ನವಾಯತ್ ಕ್ಲಬ್ ಬೆಂಗಳೂರು ವತಿಯಿಂದ ಬೆಂಗಳೂರಿನಲ್ಲಿ ‘ನವಾಯತ್ ಕ್ರಿಕೆಟ್ ಲೀಗ್ 2017 ‘
ಬೆಂಗಳೂರು, ಜ.25 : ನವಾಯತ್ ಕ್ಲಬ್ ಬೆಂಗಳೂರು (ಎನ್ ಸಿ ಬಿ) ಇದರ ವತಿಯಿಂದ ಭಟ್ಕಳ, ಮುರುಡೇಶ್ವರ , ಮಂಕಿ ಹಾಗೂ ಶಿರೂರು ಪ್ರದೇಶಗಳ ನಿವಾಸಿಗಳಾಗಿದ್ದು , ಪ್ರಸ್ತುತ ಬೆಂಗಳೂರು ನಗರದಲ್ಲಿ ನೌಕರಿಯಲ್ಲಿರುವ ಯುವಕರ ಕ್ರಿಕೆಟ್ ಪಂದ್ಯಾಟ ‘ನವಾಯತ್ ಕ್ರಿಕೆಟ್ ಲೀಗ್ 2017 ‘ ಬೆಂಗಳೂರಿನಲ್ಲಿ ನಡೆಯಿತು.
ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ನವಾಯತ್ ಕ್ಲಬ್ ಬೆಂಗಳೂರು ಇದರ ಪ್ರಯತ್ನವನ್ನು ಶ್ಲಾಘಿಸಿದರು. ಕ್ರಿಕೆಟ್ ಪಂದ್ಯಾಟದ ಮೂಲಕ ಭಟ್ಕಳ ಆಸುಪಾಸಿನ ಯುವಕರನ್ನು ಒಗ್ಗೂಡಿಸುತ್ತಿರುವುದು ಸಮುದಾಯದಲ್ಲಿಯೇ ಹೊಸ ಪ್ರಯತ್ನವಾಗಿದೆ. ಎನ್ ಸಿಬಿ ಯ ಈ ಪ್ರಯತ್ನವು ಭವಿಷ್ಯದಲ್ಲಿ ಸಮುದಾಯಕ್ಕೆ ಎಲ್ಲಿಯಾದರೂ ಉಪಕಾರಿಯಾಗಲಿದೆ ಎಂದು ಹೇಳಿದರು.
ಮಜ್ಲಿಸ್ ಇಸ್ಲಾವ ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ , ‘ ಭಟ್ಕಳದ ಬ್ರೆಟ್ ಲೀ ‘ ಎಂದೇ ಪ್ರಖ್ಯಾತರಾದ ಹೆಸರಾಂತ ಕ್ರಿಕೆಟಿಗ ಅನಸ್ ಮುಲ್ಲಾ ಫೈನಲ್ ಪಂದ್ಯಾಟವನ್ನು ವೀಕ್ಷಿಸಿದರು.
ಅಡ್ವೊಕೇಟ್ ಅಫಾಕ್ ಕೊಲಾ , ಮುದಸ್ಸಿರ್ ಇಕ್ಕೇರಿ , ಅಬ್ದುಲ್ ರಾಬ್ ಕೊಲಾ, ರಶೀದ್ ಕೊಲಾ, ಸೈಫಾನ್ ಸಿಂಗೇತಿ , ಬಾಸಿತ್ ಪಿಲ್ಲರ್ , ಕೌಶಿಕ್ ಮುಂತಾದವರು ಉಪಸ್ಥಿತರಿದ್ದರು .
ಐಪಿಎಲ್ ಮಾದರಿಯಲ್ಲಿ ತಂಡಗಳ ಹರಾಜು ಪ್ರಕ್ರಿಯೆ ನಡೆದ ನಂತರ 8 ತಂಡಗಳು ಪಂದ್ಯಾಟದಲ್ಲಿ ಬಾಗವಹಿಸಿದ್ದವು.
ಫೈನಲ್ ಪಂದ್ಯದಲ್ಲಿ ಆರ್ .ಎ. ರೈಡರ್ಸ್ ತಂಡವು ಫೋರ್ ಚಾರ್ಜ್ ಸ್ಮಾಷರ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸರಣಿ ಶ್ರೇಷ್ಠ ಮತ್ತು ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಇಕ್ರುಮ್ ಮೋತಿಯಾ ಆಯ್ಕೆಯಾದರು. ಉತ್ತಮ ದಾಂಡಿಗನಾಗಿ ಮೊಯ್ಯುದ್ದೀನ್ ಶಮಾಸ್ ಹಾಗೂ ಉತ್ತಮ ಬೌಲರ್ ಆಗಿ ನೂರ್ ಅವರು ಆಯ್ಕೆಯಾದರು.
ವಿಜಯಿ ತಂಡವು 45000 ರೂ. ನಗದು ಹಾಗೂ ಟ್ರೋಫಿ ಹಾಗೂ ರನ್ನರ್ಸ್ ತಂಡವು 25000 ರೂ. ನಗದು ಹಾಗೂ ಟ್ರೋಫಿ ಪಡೆಯಿತು. ಸರಣಿ ಶ್ರೇಷ್ಠ ಪ್ರಶಸ್ತಿಗೆ 5000 ರೂ. ನಗದು ನೀಡಿ ಗೌರವಿಸಲಾಯಿತು.