ರಕ್ತದಾನಿಗಳು.. ಜೀವರಕ್ಷರಲ್ಲವೇ...?
ಮಾನ್ಯರೆ,
‘‘ರಕ್ತದಾನ ಶ್ರೇಷ್ಠದಾನ, ರಕ್ತದಾನ ಮಾಡಿ ಜೀವ ಉಳಿಸಿ’’ ಎನ್ನುವ ಘೋಷ ವಾಕ್ಯದಡಿಯಲ್ಲಿ ಸಾಮಾಜಿಕ ಚಿಂತನೆಯ, ಸಮಾಜದ ದುಃಖ-ದುಮ್ಮಾನಗಳಿಗೆ ಸ್ಪಂದಿಸುವ ಸಂಘ-ಸಂಸ್ಥೆಗಳು ಜಾತೀಯ, ಮತೀಯ ಸಂಘಟನೆಗಳು, ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಿ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ಸ್ವಯಂ ಪ್ರೇರಿತ ರಕ್ತದಾನಿಗಳಿಂದ ಯುನಿಟ್ಗಟ್ಟಲೆ ರಕ್ತ ಸಂಗ್ರ ಹಿಸಿ, ರಕ್ತನಿಧಿ ಕೇಂದ್ರಗಳಿಗೆ ಕೊಡುತ್ತವೆ. ಸಮಾಜದ ಯುವಶಕ್ತಿ ಯಾವುದೇ ಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುತ್ತಾರೆ. ಕೆಲವರಂತೂ ತುರ್ತು ಸಂದರ್ಭ, ಹೆರಿಗೆ ಅಪಘಾತ ಸಮಯಗಳಲ್ಲಿ ರಕ್ತದಾನ ಮಾಡುತ್ತಾರೆ. ಇನ್ನು ಕೆಲವರು ವೈದ್ಯಶಾಸ್ತ್ರದ ನಿಯಮಾನುಸಾರವಾಗಿ 25, 50, 100ಕ್ಕೂ ಹೆಚ್ಚು ಬಾರಿ ದಾಖಲೆಯ ರಕ್ತದಾನ ಮಾಡಿದವರೂ ನಮ್ಮ ಕರ್ನಾಟಕದಲ್ಲಿ ಬಹಳಷ್ಟಿದ್ದಾರೆ. ಇಂಥ ಮಹಾಸಾಧಕ, ಸಮಾಜ ಸೇವಕ ರಕ್ತದಾನಿಗಳನ್ನು ಗುರುತಿಸಿ ನಮ್ಮ ಸರಕಾರ ಪುರಸ್ಕರಿಸಿ ಅಭಿನಂದಿಸುವ ಕಾರ್ಯವನ್ನು ಮಾಡದಿರುವುದು ವಿಷಾದನೀಯ ಸಂಗತಿ. ರಕ್ತದಾನ ಮಾಡಲು ಹಿಂಜರಿಯುತ್ತಿರುವ ಈ ಕಾಲಘಟ್ಟದಲ್ಲಿ, ಇವರ ಸೇವೆ ಸಮಾಜಕ್ಕೊಂದು ಆದರ್ಶ. ಇವರು ಜೀವ ರಕ್ಷಕರಲ್ಲವೇ...?! ಇನ್ನು ಮುಂದಾದರೂ ಸರಕಾರ ದಾಖಲೆಯ ರಕ್ತದಾನ ಮಾಡಿದ ರಕ್ತದಾನಿಗಳನ್ನು ಮತ್ತು ಅತೀಹೆಚ್ಚು ರಕ್ತದಾನ ಶಿಬಿರ ನಡೆಸಿದ ಸಂಘ-ಸಂಸ್ಥೆಗಳನ್ನು ಗುರುತಿಸಲಿ.