ನಾವು ಕೇಳರಿಯದ ನಮ್ಮ ಮಕ್ಕಳು
ಭಾಗ 2
ಅಂಗಡಿಗೆ ಹೋದಾಗ ಅಥವಾ ಏನಾದರೂ ಮಕ್ಕಳಿಗೆ ಕೊಡಿಸುವಾಗ ನಾವು ಅವರಿಗೆ ನಮ್ಮ ಆರ್ಥಿಕ ಸಮಸ್ಯೆ ಇದ್ದರೆ ಅದನ್ನೇ ಹೇಳಬೇಕು. ‘ನಮ್ಮ ಬಜೆಟ್ ಇಷ್ಟಿದೆ. ನೀನು ಈ ಪರಿಮಿತಿಯಲ್ಲಿ ನೋಡಬೇಕಾಗುತ್ತದೆ’ ಎಂದು. ಸಂಬಳವನ್ನೇ ಅವಲಂಬಿಸುವ ಮಧ್ಯಮವರ್ಗದ ಕುಟುಂಬಗಳಿಗೆ, ಅದರಲ್ಲೂ ಒಂದಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಎಲ್ಲಾ ಸಮಯದಲ್ಲೂ ಖರ್ಚುಗಳನ್ನು ನಿಭಾಯಿಸಲು ಆಗುವುದಿಲ್ಲ. ಆಗ ಆ ವಿಷಯವನ್ನೇ ಮಗುವಿಗೆ ಮನವರಿಕೆ ಮಾಡಿಕೊಡಬೇಕೇ ಹೊರತು, ಅದನ್ನು ಮರೆಮಾಚಲು, ವಸ್ತುಗಳನ್ನು ಚೆನ್ನಾಗಿಲ್ಲವೆಂದು ವಸ್ತುಗಳ ಗುಣಮಟ್ಟವನ್ನು ದೂರುವುದೋ ಅಥವಾ ಮಗುವಿನ ಯಾವುದೋ ತಾವು ಒಪ್ಪದ ಗುಣವನ್ನು ಅಲ್ಲಿ ಪ್ರಸ್ತಾಪಿಸಿ ದೂಷಿಸುವುದೋ ಖಂಡಿತ ಮಾಡಕೂಡದು.
ಯಾವುದಕ್ಕೆ ಯಾವುದನ್ನೋ ಹೇಳ್ತಾರೆ
‘‘ಬಟ್ಟೆ ಅಂಗಡಿಗೆ ಹೋದಾಗ ನನಗೆ ಇದು ಬೇಕು’’ ಅಂತ ಯಾವುದನ್ನಾದರೂ, ನನಗೆ ಇಷ್ಟ ಬಂದದ್ದನ್ನು ಕೇಳಿದರೆ, ‘‘ಓದಬೇಡ ಬರೀಬೇಡ ಶೋಕಿ ಮಾತ್ರ ಮಾಡು. ಕೊಡ್ಸಿದ್ದನ್ನು ತಗೋ’’ ಅಂತಾರೆ. ನನಗೆ ಅದು ಇಷ್ಟ ಇಲ್ಲ, ನನಗೆ ಇನ್ನೊಂದು ಕೊಡಿಸಿ ಅಂದ್ರೆ, ‘‘ನಾವು ಹೇಳಿದಂಗೆ ನೀನು ಕೇಳಲ್ಲ, ನೀನು ಹೇಳಿದ್ದನ್ನೆಲ್ಲಾ ನಾವು ಮಾಡ್ಬಿಡ್ಬೇಕಾ? ಅಂತ ಬೈತಾರೆ. ಯಾವುದಕ್ಕೆ ಯಾವುದನ್ನೋ ಹೇಳ್ತಾರೆ’’ ಎಂಬುದು ಒಬ್ಬ ಹುಡುಗನ ಅಳಲು. ‘‘ಅವರ ಬಳಿ ನೀನು ಕೇಳಿದ್ದು ಕೊಡಿಸಕ್ಕೆ ಹಣ ಹೊಂದುತ್ತಿತ್ತೋ ಇಲ್ಲವೋ’’ ಎಂದೆ ನಾನು. ‘‘ಹಂಗಿದ್ರೆ ಹಂಗೇ ಹೇಳಬೇಕು! ಯಾಕೆ ಯಾವುದಕ್ಕೋ ಯಾವುದ್ಯಾವುದನ್ನೋ ಹೇಳಬೇಕು?’’ ಎಂದ ಹುಡುಗ. ನಿಜ. ಅಂಗಡಿಗೆ ಹೋದಾಗ ಅಥವಾ ಏನಾದರೂ ಅವರಿಗೆ ಕೊಡಿಸುವಾಗ ನಾವು ಅವರಿಗೆ ನಮ್ಮ ಆರ್ಥಿಕ ಸಮಸ್ಯೆ ಇದ್ದರೆ ಅದನ್ನೇ ಹೇಳಬೇಕು. ನಮ್ಮ ಬಜೆಟ್ ಇಷ್ಟಿದೆ. ನೀನು ಈ ಪರಿಮಿತಿಯಲ್ಲಿ ನೋಡಬೇಕಾಗುತ್ತದೆ ಎಂದು. ಸಂಬಳವನ್ನೇ ಅವಲಂಬಿಸುವ ಮಧ್ಯಮವರ್ಗದ ಕುಟುಂಬಗಳಿಗೆ, ಅದರಲ್ಲೂ ಒಂದಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಎಲ್ಲಾ ಸಮಯದಲ್ಲೂ ಖರ್ಚುಗಳನ್ನು ನಿಭಾಯಿಸಲು ಆಗುವುದಿಲ್ಲ. ಆಗ ಆ ವಿಷಯವನ್ನೇ ಮಗುವಿಗೆ ಮನವರಿಕೆ ಮಾಡಿಕೊಡಬೇಕೇ ಹೊರತು, ಅದನ್ನು ಮರೆಮಾಚಲು, ವಸ್ತುಗಳನ್ನು ಚೆನ್ನಾಗಿಲ್ಲವೆಂದು ವಸ್ತುಗಳ ಗುಣಮಟ್ಟವನ್ನು ದೂರುವುದೋ ಅಥವಾ ಮಗುವಿನ ಯಾವುದೋ ತಾವು ಒಪ್ಪದ ಗುಣವನ್ನು ಅಲ್ಲಿ ಪ್ರಸ್ತಾಪಿಸಿ ದೂಷಿಸುವುದೋ ಖಂಡಿತ ಮಾಡಕೂಡದು. ಇದರಿಂದ ಮಗುವಿಗೆ ಅವಮಾನವಾದಂತಾಗುವುದಲ್ಲದೇ ಪೋಷಕರ ಬಗ್ಗೆ ಬೇಸರವೂ, ವಸ್ತುವಿನ ಬಗ್ಗೆ ಜಿಗುಪ್ಸೆಯೂ ಉಂಟಾಗುತ್ತದೆ. ಎಲ್ಲದ್ದಕ್ಕಿಂತ ಮುಖ್ಯವಾಗಿ ಮಗುವಿನ ಯಾವುದೇ ಗುಣಾವಗುಣಗಳು ನಮಗೆ ಇಷ್ಟವಾಗಲಿ ಆಗದಿರಲಿ, ಅದು ಮಗು ಎಂಬುದನ್ನು ಮಾತ್ರ ಎಂದಿಗೂ ಮರೆಯಕೂಡದು. ನೀನು ಹೇಳಿದ ಮಾತು ಕೇಳಿದರೆ ಮಾತ್ರ ನಿನಗೆ ಬೇಕಾದ ವಸ್ತುಗಳನ್ನು ಕೊಡಿಸುತ್ತೇವೆಂದರೆ ಮಗುವು ನಿಮಗೆ ಬೇಕಾದ ಹಾಗೆ ಮುಖವಾಡವನ್ನು ಧರಿಸಲು ತೊಡಗಬಹುದು. ನಂತರ ಅದರ ಅಸಲೀ ಮುಖ ಕಾಣದೇ ಹೋಗಬಹುದು, ಮನದ ಮಾತು ಕೇಳದೇ ಹೋಗಬಹುದು.
ಅಷ್ಟೆಲ್ಲಾ ಮಾತಾಡ್ತೀಯಾ ಇಷ್ಟು ಮಾತ್ರ ಗೊತ್ತಾಗಲ್ವಾ?
ಪೋಷಕರು ತಮ್ಮ ಮಕ್ಕಳಿಗೆ ಏನೇನೆಲ್ಲಾ ಆಹಾರ ಪದಾರ್ಥಗಳನ್ನು ತಂದು ಆರೋಗ್ಯವಾಗಿಡಲು ಯತ್ನಿಸುತ್ತಾರೋ, ಏನೇನೆಲ್ಲಾ ವಸ್ತುಗಳನ್ನು ತಂದು ಅವರನ್ನು ಸುಖವಾಗಿರುವಂತೆ ನೋಡಿಕೊಳ್ಳಲು ಹೆಣಗಾಡುತ್ತಾರೋ, ಪ್ರಜ್ಞಾವಂತರಾಗಿ ನಾಲಿಗೆಯೊಂದನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳದಿದ್ದರೆ ಮಕ್ಕಳ ಮಾನಸಿಕ ಸ್ಥಿತಿಯು ಛಿದ್ರವಾಗುತ್ತದೆ. ಆಹಾರ, ಔಷಧ ಮತ್ತು ಇತರೇ ವಸ್ತುಗಳೇನೂ ಮಾನಸಿಕ ಅಸ್ವಸ್ಥವು ಗುಣವಾಗಲು ಸಹಕಾರಿಯಾಗಲಾರದು. ಆ ಒಂದು ಮಗು ಬಹಳ ಚೂಟಿ. ಹರಳು ಹುರಿದಂತೆ ಪಟಪಟ ಮಾತಾಡುತ್ತಾ ಪ್ರಶ್ನೆಗಳನ್ನು ಕೇಳುತ್ತಿರುತ್ತದೆ. ಅದು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕೆಲವೊಂದು ಸಲ ಆ ಮಗುವಿನ ಪೋಷಕರು ತಬ್ಬಿಬ್ಬಾಗುತ್ತಾರೆ. ಹೀಗಿರುವಾಗ ಪೋಷಕರು ಯಾವುದಾದರೊಂದು ಕೆಲಸವನ್ನು ಹೇಳಿದಾಗ ಮಗುವು ಸರಿಯಾಗಿ ಮಾಡದಿದ್ದರೆ ಅಥವಾ ಒಂದನ್ನು ಮಾಡಕ್ಕೆ ಹೋಗಿ ಮತ್ತೊಂದನ್ನು ಮಾಡಿಬಿಟ್ಟರೆ ತಕ್ಷಣ ಕೆಲವು ಪೋಷಕರು ಹೇಳುವ ಮಾತೆಂದರೆ, ನೀನು ಅಷ್ಟೆಲ್ಲಾ ಮಾತಾಡ್ತಿಯಲ್ಲಾ, ನಿನಗೆ ಇಷ್ಟು ಮಾತ್ರ ಗೊತ್ತಾಗಲ್ವಾ? ಗೊತ್ತಿರಬೇಕೆಂದೇನಿಲ್ಲ. ಎಲ್ಲವೂ ಮಗುವಿಗೇ ಇರಲಿ, ದೊಡ್ಡವರಿಗೂ ಗೊತ್ತಿರಲು ಸಾಧ್ಯವಿಲ್ಲ. ಆದರೆ ಇದು ಹೇಗೆ ತೋರುತ್ತದೆ ಎಂದರೆ, ಮಗುವು ತಮ್ಮನ್ನು ಅಂದೆಂದೋ ಎಲ್ಲೋ ಮುಜುಗರಕ್ಕೆ ಈಡು ಮಾಡಿದರ ಸೇಡನ್ನು ತೀರಿಸಿಕೊಳ್ಳುವಂತೆ ಇದು ತೋರುತ್ತದೆ. ಅದು ಹಾಗೆಯೇ ಮಕ್ಕಳಿಗೆ ಅನಿಸಿಯೂ ತೀರುತ್ತದೆ. ಮಗುವು ಇನ್ನು ಮುಂದೆ ಒಂದೋ ತನ್ನ ಸಹಜವಾದ ನಡವಳಿಕೆಯನ್ನು ನಿಯಂತ್ರಿಸಿಕೊಳ್ಳಲು ಯತ್ನಿಸಬಹುದು. ಇಲ್ಲವೇ ಇನ್ನೂ ವ್ಯಗ್ರವಾಗಿ ವರ್ತಿಸಬಹುದು. ಬೇಕುಬೇಕೆಂದೇ ತನ್ನ ಪೋಷಕರನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಬಹುದು.
ಬಂದವರ ಹತ್ತಿರ ನನ್ನ ಬಗ್ಗೆ ಸುಳ್ಳುಸುಳ್ಳೆಲ್ಲಾ ಹೇಳ್ತಾರೆ
ಇನ್ನೂ ಕೆಲವು ಪೋಷಕರು ತಮ್ಮ ಮಗುವಿಗೆ ಯಾವ್ಯಾವ ಪ್ರತಿಭೆಗಳಿರಬೇಕು, ಸಾಮರ್ಥ್ಯಗಳಿರಬೇಕು ಎಂದೆಲ್ಲಾ ಬಯಸುತ್ತಾರೆ, ಅದು ಇಲ್ಲದೇ ಹೋದರೂ ಬಂದವರ ಬಳಿ ಅನವಶ್ಯಕವಾಗಿ ತಮ್ಮ ಮಗುವನ್ನು ಹೊಗಳಿಕೊಂಡು ಏನೇನೋ ಹೇಳುವುದು, ತುಂಬಾ ಚೆನ್ನಾಗಿ ಹಾಡಲು ಬರುತ್ತೆ, ಡಾನ್ಸ್ ಮಾಡುತ್ತೆ ಇತ್ಯಾದಿ. ಮಗುವಿಗೆ ಉಹುಂ ಎನ್ನಲೂ ಆಗುವುದಿಲ್ಲ. ಹೂಂ ಎನ್ನಲೂ ಆಗುವುದಿಲ್ಲ. ಸುಮ್ಮನೆ ಕುಳಿತಿರುತ್ತದೆ. ಅಲ್ಲಿ ಏಳುವ ಪ್ರಶ್ನೆಗಳೆಂದರೆ, ಮೊದಲನೆಯದಾಗಿ ಈ ಪೋಷಕರು ಹೀಗೆ ಹೇಳುತ್ತಿರುವುದು ಏಕೆ? ತಮ್ಮ ಮಗುವು ಜಾಣ ಎಂದು ಹೆಮ್ಮೆ ಪಡಲು ಹೇಳುವುದೇ? ಇಂಥಾ ಪ್ರತಿಭಾವಂತ ಎಂದು ತಿಳಿದಾಗ ಬಂದವರು ಹೊಗಳುವುದರಿಂದ ಪ್ರತಿಭೆ ಇಲ್ಲದಿರುವ ಮಗುವಿಗೆ ಆಸಕ್ತಿ ಹುಟ್ಟಿ ತಾನು ಪ್ರತಿಭಾನ್ವಿತನಾಗಲು ಹಾತೊರೆಯುವುದು ಅಥವಾ ಅಭ್ಯಾಸ ಪ್ರಾರಂಭಿಸಬಹುದು ಎಂಬ ಆಸೆಯೇ? ನಮಗೆ ನಮ್ಮ ಮಗುವು ಹೀಗಿರಬೇಕೆಂದು ಆಸೆ. ಆದರೆ ಹಾಗಿಲ್ಲ. ಇನ್ನು ಮುಂದಾದರೂ ಇದನ್ನು ಕೇಳಿದ ಮಗುವು ಆಸಕ್ತಿಯನ್ನು ಹೊಂದಿ ಮುಂದುವರಿಯಲಿ ಎಂಬ ಬಯಕೆಯೇ ಅಥವಾ ನೀನು ಹಾಗಿಲ್ಲ ಎಂಬ ಬೈಗುಳವೇ? ಬಂದವರು ಕುತೂಹಲದಿಂದ ಅಥವಾ ಮಗುವಿಗೆ ಪ್ರೋತ್ಸಾಹ ನೀಡಲು ‘‘ಎಲ್ಲಿ ಒಂದು ಹಾಡು ಹೇಳು’’ ಎಂದು ಕೇಳಿದಾಗ ಮಗುವು ಮುಜುಗರಕ್ಕೀಡಾಗುವುದು. ಇಲ್ಲೂ ಸಮಸ್ಯೆ. ಹಾಡಲು ಬರುವುದಿಲ್ಲ ಎಂದರೆ ತನ್ನ ಪೋಷಕರು ಸುಳ್ಳು ಹೇಳಿದರು ಎಂದು ಬಿಟ್ಟುಕೊಟ್ಟಂತಾಗುತ್ತದೆ. ಹಾಡಲು ಆಗುವುದಿಲ್ಲ. ಮಕ್ಕಳಿಗೆ ಪೀಕಲಾಟಕ್ಕಿಟ್ಟುಕೊಳ್ಳುತ್ತದೆ. ಬಂದವರು ಹೋದಮೇಲೆ ಮಗುವೊಂದು ಅದರ ತಾಯಿಗೆ ಗದರಿ ಕೇಳಿತಂತೆ, ‘‘ಅಮ್ಮಾ ನೀನು ಹಾಗೆಲ್ಲಾ ಸುಮ್ಮಸುಮ್ಮನೆ ಹೇಳಬೇಡ. ಅವರು ಹೇಳು ಹೇಳು ಅಂತ ಬಲವಂತ ಮಾಡಿದರೆ ಏನು ಮಾಡುವುದು?’’ ಅದಕ್ಕೆ ತಾಯಿ ಕೊಟ್ಟ ಉತ್ತರ ಹೀಗಿತ್ತು: ‘‘ಅವರಿಗೆ ನಮಗಿಂತ ಕಡಿಮೆ ಕೆಲಸ. ಅವರ ಮಕ್ಕಳು ಬಹಳ ಚೆನ್ನಾಗಿ ಹಾಡುತ್ತಾರೆ. ಡಾನ್ಸ್ ಮಾಡುತ್ತಾರೆ. ಅವರಂತವರ ಮಕ್ಕಳೇ ಅಷ್ಟೆಲ್ಲಾ ಮಾಡುವಾಗ, ನೀವು ಮಾಡಲಿಲ್ಲಾಂದ್ರೆ ಹೇಗೆ? ನಮ್ಮ ಮಕ್ಕಳು ತಿನ್ನಕ್ಕಷ್ಟೇ ಲಾಯಕ್ಕು ಅಂತಂದ್ರೆ ಅವಮಾನ ಅಲ್ಲವಾ?’
ಈ ಮಾತಿನಲ್ಲಿ ವರ್ಗ ತಾರತಮ್ಯ, ಹುಸಿ ಪ್ರತಿಷ್ಠೆ, ಅನಗತ್ಯ ದರ್ಪ ಹುಂಬತನವೆಲ್ಲಾ ಕಾಣುತ್ತದೆ. ಮಕ್ಕಳಿಗೆ ಇದು ಈಗ ವಿರೋಧಿಸುವಂತಹ ವಿಷಯವಾದರೂ, ಇಂತಹುದೇ ಉದಾಹರಣೆಗಳನ್ನು ನೋಡುತ್ತಾ, ಇಂತಹ ಸನ್ನಿವೇಶಗಳಲ್ಲಿ ನೇರವಾಗಿ ಭಾಗವಹಿಸುತ್ತಾ ನಂತರ ತಾವೂ ಹೀಗೆ ಹುಸಿ ಪ್ರತಿಷ್ಠೆಗಳನ್ನು, ಹುಂಬ ಜಂಭವನ್ನು ಬೆಳೆಸಿಕೊಳ್ಳುತ್ತಾರೆ. ಯಾರ ಮೆಚ್ಚುಗೆ, ನೆಚ್ಚುಕೆಗಳೇನೂ ಇಲ್ಲದೇ ಮಕ್ಕಳು ತಮ್ಮವರೊಂದಿಗೆ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿರುವುದನ್ನು ಕಲಿತರೆ ಬೇಕಾದಷ್ಟಾಯ್ತು. ದೊಡ್ಡವರ ಹುಸಿ ಪ್ರತಿಷ್ಠೆಗಳಿಗೆ ಮೊದಲ ಬಲಿಯೇ ಮಕ್ಕಳು.
ಯಾರ್ಯಾರೋ ಬರೋ ಗೆಸ್ಟ್ ಗಳಿಗೆಲ್ಲಾ ನಾವು ಬಿಸಿಲಿನಲ್ಲಿ ನಿಂತ್ಕೋಬೇಕು
ಬಹಳಷ್ಟು ಶಾಲೆಗಳ ದೊಡ್ಡ ರೋಗವೆಂದರೆ ಅತಿಥಿಗಳನ್ನು ಬರಮಾಡಿಕೊಳ್ಳಲು, ತಮ್ಮ ಅದ್ದೂರಿತನ ಮೆರೆಯಲು ಮಕ್ಕಳನ್ನು ಬಳಸಿಕೊಳ್ಳುವುದು. ಬರುವವರು ಯಾರೆಂದೂ ಸಹ ತಿಳಿಯದೇ ಮಕ್ಕಳು ತಮ್ಮ ಬ್ಯಾಂಡ್ ಸೆಟ್ ಜೊತೆಗೆ, ಕವಾಯತು ಮಾಡುವ ಸಮವಸ್ತ್ರದಲ್ಲಿ ಬಿಸಿಲಿನಲ್ಲಿ ನಿಂತಿರಬೇಕು. ಹೇಳಿದ ಸಮಯಕ್ಕೆ ಬರುವ ಅತಿಥಿಗಳಾದರೆ ಸರಿಹೋಯ್ತು. ಅನೇಕ ಬಾರಿ ರಾಜಕಾರಣಿಗಳು ಅಥವಾ ಇನ್ನಿತರ ಘನವೆತ್ತ ಗೌರವಾನ್ವಿತ ಸನ್ಮಾನ್ಯ ಅತಿಥಿಗಳು ಸರಿಯಾದ ಸಮಯಕ್ಕೆ ಬರುವುದೇ ಇಲ್ಲ. ಸಮಯಕ್ಕೆ ಮುನ್ನ ಅಥವಾ ಸರಿಯಾದ ಸಮಯಕ್ಕೆ ಹೋಗುವುದು ಗೌರವಕ್ಕೆ ಚ್ಯುತಿ ಎಂದು ಭಾವಿಸಿರುವ ಸನ್ಮಾನ್ಯರಿದ್ದಾರೆ. ನಾನು ಎಲ್ಲೋ ಒಂದು ಕಡೆ ಅತಿಥಿಯಾಗಿದ್ದು, ಸರಿಯಾದ ಸಮಯಕ್ಕೆ ಹೋಗುವ ಬಗ್ಗೆ ಮಾತಾಡಿದಾಗ, ಕಾರ್ಯಕ್ರಮ ವ್ಯವಸ್ಥೆ ಮಾಡಿರುವವರೇ ಕಾರ್ಯಕ್ರಮ ಆರಂಭವಾದ ಮೇಲೆ ‘‘ಒಂದೈದು ನಿಮಿಷ ಅಥವಾ ಹತ್ತು ನಿಮಿಷ ತಡವಾಗಿಯೇ ಬನ್ನಿ’’ ಎಂದು ಹೇಳಿಕೊಟ್ಟಿದ್ದರು. ಹಾಗೆಂದಿಗೂ ಮಾಡುವುದಿಲ್ಲ ಎಂಬುದು ಬೇರೆ ಮಾತು. ಆದರೆ ವಸ್ತುಸ್ಥಿತಿ ಹಾಗಿರುವಾಗ ಮಕ್ಕಳಿಗೆ ಬಹಳ ಮೊದಲೇ ಬರಲು ಹೇಳಿ, ನಂತರ ಅವರು ಸಮವಸ್ತ್ರದಲ್ಲಿ ಬಿಸಿಲಿನಲ್ಲಿ ಕಾಯುತ್ತಾ ನಿಲ್ಲುವುದು, ಕುಳಿತುಕೊಂಡಿರುವುದು ತೀರಾ ಬೇಸರದ ಮತ್ತು ಶೋಷಣೆಯ ಸಂಗತಿ. ಎರಡೂ ಕಡೆ ಮಕ್ಕಳನ್ನು ಸಾಲಿನಲ್ಲಿ ನಿಲ್ಲಿಸಿ ಹೂವೆರಚಿಸುವುದು, ಬ್ಯಾಂಡ್ಸೆಟ್ ಸಮೇತ ಕರೆದುಕೊಂಡು ಹೋಗಲು ಎಷ್ಟೋ ಮೊದಲೇ ನಿಲ್ಲಿಸಿರುವುದು ಮಕ್ಕಳಿಗೆ ಆನಂದ ನೀಡುವುದೇನಲ್ಲ. ಅದು ಕಂಪಲ್ಸರಿಯಾಗಿರುವುದರಿಂದ ಬೇರೆ ದಾರಿ ಇಲ್ಲದೇ ಶಪಿಸಿಕೊಂಡು ನಿಂತಿರುವಂತೆ ಮಾಡಬಾರದು. ಎಷ್ಟೋ ಸಲ ಶಾಲೆಯಲ್ಲಿ ಸಭೆ ಸಮಾರಂಭವಿರುವ ದಿನ ಮಕ್ಕಳು ಮನೆಯಲ್ಲಿ ಸರಿಯಾಗಿ ತಿನ್ನದೇ ಅಭ್ಯಾಸಕ್ಕೆ ಬೇಗ ಬರಬೇಕೆಂದು ಬರುತ್ತಾರೆ. ಅಲ್ಲಿ ಆಯಾಸಗೊಳ್ಳುತ್ತದೆ. ಹಾಗೊಂದು ವೇಳೆ ಮಕ್ಕಳನ್ನು ಈ ರೀತಿಯ ಸ್ವಾಗತಕ್ಕೆ ಬಳಸಿಕೊಳ್ಳುವುದೇ ಆದಲ್ಲಿ ಮಕ್ಕಳಿಗೆ ಬರುವ ಅತಿಥಿಗಳ ಬಗ್ಗೆ ಮೊದಲೇ ಚೆನ್ನಾಗಿ ಹೇಳಿರಬೇಕು. ನಮ್ಮ ಶಾಲೆಗೆ ಬರುತ್ತಿರುವುದರಿಂದ ಅವರನ್ನು ನಾವೆಲ್ಲಾ ಸ್ವಾಗತಿಸಬೇಕು ಎಂದು ಮನವರಿಕೆ ಮಾಡಿಕೊಡಬೇಕು. ಅವರು ಸ್ವಯಂಪ್ರೇರಿತರಾಗಿ ಭಾಗವಹಿಸುವ ಉತ್ಸಾಹವನ್ನು ತೋರುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಬೇಕು. ಹಲವು ಸರಕಾರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆಯು ಶಾಲೆಗೆ ಅನುಜ್ಞೆಯನ್ನು ಹೊರಡಿಸಿರುತ್ತದೆ. ಅದರ ಪ್ರಕಾರವಾಗಿ ಶಾಲೆಗಳು ಉಪಾಧ್ಯಾಯರ ಮೇಲೆ, ಉಪಾಧ್ಯಾಯರು ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತಾರೆ. ಬರುವ ಮುಖ್ಯಮಂತ್ರಿಯೋ ಅಥವಾ ರಾಜ್ಯಪಾಲರೋ ಅಥವಾ ಇತರ ಸಚಿವರೋ, ಅಧಿಕಾರಿಗಳೋ ಯಾವಾಗಲೋ ಬರುತ್ತಾರೆ. ಆದರೆ ಮಕ್ಕಳು ಮಾತ್ರ ಬಿಸಿಲಿನಲ್ಲಿ ಒಣಗಿಕೊಂಡು, ಬಳಲಿಕೊಂಡು ನಿಂತಿರುತ್ತಾರೆ. ಯಾವ ಸೌಭಾಗ್ಯಕ್ಕೋ ಮಕ್ಕಳಿಗೆ ಈ ಪಾಡು!
ಮಕ್ಕಳ ಕೈಗೆ ಕಾಸು ಕೊಡಬೇಡಿ, ಕೆಟ್ಟುಹೋಗ್ತಾರೆ!
‘‘ನಮ್ಮಪ್ಪ ಅಮ್ಮ ನನ್ನ ಕೈಗೆ ಕಾಸೇ ಕೊಡುವುದಿಲ್ಲ. ಏನು ಬೇಕು ಹೇಳು ಅದನ್ನು ಕೊಡಿಸುತ್ತೇವೆ. ನಿನಗೇನಿಕ್ಕೆ ಬೇಕು ಕಾಸು ಅಂತಾರೆ. ಬೇಕಾಗಿರೋದನ್ನೆಲ್ಲಾ ಕೊಡಿಸುತ್ತೇವಲ್ಲ ಕಾಸು ಏಕೆ ಕೊಡಬೇಕು ಅಂತಾರೆ. ಸ್ಕೂಲ್ನಲ್ಲಿಯೂ ಕೂಡ ಕೆಲವು ಟೀಚರ್ಸ್ ಮಕ್ಕಳ ಕೈಗೆ ಕಾಸು ಕೊಟ್ಟು ಕಳಿಸಬೇಡಿ ಅಂತಾರೆ. ಕೆಲವು ಟೀಚರ್ಸ್ ಮಾತ್ರ ಇಸ್ಕೊಂಡು ಬನ್ನಿ ಅಂತಾರೆ.’’
ಕಾಸು ಕೈಗೆ ಬಂದರೆ ಕೆಟ್ಟು ಹೋಗುತ್ತಾರೆ ಎಂಬ ಭಾವ ಏಕೆ ಹುಟ್ಟಿತೋ? ಹೇಗೆ ಹುಟ್ಟಿತೋ? ಹಣವನ್ನು ಸಣ್ಣವಯಸ್ಸಿನಲ್ಲಿ ದುರುಪಯೋಗ ಮಾಡಿಕೊಂಡು ದುಶ್ಚಟಗಳನ್ನು ಕಲಿತ ಪೋಷಕರಿಗಷ್ಟೇ ತಿಳಿದಿರಬೇಕು. ಮಗುವಿಗೆ ಹಣದ ಸರಿಯಾದ ಬಳಕೆಯ ಬಗ್ಗೆ ಖಂಡಿತವಾಗಿ ರೂಢಿಯಾಗಬೇಕು. ಹಣವನ್ನು ಕೊಟ್ಟು ವಸ್ತುಗಳನ್ನು ತರುವುದು ಬರಿಯ ವ್ಯಾವಹಾರಿಕ ವಿಷಯಗಳು ಮಾತ್ರವಲ್ಲದೇ ಕಲಿಕೆಯ ಭಾಗವೂ ಹೌದು. ಆದ್ದರಿಂದ ಮಕ್ಕಳಿಗೆ ಎಚ್ಚರಿಕೆಯಿಂದ ಹಣದ ಬಳಕೆಯನ್ನು ಮಾಡುವುದನ್ನು ಹೇಳಿಕೊಡಬೇಕು. ಮಕ್ಕಳಿಗೆ ಕಾಸು ಕೊಟ್ಟರೆ ಕೆಟ್ಟು ಹೋಗುತ್ತಾರೆ ಎಂಬ ಪರಿಕಲ್ಪನೆ ಹಿಂದಿನವರಿಗಿದ್ದಷ್ಟು ಈಗಿನವರಿಗಷ್ಟಿಲ್ಲದಿದ್ದರೂ ಇನ್ನೂ ಆ ಮಾದರಿಯ ಮನಸ್ಥಿತಿಗಳು ಇವೆ.
ಮಕ್ಕಳಿಗೆ ತಮಗೆ ಏನು ಬೇಕು? ಏನು ಬೇಡ? ಯಾವುದು ಅಗತ್ಯ? ಯಾವುದರ ಆವಶ್ಯಕತೆ ಇಲ್ಲ ಎಂಬುದನ್ನೆಲ್ಲ ತಿಳಿಯುವಂತೆ ಮಾಡಬೇಕು ಅದೂ ಹಣವು ಅದರ ಅಧಿಕಾರದಲ್ಲಿರುವಂತೆಯೇ. ಆಗಲೇ ಅವರು ಅದನ್ನು ಈಗಲೂ ಮತ್ತು ಮುಂದೂ ಬಳಸುವ ರೀತಿಯನ್ನು ಕಲಿಯುತ್ತಾರೆ.
ಜೊತೆಗೆ ಮಕ್ಕಳು ತಮಗೆ ದೊರಕುವ ಚಿಲ್ಲರೆ ಕಾಸುಗಳನ್ನು ಅಥವಾ ಸಣ್ಣಪುಟ್ಟ ಹಣವನ್ನು ಗೋಲಕದಲ್ಲಿಟ್ಟು ಕಾಪಾಡುವ ಅಭ್ಯಾಸವನ್ನು ಮಾಡಿಸಬೇಕು. ಮನೆಗೆ ಬಂದವರು ಕೆಲವು ಬಾರಿ ಮಕ್ಕಳ ಕೈಗೆ ದುಡ್ಡು ಕೊಡುವುದು ಉಂಟು, ಚಾಕೊಲೆಟ್ ಅಥವಾ ಬೇಕಾದ್ದು ತೆಗೆದುಕೋ ಎಂದು. ಆಗ ತಕ್ಷಣವೇ ಅಂಗಡಿಗೆ ಹೊರಟು ಬೇಕಾದುದನ್ನು ತೆಗೆದುಕೊಂಡು ತಿನ್ನುವ ಬದಲು ಅದನ್ನು ಗೋಲಕದಲ್ಲಿ ಹಾಕಿಡುವ ಪ್ರವೃತ್ತಿಯನ್ನು ಬೆಳೆಸಿದರೆ ಅವರಿಗೆ ಹಣವನ್ನು ಅಪವ್ಯಯ ಮಾಡುವುದನ್ನು ಅಥವಾ ದುಂದುವೆಚ್ಚ ಮಾಡುವುದನ್ನು ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಳ್ಳುವುದನ್ನು ಕಲಿಯುತ್ತಾರೆ. ಯಾವಾಗಲಾದರೂ ಹಣವನ್ನು ತೆಗೆದುಕೊಂಡು ಇಲ್ಲವೆಂದು ಹೇಳಿದ್ದರೆ, ಅಥವಾ ಇದ್ದ ಕಡೆಯಿಂದ ಕದ್ದಿದ್ದರೆ ಅದನ್ನು ಗಮನಿಸಿ ತಿಳಿಹೇಳಬೇಕೇ ಹೊರತು ಹಣವನ್ನೇ ಕೈಗೆ ಸಿಗದಂತೆ ಮಾಡಬಾರದು. ಇದರಿಂದಾಗಿ ಅವರು ಹಣ ಕದಿಯಲು ಇನ್ನಷ್ಟು ಯೋಜನೆಗಳನ್ನು ಹಾಕುತ್ತಲೇ ಇರುತ್ತಾರೆ.