ಪರಿಸರ ನಾಶವೇ ಜೀವ ಸಂಕುಲದ ಅವನತಿ
ಮಾನ್ಯರೆ,
ಬುದ್ಧಿಜೀವಿ ಎಂದು ಕರೆಸಿಕೊಂಡ ಪ್ರಜ್ಞಾಶೀಲನಾದ ಮಾನವ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾ ಪರಿಸರದಲ್ಲಿನ ಪರಿಶುದ್ಧವಾದ ನದಿ,ಬೆಟ್ಟ,ಕಾಡು,ಮಣ್ಣು, ನೆಲ,ಜಲ,ಗಾಳಿ ಇತ್ಯಾದಿ ಎಲ್ಲವನ್ನು ಕಲುಷಿತಗೊಳಿಸುತ್ತಿದ್ದಾನೆ. ಮಾನವನ ಈ ಸ್ವಾರ್ಥ ಸಾಧನೆಯಿಂದಾಗಿ ಇಡೀ ಜೀವ ಸಂಕುಲವೇ ಆಪತ್ತಿನ ಅಂಚಿಗೆ ಬಂದು ತಲುಪಿದೆ. ಈಗಾಗಲೇ ಅದೆಷ್ಟೋ ಪ್ರಾಣಿ ಪಕ್ಷಿ ಪ್ರಭೇದಗಳು ಭೂಮಿಯಿಂದ ಕಣ್ಮರೆಯಾಗಿವೆ.
ಇನ್ನೂ ಕೈಗಾರಿಕೆ, ಕಾರ್ಖಾನೆ, ಗಣಿಕಾರಿಕೆ, ವಾಹನ ದಟ್ಟನೆ, ಅರಣ್ಯ ನಾಶದಿಂದಾಗಿ ಪರಿಸರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ, ಭೂ ಮಾಲಿನ್ಯ ಮತ್ತು ಮಾಲಿನ್ಯ ಕಾರಕ ಅನಿಲಗಳಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿರುವುದರಿಂದ ಪರಿಸರ ವಿಷಯುಕ್ತವಾಗುತ್ತಿದೆ. ಜಗತ್ತಿನಲ್ಲಿ ಇರುವುದೊಂದು ಭೂಮಿ ಇದನ್ನು ಹಾಳು ಮಾಡುತ್ತಿರುವ ಮಾನವ ಪರಿಸರ ನಾಶ ಹೊಂದಿದರೆ ಜೀವ ಸಂಕುಲದ ಅವನತಿ ಎಂಬುದನ್ನು ಮರೆತಂತೆ ಕಾಣುತ್ತಿದೆ.
ಆದ್ದರಿಂದ ಮುಂದೆಯಾದರೂ ನಾವು ನಮ್ಮ ಆವಶ್ಯಕತೆಗಳನ್ನು ಪೂರೈಸುವ ಪರಿಸರವನ್ನು ನಾಶ ಮಾಡದಂತೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಪರಿಸರವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಪರಿಶುದ್ಧ ಪರಿಸರವನ್ನು ನಿರ್ಮಾಣ ಮಾಡಲು ಪಣತೊಡಬೇಕು.