ಕೇಂದ್ರ ಸರಕಾರದ ಹುದ್ದೆಗಳಲ್ಲಿ ಕನ್ನಡಿಗರಿಗೆ ಪಾಲು: ಮಸೂದೆ ಮಂಡನೆಯಾಗಲಿ
ಮಾನ್ಯರೆ,
ಕೆಲವರು ತಿಂಗಳುಗಳ ಹಿಂದೆ ಭಾಷಾ ಮಾಧ್ಯಮದ ವಿಚಾರದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ ನಂತರ ಕೇಂದ್ರದಲ್ಲಿ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡುವ ಅಥವಾ ಮಾತೃ ಭಾಷಾ ಶಿಕ್ಷಣ ಉಳಿಸುವ ನಿಟ್ಟಿನಲ್ಲಿ ಮಸೂದೆ ಮಂಡನೆಯಾಗಬೇಕೆಂಬ ಒತ್ತಡ, ರಾಜ್ಯದ ಮುಖ್ಯಮಂತ್ರಿಗಳಿಂದಲೇ ಆಯಿತಾದರೂ ಅದು ಇನ್ನೂ ಕಾರ್ಯಗತವಾಗಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಮೀಸಲಾತಿ ನೀಡುವ ಡಾ.ಸರೋಜಿನಿ ಮಹಿಷಿಯವರ ಸುಮಾರು 3 ದಶಕದ ವರದಿ ಮತ್ತೊಮ್ಮೆ ಪರಿಷ್ಕೃತವಾಗಿ ಸರಕಾರದ ಕೈ ಸೇರಿದೆ. ದೇಶದ ಕಾನೂನನ್ನು ಗಮನಿಸಿದಾಗ ಪರಿಷ್ಕೃತ ವರದಿಯ ಶಿಫಾರಸುಗಳು ರಾಜ್ಯ ಸರಕಾರದಿಂದಲೂ ಅನುಷ್ಠಾನ ಸಾಧ್ಯವಲ್ಲ. ಕೇಂದ್ರ ಸರಕಾರದ ಅಧೀನದಲ್ಲಿರುವ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ನೀಡಬೆಕಾದರೆ ಹಾಗೂ ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಪರಿಣಿತಿ ಮತ್ತು ಅರ್ಹತೆ ಆಧಾರದ ಮೇಲೆ ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದರೆ, ಕೇಂದ್ರದಲ್ಲಿ ಸ್ಥಳೀಯ ಉದ್ಯೋಗ ಎನ್ನುವ ಮಸೂದೆ ಮಂಡನೆಯಾಗಿ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಅನುಮೋದನೆಗೊಂಡು ಕಾನೂನಾಗಿ ಪರಿವರ್ತನೆಯಾದರೆ ಮಾತ್ರ ಸಾಧ್ಯವಾಗುತ್ತದೆ. ನಮ್ಮ ರಾಜ್ಯದಲ್ಲಿ ಜನರ ಬದುಕಿಗೆ ಸಂಬಂಧವಿಲ್ಲದ ಅನೇಕ ವಿಚಾರಗಳಿಗೆ ನಮ್ಮ ಸುದ್ದಿ ಮಾಧ್ಯಮಗಳೂ ಸೇರಿ ಅಭಿಯಾನ ನಡೆಸುತ್ತಾರೆ. ನಿಜಕ್ಕೂ ಅಭಿಯಾನ ಮತ್ತು ಅತೀ ದೊಡ್ಡ ಪ್ರಮಾಣದ ಸಂಘಟಿತರ ಹೋರಾಟ ಕನ್ನಡ ಭಾಷೆಯನ್ನು ಶಿಕ್ಷಣದಲ್ಲಿ ಉಳಿಸಲು, ಉದ್ಯೋಗದಲ್ಲಿ ಕನ್ನಡಿಗ ಪಾಲು ಪಡೆಯಲು ಮಸೂದೆ ಮಂಡನೆಗಾಗಿ ಒತ್ತಾಯ ನಡೆಯಬೇಕು. ಇಂತಹ ಮಸೂದೆ ಮಂಡನೆಯಾಗಿ ಕಾನೂನಾದರೆ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಉಳಿಯುತ್ತದೆ. ಎಲ್ಲಾ ರಾಜ್ಯದಲ್ಲೂ ಸ್ಥಳೀಯರಿಗೆ, ಕೇಂದ್ರ ಸರಕಾರದ ಹುದ್ದೆಗಳು ಸಿಂಹಪಾಲು ದೊರೆಯುತ್ತದೆ. ಕನ್ನಡ ಪರ ಸಂಘಟನೆಗಳು ಅದರಲ್ಲೂ ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತು ಇದಕ್ಕಾಗಿ ಒಂದು ದೊಡ್ಡ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣುವವರೆಗೂ ನಡೆಸಬೇಕು.