ಮಕ್ಕಳಪೀಡೆಗಳು
ಶಾಲೆಗೆ ಹೋಗುವ ಅಥವಾ ಬೇರೆ ಯಾವುದೇ ತರಗತಿಗಳಿಗೆ ಹೋಗುವಂತಹ ಮಕ್ಕಳ ಒಡನಾಡಿಗಳು ಮತ್ತು ಗೆಳೆಯ ಗೆಳತಿಯರೆಲ್ಲಾ ಮುಗ್ಧ ಮಕ್ಕಳೇನಾಗಿರುವುದಿಲ್ಲ. ಪೀಡಕರೂ ಆಗಿರುತ್ತಾರೆ. ಆದರೆ ಅದು ಯಾವ್ಯಾವ ರೀತಿಯಲ್ಲಿ ಮತ್ತು ಎಷ್ಟೆಷ್ಟು ಪ್ರಮಾಣದಲ್ಲಿ ಎಂದು ಪೋಷಕರಿಗೆ ತಿಳಿಯದೇ ಇರುವಷ್ಟು ಸೂಕ್ಷ್ಮವಾಗಿರುತ್ತವೆ. ನಮ್ಮ ಮಕ್ಕಳನ್ನು ಪೀಡಿಸುವ ಮಕ್ಕಳು ತಮ್ಮ ಪೋಷಕರಿಗೂ ಅಂತಹ ಸುಳಿವುಗಳನ್ನು ಕೊಟ್ಟಿರುವುದಿಲ್ಲ. ಎಷ್ಟೋ ಬಾರಿ ತಮ್ಮ ಮಕ್ಕಳಲ್ಲಿ ಆ ಬಗೆಯ ಪೀಡಕ ಮನಸ್ಥಿತಿ ಇದೆ ಅಥವಾ ಅಂತಹ ವರ್ತನೆಗಳು ಅವರಲ್ಲಿವೆ ಎಂದು ಅವರಿಗೆ ತಿಳಿದಿರುವುದೇ ಇಲ್ಲ. ತಮ್ಮ ಮುಂದೆ ತೋರ್ಪಡಿಸದೇ ಇರುವಂತಹ ವರ್ತನೆಗಳು ನಮ್ಮ ಮಕ್ಕಳಲ್ಲಿ ಇಲ್ಲವೇ ಇಲ್ಲ ಎಂದೇನಾದರೂ ಪೋಷಕರು ಅಂದುಕೊಂಡಿದ್ದಲ್ಲಿ ಒಮ್ಮೆ ಅಡ್ಡ ಪರೀಕ್ಷೆ ಮಾಡಬೇಕು.
ಸಮಾಜದ ನಾನಾ ಬಗೆಯ ಜನರನ್ನು ನೋಡುವ, ಅನೇಕ ಮಗ್ಗುಲುಗಳ ಪರಿಚಯವನ್ನು ಹೊರಗಡೆಯಿಂದ ಮಾಡಿಕೊಳ್ಳುವ ಮಕ್ಕಳು ಅವರ ಕೌಟುಂಬಿಕ ವಾತಾವರಣಕ್ಕೆ ಅಪರಿಚಿತವಾಗಿರುವಂತಹ ವರ್ತನೆಗಳನ್ನು, ಅಥವಾ ವಿಷಯಗಳನ್ನು ಗ್ರಹಿಸಿರುತ್ತಾರೆ. ಕೆಲವೊಮ್ಮೆ ಅವರ ಸಾಂಸ್ಕೃತಿಕ ಮತ್ತು ಕೌಟುಂಬಿಕ ಶ್ರದ್ಧೆ ಮತ್ತು ಮೌಲ್ಯಕ್ಕೆ ವಿರೋಧವಾಗಿರುವಂತಹ, ಆಘಾತವಾಗುವಂತಹ ವಿಷಯಗಳನ್ನು ಸ್ವೀಕರಿಸಿಬಿಟ್ಟಿರುತ್ತಾರೆ. ನಮ್ಮ ಮನೆಯಲ್ಲಿ ಯಾರೂ ಅಂತಹವರಿಲ್ಲ, ನಮ್ಮ ಕುಟುಂಬದಲ್ಲೇ ಇಂತಹ ಸಂಗತಿಗಳು ನಡೆದಿಲ್ಲ. ನಮ್ಮ ಮಗುವೂ ಕೂಡ ಅದರ ತಂಟೆಗೆ ಹೋಗುವುದಿಲ್ಲ ಎಂದು ತಿಳಿದರೆ ಅದೊಂದು ದೊಡ್ಡ ತಪ್ಪಾಗುತ್ತದೆ.
ಮಕ್ಕಳ ಸಮಾಲೋಚನೆಯ ಸಮಯದಲ್ಲಿ ಬೆಳಕಿಗೆ ಬಂದ ಕೆಲವು ಪ್ರಕರಣಗಳನ್ನು ನಾನು ಬಹಳ ಗಂಭೀರವಾಗಿ ಗಮನಿಸಿದೆ.
ಆಪ್ತ ಸಮಾಲೋಚನೆ ಮಾಡುವವರೆಗೂ ವಿಲನ್ ಯಾರು ಎಂದು ಯಾರಿಗೂ ತಿಳಿದಿರಲೇ ಇಲ್ಲ. ಪೋಷಕರು ಶಾಲೆಯಲ್ಲಿನ ಹುಡುಗರನ್ನೆಲ್ಲಾ ವಿಚಾರಿಸಿದ್ದರು, ಅವನು ಟ್ಯೂಶನ್ಗೆ ಹೋಗುವ ಕಡೆಗಳಲ್ಲಿ ನಿಗಾ ಇರಿಸಿದ್ದರು. ಆದರೆ ಅವನ ಸಹವಾಸ ಮಾತ್ರ ನಿಗೂಢವಾಗಿತ್ತು. ದಾರಿ ತಪ್ಪಿಸಿದ ಘನ ಸಾಧನೆ ಮಾಡಿದ್ದವನು ಅವನ ದೊಡ್ಡಪ್ಪನ ಮಗನೇ ಆಗಿದ್ದ. ಅವನು ತಾನು ನೋಡುತ್ತಿದ್ದ ವಿಕೃತ ಆನಂದದ ವೀಡಿಯೊಗಳ ಅನುಭವವನ್ನು ಪಡೆಯದಿದ್ದರೂ ಅವನ್ನು ಪಡೆಯುತ್ತಿರುವಂತೆ ತಮ್ಮನ ಬಳಿ ವರ್ಣಿಸಿ ವರ್ಣಿಸಿ ಹೇಳುತ್ತಿದ್ದುದ್ದೇ ಮುಳುವಾಯಿತು.
ಈಗ ಕೂಡು ಕುಟುಂಬವು ಭಾಗವಾಗಿದೆ. ಕುಟುಂಬಗಳು ಬೇರಾಗಿವೆ. ಎರಡೂ ಕುಟುಂಬಗಳೂ ಈ ಎರಡು ಮಕ್ಕಳ ಬಗ್ಗೆ ಚಿಂತಿಸಿ ಚಿಂತಿಸಿ ಹೈರಾಣಾಗಿವೆ.
ಪ್ರಕರಣ ಒಂದು
ಅದೊಂದು ಸಂಪ್ರದಾಯಸ್ಥ ಕುಟುಂಬ. ಮಾಂಸಾಹಾರ, ಧೂಮಪಾನ, ಮದ್ಯ ಇಂತಹದ್ದನ್ನು ಎಂದಿಗೂ ಅವರು ತಮ್ಮ ಕುಟುಂಬದೊಳಕ್ಕೆ ಬಿಟ್ಟುಕೊಂಡಿರಲಿಲ್ಲ. ಆದರೆ, ಮಡಿವಂತಿಕೆಯ ಗೀಳಿರಲಿಲ್ಲ. ಸಾಮಾಜಿಕವಾಗಿ ಎಲ್ಲರೊಡನೆ ಸಾಮಾನ್ಯರೀತಿಯಲ್ಲಿ ಬೆರೆಯುತ್ತಿದ್ದರು. ಯಾವುದೇ ಚಟಗಳನ್ನು ಅಂಟಿಸಿಕೊಳ್ಳದೆ ವಿದ್ಯಾಭ್ಯಾಸ, ಗುರು ಹಿರಿಯರೆಂದರೆ ಗೌರವ, ದೇವರ ಪೂಜೆ, ಸಭ್ಯ ಜೀವನ; ಹೀಗೆ ಒಂದು ಸಾತ್ವಿಕ ಶಿಸ್ತಿನಲ್ಲಿ ಅವರ ಕುಟುಂಬವು ನಿರಾತಂಕವಾಗಿತ್ತು.
ತಂದೆ, ತಾಯಿ, ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅವರೆಡು ಗಂಡು ಮಕ್ಕಳು, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲಾ ಇರುವಂತಹ ಏಳನೆಯ ತರಗತಿಯ ಹುಡುಗ ಕಾಂಪ್ಲಾನ್ ಬಾಯ್ ಅಂತಿದ್ದವನು ದಿನದಿನಕ್ಕೆ ಮಂಕಾಗುತ್ತಿದ್ದ. ಪೂಜೆ ಪುನಸ್ಕಾರಗಳಿರಲಿ, ಸ್ನಾನ ಮಾಡುವುದನ್ನೂ ಕೂಡ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಮನೆಯ ಯಾವ ಊಟವನ್ನಾದರೂ ತಿರಸ್ಕರಿಸುತ್ತಿದ್ದ. ಏನಾದರೂ ಕೇಳಿದರೆ ಒರಟಾಗಿ ಉತ್ತರಿಸುತ್ತಿದ್ದ. ಅವನು ಬಳಸುವ ಕೆಲವು ಭಾಷೆ ಮತ್ತುಪದಗಳು ಅವರ ಕುಟುಂಬದ ಸಂಸ್ಕೃತಿಗೆ ತೀರಾ ವಿರುದ್ಧವಾಗಿರುತ್ತಿದ್ದವು. ಮನೆಯ ಹಿರಿಯರಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಅವನನ್ನು ಸಮಾಲೋಚನೆಗೆಂದು ಕರೆದುಕೊಂಡು ಬಂದರು. ಹುಡುಗ ಪೂಜೆ ಆಚರಣೆಗಳನ್ನೆಲ್ಲಾ ತೊರೆದರೂ ಚಿಂತೆ ಇಲ್ಲ. ಆದರೆ ದಾರಿ ತಪ್ಪಿರುವಂತಹ ವಿಚಾರಗಳಲ್ಲಿ ತೊಡಗಿದ್ದಾನೆ ಎಂಬುದು ಪೋಷಕರ ಆತಂಕವಾಗಿತ್ತು. ಅದಕ್ಕೆ ಇಂಬುಕೊಡುವಂತೆ ಅವನು ಶಾಲೆಯಿಂದ ಮನೆಗೆ ನಿಧಾನವಾಗಿ ಬರುತ್ತಿದ್ದ. ಮನೆಯಲ್ಲಿ ಹಣ ಕಳ್ಳತನವಾಗುತ್ತಿತ್ತು. ಅದಕ್ಕೆ ಕಾರಣ ಇವನೇ ಎಂದೂ ಸ್ಪಷ್ಟವಾಗಿತ್ತು. ಅವನ ಬಾಯಲ್ಲಿ ಕೆಟ್ಟ ವಾಸನೆ ಬರುತ್ತಿತ್ತು.
ಕೊನೆಗೆ ಅವನೊಂದಿಗೆ ನಡೆಸಿದ ಸಮಾಲೋಚನೆಯಿಂದ ತಿಳಿದುಬಂದುದು ಏನೆಂದರೆ, ಅವನ ದೊಡ್ಡಪ್ಪನ ಹಿರಿಯ ಮಗ ಪಿಯುಸಿ ಓದುತ್ತಿದ್ದವನು. ಅವನು ತನ್ನ ಮನೆಯವರಿಗೆ ಹೇಗೆ ಬೇಕೋ ಹಾಗೆ ಇರುತ್ತಿದ್ದು, ಇವನಿಗೆ ತನ್ನ ಮೊಬೈಲಿನಲ್ಲಿ ವಿಕೃತ ಆನಂದವನ್ನು ಪಡೆಯುವಂತಹ ವೀಡಿಯೊಗಳನ್ನು ತೋರಿಸುವುದಲ್ಲದೇ, ತಾನೂ ತನ್ನ ಕಾಲೇಜಿನ ಹುಡುಗರ ಜೊತೆ ಮತ್ತು ಇತರರ ಜೊತೆ ಇವನ್ನೆಲ್ಲಾ ಮಾಡುತ್ತಿದ್ದೇನೆ ಎಂದು ಕೆರಳಿಸುತ್ತಿದ್ದ. ಆದರೆ ಅವನು ಹಾಗೇನೂ ಮಾಡುತ್ತಿರಲಿಲ್ಲ. ತನ್ನನ್ನೂ ಜೊತೆಗೆ ಕರೆದುಕೊಂಡು ಹೋಗು ಎಂದು ಈ ಹುಡುಗ ಕೇಳಿದರೆ, ನೀನು ಇನ್ನೂ ದೊಡ್ಡವನಾಗಬೇಕು, ಹೆಚ್ಚು ಹಣ ಬೇಕು ಹಾಗೆ ಹೀಗೆ ಎಂದು ಹೇಳುತ್ತಿದ್ದ. ಆದರೆ ಇದನ್ನೆಲ್ಲಾ ನಿಜವೆಂದು ನಂಬಿದ್ದ ಏಳನೆ ತರಗತಿಯ ಹುಡುಗ ಮನೆಯಿಂದ ಹಣ ಕದ್ದು ತನ್ನ ಕಸಿನ್ ಹೇಳುತ್ತಿದ್ದ ವಿಕೃತ ಆನಂದದ ತಾಣಗಳನ್ನು ಹುಡುಕಿಕೊಂಡು ಹೋಗುತ್ತಿದ್ದ. ಇವನು ಹೀಗೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾನೆಂದು ಆ ದೊಡ್ಡ ಹುಡುಗನಿಗೆ ತಿಳಿದಿದ್ದರೂ ಅವನು ತಡೆಯುವ ಯತ್ನ ಮಾಡದೆ ಇನ್ನೂ ಬೆಂಕಿಗೆ ತುಪ್ಪಸುರಿಯುವ ಕೆಲಸ ಮಾಡುತ್ತಿದ್ದ. ಆಪ್ತ ಸಮಾಲೋಚನೆ ಮಾಡುವವರೆಗೂ ವಿಲನ್ ಯಾರು ಎಂದು ಯಾರಿಗೂ ತಿಳಿದಿರಲೇ ಇಲ್ಲ. ಪೋಷಕರು ಶಾಲೆಯಲ್ಲಿನ ಹುಡುಗರನ್ನೆಲ್ಲಾ ವಿಚಾರಿಸಿದ್ದರು, ಅವನು ಟ್ಯೂಶನ್ಗೆ ಹೋಗುವ ಕಡೆಗಳಲ್ಲಿ ನಿಗಾ ಇರಿಸಿದ್ದರು. ಆದರೆ ಅವನ ಸಹವಾಸ ಮಾತ್ರ ನಿಗೂಢವಾಗಿತ್ತು. ದಾರಿ ತಪ್ಪಿಸಿದ ಘನ ಸಾಧನೆ ಮಾಡಿದ್ದವನು ಅವನ ದೊಡ್ಡಪ್ಪನ ಮಗನೇ ಆಗಿದ್ದ. ಅವನು ತಾನು ನೋಡುತ್ತಿದ್ದ ವಿಕೃತ ಆನಂದದ ವೀಡಿಯೊಗಳ ಅನುಭವವನ್ನು ಪಡೆಯದಿದ್ದರೂ ಅವನ್ನು ಪಡೆಯುತ್ತಿರುವಂತೆ ತಮ್ಮನ ಬಳಿ ವರ್ಣಿಸಿ ವರ್ಣಿಸಿ ಹೇಳುತ್ತಿದ್ದುದ್ದೇ ಮುಳುವಾಯಿತು.
ಈಗ ಕೂಡು ಕುಟುಂಬವು ಭಾಗವಾಗಿದೆ. ಕುಟುಂಬಗಳು ಬೇರಾಗಿವೆ. ಎರಡೂ ಕುಟುಂಬಗಳೂ ಈ ಎರಡು ಮಕ್ಕಳ ಬಗ್ಗೆ ಚಿಂತಿಸಿ ಚಿಂತಿಸಿ ಹೈರಾಣಾಗಿವೆ.
ಒಬ್ಬ ಮನೋರೋಗಿಯಾಗಿದ್ದ. ಇನ್ನೊಬ್ಬನಿಗೆ ಭೀಕರವಾಗಿ ಅದನ್ನು ಅಂಟಿಸಿದ್ದ. ಹುಡುಗನ ಪ್ರಕರಣದಲ್ಲಿ ಪೋಷಕರು ಅವನ ವ್ಯತ್ಯಾಸವನ್ನು ತಿಳಿಯಲೇ ಒಂದು ವರ್ಷ ತೆಗೆದುಕೊಂಡರು. ನಂತರ ಅವನನ್ನು ಸಮಾಲೋಚಕರ ಬಳಿಗೆ ಕರೆದುಕೊಂಡು ಹೋಗಿದ್ದಕ್ಕೆ ವಿಷಯ ತಿಳಿಯಿತು. ಅದಕ್ಕೇ ಸುಮಾರು ಆರು ತಿಂಗಳು ಹಿಡಿಯಿತು. ನಂತರ ಅದೇನು ಆಗಿದೆ? ಅದೇಕೆ ಹಾಗಾಯ್ತು ಎಂದು ಗೊಂದಲದಲ್ಲೇ ಒಂದು ವರ್ಷ ಕಳೆದುಹೋಯ್ತು. ತಲೆ ನೋವು ಜ್ವರ ಬಂತು ಅಂತ ಗೊತ್ತಾದ ತಕ್ಷಣ ಯಾವುದೋ ಒಂದು ಔಷಧಿ ಕೊಡುವಂತಲ್ಲವಲ್ಲ ಇಂತಹ ಮನೋರೋಗಗಳು! ಅಷ್ಟಾದರೂ ಈಗ ಹುಡುಗನೇನೂ ಸರಿ ಹೋಗಿಲ್ಲ. ಮನೆಯವರು ಅವನ ಹಿಂದೆ ಸದಾ ಪೊಲೀಸ್ ಕಾವಲಿನಂತೆ ಇರುತ್ತಾರೆ. ಇದರ ಪರಿಣಾಮವಾಗಿ ಹುಡುಗ ಮತ್ತು ಪೋಷಕರ ನಡುವೆ ಸದಾ ಸಂಘರ್ಷ. ಇಬ್ಬರಿಗೂ ಸಮಾಲೋಚನೆಗಳು ನಡೆಯುತ್ತಿವೆ. ಈಗ ಹುಡುಗ ಕಾಲೇಜಿಗೆ ಹೋಗುತ್ತಿದ್ದಾನೆ. ಅವನ ಪರಿಸ್ಥಿತಿ ತೀರಾ ಹದಗೆಟ್ಟುಹೋಗಿದೆ. ಅವನೀಗ ಮಾದಕ ವಸ್ತುಗಳ ವ್ಯಸನಿ ಮತ್ತು ಒಂದು ಬಗೆಯ ವಿಚಿತ್ರಗುಂಪಿನ ಸದಸ್ಯ. ಆ ಗುಂಪಿನವರಿಗೆ ಕುಟುಂಬ, ಮೌಲ್ಯ, ವಿದ್ಯಾಭ್ಯಾಸ, ಸಮಾಜ; ಈ ಬಗೆಯ ಯಾವುದರ ಬಗ್ಗೆಯೂ ಆಸಕ್ತಿ ಇಲ್ಲ. ತಾವು ಹೇಗೋ ಮಾಡಿ ಹಣ ಹೊಂದಿಸಿಕೊಳ್ಳುತ್ತಾರೆ. ಎಲ್ಲೆಲ್ಲೋ ಹೋಗಿದ್ದು ತಮ್ಮ ಖುಷಿಯ ಉದ್ದೇಶವನ್ನು ಪೂರೈಸಿಕೊಂಡು ಬರುತ್ತಾರೆ.
ಪ್ರಕರಣ 2
ಐದನೆಯ ತರಗತಿಯ ಮಗುವೊಂದು ತನ್ನ ಮನೆಗೆ ದಿನವೂ ತನ್ನದಲ್ಲದ ಬೇರೆ ಬೇರೆ ವಸ್ತುಗಳನ್ನು ತರುತ್ತಿತ್ತು. ಅದನ್ನು ತನ್ನದೊಂದು ಗುಟ್ಟಾಗಿರುವ ಜಾಗದಲ್ಲಿ ಬಚ್ಚಿಡುತ್ತಿತ್ತು. ಅವುಗಳಲ್ಲಿ ಪೆನ್ನುಗಳು, ಆಲಂಕಾರಿಕ ವಸ್ತುಗಳು, ಹಣ, ವ್ಯಾಲೆಟ್, ಡೈರಿಗಳು ಇತ್ಯಾದಿ. ಮನೆಯವರು ಮೊದಮೊದಲು ಅದನ್ನು ಗಮನಿಸಿರಲೇ ಇಲ್ಲ. ಯಾವಾಗಲೋ ಒಮ್ಮೆ ಅಕಸ್ಮಾತ್ ಆಗಿ ಅವು ಸಿಕ್ಕಿವೆ. ನಂತರ ಈ ಪಾಟಿ ವಸ್ತುಗಳು ಎಲ್ಲಿಂದ ಬರುತ್ತಿವೆ ಎಂದು ಮಗುವನ್ನು ವಿಚಾರಿಸಿದರೆ, ಅದು ತನಗೆ ಗೊತ್ತೇ ಇಲ್ಲ ಎಂದು ಬಿಟ್ಟಿತು. ಇನ್ನುಮನೆಯಲ್ಲಿ ಯಾರೂ ಅದನ್ನು ತಂದಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಆಮೇಲೆ ಪೋಷಕರು ಆ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಂಡು ಬಿಟ್ಟರು. ಮಗುವು ಅವರಿಂದ ಕದಿಯಲು ಯತ್ನಿಸಿತು. ಸಿಕ್ಕಿ ಬಿದ್ದಿತು. ಬಲಾತ್ಕಾರದಿಂದ ಕೇಳಲಾಗಿ ಅದರದೇ ಶಾಲೆಯ ಏಳನೇ ತರಗತಿಯ ಹುಡುಗನೊಬ್ಬ ಈ ಹುಡುಗನ ಸ್ನೇಹವನ್ನು ಹೊಂದಿದ್ದಾನೆ. ಪ್ರಾರಂಭದಲ್ಲಿ ಆಗಾಗ್ಗೆ ಈ ಮಗುವಿಗೆ ಇಷ್ಟದ ಫಾರಿನ್ ಚಾಕೋಲೆಟ್ಗಳನ್ನು ಕೊಟ್ಟಿದ್ದರಿಂದ ಪದೇ ಪದೇ ಅದೇ ಆಸೆಯಿಂದ ಆ ದೊಡ್ಡ ಹುಡುಗನ ಹಚ್ಚಿಕೊಂಡಿದೆ. ಅವನು ಅದನ್ನೇ ನೆಪವಾಗಿಟ್ಟುಕೊಂಡು ತಾನು ತನ್ನ ಮನೆಯ ಪಕ್ಕದ ಅಂಗಡಿಯಿಂದ ಕದ್ದು ತರುವ ವಸ್ತುಗಳನ್ನು ಸಂಗ್ರಹಿಸಿಡಲು ಈ ಹುಡುಗನ ಸ್ನೇಹವನ್ನು ಬಳಸಿಕೊಳ್ಳುತ್ತಿದ್ದಾನೆ. ತಾನು ಇತರರಿಗೆ ಮಾರುವ ಸಂದರ್ಭದಲ್ಲಿ ಇವನಿಗೆ ಹೇಳುತ್ತಾನೆ. ಮಗು ಮಾರನೇ ದಿನ ಅದನ್ನು ತೆಗೆದುಕೊಂಡು ಹೋಗಿ ಕೊಡಬೇಕು. ಅದಕ್ಕೆ ಪ್ರತಿಯಾಗಿ ಅವನು ಮಗುವಿಗೆ ಫಾರಿನ್ ಚಾಕೋಲೆಟ್ ಕೊಡುತ್ತಾನೆ. ಮಗುವಿನ ಪೋಷಕರು ವಸ್ತುಗಳನ್ನು ವಶ ಪಡಿಸಿಕೊಂಡಾಗ ಆ ಹುಡುಗ ಮಗುವಿಗೆ ಹೆದರಿಸಿಟ್ಟಿದ್ದಾನೆ. ತನಗೆ ರೌಡಿಗಳೆಲ್ಲಾ ಗೊತ್ತು, ನಿನ್ನ ಎತ್ತಿಕೊಂಡು ಹೋಗಿ ಕೊಂದುಬಿಡುತ್ತಾರೆ ಎನ್ನುವಷ್ಟು ತೀವ್ರತೆ ಅವನ ಬೆದರಿಕೆಯಲ್ಲಿದೆ. ಹಾಗಾಗಿ ಮಗುವು ತನ್ನ ಪೋಷಕರಿಂದ ಆ ವಸ್ತುಗಳನ್ನು ಕದ್ದು ಅವನಿಗೆ ಕೊಡಲು ಯತ್ನಿಸಿದೆ. ಆ ಮಗು ಭಯ, ತನ್ನವರೊಂದಿಗೇ ಸುಳ್ಳು ಹೇಳುವ, ತನ್ನ ಮನೆಯಲ್ಲೇ ಕದಿಯುವ ಅಪರಾಧ ಪ್ರಜ್ಞೆ, ಏನು ಮಾಡುವುದೆಂದು ತೋಚದೇ ಒದ್ದಾಡುವ ಗೊಂದಲದ ಸ್ಥಿತಿಯಲ್ಲಿ ಅದೆಷ್ಟು ನಲುಗಿ ಹೋಗಿತ್ತೆಂದರೆ ಕಡೆಗೆ ಊಟ, ನಿದ್ರೆ ಸರಿಯಾಗಿ ಮಾಡದೇ, ಓದಿನ ಮೇಲೆ ಗಮನ ನೀಡದೆ ಯಾವುದೋ ಕಾಯಿಲೆಯಿಂದ ಬಳಲುತ್ತಿರುವಂತಾಗಿತ್ತು.
ಪ್ರಕರಣ 3
ಅದೊಂದು ಹೆಣ್ಣು ಮಗು. ಆರನೆಯ ತರಗತಿಯಲ್ಲಿ ಓದುತ್ತಿದೆ. ಒಂದು ದಿನ ರಾತ್ರಿ ಮಗುವು ಹಾಸಿಗೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಬಿಕ್ಕಿಬಿಕ್ಕಿ ಅಳುವುದನ್ನು ಪೋಷಕರು ಗಮನಿಸಿದರು. ಏನೆಂದು ಒತ್ತಾಯಿಸಲು ಮಗುವಿನ ಜನನೇಂದ್ರಿಯದಿಂದ ರಕ್ತಸ್ರಾವವಾಗುತ್ತಿತ್ತು. ಲೈಂಗಿಕ ಕಿರುಕುಳಗಳ ಬಗ್ಗೆ ಸುದ್ದಿಗಳನ್ನು ಓದುತ್ತಿದ್ದ ಪೋಷಕರು ಹೆದರಿದರು. ಮಗುವಿಗೆ ಧೈರ್ಯ ತುಂಬಿ, ಒತ್ತಾಯದಿಂದ ಕೇಳಲು ಯಾರೂ ತನ್ನನ್ನು ದೌರ್ಜನ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿತು. ಆದರೆ ಇನ್ನೂ ವಿಚಾರಿಸಲಾಗಿ ಅವರ ಸಹಪಾಟಿಯೊಬ್ಬಳು, ಅಷ್ಟೇ ವಯಸ್ಸಿನವಳು ಶೌಚಾಲಯಕ್ಕೆ ಹೋದಾಗ ಜನನೇಂದ್ರಿಯವನ್ನು ಮುಟ್ಟುವುದು, ಅದರಲ್ಲಿ ಬೆರಳಿಡುವುದು; ಹೀಗೆ ಕೆಲವು ಚೇಷ್ಟೆಗಳನ್ನು ಮಾಡಿದ್ದಾಳೆ. ಇದೇ ತಮಾಷೆ ಮುಂದುವರಿದು ಪರಸ್ಪರ ಕೈಗಳನ್ನು ಇಡುವುದು, ಬೆರಳು ಹಾಕುವುದು, ಪೆನ್ನು ಅಥವಾ ಆ ಬಗೆಯ ವಸ್ತುಗಳನ್ನು ಇಡುವುದು ಇತ್ಯಾದಿಗಳನ್ನು ಮಾಡಿಕೊಂಡಿದ್ದಾರೆ. ಇದು ಮುಂದುವರಿದು ಯಾವುದೋ ವಸ್ತುವನ್ನು ಬಲವಾಗಿಟ್ಟುಕೊಂಡು ಒಳಗೆ ತೀವ್ರವಾದ ಗಾಯವಾಗಿದೆ. ಅಂದಿನಿಂದ ಆ ಮಗು ಹಾಗೆ ಮಾಡುವುದನ್ನು ನಿಲ್ಲಿಸಿದರೂ ಅದು ಒಳಗೆ ನಂಜಾಗಿದೆ. ಇನ್ನಿತರ ಅಡ್ಡ ಪರಿಣಾಮಗಳಾಗಿವೆ.
ಈ ಮಗುವಿನ ತಂದೆ ಮತ್ತು ತಾಯಿ ವಿಷಯ ತಿಳಿದು ತಮ್ಮ ಮಗುವಿಗೂ ಹೊಡೆದು ಬೈದು ಮಾಡಿದ್ದಲ್ಲದೇ ಶಾಲೆಗೂ ಹೋಗಿ ಆ ಮಗುವಿಗೆ ಹೊಡೆದಿದ್ದಾರೆ. ಶಾಲೆಯ ಶಿಕ್ಷಕರಿಗೆ ಜೋರು ಮಾಡಿದ್ದಾರೆ. ಇಷ್ಟೆಲ್ಲಾ ಗಲಾಟೆಯಾದ ಮೇಲೆ ಮಗುವಿಗೆ ಶಾಲೆಗೆ ಹೋಗಲು ಅವಮಾನ ಎನಿಸಿದೆ. ಇಬ್ಬರೂ ಹುಡುಗಿಯರು ಮನೆಬಿಟ್ಟು ಹೋಗಲು ನಿರ್ಧರಿಸಿ ಮನೆಯಲ್ಲಿ ಹಣ ಕದ್ದು ಎಲ್ಲಿಗೋ ಹೋಗಿದ್ದಾರೆ. ನಂತರ ಪೊಲೀಸ್ ದೂರು ನೀಡಿ ಅವರನ್ನು ಹುಡುಕಿಸಿದ್ದಾರೆ. ಮಕ್ಕಳೇನೋ ಮನೆಗೆ ಬಂದರು. ಮಕ್ಕಳಿಗೆ ಓದಿನ ಬಗ್ಗೆ ಒತ್ತಡ ಹೇರಿದ್ದರಿಂದ ಓಡಿಹೋದ ಮಕ್ಕಳು ಎಂದು ಪತ್ರಿಕೆಗಳಲ್ಲಿ ಬೇರೆಯೇ ಸುದ್ದಿ ಬಂತು. ಆದರೆ ಒಳಗೆ ನಡೆದಿದೆ್ದೀ ಬೇರೆ.
ಈ ಬಗೆಯ ಪ್ರಕರಣಗಳು ಒಂದೆರಡಲ್ಲ. ಆದರೆ ಎಷ್ಟೋ ಬಗೆಯ ಮಕ್ಕಳ ಪೀಡೆಗಳು ದೊಡ್ಡವರಿಗೆ ಗೊತ್ತಾಗುವುದೇ ಇಲ್ಲ. ಶಾಲೆಯಲ್ಲಿ ನಡೆಯುವ ಎಷ್ಟೋ ಬಗೆಯ ರ್ಯಾಗಿಂಗ್ಗಳು, ಒಳ ಒಪ್ಪಂದಗಳು ಮನೆಯವರಿಗೆ ತಿಳಿಯುವುದೇ ಇಲ್ಲ. ರ್ಯಾಗಿಂಗ್ ನಡೆಯುವುದು ಬರೀ ಕಾಲೇಜಿನಲ್ಲಿ ಎಂಬ ತಪ್ಪುಕಲ್ಪನೆ ಇದೆ. ಶಾಲೆಗಳಲ್ಲಿ ನಡೆಯುವ ರ್ಯಾಗಿಂಗ್ಗಳು ಸೂಕ್ಷ್ಮವಾಗಿಯೂ ಮತ್ತು ಚಿಕ್ಕ ಗುಂಪುಗಳಲ್ಲಿ ನಡೆಯುವುದರಿಂದ ತಿಳಿಯುವುದೇ ಇಲ್ಲ. ಶಾಲೆಯಲ್ಲಿ ಮಕ್ಕಳು ಅನುಭವಿಸುವ ಕಿರುಕುಳಗಳನ್ನು ಗುರುತಿಸುವುದು ಮತ್ತು ತಡೆಯುವುದರ ಬಗ್ಗೆ ಮುಂದೆ ತಿಳಿಯೋಣ.