ಪರಿಸರದ ಜೊತೆಗೆ ನಮ್ಮ ಆಹಾರವಿದೆಯೇ?
ಇಂದು ಮಾಧ್ಯಮಗಳಲ್ಲಿ ಆಯುರ್ವೇದದ ಕುರಿತು ಚಿಂತನೆಗಳು, ಪರಸ್ಪರ ಚರ್ಚೆಗಳು, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ, ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ಬಳಕೆ ಮಾಡಿಕೊಳ್ಳುವ ರೀತಿಗಳು, ಯೋಗಾಭ್ಯಾಸದ ಬಗ್ಗೆ ಭಾರತದ ಕೊಡುಗೆಯ ಬಗ್ಗೆ ಚಿಂತನೆ, ಜಗತ್ತು ಅದನ್ನು ತೆಗೆದುಕೊಳ್ಳುವ ಬಗ್ಗೆ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ನಾವು ತೆಗೆದುಕೊಳ್ಳುವ ಆಹಾರದ ಬಗ್ಗೆ, ದೃಶ್ಯಗಳ ಮೂಲಕ, ಪ್ರಯೋಗಗಳ ಮೂಲಕ ತೋರಿಸುತ್ತಿದ್ದಾರೆ. ಇಂದಿನ ಮನುಷ್ಯನ ಬುದ್ಧಿವಂತಿಕೆಯಿಂದ ಶಸ್ತ್ರ ಚಿಕಿತ್ಸೆ, ರೋಗಗಳನ್ನು ಪತ್ತೆ ಮಾಡುವ ರೀತಿಯ ವೈವಿಧ್ಯಮಯ ಯಂತ್ರಗಳು ತಂತ್ರಜ್ಞಾನದ ಮೂಲಕ ನಮ್ಮ ಆರೋಗ್ಯ, ವ್ಯಾಯಾಮ, ವಾಸಿಯಾಗಲಾರದ ಕಾಯಿಲೆಗಳನ್ನು ಕೂಡ ಕಡಿಮೆ ಮಾಡುವತ್ತ ಸಂಶೋಧನೆಗಳನ್ನು ನೋಡಿದರೆ ಅಚ್ಚರಿಪಡುವಂತಹ ಮನುಷ್ಯನ ಬುದ್ಧಿವಂತಿಕೆಗೆ ಬೆಲೆ ಕೊಡಲೇಬೇಕು.
ಮಾಧ್ಯಮಗಳಲ್ಲಿ ಚರ್ಚಿಸಲ್ಪಡುವ ಆಯುರ್ವೇದ, ಯೋಗ, ಯೋಗಾಭ್ಯಾಸಗಳು ಇವುಗಳಿಂದ ಆರೋಗ್ಯ ಮತ್ತು ಪ್ರಾಣಾಯಾಮದ ವೈವಿಧ್ಯತೆಯ ಕಲಿಕೆ, ಇದರಿಂದ ಆರೋಗ್ಯ, ಗಿಡಮೂಲಿಕೆಗಳ ನೆನಪುಗಳು ಇದರೊಂದಿಗೆ ಪ್ರಕೃತಿಯ ನೆನಪು, ಇವೆಲ್ಲ ಭಾರತವು ಜಗತ್ತಿಗೆ ಕೊಟ್ಟ ಕೊಡುಗೆ. ಇಷ್ಟು ದಿನ ನಾವು ಇದನ್ನು ಎಲ್ಲಿ ಕಳೆದುಕೊಂಡಿದ್ದೆವು ಎಂಬ ಪ್ರಶ್ನೆ. ಈ ಪ್ರಶ್ನೆಗೆ ನಮ್ಮ ದೇಶದ ಸ್ವಾತಂತ್ರ್ಯಾನಂತರ ಆದ ಬದಲಾವಣೆಗಳಲ್ಲಿ ನಾವು ಇನ್ನೊಬ್ಬರನ್ನು ಅನುಕರಿಸಿದ್ದು ಕಾರಣ. ಇದರಿಂದ ನಮ್ಮದನ್ನು ಕಡೆಗಣಿಸಿದ್ದು ಕಾರಣ ಇರಬಹುದೇನೋ ಎನಿಸುತ್ತದೆ. ಟಿವಿ ಮಾಧ್ಯಮವೊಂದರಲ್ಲಿ ನುರಿತ ವೈದ್ಯರೊಬ್ಬರು ‘‘ಆಯುರ್ವೇದ ವೆಂದರೆ ದೇಹ ಮತ್ತು ಅದಕ್ಕೆ ಪೋಷಣೆ ಮಾಡತಕ್ಕಂತಹ ಆಹಾರ. ಇವೆರಡಕ್ಕೂ ಸರಿಯಾದ ಸಂಬಂಧವಿದೆ. ಈ ಸಂಬಂಧಗಳು ಪ್ರಕೃತಿಯೊಂದಿಗೆ ಸಂಬಂಧವಿದೆ. ಇದರೊಂದಿಗೆ ನಾವು ಬದುಕುವ ರೀತಿಯಲ್ಲಿ ಸಂಬಂಧವಿದೆ’’ ಎಂದು ಅದ್ಭುತವಾಗಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಬಹುಶಃ ಇದನ್ನು ಕಳೆದುಕೊಂಡಿದ್ದರಿಂದಲೇ ನಾವಿಂದು ಕಂಡು ಕೇಳರಿಯದ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಬೇಗ ಮುಪ್ಪುಬರುತ್ತಿದೆ. ಇಂದಿನ ತಂತ್ರಜ್ಞಾನ ನಮ್ಮ ಸಾವನ್ನು ಮುಂದೂಡುತ್ತದೆಯೇ ವಿನಃ ಆರೋಗ್ಯವನ್ನು ಕಾಪಾಡುವತ್ತ ಏನನ್ನೂ ಕೊಡುತ್ತಿಲ್ಲ ಎಂದು ಖಂಡಿತವಾಗಿಯೂ ಹೇಳಬಹುದು. ಆಯುರ್ವೇದವೆಂದರೆ ನಾವು ಜೀವಿಸಿರುವ ಅವಧಿಯನ್ನು ಆರೋಗ್ಯಪೂರ್ಣವಾಗಿ ಬದುಕುವ ದಾರಿ ಹೇಗೆ ಎಂಬುದನ್ನು ಪ್ರಕೃತಿಯೊಂದಿಗೆ ತಿಳಿದುಕೊಂಡು ಬದುಕುವ ರೀತಿ ಎನ್ನಬಹುದು. ಆದರೆ ಈಗ ಪರಿಸ್ಥಿತಿ ಹಾಗಿದೆಯೇ?
ಟಿವಿ ಮಾಧ್ಯಮಗಳಲ್ಲಿ ಆಯುರ್ವೇದದ ಬಗ್ಗೆ ಎಷ್ಟೆಲ್ಲ ಮಾತಾಡುತ್ತಿದ್ದಾರೆ. ಆದರೆ ಇವರ ಚರ್ಚೆಗಳಲ್ಲಿ ನಾವು ತಿನ್ನುವ ಆಹಾರದಲ್ಲಿನ ರಾಸಾಯನಿಕಗಳ ಬಗ್ಗೆ ಹೆಚ್ಚು ಪ್ರಸ್ತಾಪವಾಗುವುದಿಲ್ಲ. ಯೋಗಾಭ್ಯಾಸಗಳನ್ನು ಮನಸ್ಸಿನ ಆರೋಗ್ಯಕ್ಕೋಸ್ಕರ, ದೇಹದ ಆರೋಗ್ಯಕ್ಕೋಸ್ಕರ ಮಾಡುತ್ತಲೇ ಬರುತ್ತಿದ್ದರೂ, ಸುತ್ತಮುತ್ತಲ ಪ್ರಕೃತಿದತ್ತವಾದ ಆಹಾರವನ್ನು ತೆಗೆದುಕೊಂಡರೂ ನಾವು ಆರೋಗ್ಯವಾಗಿದ್ದೇವೆಯೇ? ಜಗತ್ತಿನಾದ್ಯಂತ ತುಂಬಿಕೊಂಡಿರುವ ರಾಸಾಯನಿಕ ಕಾರ್ಖಾನೆಗಳು ಭಯಾನಕವಾದ ಕೀಟನಾಶಕಗಳನ್ನು ತಯಾರು ಮಾಡುವತ್ತ ನಿರತವಾಗಿವೆ. ಅಲ್ಲದೆ ‘‘ಜಗತ್ತಿನಾದ್ಯಂತ ಜನಸಂಖ್ಯಾ ಸ್ಫೋಟವಾಗುತ್ತಿದೆ. ಹೆಚ್ಚುವರಿ ಆಹಾರವಿಲ್ಲದಿದ್ದರೆ ಹಸಿವಿನಿಂದ ಸಾಯುತ್ತಾರೆ’’ ಎಂಬ ನೆಪದಿಂದ ಹೈಬ್ರಿಡ್ ತಳಿಗಳನ್ನು, ಕುಲಾಂತರಿ ತಳಿಗಳನ್ನು ಭಯಾನಕವಾದ ರಾಸಾಯನಿಕಗಳಿಂದ ಉಣಿಸಿ ನಮ್ಮ ಆಹಾರವನ್ನು ತಯಾರು ಮಾಡುತ್ತಿದ್ದೇವೆ. ಅಮೆರಿಕದ ಯಾವುದೋ ಮೂಲೆಯ ರಾಜ್ಯದಿಂದ ಭಾರತದ ಬೆಂಗಳೂರಿಗೆ ಕೆಲವೇ ದಿನಗಳಲ್ಲಿ ಬಂದು ಮುಟ್ಟುವ ‘ಫಾಸ್ಟ್ ಫುಡ್’ ಆಹಾರದ ಪೊಟ್ಟಣಗಳನ್ನು ತಿಂದು ಬದುಕುವ ನಾವು ನಮ್ಮ ಆರೋಗ್ಯ ಏನಾಗಬಹುದು ಎಂಬುದನ್ನು ಎಲ್ಲಾದರೂ ಯೋಚಿಸುತ್ತಿದ್ದೇವೆಯೇ ?
ಪ್ರಕೃತಿಯಲ್ಲಿಯೇ ರಾಸಾಯನಿಕವಿದೆ. ನಿಜ, ಆದರೆ ಆ ರಾಸಾಯನಿಕ ಪ್ರಕೃತಿದತ್ತವಾಗಿ ನಮ್ಮಲ್ಲಿ ಬಂದರೆ ತೊಂದರೆ ಇರಲಾರದು. ಆದರೆ ಇದೇ ರಾಸಾಯನಿಕಗಳನ್ನು, ಅನಿಲಗಳನ್ನು ಸಾಂದ್ರೀಕರಿಸಿ ರಸಗೊಬ್ಬರಗಳನ್ನಾಗಿ, ಕೀಟನಾಶಕಗಳನ್ನಾಗಿ ಮಾಡಿಕೊಂಡು ಕುಲಾಂತರಿಗಳನ್ನು ತಂದುಕೊಂಡು ಆಹಾರವನ್ನು ತಯಾರಿ ಮಾಡಿಕೊಂಡು ತಿನ್ನುತ್ತಿದ್ದೇವಲ್ಲ, ಇದರ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆಯೇ?
ಒಂದು ಕಡೆ ಇಂತಹದ್ದನ್ನು ತಿನ್ನುತ್ತಾ ಇನ್ನೊಂದು ಕಡೆ ನಾವು ಯೋಗಾಭ್ಯಾಸಗಳನ್ನು, ಗಿಡಮೂಲಿಕೆಗಳನ್ನು ಬಳಕೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳುತ್ತೇವೆ ಎಂದರೆ ಇದಕ್ಕಿಂತ ಮೂರ್ಖತನದ ಚಿಂತನೆಗಳಿವೆಯೇ? ಮಾನವನ ಉತ್ತಮ ಬದುಕಿಗೆ ಹೊಸ ಹೊಸ ಸಂಶೋಧನೆ ಮಾಡುವುದರೊಂದಿಗೆ ವಿವೇಕಯುತ ಭವಿಷ್ಯದ ಚಿಂತನೆಯನ್ನೂ ಮಾಡಿದರೆ ಮಾತ್ರ ನೂತನ ತಂತ್ರಜ್ಞಾನಗಳು ಕೂಡ ಮನುಷ್ಯನಿಗೆ ಉಪಯೋಗಬಹುದು. ಇಲ್ಲದಿದ್ದರೆ ಅದೇ ತಂತ್ರಜ್ಞಾನಗಳು ಮನುಷ್ಯನ ವಿನಾಶ ಮಾಡುವುದು ಖಂಡಿತ.