೆ ಎತ್ತಿವೆ.
ಇಲ್ಲಿ ಕುತೂಹಲಕಾರಿ ವಿಷಯವೊಂದಿದೆ. ಇಷ್ಟೆಲ್ಲಾ ಅಂಗಡಿಗಳಿಗೆ ಉಚಿತ ವಿದ್ಯುತ್'ನ ವ್ಯವಸ್ಥೆಯಿದೆ. ಬಲ್ಬು, ಟೇಪ್ ರೆಕಾರ್ಡರುಗಳು ಚಲಿಸುತ್ತಿವೆ. ವಿದ್ಯುತ್ ಗೆ ಇಲ್ಲಿ ಕಂಬಗಳಿಲ್ಲ. ಇಲಾಖೆಯ ಕೇಬಲ್ ಇಲ್ಲ. ಬ್ಯಾಟರಿ, ಇನ್ವರ್ಟರ್ ಗಳಿಲ್ಲ. ಈ ಬಗ್ಗೆ ಕುತೂಹಲಗೊಂಡ ನಾವು ಅದರ ಮೂಲವನ್ನು ಹುಡುಕ ಹೊರಟೆವು. ಜೋಡುಪಾಲ-ಅಬ್ಬಿಕೊಲ್ಲಿ ಜಲಪಾತದ ನೀರು ಬರುವ ಮೇಲಿನ ತುದಿಗೆ ಒಂದಿಂಚಿನ ಪಿವಿಸಿ ಪೈಪ್ ನ್ನು ಅಳವಡಿಸಿ ಕೆಳಗೆ ಬಿಡಲಾಗಿದೆ. ಪೈಪ್'ನ ಕೆಳಗಿನ ತುದಿಗೆ ರಭಸದಿಂದ ಬರುವ ನೀರು ತಡೆದು ಮತ್ತಷ್ಟು ರಭಸದಿಂದ ಬರಲು ಕ್ಯಾಪ್ ಅಳವಡಿಸಿ ತೂತು ಮಾಡಲಾಗಿದೆ. ವಾಹನ ವಾಶ್ ಮಾಡುವ ಸರ್ವಿಸ್ ಸೆಂಟರ್ ಪೈಪಿನಲ್ಲಿ ಬರುವ ಹಾಗೆ ನೀರು ರಭಸವಾಗಿ ಹೊರ ಚಿಮ್ಮುತ್ತದೆ. ಆ ನೀರು ಚಿಮ್ಮುವಲ್ಲಿ ಒಂದು ಸಣ್ಣ ಪೆಟ್ಟಿಗೆಯಲ್ಲಿ ಡೈನಮ್ (ಕನ್ವರ್ಟರ್) ಇಡಲಾಗಿದೆ. ಅದಕ್ಕೊಂದು ಕಬ್ಬಿಣದ ಚಕ್ರ ಜೋಡಿಸಲಾಗಿದೆ. ರಭಸದಿಂದ ಬರುವ ನೀರು ಚಕ್ರಕ್ಕೆ ಬಿದ್ದಾಗ ಚಕ್ರ ತಿರುಗಲಾರಂಭಿಸುತ್ತದೆ. ಅದು ಡೈನಮ್ ಗೆ ಕೆಲಸ ಕೊಡುತ್ತದೆ. ಡೈನಮ್ ನಿಂದ ಕರೆಂಟು ಉತ್ಪಾದನೆಯಾಗಿ ಕೇಬಲ್ ಮೂಲಕ ಗೂಡಂಗಡಿಗೆ ಬೆಳಕು ನೀಡುತ್ತದೆ. ರಭಸದಿಂದ ಬರುವ ನೀರು ಮತ್ತೆ ಹರಿಯುವ ಹೊಳೆಗೆ ಸೇರುತ್ತದೆ. ವಿದ್ಯುತ್ ಉತ್ಪಾದನೆ ಬೇಡವೆಂದಾದಲ್ಲಿ ಪೈಪ್ ಗೆ ಅಳವಡಿಸಿದ ಗೇಟ್'ವಾಲ್ ಬಂದ್ ಮಾಡಿದರಾಯಿತು. ಇದೊಂದು ಉತ್ತಮ ಸಂವಿಧಾನ ಮತ್ತು ಸಣ್ಣ ಜಲಪಾತದಿಂದ ಕೂಡಾ ಕರೆಂಟು ಉತ್ಪಾದಿಸಬಹುದೆಂಬುವುದಕ್ಕೆ ಉದಾಹರಣೆಯಷ್ಟೆ.
ಈ ಬಗ್ಗೆ ಕುತೂಹಲಗೊಂಡು ಅಂಗಡಿ ವಾರೀಸುದಾರರಲ್ಲಿ ಕೇಳಿದಾಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಈ ಐಡಿಯಾ ನೀಡಿದ್ದು, ಇದಕ್ಕೆ ಆರೇಳು ಸಾವಿರ ರೂ.ವ್ಯಯವಾಗಿದೆ. ನಿರಂತರ ವಿದ್ಯುತ್ ಹರಿದುಬರುತ್ತಿದೆ. ನಮ್ಮ ವ್ಯಾಪಾರದ ದೈನಂದಿನ ಕೆಲಸಕ್ಕೆ ಈ ವಿದ್ಯುತ್ ಧಾರಾಳ ಸಾಕಾಗುತ್ತದೆ ಎನ್ನುತ್ತಾರೆ. ನೀವೂ ಈ ರಸ್ತೆಯಾಗಿ ಮಡಿಕೇರಿ ಕಡೆ ಹೊರಟರೆ ಜಲಪಾತ ಮತ್ತು ಅದರ ಎದುರಿನ ಹಸಿರು ಪ್ರಕೃತಿಯನ್ನು ಆಸ್ವಾದಿಸಿ, ಒಂದೆರಡು ಫೋಟೋ ಕ್ಲಿಕ್ಕಿಸಿ, ಗೂಡಂಗಡಿಯ ಬಿಸಿಬಿಸಿ ಚಹಾ ಸೇವಿಸಿ ವಿದ್ಯುತ್ ಉತ್ಪಾದನೆಯ ಮಾದರಿಯನ್ನು ನೋಡದೇ ಇರಲು ಮರೆಯದಿರಿ.
-ರಶೀದ್ ವಿಟ್ಲ.