ಮೀಸಲಾತಿಯ ‘ಒಳ’ ಸಂಕಟಗಳು
ಹುಬ್ಬಳ್ಳಿಯ ನೆಹರು ಮೈದಾನ ಹತ್ತು ವರ್ಷದ ಅಂತರದಲ್ಲಿ ಎರಡು ಭಿನ್ನ ರೀತಿಯ ಸಮಾವೇಶಕ್ಕೆ ಸಾಕ್ಷಿಯಾಯಿತು. 2005ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮಾವೇಶ ಮೊದಲನೆಯದಾದರೆ, ಇತ್ತೀಚೆಗೆ ಒಳಮೀಸಲಾತಿಗಾಗಿ ನಡೆದ ಮಾದಿಗರ ಸಮಾವೇಶ ಎರಡನೆಯದು. ಈ ಎರಡೂ ಸಮಾವೇಶಗಳ ಗುರಿ ಮತ್ತು ಉದ್ದೇಶಗಳು ಖಂಡಿತ ಬೇರೆ ಬೇರೆಯಾಗಿರಬಹುದು. ಆದರೆ, ಅವುಗಳ ಆಳದ ಧ್ವನಿ ಸಾಮಾಜಿಕ ನ್ಯಾಯವೆಂಬ ಸಮಾನತೆಯ ಸಸಿಗೆ ಇನ್ನಷ್ಟು ನೀರೆರೆಯುವುದೇ ಆಗಿದೆ.
ಜಾತಿ ಸಮಾವೇಶಗಳನ್ನು ನೋಡಿದಾಗ ನಾವು ಪ್ರಮುಖವಾಗಿ ಕಾಣುವುದೇನೆಂದರೆ ಎಲ್ಲ ಜಾತಿಗಳು ತಮ್ಮ ಜಾತಿಗಳ ಅಸ್ಮಿತೆಯನ್ನು ವೈಭವೀಕರಿಸಿಕೊಳ್ಳುವುದಾಗಿದೆ. ಇದನ್ನು ಜಾತಿಯ ಮೂಲ ಪುರುಷರು, ಮಹಾನ್ ವ್ಯಕ್ತಿಗಳ ಸ್ಮರಣೆಯ ಮೂಲಕ ಮಾಡಿಕೊಂಡರೂ, ವೈಭವೀಕರಣದ ಮೂಲ ಉದ್ದೇಶ ಇಂದಿನ ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ತಮ್ಮ ಸಮಾಜದ ಸ್ತರವನ್ನು ಉನ್ನತೀಕರಿಸಿಕೊಳ್ಳುವುದೇ ಆಗಿದೆ. ಇದಕ್ಕಾಗಿ ಸಮಾಜದಲ್ಲಿನ ತಮ್ಮ ತಮ್ಮ ಪಾಲುಗಳನ್ನು ಪಡೆಯಲು ಒಂದು ರೀತಿಯಲ್ಲಿ ರಾಜಕೀಯ ಒತ್ತಡ ಗುಂಪುಗಳಾಗುವುದು ಜಾತಿ ಸಮುದಾಯಗಳ ಪ್ರಮುಖ ಅಜೆಂಡಾವಾಗಿರುತ್ತದೆ. ಈ ಪ್ರಕ್ರಿಯೆಗಳನ್ನು ರಾಜಕೀಯ ಚಿಂತಕರಾದ ಯೋಗೇಂದ್ರ ಯಾದವ್, ರಾಜ್ಯಶಾಸ್ತ್ರೀಯ ಪರಿಕಲ್ಪನೆಯಲ್ಲಿ ಇದನ್ನು Democratisation of Politics India’s ಎಂದು ಕರೆದರೆ, ಕ್ರಿಸ್ಟೋಫರ್ ಜಾಫ್ರಲೋಟ್ ಅವರು Silent Revolution ಎಂದು ಕರೆದಿದ್ದಾರೆ.
ಸಮಾವೇಶಗಳಲ್ಲಿ ಪ್ರತಿಜಾತಿಗಳು ತಮ್ಮ ತಮ್ಮ ಪಾಲನ್ನು ಸಮಾಜದ ವಿವಿಧ ಸ್ತರಗಳಲ್ಲಿ ಕೇಳುತ್ತಿರುವ ಪ್ರಕ್ರಿಯೆಯನ್ನು ನಾವು ಇಂದು ಜಾತಿವಾದಿಗಳು ಎನ್ನುವ ಸಂಕುಚಿತ ನೆಲೆಗಟ್ಟಿನಲ್ಲಿ ಬಿಂಬಿಸುತ್ತಿರುವುದು. ಅದರಲ್ಲೂ ಶೋಷಿತ ಮತ್ತು ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳು ಈ ತೆರನಾದ ಸಮಾವೇಶಗಳನ್ನು ಮತ್ತು ಸಂಘಟನೆ ಮಾಡುತ್ತಿರುವುದನ್ನು ಒಂದು ರೀತಿಯಲ್ಲಿ ಮೇಲ್ವರ್ಗಗಳು ವಾರೆಗಣ್ಣಿನಲ್ಲಿ ಸಂಶಯ ವ್ಯಕ್ತಪಡಿಸುತ್ತಿರುವುದು ಅವುಗಳ ಹತಾಶ-ರೋಗಗ್ರಸ್ತ ಮನಸ್ಥಿತಿಯನ್ನು ಬಿಂಬಿಸುತ್ತಿವೆ.
ಜಾತಿ ಎನ್ನುವುದು ಭಾರತೀಯ ಸಮಾಜದ ಮೂಲ ರಚನಾಕ್ರಮ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜಾತಿ ಹೊರತಾದ ಸಮಾಜವನ್ನು ನಾವು ಊಹಿಸಿಕೊಳ್ಳಲು ಸಾಧ್ಯವಾಗದಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಆದ್ದರಿಂದಲೇ ಭಾರತದಲ್ಲಿನ ಜಾತ್ಯತೀತ ಪರಿಕಲ್ಪನೆಯು ಪಾಶ್ಚಾತ್ಯ ದೃಷ್ಟಿಕೋನಕ್ಕಿಂತ ಭಿನ್ನವಾಗಿ ವ್ಯಾಖ್ಯಾನಿಸಲ್ಪಟ್ಟಿದೆ. ಇಲ್ಲಿ ಸೆಕ್ಯುಲರ್ ಎಂದರೆ ಧರ್ಮಗಳನ್ನು ತಿರಸ್ಕರಿಸುವುದಲ್ಲ ಬದಲಾಗಿ ಎಲ್ಲ ಧರ್ಮಗಳಿಂದ ಸಮಾನ ಅಂತರವನ್ನು ಕಾಯ್ದಿಟ್ಟುಕೊಳ್ಳುವುದು. ಇದರೊಟ್ಟಿಗೆ ಸಮಾಜದ ಇನ್ನಿತರ ಕೆಳಸ್ತರ ಮತ್ತು ಅಲ್ಪಸಂಖ್ಯಾತ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿಯಂತಹ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಉತ್ತಮವಾಗಿ ಜಾರಿಗೆ ತರುವುದಾಗಿದೆ.
ಇಂತಹ ಎಲ್ಲ ಹಿನ್ನೆಲೆಗಳ ನಡುವೆಯೂ ನಾವು ಇಲ್ಲಿ ಹೇಳಹೊರಟಿರುವ ಅನ್ಯಾಯದ ಮುಖಗಳು ಭಿನ್ನವಾಗಿವೆ. ಒಂದು ಸಮಾಜದ ಮುಖ್ಯ ಪರದೆಯಲ್ಲಿ ಧಾರ್ಮಿಕ, ಆರ್ಥಿಕ, ಸಾಮಾಜಿಕ ವಿಷಯಗಳಾಗಿ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿರುವ ಸಮುದಾಯಗಳು ಸಮಾವೇಶಗಳನ್ನು ನಡೆಸುವ ಮೂಲಕ ರಾಜಕೀಯ ಪ್ರಾತಿನಿಧ್ಯತೆ ಮತ್ತು ಮೀಸಲಾತಿಯಂತಹ ಬೇಡಿಕೆಗಳನ್ನು ಮುಂದಿರಿಸುತ್ತವೆ. ಅಹಿಂದ ಸೇರಿದಂತೆ ಇತ್ತೀಚೆಗೆ ನಡೆದ ಮಾದಿಗ ಸಮಾವೇಶ ಇದೇ ಮಾದರಿಯದಾಗಿದ್ದವು. ಇನ್ನು ಅಹಿಂದ ವಿಷಯಕ್ಕೆ ಬರುವುದಾದರೆ, ಇದು ಇಂದು ಬಹುಸಾಮುದಾಯಿಕ ಗುಂಪುಗಳ ಚಳವಳಿಯ ನೇತೃತ್ವ ವಹಿಸುವುದರ ಮೂಲಕ ರಾಜ್ಯದ ರಾಜಕಾರಣ ಲಿಂಗಾಯತರಿಂದ ಒಕ್ಕಲಿಗರೆಡೆಗೆ ಮತ್ತು ಒಕ್ಕಲಿಗರಿಂದ ಲಿಂಗಾಯತರ ಕಡೆಗೆ ಸ್ಥಿತ್ಯಂತರಗೊಳ್ಳುತ್ತಿದ್ದ ರಾಜಕೀಯ ತಂತ್ರಗಾರಿಕೆಯನ್ನು ಕೊನೆಗಾಣಿಸಲು ಒಗ್ಗಟ್ಟಾಯಿತು. ಇನ್ನು ಮೇಲ್ವರ್ಗಗಳು ತಮ್ಮ ಸೀಮಿತ ಪಟ್ಟಭದ್ರ ಹಿತಾಸಕ್ತಿಯನ್ನು ಪ್ರತಿಪಾದಿಸುತ್ತಾ ಈ ಮೂಲಕ ರಾಜ್ಯದ ಅಧಿಕಾರ ಉಳಿದ ಅರೆಸಮುದಾಯಗಳಿಗೆ ಸಿಗದೇ ಇರುವುದನ್ನು ನಾವು ರಾಜ್ಯ ರಾಜಕೀಯದ ಇತಿಹಾಸದಲ್ಲಿ ಕಾಣಬಹುದು. ದೇವರಾಜ ಅರಸು ಅವರನ್ನು ಹೊರತು ಪಡಿಸಿ, ನಂತರ ಬಂದ ಬಂಗಾರಪ್ಪ, ವೀರಪ್ಪಮೊಯ್ಲಿ, ಧರ್ಮಸಿಂಗ್ ಇವರು ಯಾರೂ ಕೂಡ ತಮ್ಮ ಅವಧಿಯನ್ನು ಪೂರ್ಣಗೊಳಿಸಿಲ್ಲವೆಂಬುದು ನಾವು ಗಮನಿಸಬೇಕಾದ ಪ್ರಮುಖ ಸಂಗತಿಯಾಗಿದೆ.
ಈ ಮೇಲಿನ ಎಲ್ಲ ಅಂಶಗಳಲ್ಲಿ ಕೆಲವು ಮೀಸಲಾತಿಗೆ ಮತ್ತು ಒಳ ಮೀಸಲಾತಿಯ ಪ್ರಶ್ನೆಗಳಿಗೆ ನೇರವಾಗಿ ಸಂಬಂಧಿಸದೆ ಇರಬಹುದು. ಆದರೆ ವಿಸ್ತೃತ ದೃಷ್ಟಿಕೋನದಲ್ಲಿ ಈ ಎಲ್ಲವುಗಳ ಹಿನ್ನೆಲೆಯಿಂದ ಅವಲೋಕಿಸಿದಾಗ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗಗಳನ್ನು ನಿರಂತರವಾಗಿ ಕಡೆಗಣಿಸಿರುವ ಅಂಶ ಗಾಢವಾಗಿ ಕಂಡುಬರುತ್ತದೆ. ಈಗ ಮಾದಿಗ ಸಮುದಾಯ (ಎಡಗೈ) ಸಮಾವೇಶವನ್ನು ನಡೆಸುವುದರ ಮೂಲಕ ತನ್ನ ಕಳೆದೆರಡು ದಶಕಗಳ ಬೇಡಿಕೆಯಾದ ಒಳಮೀಸಲಾತಿಯನ್ನು ಪುನರ್ ಪ್ರತಿಪಾದಿಸಿದೆ. ಈ ಮೂಲಕ ದಲಿತ ಸಮುದಾಯಗಳಲ್ಲಿನ ಸ್ಪಶ್ಯ ಮತ್ತು ಅಸ್ಪಶ್ಯ ಎನ್ನುವ ಎರಡು ಭಿನ್ನ ಮೌಲ್ಯಗಳ ಅಥವಾ ಅದರ ಸಂಸ್ಕೃತಿಗಳ ನಡುವಿನ ಒಪ್ಪಿತ ಹೊಂದಾಣಿಕೆಯು ಮೀಸಲಾತಿಯ ಅಸಮಾನ ಹಂಚಿಕೆಯ ರೂಪದಲ್ಲಿ ಆಸ್ಫೋಟಗೊಂಡಿದೆ. ಇಂದು ದಲಿತರಲ್ಲಿನ ಈ ಅಸಮಾನ ಹಂಚಿಕೆಯ ಮೀಸಲಾತಿ ಅನುಭೋಗ ಕಾಲಾಂತರದಲ್ಲಾದ ಹಲವು ರಾಜಕೀಯ ಬೆಳವಣಿಗೆಗಳಿಂದ ಉಂಟಾದ ಕ್ರಿಯೆಯಾಗಿ ನಮಗೆ ಕಂಡು ಬರುತ್ತದೆ. ಕಾರಣವಿಷ್ಟೇ 1972ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಹಿಂದುಳಿದ ವರ್ಗದ ಸ್ಥಿತಿಗತಿಗಳನ್ನು ತಿಳಿಯಲು ಎಲ್.ಜೆ.ಹಾವನೂರ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿದ್ದರು.
1976ರಲ್ಲಿ ಸರಕಾರಕ್ಕೆ ಸಲ್ಲಿಸಿದ ಈ ವರದಿಯಲ್ಲಿ ಪರಿಶಿಷ್ಟ ಜಾತಿಗಳನ್ನು ಮಾದಿಗ, ಛಲವಾದಿ, ಲಂಬಾಣಿ, ಕೊರಚ-ಕೊರಮ ಮತ್ತು ಭೋವಿ ಎಂಬ ಪಂಗಡಗಳಾಗಿ ವರ್ಗೀಕರಿಸಲಾಯಿತು. ಈ ವರ್ಗೀಕರಣದಲ್ಲಿ ಮಾದಿಗ ಮತ್ತು ಛಲವಾದಿಯು ಅಸ್ಪಶ್ಯ ಜಾತಿಗಳಾಗಿದ್ದರೆ, ಲಂಬಾಣಿ, ಕೊರಚ, ಕೊರಮ ಮತ್ತು ಭೋವಿಯಂತಹ ಜಾತಿಗಳು ಸ್ಪಶ್ಯ ಜಾತಿಗಳಾಗಿವೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಲಂಬಾಣಿ ಮತ್ತು ಭೋವಿಯಂತಹ ಜಾತಿಗಳು ಕರ್ನಾಟಕದಲ್ಲಿ ಮಾತ್ರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿವೆ. ದೇಶದ ಉಳಿದ ಯಾವುದೇ ರಾಜ್ಯಗಳಲ್ಲಿ ಇವುಗಳನ್ನು ಪರಿಶಿಷ್ಟ ಜಾತಿಯಲ್ಲಿ ಪರಿಗಣಿಸಿಲ್ಲ. ಇನ್ನೂ ಈ ವರದಿಯೇ ಹೇಳುವಂತೆ ಮಾದಿಗ ಸಮುದಾಯವು ಅಸ್ಪಶ್ಯರಲ್ಲಿ ಶೇ. 57.3 ಜನಸಂಖ್ಯೆಯನ್ನು ಹೊಂದಿದೆ. ಆದರೆ, ಈ ಪ್ರಮಾಣದ ಜನಸಂಖ್ಯೆಯು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ತರ ವಿನ್ಯಾಸದಲ್ಲಿ ಬಹುತೇಕ ಉಳಿದೆಲ್ಲಾ ಪರಿಶಿಷ್ಟ ಜಾತಿಗಳಿಗಿಂತ ಹೀನಾಯ ಸ್ಥಿತಿಯಲ್ಲಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇಂತಹ ಅಸಮಾನತೆ ಮತ್ತು ಅನ್ಯಾಯವು ನಿರಂತರವಾಗಿ ಮಾದಿಗ ಸಮುದಾಯದ ಮೇಲಾಗುತ್ತಿರುವುದು ಹಲವಾರು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಈ ಎಲ್ಲ ಸಂಗತಿಗಳ ಹಿನ್ನೆಲೆಗಳಿಂದಾಗಿ ಒಳಮೀಸಲಾತಿಯ ಹೋರಾಟವು ಮೊದಲ ಬಾರಿಗೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ನಡೆಯಿತು. ಮಾದಿಗರಿಗೆ ಆಗುತ್ತಿರುವ ಅನ್ಯಾಯವನ್ನು ಅವರು ಮನಗಂಡು 1994-95ರ ಅವಧಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮೂಲಕ ನಿರಂತರವಾಗಿ ಸರಕಾರದ ಮೇಲೆ ಒತ್ತಡ ಹೇರುವುದರ ಮೂಲಕ ಶೇ.8ರಷ್ಟು ಒಳ ಮೀಸಲಾತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಇದಕ್ಕೂ ಪೂರ್ವದಲ್ಲಿ ಅಂದರೆ 1975ಕ್ಕೂ ಮೊದಲೇ ಪರಿಶಿಷ್ಟ ಜಾತಿಯಲ್ಲಿನ ವರ್ಗೀಕರಣ ಉತ್ತರ ಭಾರತದ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಪ್ರಚಲಿತದಲ್ಲಿತ್ತೆನ್ನುವ ಅಂಶ ಗಮನಾರ್ಹವಾದುದು. ಇನ್ನು ಸೋಜಿಗವೆಂದರೆ ಆಂಧ್ರದಲ್ಲಿನ ಮಾಲಾ ಮತ್ತು ಮಾದಿಗ ಹಾಗೂ ಕರ್ನಾಟಕದಲ್ಲಿರುವ ಛಲವಾದಿ ಮತ್ತು ಮಾದಿಗ ಸಮುದಾಯಗಳಂತೆ ಈ ಉತ್ತರದ ರಾಜ್ಯಗಳ ಸಮುದಾಯಗಳಲ್ಲಿ ಒಳಮೀಸಲಾತಿ ಕುರಿತು ಭಿನ್ನಾಭಿಪ್ರಾಯಗಳಿಲ್ಲ.
ಇನ್ನು ಈ ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ಪಂಜಾಬ್, ಹರ್ಯಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಜಾರಿಯಲ್ಲಿದ್ದ ಒಳಮೀಸಲಾತಿ ಕಾಯ್ದೆಯನ್ನು ಅಸಂವಿಧಾನಿಕ ಎಂದು ತೀರ್ಪಿತ್ತು ಅದನ್ನು ರದ್ದುಗೊಳಿದೆ. ಈ ಆಂಧ್ರ ಮಾದರಿಯ ಮಾದಿಗ ಸಮುದಾಯದ ಚಳವಳಿಯಿಂದ ಪ್ರಭಾವಿತಗೊಂಡು ಕರ್ನಾಟಕದಲ್ಲಿ ಮಾದಿಗ ಸಮುದಾಯವು 1995-96ರಲ್ಲಿ ಕರ್ನಾಟಕ ಮಾದಿಗ ದಂಡೋರ ಮತ್ತು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮೂಲಕ ಒಳ ಮೀಸಲಾತಿಯ ಹೋರಾಟಕ್ಕೆ ಅಧಿಕೃತ ಚಾಲನೆ ದೊರಕಿತು. ಇದರ ಪ್ರತಿಫಲವಾಗಿ 2005ರಲ್ಲಿ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್, ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದಲ್ಲಿ ಆಯೋಗವನ್ನು ರಚಿಸಿದರು. ಈ ಮೂಲಕ ಪರಿಶಿಷ್ಟ ಜಾತಿಗಳ ಜೀವನಮಟ್ಟವನ್ನು ಮನೆ-ಮನೆಗೆ ತೆರಳಿ ಪ್ರತಿಯೊಬ್ಬರ ಅಂಕಿ ಅಂಶಗಳನ್ನು ತಿಳಿಯುವ ಸಮೀಕ್ಷೆಯ ಕಾರ್ಯಕ್ಕೆ 2010ರಲ್ಲಿ ಚಾಲನೆ ನೀಡಲಾಯಿತು. ಈ ಸಮೀಕ್ಷೆಯಲ್ಲಿ ಮುಖ್ಯವಾಗಿ 150 ಪ್ರಶ್ನಾವಳಿಗಳನ್ನು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಮಟ್ಟದ ಸ್ಥಿತಿಗತಿಗಳನ್ನು ನಿರ್ಧರಿಸಲು ಸಹಾಯಕವಾಗುವಂತೆ ಕೇಳಲಾಯಿತು.
ನ್ಯಾಯಮೂರ್ತಿ ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳಲ್ಲಿನ ನೈಜ ಚಿತ್ರಣಗಳನ್ನು ಬಹುಆಯಾಮಗಳ ಅಧ್ಯಯನದ ಮೂಲಕ ಕಂಡುಕೊಂಡ ಕೆಲವು ವಾಸ್ತವ ಸಂಗತಿಗಳನ್ನು ಸರಕಾರಕ್ಕೆ 2012ರಲ್ಲಿ ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಸಲ್ಲಿಸಲಾಯಿತು. ಈ ವರದಿ ಪ್ರಕಾರ ಶೇ.15ರಷ್ಟು ಮೀಸಲಾತಿಯಲ್ಲಿ ಎಡ-ಬಲ, ಇತರೆ ಪರಿಶಿಷ್ಟ ಜಾತಿಗಳು ಹಾಗೂ ಸ್ಪಶ್ಯ ಜಾತಿಗಳ ನಡುವಿನ ಅನುಪಾತ ಕ್ರಮವಾಗಿ ಶೇ.6, 5, 01, 03 ರೀತಿಯಲ್ಲಿ ವಿಂಗಡಿಸಬೇಕೆಂದು ತಿಳಿಸಿದೆ ಮತ್ತು ಪರಿಶಿಷ್ಟ ಜಾತಿಗಳ ಗಣತಿ ಮೂಲಕವಾಗಿ ಒಟ್ಟು 101 ಜಾತಿಗಳ ಹಿಂದುಳಿವಿಕೆಯ ಪ್ರಮಾಣವನ್ನು ಜಾತಿಗಣತಿಯ ಮೂಲಕ ಪರೀಕ್ಷಿಸಲಾಗಿ, ಅದರಲ್ಲಿ ಸುಮಾರು 20.54 ಲಕ್ಷ ಪ.ಜಾತಿ ಕುಟುಂಬಗಳನ್ನು ಹಾಗೂ 96.03 ಲಕ್ಷ ಜನಸಂಖ್ಯೆಯನ್ನು ಗಣತಿ ಮಾಡಲಾಯಿತು. ಇದರಿಂದ ಕಂಡುಕೊಂಡ ಸತ್ಯವೇನೆಂದರೆ ಮಾದಿ ಗರ(ಎಡಗೈ) ಜನಸಂಖ್ಯೆಯ ಪಾಲು ಪ.ಜಾತಿಯಲ್ಲಿ ಅಧಿಕವಿದ್ದು, ಅದು ಶೇ. 33.37 ಆಗಿತ್ತು. ಇನ್ನು ಛಲವಾದಿ(ಬಲಗೈ)ಯದು ಶೇ. 32ರಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಬಹುತೇಕ ಪರಿಶಿಷ್ಟ ಜಾತಿಯಲ್ಲಿನ ಮೀಸಲಾತಿಯಲ್ಲಿ ಛಲವಾದಿಯು ಉದ್ಯೋಗ ಮತ್ತು ಶಿಕ್ಷಣದಲ್ಲಿ ಬಹುಪಾಲನ್ನು ಪಡೆದಿದ್ದರೆ, ಮಾದಿಗ ಸಮುದಾಯವು ಸರಕಾರದ ಅವಕಾಶಗಳನ್ನು ಪಡೆಯುವಲ್ಲಿ ವೈಫಲ್ಯವಾಗಿರುವ ಅಂಶ ಕಂಡುಬರುತ್ತದೆ.
ಒಳಮೀಸಲಾತಿಯ ಕುರಿತ ಪರ-ವಿರೋಧ ಮತ್ತು ತಟಸ್ಥ ಧೋರಣೆಗಳು:
ಈ ಮೀಸಲಾತಿಯ ಕುರಿತಾದ ವಿಚಾರಗಳನ್ನು ಒಟ್ಟಾರೆಯಾಗಿ ನೋಡಿದಾಗ ಒಂದು ಕಡೆ ನ್ಯಾ.ಸದಾಶಿವ ಆಯೋಗದ ವರದಿ ಮಾದಿಗ ಸಮುದಾಯವು ಇನ್ನೂ ಹೀನಾಯ ಸ್ಥಿತಿಯಲ್ಲಿರುವ ಅಂಶಗಳನ್ನು ಬಿಂಬಿಸಿದರೆ, ಮತ್ತೊಂದು ಕಡೆ ಇದು ದಲಿತರ ಮಧ್ಯೆ ತಂದೊಡ್ಡುತ್ತಿರುವ ಕಂದಕ ಎಂದು ಸಹ ಬಿಂಬಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಳ ಮೀಸಲಾತಿ ಜಾರಿಯ ಕಾರ್ಯ ಚಾಲನೆಗೆ ಛಲವಾದಿ, ಲಂಬಾಣಿ, ಭೋವಿ ಸಮುದಾಯಗಳು ಪ್ರಬಲವಾದ ವಿರೋಧವನ್ನು ಒಡ್ಡುತ್ತಿವೆ. ಇಂತಹ ವಿರೋಧಗಳಿಗೆ ಹಲವು ಹಿತಾಸಕ್ತಿಯ ಕಾರಣಗಳೂ ಉಂಟು, ಈಗಾಗಲೇ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಈ ಎಲ್ಲ ವಲಯಗಳಲ್ಲಿ ತಮ್ಮ ಎಲ್ಲೆಗಳನ್ನು ಪ್ರತಿಷ್ಠಾಪಿಸಿವೆ.
ಈಗ ಇಂತಹ ಒಂದು ನಡೆ ತಮ್ಮ ಬುಡವನ್ನು ಅಲುಗಾಡಿಸಬಹುದು ಮತ್ತು ಇಂತಹ ಪಟ್ಟಭದ್ರ ಹಿತಾಸಕ್ತಿ ಧೋರಣೆಯು ಮೀಸಲಾತಿಯ ಸಾಮಾಜಿಕ ನ್ಯಾಯದ ಆಶಯಗಳನ್ನು ಇಂದು ಅಣಕಿಸುವಂತಿವೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್, ಪೆರಿಯಾರ್ ಹಾಗೂ ಜ್ಯೋತಿಬಾ ಪುಲೆಯವರಂತಹ ಮಹಾನುಭಾವರಾದಿಯಿಂದ ಪ್ರತಿಪಾದಿಸಲ್ಪಟ್ಟಿರುವ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಸತತ ಹೋರಾಟಗಳ ತ್ಯಾಗದ ಫಲವೇ ಈ ಮೀಸಲಾತಿ. ಅವರ ಆಶಯದಂತೆ ಮೀಸಲಾತಿ ಇಂದು ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಇದಕ್ಕೆಲ್ಲ ತದ್ವಿರುದ್ಧ ಎನ್ನುವಂತಿದೆ. 70ರ ದಶಕದ ಕೊನೆಯಾರ್ಧ ಮತ್ತು 80ರ ದಶಕದ ಆರಂಭದಲ್ಲಿ ದಲಿತ ಸಂಘರ್ಷ ಸಮಿತಿ ‘ದಲಿತ’ ಎನ್ನುವ ಪರಿಕಲ್ಪನೆಯಲ್ಲಿ ಎಲ್ಲ ಹಿಂದುಳಿದ ವರ್ಗಗಳನ್ನು, ಬುಡಕಟ್ಟು ಸಮುದಾಯಗಳನ್ನು, ಶೋಷಿತ ವರ್ಗಗಳನ್ನು ತರುವ ಪ್ರಯತ್ನ ಮಾಡಿತು. ಈ ಆಶಾದಾಯಕ ಮನೋಭಾವ ಒಂದು ರೀತಿಯಲ್ಲಿ ವರವೂ ಮತ್ತು ಶಾಪವೂ ಹೌದು ಎನ್ನುವಂತಿದೆ. ಕಾರಣವಿಷ್ಟೇ ಈ ಸ್ಪಶ್ಯ ಮತ್ತು ಅಸ್ಪಶ್ಯ ಜಾತಿಗಳು ದಲಿತ ಪರಿಕಲ್ಪನೆಯಲ್ಲಿನ ಸಂಯುಕ್ತತೆಯೆಂದೂ ಕರೆಯಬಹುದು.
ಆದರೆ, ಇಂಥ ಕಲ್ಪನೆಯಲ್ಲಿ ಅವು ಆಂತರಿಕ ಕಂದಕ ಮತ್ತು ಬಾಹ್ಯ ಒಗ್ಗಟ್ಟನ್ನು ಸಾಂದರ್ಭಿಕ ಸನ್ನಿವೇಶಕ್ಕೆ ಅನುಗುಣವಾಗಿ ಪ್ರತಿಬಿಂಬಿಸುತ್ತವೆಯಷ್ಟೆ. ಸರಕಾರಿ ಪೋಷಿತ ಅನುಸೂಚಿತ ಜಾತಿಗಳ ಪಟ್ಟಿಯಲ್ಲಿ ನಿರ್ಧಿಷ್ಟ ಮಾನದಂಡ ಗಳ ಮೂಲಕ ದಲಿತರನ್ನು ಪರಿಶಿಷ್ಟ ಜಾತಿಗಳಲ್ಲಿ ನೋಡಲಾಗುತ್ತದೆ. ಈ ಮೂಲಕ ಅವುಗಳಲ್ಲಿ ಸಂಯುಕ್ತತೆಯನ್ನು ಪ್ರತಿಪಾದಿಸುವ ಮೂಲಕ ಅವುಗಳ ಭಿನ್ನ ಸಾಂಸ್ಕೃತಿಕತೆಯನ್ನು ಕಡೆಗಣಿಸಿದಂತಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಹಲವು ಹಿಂದುಳಿದ ವರ್ಗಗಳು ಫ್ಯೂಡಲ್ ಮಾದರಿಯ ಅಂಶಗಳನ್ನು ತಮ್ಮ ಒಡಲಲ್ಲಿ ಕಟ್ಟಿಕೊಂಡಿದ್ದು, ಈಗಲೂ ಅವು ಯಜಮಾನಿಕೆಯ ಸಂಸ್ಕೃತಿಯನ್ನು ಪೋಷಿಸುತ್ತಿವೆ. ಇಂಥ ಸಮುದಾಯಗಳು ಅದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಸರಿನಲ್ಲಿ ತಮಗಿಂತ ಹೀನಾಯ ಸ್ಥಿತಿಗಳಲ್ಲಿರುವ ಸಮುದಾಯಗಳ ಅವಕಾಶಗಳನ್ನು ಕಿತ್ತುಕೊಂಡಿವೆ.
ಇತ್ತೀಚೆಗೆ ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ನಡೆದ ಘಟನೆಯು ದಲಿತ ಎನ್ನುವ ವಿಶಾಲ ಪರಿಕಲ್ಪನೆಯನ್ನು ಅಣಕಿಸುವಂತಿದೆ. ಮೊಹರಂ ಹಬ್ಬ(ಉತ್ತರ ಕರ್ನಾಟಕದಲ್ಲಿ ಹಿಂದೂ, ಮುಸ್ಲಿಂ ಧರ್ಮೀಯರು ಪರಸ್ಪರ ಒಟ್ಟಾಗಿ ಆಚರಿಸುವ ಹಬ್ಬ)ದ ಕೊನೆಯ ದಿನದಂದು ಹೆಜ್ಜೆಮಜಲು ಮಾಡುವ ಸಂದರ್ಭದಲ್ಲಿ ಉಂಟಾದ ವಾಲ್ಮೀಕಿ ಮತ್ತು ದಲಿತ ಸಮುದಾಯಗಳ ನಡುವಿನ ವೈಷಮ್ಯವು ಕೆಲವು ಅಂಶಗಳನ್ನು ಈ ಸಂದರ್ಭದಲ್ಲಿ ನಮಗೆ ಸ್ಪಷ್ಟಪಡಿಸುತ್ತದೆ. ಮೀಸಲಾತಿ ಇನ್ನಿತರ ಸರಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ ಮಾತ್ರ ಇಂದು ದಲಿತ ಅಥವಾ ಶೋಷಿತ ಎನ್ನುವ ಪರಿಕಲ್ಪನೆ ಬಳಕೆಯಾಗುತ್ತಿರುವುದು ನಮ್ಮಲ್ಲಿ ಇನ್ನೂ ಪರಂಪರಾಗತವಾಗಿ ಜಿಡ್ಡುಗಟ್ಟಿ ಹಾಗೇ ಉಳಿದಿರುವ ಮನಸ್ಥಿತಿಯನ್ನು ತಿಳಿಸುತ್ತದೆ. ಇನ್ನು ಈ ಒಳ ಮೀಸಲಾತಿಯ ಕುರಿತು ದಲಿತ ಸಂಘಟನೆಗಳು ಹಾಗೂ ಚಿಂತಕರಲ್ಲಿ ಪರ, ವಿರೋಧ, ತಟಸ್ಥ ಎನ್ನುವಂತಹ ತ್ರಿಶಂಕು ಸ್ಥಿತಿಯ ಧೋರಣೆಗಳಿವೆ. ಹೀಗಾಗಿ ಒಳ ಮೀಸಲಾತಿಯ ವಿಚಾರವು ಇಂದಿಗೂ ಕೂಡ ಸೌಹಾರ್ದವಾಗಿ ತಾರ್ಕಿಕ ಅಂತ್ಯ ಕಾಣದೆ ಉಳಿದಿರುವುದು ನಾವು ಗಮನಿಸಬೇಕಾದ ಅಂಶವಾಗಿದೆ. ಇನ್ನು ಸಾಹಿತಿ ದೇವನೂರ ಮಹದೇವ ಅವರ ಈ ಕೆಳಗಿನ ಮಾತುಗಳು ಕೂಡ ಇದನ್ನು ಇನ್ನಷ್ಟು ಪುಷ್ಟೀಕರಿಸುತ್ತವೆ.
‘‘ಭಾರತದ ಸಾಮಾಜಿಕ ವಿಷಮತೆಯಲ್ಲಿ ಬ್ರಾಹ್ಮಣರಿಗೆ ಒಂದು ರಾಜ್ಯ ಕೊಟ್ಟರೂ ಅಲ್ಲೂ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಇತ್ಯಾದಿಗಳು ಭೂತಾಕಾರವಾಗಿ ಬೆಳೆದು ಅವಹೇಳನ, ಆತ್ಮಹತ್ಯೆಗಳು ಹೆಚ್ಚಿ ಮತ್ತೆ ಪ್ರತ್ಯೇಕತೆಯ ಪ್ರಶ್ನೆ ಏಳುತ್ತದೆ. ದಲಿತರಿಗೆ ಪ್ರತ್ಯೇಕ ರಾಜ್ಯ ಕೊಟ್ಟರೂ ಅಲ್ಲೂ ಮೇಲು-ಕೀಳು ಎಂದು ಹೊಡೆದಾಟ ಕೊಲೆಗಳಾಗಿ ಮತ್ತೆ ಪ್ರತ್ಯೇಕತೆಯ ಪ್ರಶ್ನೆಯೇ ಏಳುತ್ತದೆ. ಚಾತುರ್ವರ್ಣದ ಜಾತಿ ಪದ್ಧತಿಯ ಶ್ರೇಣಿ ಆಳವಾಗಿ ಬೇರೂರಿ ಸಮಾನತೆಯ ಸಹಬಾಳ್ವೆಯು ಭಾರತೀಯರಿಗೆ ಅಸಹಜವಾಗಿದೆ. ಏನು ಮಾಡೋಣ?’’ ಅವರು ಇನು್ನ ಮುಂದುವರಿದು ಹೇಳುತ್ತಾ ...,
‘‘ಓಟು-ಒಗ್ಗಟ್ಟಿನಿಂದ ಅಷ್ಟು ಇಷ್ಟು ನಿಲ್ಲಲು ಪ್ರಯತ್ನಿಸುತ್ತಿರುವ ಯಾರೂ ರಕ್ಷಿಸದ ಎಲ್ಲರ ಅಸಹನೆಗೆ ತುತ್ತಾದ ಊರಾಚೆಗಿನ ಈ ಕೊನೆಯ ಘಟಕದಲ್ಲಿರುವ ಒಡಕು ಹೆಚ್ಚಾದರೆ, ಏನೋ ಎತ್ತೋ ಎಂಬ ಆತಂಕ ನನಗಿದೆ.’’ ( ಒಳಮೀಸಲಾತಿ- ಮುಟ್ಟಲಾರದವನ ಒಡಲಾಳ, ಪುಟ-26, ಲಡಾಯಿ ಪ್ರಕಾಶನ)
ಇಲ್ಲಿ ದೇವನೂರರ ಅಸಹಾಯಕತೆಯು ಹಾಗೂ ಅವರ ಸಾತ್ವಿಕ ತಟಸ್ಥ ಧೋರಣೆಯು ದಲಿತರ ಚದುರುವಿಕೆ ಬಗೆಗೆ ಕಳವಳ ಮತ್ತು ಆತಂಕವನ್ನು ವ್ಯಕ್ತಪಡಿಸುತ್ತದೆ. ಇನ್ನು ಸಾಹಿತಿ ಮೊಗಳ್ಳಿ ಗಣೇಶ ಅವರು ಇದೇ ಒಳಮೀಸಲಾತಿಯ ಕುರಿತಾಗಿ ಘಂಟಾಘೋಷವಾಗಿ ಅದರ ಸಾಧ್ಯತೆಗಳ ವಿಸ್ತಾರವನ್ನು ತೆರೆದಿಡುತ್ತಾರೆ. ಇವುಗಳಲ್ಲಿ ಪ್ರಮುಖವಾಗಿ ಪರಿಶಿಷ್ಟ ಜಾತಿಯಲ್ಲಿರುವ ಸ್ಪಶ್ಯ ಮತ್ತು ಅಸ್ಪಶ್ಯರನ್ನು ಪ್ರತ್ಯೇಕವಾಗಿ ವಿಂಗಡಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದು ಮತ್ತು ಮೀಸಲಾತಿ ಪಡೆಯುತ್ತಿರುವ ತಲೆಮಾರುಗಳನ್ನು ಗುರುತಿಸಿ ಅದರಲ್ಲಿ ಸೌಲಭ್ಯ ವಂಚಿತರಾದ ಕುಟುಂಬಗಳಿಗೆ ಮೊದಲ ಆದ್ಯತೆ ನೀಡುವುದು. ಮತ್ತು ಎಲ್ಲ ಜಾತಿಗಳ ಪುನರ್ ಪರಿಶೀಲನೆ ಹಾಗೂ ಅದರಲ್ಲಿರುವ ಲೋಪಗಳನ್ನು ಸರಿಪಡಿಸುವುದು ಗಣೇಶರ ನಿಲುವಾಗಿದೆ.
ಇಲ್ಲಿ ಈ ಇಬ್ಬರೂ ಚಿಂತಕರ ಪರ ವಿರೋಧ ಅಭಿಪ್ರಾಯಗಳು ದಲಿತ ಸಮುದಾಯಗಳ ಆಕಾಂಕ್ಷೆಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ನಾವು ಈ ಒಳಮೀಸಲಾತಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗಿರುವುದು ಸದ್ಯದ ತುರ್ತು ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಸೂಚಿಸುವ ಗೌರವವಾಗಿದೆ. ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಒಳ ಮೀಸಲಾತಿಯನ್ನು ಜಾರಿಗೆ ತರುವುದು ಮತ್ತು ಬಿಡುವುದು ಕೇಂದ್ರ ಸರಕಾರದ ಕೈಯಲ್ಲಿದೆ. ಈಗಾಗಲೇ ಸುಪ್ರೀಂ ಕೋರ್ಟಿನಿಂದ ರದ್ದಾಗಿರುವ ಈ ಒಳ ಮೀಸಲಾತಿಯನ್ನು ಪುನರ್ಭವಿಸುವಂತೆ ಮಾಡುವುದು ಅದೂ ಸಂಸತ್ತಿನ ಮೂಲಕ ಕಾಯ್ದೆಯನ್ನು ಜಾರಿಗೆ ತಂದಾಗ ಮಾತ್ರ. ಇನ್ನು ಕರ್ನಾಟಕದ ಮಟ್ಟಿಗೆ ಆಶಾದಾಯಕ ಬೆಳವಣಿಗೆ ಎಂದರೆ ಪ್ರಸ್ತುತ ಸರಕಾರವು ಮಾಡುತ್ತಿರುವ ಜಾತಿಗಣತಿ ಸಮೀಕ್ಷೆಯು 1931ರ ನಂತರ ಹಾಗೂ ಸ್ವಾತಂತ್ರೋತ್ತರ ಭಾರತದಲ್ಲಿನ ಮೊದಲನೆಯ ಪ್ರಯೋಗವಾಗಿದೆ. ಈ ಮೂಲಕ ಎಲ್ಲ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಿಳಿಯಲು ನೆರವಾಗುವುದಲ್ಲದೆ ಇದು ಒಳಮೀಸಲಾತಿಗೆ ಇನ್ನೂ ಪೂರಕವಾದ ಅಂಶಗಳನ್ನು ಒದಗಿಸಲು ನೆರವಾಗುತ್ತದೆ.
ಪ್ರಸ್ತುತ ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ಸಂವಿಧಾನಾತ್ಮಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕೂಡ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿರು ವುದು ಅಗತ್ಯವಾಗಿದೆ. ಆಗ ಮಾತ್ರ ಇಂತಹ ಸಂದಿಗ್ಧ ಸನ್ನಿವೇಶ ಗಳನ್ನು ಸುಲಭವಾಗಿ ನಿಭಾಯಿಸಬಹುದು. ಇಲ್ಲದೇ ಹೋದರೆ ಇಂತಹ ವಿಷಯಗಳು ರಾಜಕೀಯ ದಾಳವಾಗಿ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂಥ ಸೂಕ್ಷ್ಮ ವಿಷಯಗಳನ್�