ಮದೀನಾ: ಅಸುಫ್ಫಾ 2ನೆ ಆವೃತ್ತಿಯ ಸ್ಪೋಕನ್ ಇಂಗ್ಲಿಷ್ ತರಗತಿ ಆರಂಭ
ಸೌದಿ ಅರೇಬಿಯ, ಫೆ.20: ವಿದೇಶದಲ್ಲಿರುವ ಭಾರತೀಯರು ಆಧಾರ್ ನಂಬರ್ ಬಳಸಿಕೊಂಡು ತಮ್ಮ ರೇಷನ್ ಕಾರ್ಡ್ಗಳನ್ನು ಪಡೆಯಬಹುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್.) ಮದೀನಾ ಸೆಕ್ಟರ್ ವತಿಯಿಂದ ಮದೀನಾದ ಕೆ.ಸಿ.ಎಫ್. ಭವನದಲ್ಲಿ ಇತ್ತೀಚೆಗೆ ನಡೆದ ಅಸುಫ್ಫಾ 2ನೆ ಆವೃತ್ತಿಯ ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.
ಅನಿವಾಸಿ ಕನ್ನಡಿಗರು ವಿದೇಶದಲ್ಲಿದ್ದುಕೊಂಡೇ ಅರ್ಜಿ ಸಲ್ಲಿಸಿ, ತಿಂಗಳೊಳಗೆ ರೇಷನ್ ಕಾರ್ಡ್ ನಿಮ್ಮ ಕೈ ಸೇರಲಿದೆ ಎಂದರು. ಇಂಗ್ಲಿಷ್ ಭಾಷೆ ಕಲಿಸಲು ಮುಂದಾಗಿರುವ ಕೆ.ಸಿ.ಎಫ್. ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಇದೇ ವೇಳೆ ಕರ್ನಾಟಕ ಇಹ್ಸಾನ್ ಮುಖ್ಯಸ್ಥ ಇಬ್ರಾಹೀಂ ಸಖಾಫಿ ದಾವಣಗೆರೆ ಮಾತನಾಡಿ, ಇಂಗ್ಲಿಷ್ ಕಲಿತರೆ ಮಾತ್ರ ಪೈಪೋಟಿಯ ಇಂದಿನ ಯುಗದಲ್ಲಿ ಎಲ್ಲವನ್ನೂ ಎದುರಿಸಲು ಸಾಧ್ಯ ಎಂದರು. ಸ್ಪೋಕನ್ ಇಂಗ್ಲಿಷ್ ತರಗತಿಯ ಮುಖ್ಯಸ್ಥ ಉಸ್ಮಾನ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಕೆ.ಸಿ.ಎಫ್ ಕಾರ್ಯಕರ್ತರು ಯು.ಟಿ.ಖಾದರ್ ಹಾಗೂ ಇಬ್ರಾಹೀಂ ಸಖಾಫಿ ದಾವಣಗೆರೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕೆ.ಎಸಿ.ಎಫ್. ರಾಷ್ಟ್ರೀಯ ಸಮಿತಿ ಆಯೋಜಿಸಿರುವ ಅಸುಫ್ಫಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಉಮರ್ ಗೇರುಕಟ್ಟೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಐ.ಸಿ.ಎಫ್.ನ ಯೂಸುಫ್ ಸಅದಿ, ಮುಹಿಯುದ್ದೀನ್ ಸಖಾಫಿ, ಡಿ.ಕೆ.ಎಸ್.ಸಿ.ಯ ಮಹ್ಮೂದ್ ಮುಸ್ಲಿಯಾರ್ ಉದ್ದಬೆಟ್ಟು, ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ, ಕೆಸಿಎಫ್ ಮದೀನಾ ಸೆಕ್ಟರ್, ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ, ಕೆಸಿಎಫ್ ಮದೀನಾ ಝೋನಲ್ ರಿಲೀಫ್ ಚೇರ್ಮನ್ ತಾಜುದ್ದೀನ್ ಸುಳ್ಯ, ರಝಾಕ್ ಅಳಕೆಮಜಲು, ಡಾ.ರಫೀಕ್ ಉಪ್ಪಳ, ವಹಾಬ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.