ಕೊರತೆಗಳಿರಲಿ...
ನನಗೆ ಚೆನ್ನಾಗಿ ನೆನಪಿದೆ. ನನ್ನ ಗೆಳೆಯ ಹೇಳುತ್ತಿದ್ದ. ನಾವು ಸಣ್ಣವರಿದ್ದಾಗ ನಮಗೆ ಅನೇಕ ಕೊರತೆಗಳಿದ್ದವು. ಆದರೆ ಅವಾವುವು ನಮ್ಮ ಮಕ್ಕಳಿಗೆ ಇರಬಾರದೆಂದು. ನನ್ನ ಗೆಳೆಯನಿಗೆ ಆ ಕೊರತೆಗಳೆಲ್ಲವೂ ನೋವಿನ ನೆನಪುಗಳಂತೆ. ಹಾಗಾಗಿ ಅವನ ಯಾವುದೇ ನೋವಿನ ಅನುಭವ ಅವನ ಮಕ್ಕಳಿಗೆ ತಗಲಬಾರದಂತೆ.
ಹಾಗೆಯೇ ಅವನ ಮಕ್ಕಳನ್ನು ಬೆಳೆಸಿದ. ಅವನ ಮಕ್ಕಳಿಗೆ ಒಂದು ಬೇಕಾದ ಕಡೆಗೆ ಹತ್ತು ಸಿಗುತ್ತಿದ್ದವು. ನಡೆದು ಹೋಗಬೇಕಾದ ಕಡೆಗೆ ವಾಹನವೇ ಇರುತ್ತಿತ್ತು. ಹಲವು ವರ್ಷಗಳ ನಂತರ ಆ ಗೆಳೆಯ ತನ್ನ ಮಕ್ಕಳನ್ನು ಬೈದುಕೊಂಡು ಕೂತಿದ್ದಾನೆ. ಅವನು ತನ್ನ ಮಕ್ಕಳನ್ನು ಬೈಯುವುದಕ್ಕೆ ಕಾರಣಗಳು ಈ ರೀತಿಯಲ್ಲಿವೆ.
1.ಮಕ್ಕಳು ಸೋಮಾರಿಗಳು. ತಮ್ಮಕೆಲಸವನ್ನೂ ಕೂಡ ತಾವು ಮಾಡಿಕೊಳ್ಳುವುದಿಲ್ಲ. ಪ್ರತಿಯೊಂದನ್ನೂ ಬೇರೆಯವರೇ ಮಾಡಲಿ ಎಂದು ನಿರೀಕ್ಷಿಸುತ್ತಿರುತ್ತಾರೆ.
2.ಮಕ್ಕಳು ಚುರುಕಿಲ್ಲ. ಯಾವುದೇ ಒಂದು ಅನಿರೀಕ್ಷಿತವಾದದ್ದು ಎದುರಾದರೆ ಏನು ಮಾಡುವುದು, ಹೇಗೆ ಪ್ರತಿಕ್ರಿಯಿಸುವುದು ಎಂದು ತಿಳಿಯುವುದಿಲ್ಲ. ನನಗೆ ಗೊತ್ತಾಗಲಿಲ್ಲ ಏನು ಮಾಡುವುದು ಎಂದು ಹೇಳುತ್ತಾರೆ. ಪ್ರತಿಯೊಂದಕ್ಕೂ ಹೀಗೆ ಪ್ರತಿಕ್ರಿಯಿಸಿ, ಹೀಗೆ ಸ್ಪಂದಿಸಿ ಎಂದು ಹೇಳಿಕೊಡಲು ಆಗುತ್ತದೆಯೇ? ಅವರು ಯಾವುದೇ ಸಂದರ್ಭದಲ್ಲಿ, ಯಾವುದೇ ರೀತಿಯ ಸಮಸ್ಯೆಯನ್ನು ಹೇಗೆ ಎದುರಿಸುತ್ತಾರೆಂದು ಹೇಗೆ ಹೇಳುವುದು?
3.ಮಕ್ಕಳಿಗೆ ವಸ್ತುಗಳ ಬೆಲೆ ತಿಳಿಯುವುದಿಲ್ಲ. ಎಲ್ಲಾ ವಸ್ತುಗಳನ್ನು ಕಸದಂತೆ ಬಿಸಾಡಿರುತ್ತಾರೆ. ವಸ್ತುವನ್ನು ಕೊಳ್ಳುವ ಮುಖಬೆಲೆಯ ಮಾತಿರಲಿ, ವಸ್ತುವಿಗೆ ಇರುವ ವೌಲ್ಯವೂ ಕೂಡ ತಿಳಿದಿಲ್ಲ. ತಾವು ಉಪಯೋಗಿಸಿದ ತಕ್ಷಣ ಎಲ್ಲೋ ಬಿಸಾಡುತ್ತಾರೆ. ತಮಗೇ ಮುಂದೆ ಬೇಕಾಗುತ್ತದೆ ಎಂದೂ ಎತ್ತಿಟ್ಟುಕೊಳ್ಳುವುದಿಲ್ಲ. ಆ ವಸ್ತುವಿನ ಅಗತ್ಯ ಬಂದಾಗ ಮತ್ತೆ ಹೊಸ ವಸ್ತುವನ್ನು ತರಬೇಕಾಗುತ್ತದೆ.
4.ಮನೆಯಲ್ಲಿ ಹಿರಿಯರಿಗೆ ಅಗತ್ಯವಿರುವ ಸಹಾಯ ಮಾಡುವುದಿಲ್ಲ. ಕೆಲಸದಲ್ಲಿ ಸಹಕರಿಸುವುದಿಲ್ಲ. ಮೈ ಹುಷಾರಿಲ್ಲ ಅಡುಗೆ ಮಾಡಲು ಕಷ್ಟವಾಗುತ್ತಿದೆ ಎಂದರೆ ಹೊಟೇಲ್ ಊಟ ತರೋಣ ಎನ್ನುತ್ತಾರೆ. ಉಡುಪಿನ ಹೊಲಿಗೆ ಬಿಟ್ಟು ಹೋಗಿದೆ ಎಂದರೆ ಅಥವಾ ಸಣ್ಣದಾಗಿ ಹರಿದಿದೆ ಎಂದರೆ ಹೊಸ ಬಟ್ಟೆ ತರೋಣ ಎನ್ನುತ್ತಾರೆ. ಅದನ್ನು ಹೊಲುಯುವುದು ಅಥವಾ ಹೊಲಿಸುವುದು ಅವರಿಗೆ ಎಂದಿಗೂ ಹೊಳೆಯದು. ಇನ್ನು ಚಪ್ಪಲಿ ಕಿತ್ತು ಹೋದರೆ ಅದನ್ನು ರಸ್ತೆಯಲ್ಲೇ ಮೋರಿಗೆ ಎಸೆದು ಬರುತ್ತಾರೆ. ಚಪ್ಪಲಿ ಕಿತ್ತು ಹೋಗುವಷ್ಟು ಅದನ್ನು ಹಾಕುವುದೇ ಇಲ್ಲ ಎನ್ನುವುದೂ ಕೂಡ ವಾಸ್ತವವೇ.
5.ಯಾವುದೇ ತಿಂಡಿಯನ್ನು ಪೂರ್ತಿ ತಿನ್ನುವುದಿಲ್ಲ. ಅರ್ಧಂಬರ್ಧ ತಿಂತಾರೆ ಆಮೇಲೆ ಎಸೀತಾರೆ. ಬೇರೆಯವರಿಗಾದರೂ ಕೊಡುವುದಿಲ್ಲ. ತಮಗೆ ಬೇಡ ಅನ್ನಿಸಿದರೆ, ರುಚಿಸಲಿಲ್ಲ ಅನ್ನಿಸಿದರೆ ಮುಲಾಜಿಲ್ಲದೇ ಅವನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಪ್ರತಿದಿನವೂ ಊಟವನ್ನು ಅವರು ಪೂರ್ತಿ ಮಾಡುವುದೇ ಇಲ್ಲ. ಸಾಕಾಯ್ತು ಎಂದು ತಟ್ಟೆಯಲ್ಲಿ ಏನಾದರೂ ಉಳಿಸಿಯೇ ಏಳುವರು.
6.ಪೆನ್ನುಗಳು, ಪುಸ್ತಕಗಳನ್ನು ಅದೆಷ್ಟು ತಂದುಕೊಡಬೇಕೋ! ಮೊನ್ನೆ ಮೊನ್ನೆ ತಂದಿರುತ್ತೇವೆ. ಆಗಲೇ ಮತ್ತೆ ಬೇಕೆನ್ನುತ್ತಾರೆ. ಏನಾಯ್ತೆಂದರೆ ಕಳೆದು ಹೋಯ್ತು. ಕೆಟ್ಟು ಹೋಯ್ತು. ಯಾರೋ ತೆಗೆದುಕೊಂಡುಬಿಟ್ಟರು ಎಂದು ಹೇಳುತ್ತಾರೆ. ಒಂದೊಂದು ಪೆನ್ನು, ಪೆನ್ಸಿಲ್ ಒಂದೊಂದು ಮೂಲೆಯಲ್ಲಿ ಬಿದ್ದಿರುತ್ತದೆ. ಅದು ಕೈಗೆ ಸಿಗಲಿಲ್ಲ ಎಂದು ಮತ್ತೆ ಕೊಳ್ಳುತ್ತಾರೆ. ಅದೂ ಕೂಡ ಮೂಲೆಗುಂಪಾಗುತ್ತದೆ.
7.ಎಂತಹ ಪುಸ್ತಕವನ್ನು ತಂದರೂ ಓದುವುದಿಲ್ಲ. ಅದರ ಕಡೆಗೆ ಕಣ್ಣಾಡಿಸುವುದೂ ಇಲ್ಲ. ಬೋಂಡ ಕಟ್ಟಿಕೊಡುವ ಪೇಪರನ್ನೂ ಬಿಡಿಸಿ ಓದುತ್ತಿದ್ದ ಓದಿನ ಅಭಿರುಚಿ ನಮ್ಮದು, ಈ ನನ್ನ ಮಕ್ಕಳಿಗೆ ರಸ್ಕಿನ್ ಬಾಂಡ್ನ ಅತ್ಯುತ್ತಮ ಮಕ್ಕಳ ಕತೆಗಳ ಬೆಲೆಬಾಳುವ ಪುಸ್ತಕವನ್ನು ತಂದರೂ ಬೋಂಡಾ ತಿಂದು ಬಿಸಾಡಿದ ಪೇಪರಿನಂತೆ ಪುಸ್ತಕವನ್ನು ಬಿಸಾಡಿರುತ್ತಾರೆ.
8.ಟಿವಿ ನೋಡುವ ಮಕ್ಕಳನ್ನು ಎಬ್ಬಿಸಲು ಸಾಧ್ಯವೇ ಇಲ್ಲ. ಟಿವಿ ಆಫ್ ಮಾಡಿದರೆ ದೊಡ್ಡ ಯುದ್ಧವೇ ಆಗಿಹೋಗುತ್ತದೆ. ಹಾಗೂ ನಾನೊಮ್ಮೆ ಆ ಯುದ್ಧದಲ್ಲಿ ಗೆದ್ದುಬಿಟ್ಟರೆ ಮನೆಯಲ್ಲಿ ಯಾವುದೋ ಹೆಣ ಬಿದ್ದಿರುವ ಹಾಗೆ ಸೂತಕದ ಛಾಯೆ! ಮಾತಿಲ್ಲ, ಕತೆಯಿಲ್ಲ, ನಗುವಿಲ್ಲ, ಆಟವಿಲ್ಲ, ಪಾಠವಿಲ್ಲ!
9.ಎಂದಿಗೂ ಬೆಳಗ್ಗೆ ಅವರಿಗೆ ಬೇಗನೆ ಎಚ್ಚರವಾಗುವುದಿಲ್ಲ. ಎಚ್ಚರವಾದರೂ ಮೇಲೇಳುವುದಿಲ್ಲ. ಮೇಲೆದ್ದರೂ ವಾಶ್ ರೂಂಗೆ ಹೋಗುವುದಿಲ್ಲ. ವಾಶ್ ರೂಂಗೆ ಹೋದರೆ ಅಲ್ಲಿಂದ ಬೇಗನೆ ಬರುವುದಿಲ್ಲ. ಅಲ್ಲಿಂದ ಬಂದ ಮೇಲೆ ಬಟ್ಟೆಯನ್ನು ಹಾಕಿಕೊಂಡು ಶಾಲೆಗೆ ಬೇಗನೆ ಸಿದ್ಧವಾಗುವುದಿಲ್ಲ. ಬಟ್ಟೆಯನ್ನುಹಾಕಿಕೊಂಡರೂ ತಿಂಡಿ ತಿನ್ನಲು ಕೂರುವುದಿಲ್ಲ. ತಿಂಡಿ ತಿನ್ನಲು ಕೂತರೆ ಬೇಗನೆ ಮುಗಿಸುವುದಿಲ್ಲ. ಯಥಾ ಪ್ರಕಾರ ಟೈಂ ಆಯ್ತೆಂದು ತಿಂಡಿಯನ್ನು ಅರ್ಧಕ್ಕೇ ಬಿಡುತ್ತಾರೆ. ಶಾಲೆಗೆ ಲೇಟಾಗಿ ಹೋಗುತ್ತಾರೆ.
10.ಆಟವಾಡಲು ಹೊರಗೆ ಹೋಗುವುದಿಲ್ಲ. ಒಂದು ವೇಳೆ ಹೋದರೆ ಎಷ್ಟು ಕರೆದರೂ ಮನೆಗೆ ಬರುವುದಿಲ್ಲ.
11.ವಸ್ತುಗಳನ್ನು ಗಳಿಸುವುದಿರಲಿ, ಉಳಿಸಿಕೊಳ್ಳುವುದೂ ಇಲ್ಲ. ಅದರಂತೆಯೇ ಹಣವೂ ಕೂಡ ದುಂದುವೆಚ್ಚ ಮಾಡುತ್ತಾರೆ. ಮುಂದಿನದೇನೂ ಯೋಚನೆಯೇ ಇರುವುದಿಲ್ಲ.
ಇದು ತನ್ನ ಮಕ್ಕಳ ವಿಷಯದಲ್ಲಿ ನನ್ನ ಗೆಳೆಯನ ಸಂಕಷ್ಟಗಳು. ನಾನು ಅಂದು ಅವನು ಆಡುತ್ತಿದ್ದ ಮಾತುಗಳನ್ನು ಅವನಿಗೆ ನೆನಪಿಸುತ್ತೇನೆ. ನಾವು ಶಾಲೆಗೆ ಹೋಗುವಾಗ ನಮಗೆ ಅನೇಕ ಕೊರತೆಗಳಿದ್ದವು. ಆ ಕೊರತೆಗಳಾವುವೂ ನಮ್ಮ ಮಕ್ಕಳನ್ನುಬಾಧಿಸಬಾರದು ಎನ್ನುತ್ತಿದ್ದೆ. ಆ ಕೊರತೆಗಳಿಂದಾಗಿಯೇ ನಾವೆಷ್ಟು ಚಟುವಟಿಕೆಗಳಿಂದ ಇರುತ್ತಿದ್ದೆವು. ಆ ಕೊರತೆಗಳಿಂದಾಗಿಯೇ ನಾವು ಅದೆಷ್ಟು ಚುರುಕಾಗಿದ್ದೆವು. ಹೊಸ ಹೊಸ ಆಲೋಚನೆಗಳು ಹುಟ್ಟುತ್ತಿದ್ದವು. ಸೃಜನಶೀಲವಾಗಿದ್ದೆವು. ಕಸದಿಂದ ರಸವನ್ನು ಮಾಡುತ್ತಿದ್ದೆವು. ಬೇಡದ ಮತ್ತು ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಉಪಯುಕ್ತ ವಸ್ತುಗಳನ್ನು ಮಾಡಿಕೊಳ್ಳುತ್ತಿದ್ದೆವು.
ನನ್ನ ಗೆಳೆಯ ತನ್ನ ಮಕ್ಕಳ ಕುರಿತಾಗಿ ದೂರುವ ಹತ್ತು ಅಂಶಗಳಿಂದ ನಾವು ದೂರವಾಗಿದ್ದರ ಕಾರಣವೇ ನಮಗೆ ಇದ್ದ ಕೊರತೆಗಳು.
1.ಕೊರತೆಯುಳ್ಳ ಮಕ್ಕಳು ಸೋಮಾರಿಗಳಾಗುವುದಿಲ್ಲ. ಅವರು ತಮಗೆ ಇರುವ ಕೊರತೆಯನ್ನು ಅರಿಯುತ್ತಾರೆ ಮತ್ತು ಅವುಗಳನ್ನು ನೀಗಿಸಿಕೊಳ್ಳಲು ತಾವೇ ಕೆಲಸ ಮಾಡುವುದರ ಅಗತ್ಯವನ್ನು ಕಂಡುಕೊಳ್ಳುತ್ತಾರೆ. ಅವರಿಗೆ ಬೇಕಾದುದನ್ನು ತಂದುಕೊಡಲು ಹೋಗುವವರಿಲ್ಲದಿದ್ದಾಗ ತಾವೇ ಹೋಗಬೇಕಾಗುತ್ತದೆ.
2.ಕೊರತೆಯುಳ್ಳ ಮಕ್ಕಳು ಚುರುಕಾಗಿರುತ್ತಾರೆ. ಯಾವುದೇ ವಿಷಯದಲ್ಲಿ ಏನನ್ನೇ ಎದುರಿಸಿದರೆ ಅದಕ್ಕೆ ಹೇಗೆ ಸ್ಪಂದಿಸಬೇಕು ಎಂದೂ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುತ್ತಾರೆ. ಸಮಸ್ಯೆಗಳಿಂದಲೇ ಕೊರತೆಗಳು ಉಂಟಾಗುವುದು ಅಥವಾ ಕೊರತೆಗಳಿಂದಲೇ ಸಮಸ್ಯೆಗಳು ಎದುರಾಗುವುದು. ಆಗಿನ ಆ ಸಮಸ್ಯೆಯನ್ನು ಎದುರಿಸುವ ಅನಿವಾರ್ಯತೆಗೆ ಹಲವು ದಾರಿಗಳನ್ನು ತಾವೇ ಹುಡುಕಿಕೊಳ್ಳಬೇಕಾಗುತ್ತದೆ.
3.ಹಿಂದೆ ಈಗಿನ ಮಕ್ಕಳಿಗೆ ಸಿಗುವಂತೆ ವಸ್ತುಗಳು ಧಾರಾಳವಾಗಿ ಮತ್ತು ವೈವಿಧ್ಯಮಯವಾಗಿ ಸಿಗುತ್ತಿರಲಿಲ್ಲ. ಹಾಗಾಗಿ ಅವರು ತಮ್ಮ ವಸ್ತುಗಳನ್ನು ತಾವು ಜೋಪಾನ ಮಾಡಿಕೊಳ್ಳುವ ಅಗತ್ಯ ಇರುತ್ತಿತ್ತು. ತಮಗೆ ಬೇಕಾದ ವಸ್ತುವನ್ನು ತಾವು ಕಳೆದು ಹಾಕಿದರೆ ಅಥವಾ ಹಾಳು ಮಾಡಿಕೊಂಡರೆ ಅವನ್ನು ತಮಗಿರುವ ಅರ್ಥಿಕ ಮುಗ್ಗಟ್ಟಿನಿಂದಾಗಿ ಪೋಷಕರು ಮತ್ತೆ ತೆಗೆದುಕೊಡುತ್ತಿರಲಿಲ್ಲ. ಏನಾದರೂ ಮಾಡಿಕೊ ಎಂದು ಮುಲಾಜಿಲ್ಲದೆ ಬಿಟ್ಟುಬಿಡುತ್ತಿದ್ದರು.
ಹಾಗಾಗಿ ತಮ್ಮ ವಸ್ತುಗಳಿಗೆ ತಾವು ಹೊಣೆಗಾರರಾಗಿರುತ್ತಿದ್ದರು. ಕೇಳಿದ ತಕ್ಷಣವಂತೂ ವಸ್ತುಗಳು ಸಿಗುತ್ತಲೇ ಇರಲಿಲ್ಲ. ಅದೆಷ್ಟು ಕಾಯಬೇಕಿತ್ತೋ. ಕೆಲವೊಮ್ಮೆ ಅಷ್ಟು ಕಾದರೂ, ಕಾಡಿದರೂ ಪೂರ್ಣ ಪ್ರಮಾಣದಲ್ಲಿ ಸಿಗುತ್ತಿರಲಿಲ್ಲ. ಹಾಗಾಗಿ ಸಿಗುವಂತಹ ವಸ್ತುಗಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯದ ವಿಷಯವಾಗಿತ್ತು.
4.ಮನೆಯ ಆರ್ಥಿಕ ಪರಿಸ್ಥಿತಿಯ ಮತ್ತು ಮನೆಯವರೆಲ್ಲರೂ ಎದುರಿಸುವ ಕೊರತೆಯ ಬಗ್ಗೆ ಮನೆಯ ಕುಟುಂಬದವರಿಗೆಲ್ಲಾ ಹಿಂದೆ ಅರಿವಿರುತ್ತಿತ್ತು. ಹಾಗಾಗಿ ಮಕ್ಕಳೂ ಕೂಡ ಮನೆಯವರಿಗೆ ಸಹಾಯ ಮಾಡುವ ಅಗತ್ಯವಿರುತ್ತಿತ್ತು. ಮನೆಯಲ್ಲಿ ಅಡುಗೆ ಮಾಡಲಿಲ್ಲವೆಂದರೆ ಹೊರಗೆ ಹೊಟೇಲಿಗೆ ಹೋಗಿ ತಿಂದು ಬರುವಷ್ಟು ಹಣಕಾಸಿನ ಅನುಕೂಲಗಳಿಲ್ಲ ಎಂದು ತಿಳಿದಿರುವ ಕಾರಣ ಆಗಿನ ಮಕ್ಕಳು ಪೋಷಕರ ಆರೋಗ್ಯದಲ್ಲಿ ಹೆಚ್ಚೂ ಕಡಿಮೆಯಾದಾಗ ಅಡುಗೆ ಮಾಡುವುದಕ್ಕೆ, ನೀರು ತರುವುದಕ್ಕೆ ಸಹಕರಿಸುತ್ತಿದ್ದರು.
ಅಂತೆಯೇ ಬಟ್ಟೆಯ ವಿಷಯದಲ್ಲೂ ಕೂಡ ಯಾವುದೇ ಕಾರಣಕ್ಕೆ ಬಟ್ಟೆ ಹರಿದರೆ ಅದೊಂದು ದೊಡ್ಡ ಸಮಸ್ಯೆಯಾಗುತ್ತಿತ್ತು. ಬಟ್ಟೆಯನ್ನು ಹೊಲಿದುಕೊಳ್ಳಲೇ ಬೇಕಿತ್ತು. ಸೂಜಿ ದಾರ ಎಲ್ಲರ ಮನೆಯಲ್ಲಿ ಖಂಡಿತ ಇರಲೇ ಬೇಕಿತ್ತು. ಪಕ್ಕದ ಮನೆಯಲ್ಲಿ ಸೂಜಿ ದಾರವನ್ನು ತಂದು ಹೊಲಿದುಕೊಳ್ಳುವವರ ಉದಾಹರಣೆಗಳನ್ನೂ ನಾನು ನೋಡಿದ್ದೇನೆ. ಹಾಗೆಯೇ ಹಾಗೆ ಹೊಲಿದ ಬಟ್ಟೆಗಳನ್ನು ಹಾಕಿಕೊಳ್ಳುವುದೂ ಕೂಡ ಏನೂ ಅವಮಾನದ ವಿಷಯವಾಗಿರಲಿಲ್ಲ. ಯಾರೂ ಅದರ ಬಗ್ಗೆ ಲಘುವಾಗಿ ಎಂದೂ ಮಾತಾಡುತ್ತಿರಲಿಲ್ಲ. ಈ ವಿಷಯಗಳು ಈಗಿನ ಮಕ್ಕಳಿಗೆ ಅರ್ಥವಾಗುವುದಿರಲಿ. ಹಾಗೊಂದು ವಿಷಯವಿದೆ ಎಂದೇ ತಿಳಿದಿಲ್ಲ. ಹಾಗೆ ಅವರಿಗೆ ಕೊರತೆ ಏನೂ ತಟ್ಟದಂತೆ ನೋಡಿಕೊಳ್ಳುವ ಬಾಧ್ಯತೆ ಹೊತ್ತಿದ್ದೇವೆ.
5. ಆಹಾರದ ಕೊರತೆ ಉಳ್ಳವರಿಗೆ ಆಯ್ಕೆ ಇರುವುದಿಲ್ಲ. ಹಸಿವನ್ನು ಬಲ್ಲವರು ಮತ್ತು ಅದರಿಂದ ಬಳಲಿದವರು ಹೆಚ್ಚಿನ ರುಚಿ ಅಭಿರುಚಿಗಳಿಗೆ ಮನಸೋಲುವುದಿಲ್ಲ. ಹಸಿವಿಗೆ, ಆ ಹೊತ್ತಿಗೆ ಸಿಕ್ಕದ್ದನ್ನು ತಿನ್ನುವ ಅನುಭವ ಉಳ್ಳವರು ಆಹಾರವನ್ನು ಅಪಮಾನಿಸುವುದಿಲ್ಲ ಮತ್ತು ಶೋಕಿಗೆ ತಿಂದು ಅರ್ಧಂಬರ್ಧ ಎಸೆಯುವುದಿಲ್ಲ. ಆಹಾರವನ್ನು ಎಸೆಯುವುದು ಮಹಾಪಾಪವೆಂದೇ ತಿಳಿಯುತ್ತಾರೆ. ಇಷ್ಟು ಆಹಾರ ಹಸಿದವರಿಗೆ ಸಿಕ್ಕರೆ ಅವರ ಜೀವ ಉಳಿಯುತ್ತದೆ ಎಂಬ ಆಲೋಚನೆ ಇಂದಿನ ಮಕ್ಕಳಿಗೆ ಬರದೇ ಇರುವುದಕ್ಕೆ ಕಾರಣವೆಂದರೆ ಅವರಿಗೆ ಹಸಿವಿನ ಅನುಭವವನ್ನೇ ಕೊಡುವುದಿಲ್ಲ.
ಮಧ್ಯಮ ವರ್ಗ ಮತ್ತು ಅದಕ್ಕಿಂತ ಮೇಲ್ವರ್ಗದ ಇಂದಿನ ಬಹಳಷ್ಟು ಮಕ್ಕಳಿಗೆ ಹಸಿವಿನ ಅನುಭವವೇ ಆಗುವುದಿಲ್ಲ. ಹೊತ್ತು ಹೊತ್ತಿಗೆ ಹಸಿವಿನ ಅನುಭವ ಆಗುವ ಮುನ್ನವೇ ಆಹಾರ ಸೇವನೆಯಾಗಿರುತ್ತದೆ. ಹಾಗಾಗಿಯೇ ಅವರ ಆಯ್ಕೆಗಳು ಬಹಳ ಸ್ವೇಚ್ಛೆಯಿಂದ ಕೂಡಿರುತ್ತವೆ. ಹಾಗೆಯೇ ಹೆಚ್ಚು ಹೊಟೇಲ್ಗಳಿಗೆ ಹೋಗಿ ಮೆನು ನೋಡಿ ಆಹಾರವನ್ನು ಆಯ್ಕೆ ಮಾಡುವ ಪರಿಪಾಠ ಉಳ್ಳ ಮಕ್ಕಳೂ ಕೂಡ ದೊರಕಿದ ಊಟವನ್ನು ಕಣ್ಣಿಗೊತ್ತಿಕೊಂಡು ಉಣ್ಣುವ ಅಭ್ಯಾಸದಿಂದ ಹೊರತಾಗಿರುತ್ತವೆ. ನನಗಿನ್ನೂ ನೆನಪಿದೆ, ನಮ್ಮ ಹಿರಿಯರು ಸದ್ಯ ಭಗವಂತ ಈ ಹೊತ್ತಿಗೆ ಈ ಅನ್ನ ಕೊಟ್ಟ ಎಂದು ಕೃತಜ್ಞತೆಯಿಂದ ನಮಿಸಿ ತಿನ್ನುವುದನ್ನು ನಮ್ಮ ಮಕ್ಕಳಿಗೆ ಕಲಿಸುವ ಅಗತ್ಯವಿದೆ. ಪ್ರತಿ ಸಲವೂ ಆ ಹೊತ್ತಿನ ಊಟವನ್ನು ಗೌರವದಿಂದ ಮತ್ತು ಕೃತಜ್ಞತೆಯಿಂದ ಸೇವಿಸುವುದನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಲೇ ಬೇಕು.
6.ಈ ಹಿಂದೆ ಒಂದು ಪೆನ್ಸಿಲ್ ತಂದರೆ ಅದು ಪುಟ್ಟದಾಗಿ ಕೊನೆಗೆ ಹಿಡಿಯಲು ಆಗದೇ ಇರುವಷ್ಟು ಚಿಕ್ಕದಾಗಿ ಹೋದಾಗ ಮತ್ತೊಂದು ಹೊಸ ಪೆನ್ಸಿಲ್ ಕೊಡಿಸುತ್ತಿದ್ದದ್ದು. ಆದರೆ ಈಗಿನ ಮಕ್ಕಳಿಗೆ ಪೆನ್ಸಿಲ್ ಬಾಕ್ಸ್ ತಮ್ಮ ಬಳಿ ಇರುವಾಗ ಸಹಜವಾಗಿ ತಕ್ಷಣವೇ ಕೈಗೆ ಸಿಗದೇ ಹೋದಾಗ ತಾವು ಮತ್ತೊಂದು ಹೊಸ ಪೆನ್ಸಿಲನ್ನು ಹೊರಗೆ ತೆಗೆದುಬಿಡುತ್ತಾರೆ. ತಾವು ಬಳಸುವ ವಸ್ತುಗಳ ಸಂಗ್ರಹ ಮತ್ತಷ್ಟು ಮನೆಯಲ್ಲಿದೆ ಎಂದಾಗ ಸಹಜವಾಗಿ ಒಂದು ಹೋದರೆ ಮತ್ತೊಂದು ಅಲ್ಲಿರುವುದನ್ನು ತೆಗೆದುಕೊಂಡರಾಯಿತು ಎಂಬ ಧೋರಣೆ ಇದ್ದೇ ಇರುತ್ತದೆ. ಇದನ್ನು ನಾನು ಕಳೆದುಕೊಂಡರೆ ಮನೆಯಲ್ಲಿ ಕೊಡಿಸುವುದಿಲ್ಲ. ಬೈಯುತ್ತಾರೆ. ನಾನು ಕಷ್ಟ ಪಡಬೇಕಾಗುತ್ತದೆ ಎಂಬಂತಹ ಎಚ್ಚರಿಕೆ ಮಗುವಿಗೆ ಇದ್ದರೆ ಅದು ತನ್ನ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳಲು ಯತ್ನಿಸುವುದು.
7.ನಮಗೆ ಆಗ ಓದಲು ಬಂದಿತ್ತು. ಓದಿನ ಬಗ್ಗೆ ಅಭಿರುಚಿ ಉಂಟಾಗಿರುವುದರಿಂದ ಏನು ಸಿಕ್ಕರೂ ಓದುವ ತವಕವಿರುತ್ತಿತ್ತು. ಅಲ್ಲದೇ ಯಾವುದೇ ಸುದ್ದಿ, ವಿಷಯ ತಿಳಿಯಬೇಕೆಂದರೆ ಒಂದೋ ಕೇಳಬೇಕು, ಇಲ್ಲವೇ ಓದಬೇಕು. ಹಾಗಾಗಿ ಯಾವುದೇ ವಸ್ತುವಿಗೆ ಪೊಟ್ಟಣ ಕಟ್ಟಿಕೊಡುವ ಪೇಪರನ್ನೂ ಓದುವವರು ನಾವಾಗಿದ್ದೆವು. ಆದರೆ ಈಗ ಮುದ್ರಿತ ವಿಷಯಗಳಿರುವ ಕಾಗದದ ಮೇಲೆ ಪೊಟ್ಟಣ ಕಟ್ಟಿಕೊಡುವ ವ್ಯವಸ್ಥೆಯೂ ಈಗ ಇಲ್ಲವೇ ಇಲ್ಲ ಎನ್ನುವಷ್ಟು ಕ್ಷೀಣಿಸಿದೆ. ಅದಕ್ಕಿಂತ ಮುಖ್ಯವಾಗಿ ಈಗ ವಿಷಯಗಳನ್ನು ಮತ್ತು ಸುದ್ದಿಗಳನ್ನು ತಲುಪಿಸಲು ಓದುವ ಮಾರ್ಗವೊಂದೇ ಅಲ್ಲವಾಗಿದೆ. ಆದ್ದರಿಂದ ಓದಿನ ಬಗ್ಗೆ ಹಿಂದಿನವರಿಗಿರುವಷ್ಟು ಕಾಳಜಿ ಅಷ್ಟೇನೂ ಈಗಿನವರಿಗೆ ಇರುವುದಿಲ್ಲ.
ಹಾಗಾಗಿ ಓದುವುದಿಲ್ಲ ಎನ್ನುವುದನ್ನು ದೂರುವ ಬದಲು ಇನ್ನಾವ ಮೂಲಗಳ ಬಳಕೆಯನ್ನು ಅವರಿಗೆ ಹೇಳಿಕೊಡಬೇಕು ಎನ್ನುವುದನ್ನು ಅವರಿಗೆ ತಿಳಿಸಿಕೊಡಬೇಕು. ಏನೇ ಆದರೂ ಓದು ಮತ್ತು ಬರಹವು ತಿಳುವಳಿಕೆಯ ಮೂಲ ವಿಧಾನವಾಗಿದೆ ಎಂಬುದನ್ನೂ ಅವರ ಗಮನದಲ್ಲಿ ಸ್ಪಷ್ಟಗೊಳಿಸಿರಬೇಕು.
8.ನಮಗೆ ಅಂದು ಇದ್ದಂತಹ ಆಟಗಳ ಸಾಧ್ಯತೆಗಳು ಇಂದಿನ ಮಕ್ಕಳಿಗೆ ಇಲ್ಲದಿರುವುದು ಕೂಡ ಮಕ್ಕಳು ಟಿವಿ ಮುಂದೆ ಕೂರಲು ಬಯಸುತ್ತಾರೆ. ಅಲ್ಲದೇ ಯಾವುದೇ ಕೊರತೆಗಳಿಲ್ಲದೇ ಕ್ರಿಯಾಶೀಲರನ್ನಾಗಿಸದೇ ಸೋಮಾರಿ ಗಳನ್ನಾಗಿ ಮಕ್ಕಳನ್ನು ಮಾಡಿರುವಾಗ ಅವರಿಗೆ ಬೇಕಾದ ಮನರಂಜನೆಯನ್ನು ಪ್ಯಾಸಿವ್ ಆನ್ ಲುಕರ್ ಆಗಿಯೇ ಡೆದುಕೊಳ್ಳುತ್ತಾರೆ.ಕ್ರಿಯಾಶೀಲರಾಗಿರುವ, ಸೃಜನಶೀಲರಾಗಿರುವ ಯಾರೇ ಆಗಲಿ ಗಂಟೆಗಟ್ಟಲೆ ಒಂದೇ ಸಮನೆ ಟಿವಿ ನೋಡಿಕೊಂಡಿರಲಾಗುವುದಿಲ್ಲ. ಹಾಗಾಗಿ ಮಕ್ಕಳಿಗೆ ನಾವು ಟಿವಿ ನೋಡುವುದನ್ನು ಬಿಡಿಸುವ ಯತ್ನ ಮಾಡುವುದಕ್ಕಿಂತ ಕ್ರಿಯಾಶೀಲರನ್ನಾಗಿ ಮತ್ತುಸೃಜನಶೀಲರನ್ನಾಗಿ ಮಾಡಿದರೆ ಅಲ್ಲಿಗೆ ಯಶಸ್ಸು ನಮ್ಮದು.
9.ಬೆಳಗ್ಗೆ ಬೇಗನೆ ಏಳದೇ ಇರುವುದಕ್ಕೂ ಕೂಡ ಅವರ ಕ್ರಿಯಾಶೀಲತೆಯ ಕೊರತೆಯೇ ಕಾರಣ. ಇನ್ನು ಮುಂದಿನದನ್ನು ವಿವರಿಸಿ ಹೇಳುವ ಅಗತ್ಯವೇ ಇಲ್ಲ. ಕ್ರಿಯಾಶೀಲರಾಗಿದ್ದ ಪಕ್ಷದಲ್ಲಿ ಮಕ್ಕಳಿಗೆ ಬಹಳ ಹೊತ್ತು ಹಾಸಿಗೆಯಲ್ಲಿಯೇ ಮಲಗಿಕೊಂಡಿರಲು ಸಾಧ್ಯವಾಗುವುದಿಲ್ಲ. ಎಚ್ಚರವಾದ ಮೇಲಂತೂ ಮೇಲೇಳಲು ಮನಸಿಲ್ಲದೇ ಹಾಗೆ ಹೊರಳಾಡಿಕೊಂಡಿರುವುದಕ್ಕೆ ಅವರಲ್ಲಿ ಪುಟಿಯುತ್ತಿರುವ ಚೈತನ್ಯಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ಎದ್ದೇ ಏಳುತ್ತಾರೆ. ಚಟುವಟಿಕೆಯಿಂದ ತೊಡಗಿಕೊಳ್ಳುತ್ತಾರೆ.
10.ಸಹಜವಾಗಿ ಟಿವಿ ಮತ್ತು ಮೊಬೈಲ್ ಗೇಮ್ಗಳ ಗೀಳು ಹತ್ತದೇ ಹೋದರೆ ಆಟವಾಡಲು ಹೊರಗೆ ಹೋಗುತ್ತಾರೆ. ಹಾಗೆಯೇ ಒಂದಷ್ಟು ಕಾಲ ಆಡಿದ ನಂತರ ತಾವು ಮಾಡಬೇಕಾದ ಕೆಲಸದ ಒತ್ತಡವನ್ನು ಸ್ಮರಿಸಿಕೊಂಡು ಬೇಗನೆ ಮನೆಗೆ ಮರಳುತ್ತಾರೆ.
11.ಪೋಷಕರಿಗೆ ಹಣದ ಸಂಪಾದನೆ ಕಷ್ಟವಾಗಿದ್ದರೂ, ಅದಕ್ಕೆ ದುಡಿಯುವ ಅಗತ್ಯವಿದ್ದರೂ ಮಕ್ಕಳಿಗೆ ಅದರ ಕೊರತೆ ತಟ್ಟದೇ ಇರುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳುವುದೇ ಮಕ್ಕಳ ಹಣದ ನಿರ್ವಹಣೆಯ ಕಲೆಯನ್ನು ತಿಳಿಯದೇ ಇರುವಂತಾಗುತ್ತದೆ. ಹಾಗಾಗಿ ಮಕ್ಕಳು ಹಣದ ಗಳಿಕೆ, ಉಳಿಕೆ ಮತ್ತು ಸಾರ್ಥಕ ಬಳಕೆ ಇವುಗಳಾವುದನ್ನೂ ಕೂಡ ತಿಳಿಯದೇ, ಒಟ್ಟಾರೆ ಹಣಕಾಸಿನ ನಿರ್ವಹಣೆಯನ್ನೇ ತಿಳಿಯದೇ ಹೋಗುತ್ತಾರೆ.
ನಮ್ಮ ಪೋಷಕರು ಮಕ್ಕಳ ಬೆಳವಣಿಗೆಗೆ, ಅವರ ಸರ್ವತೋಮುಖ ವಿಕಾಸಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆದರೆ, ಕೊರತೆಯನ್ನು ಅವರು ಅನುಭ ವಿಸದೇ ಇದ್ದರೆ ಅವರು ಕ್ರಿಯಾಶೀಲವಾಗುವುದರಿಂದ, ಸೃಜನಶೀಲವಾಗುವು ದರಿಂದ ತಡೆದಂತಾಗುತ್ತದೆ. ನಿಜಕ್ಕೂ ಮಕ್ಕಳಿಗೆ ಪ್ರಜ್ಞಾ ಪೂರ್ವಕವಾಗಿ ಕೊರತೆ ಯನ್ನು ಒಡ್ಡುವುದರ ಮೂಲಕ ಅವರ ಸಮಗ್ರ ವಿಕಾಸಕ್ಕೆ ಪೂರಕ ವಾಗುವಂತಹ ಕಲೆಯನ್ನು ಪೋಷಕರು ಅರಿತುಕೊಳ್ಳಲೇ ಬೇಕಾಗಿದೆ. ಅದರ ಬಗ್ಗೆ ಮುಂದೆ ನೋಡೋಣ.