ಪ್ರಶಸ್ತಿಗಳ ಬಗ್ಗೆ ಸರಕಾರಕ್ಕೇಕೆ ಇಷ್ಟೊಂದು ಅಸಡ್ಡೆ
ಮಾನ್ಯರೆ,
ಪ್ರತಿ ವರ್ಷ ನಮ್ಮ ಸರಕಾರದಲ್ಲಿ ತಿಂಗಳ ಹಲವಾರು ಜಯಂತಿಗಳು, ಹಲವಾರು ಪ್ರಶಸ್ತಿಗಳು ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಅಕಾಡಮಿಯ ಪ್ರಶಸ್ತಿಗಳು ನೀಡುವಂತಹ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಇವುಗಳು ಯಾವ ವರ್ಷವೂ ತಪ್ಪುವುದಿಲ್ಲ. ತಪ್ಪಿದರೆ ಮುಂದಿನ ವರ್ಷ ಉಳಿದ ಎಲ್ಲಾ ಪ್ರಶಸ್ತಿಗಳನ್ನೂ ಘೋಷಿಸುತ್ತಾರೆ. ಆದರೆ, ಕರ್ನಾಟಕ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲು ಸರಕಾರಕ್ಕೇಕೋ ಮನಸ್ಸಿಲ್ಲ ಸುಮಾರು 7 ಕೋಟಿ ಕನ್ನಡಿಗರಿರುವ ಇಲ್ಲಿ ವರ್ಷಕೊಬ್ಬ ಕರ್ನಾಟಕ ರತ್ನ ಪ್ರಶಸ್ತಿ ಪಡೆಯುವ ಯೋಗ್ಯತೆ ಇಲ್ಲದಷ್ಟು ನಮ್ಮ ನಾಡಿನಲ್ಲಿ ಸಾಮಾಜಿಕ, ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರ ಬಡವಾಗಿದೆಯೇ? ಇನ್ನು ಡಾ. ಜಿ.ಎಸ್.ಶಿವರುದ್ರಪ್ಪನವರ ನಿಧನದ ನಂತರ ರಾಷ್ಟ್ರ ಕವಿ ಪುರಸ್ಕಾರ ಯಾರಿಗೂ ನೀಡಲೇ ಇಲ್ಲ. ರಾಷ್ಟ್ರ ಕವಿ ಪುರಸ್ಕಾರಕ್ಕೆ ಯೋಗ್ಯತೆ ಇಲ್ಲದ ಮಟ್ಟಕ್ಕೆ ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರ ತಲುಪಿದೇನೋ ಎಂಬ ಭಾವನೆ ಸರಕಾರಕ್ಕೆ ಬಂದಿರುವುದೇ ದುರ್ದೈವ. ಪೂರ್ವಾ ಗ್ರಹ ಪೀಡಿತ ಮನಸ್ಸಿನ ಕೆಲವು ವ್ಯಕ್ತಿಗಳನ್ನು ಮತ್ತು ಅವರ ಶಿಫಾರಸುಗಳನ್ನು ಸರಕಾರ ನಂಬಿ ಕುಳಿತು ಸಮಸ್ತ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ. ಕೇಂದ್ರ ಸರಕಾರವೇ ಭಾರತ ರತ್ನ ಪ್ರಶಸ್ತಿಯನ್ನು ಸಾಮಾನ್ಯವಾಗಿ ತಪ್ಪಿಸದೇ ಕೊಡುತ್ತದೆ. ಆದರೆ, ಕಳೆದ ಹತ್ತಾರು ವರ್ಷಗಳಿಂದ ಕರ್ನಾಟಕ ರತ್ನ ಪ್ರಶಸ್ತಿಯೂ ಇಲ್ಲ ರಾಷ್ಟ್ರ ಕವಿ ಗೌರವವನ್ನೂ ನೀಡಿಲ್ಲ. ಸರಕಾರಕ್ಕೆ ಇಂತಹ ಮಟ್ಟದ ಜನ ದೊರೆಯುವುದಿಲ್ಲ ಎಂದಾದರೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮತ್ತು ರಾಷ್ಟ್ರಕವಿ ಪುರಸ್ಕಾರವನ್ನು ರದ್ದು ಮಾಡಲಾಗಿದೆ ಎಂದಾದರೂ ಹೇಳಬಹುದಲ್ಲವೇ.