ಕೊರತೆ
ಮಕ್ಕಳಿಗೆ ಉದ್ದೇಶಪೂರ್ವಕವಾಗಿ ಕೊರತೆಗಳನ್ನು ಒಡ್ಡುವುದು ಬಹಳಷ್ಟು ಪೋಷಕರಿಗೆ ಒಗ್ಗದು. ಏಕೆಂದರೆ ಇರುವುದನ್ನು ಇಲ್ಲದೇ ಇರಿಸಿ ಅವರನ್ನು ಕಾಡಿಸುವುದು ಬೇಡ ಎಂದು. ಅದೇನೋ ಸರಿ. ಆದರೆ ಕೆಲವು ಅಂಶಗಳನ್ನುನಾವು ಗಮನದಲ್ಲಿಟ್ಟುಕೊಳ್ಳಬೇಕು. ಹಲವು ಬಗೆಯ ಕೊರತೆಗಳಿಂದ ಹಲವು ರೀತಿಯ ಪ್ರಯೋಗಶೀಲತೆ, ಸೃಜನಶೀಲತೆಯು, ಕೌಶಲ್ಯಗಳು ಮತ್ತು ಜಾಣ್ಮೆಯು ಬೆಳೆಯುವುದು. ಸ್ವತಂತ್ರವಾಗಿ ಚಿಂತಿಸುವ, ಪರಾವಲಂಬಿಯಾಗದಿರುವ ಮತ್ತು ತಾವೇ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳುವಂತಹ ಗುಣಗಳೂ ಬೆಳೆಯುತ್ತವೆ. ಅದರಿಂದ ಅಂತಹ ಕೊರತೆಗಳನ್ನು ನಾವೇ ಉದೆ್ದೀಶ ಪೂರ್ವಕವಾಗಿಯೂ ಒಡ್ಡಬೇಕು.
ಸಮವಯಸ್ಕರ ಕೊರತೆ
ಆಡಲು ಮತ್ತು ಒಡನಾಟ ಹೊಂದಲು ತಮ್ಮ ಪರಿಸರದಲ್ಲಿ ತಮ್ಮ ಸಮವಯಸ್ಕರಿಲ್ಲದೇ ಹೆಚ್ಚು ಏಕಾಂಗಿಯಾಗಿರುವ ಮಕ್ಕಳು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಏಕೆಂದರೆ, ಗುಂಪಿನಲ್ಲಿ ಸಾಮೂಹಿಕವಾಗಿ ನಿರ್ದೇಶಿತವಾಗುವ ಸೂಚನೆಗಳು ಇಲ್ಲದೇ ತಮಗೆ ತಾವೇ ಪ್ರೇರೇಪಿಸಿಕೊಳ್ಳುವಂತಹ ಆವಶ್ಯಕತೆ ಇರುತ್ತದೆ. ಅಲ್ಲದೇ, ಆಟವಾಡುವುದು, ಮನರಂಜಿಸಿಕೊಳ್ಳುವುದು ಮಕ್ಕಳಲ್ಲಿ ತೀರಾ ಸಹಜವಾದಂತಹ ಗುಣವಾದ್ದರಿಂದ, ಸೂಚನೆಗಳು ದೊರಕಲಿ, ಅಥವಾ ದೊರಕದೇ ಇರಲಿ, ತಾವು ಆಡಿಯೇ ತೀರುತ್ತಾರೆ. ಆ
ಗಲೇ ತಾಜಾ ಹೊಳಹುಗಳು, ಐಡಿಯಾಗಳು ದೊರಕುವವು. ಆಗ ಅವರಿಗೆ ಸಿಗುವಂತಹ ಸಣ್ಣ ಸೂಚನೆಗಳನ್ನು ವಿಸ್ತರಿಸಿಕೊಳ್ಳುವಂತಹ ಜಾಣ್ಮೆಯೂ ಬೆಳೆಯುತ್ತದೆ. ಬೇರೆ ಯಾವುದೋ ಅನ್ಯ ವಿಷಯಗಳನ್ನು ತಮ್ಮ ಚಟುವಟಿಕೆಗಳಿಗೆ ಅಳವಡಿಸಿಕೊಳ್ಳುವಂತಹ ಕೌಶಲ್ಯವೂ ಕೂಡ ಅಭ್ಯಾಸವಾಗುತ್ತದೆ. ಅಂತವರು ಮುಂದೆ ರಂಗಭೂಮಿ, ಚಲನಚಿತ್ರ, ಸಾಹಿತ್ಯ; ಹೀಗೆ ಅನೇಕ ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ಯಾವುದೇ ಕೆಲಸವನ್ನು ಮಾಡುವಾಗ ಇತರರ ಮೇಲೆ ಹೆಚ್ಚು ಅವಲಂಬನವಾಗದೇ ತಾವೇ ಚಟುವಟಿಕೆಯಿಂದ ತೊಡಗುವುದು ಕೂಡ ಸಾಧ್ಯವಾಗುವುದು.
ಸಮವಯಸ್ಕರ ಕೊರತೆ ಅಷ್ಟೇ ಅಲ್ಲದೇ ಇತರರ ಸಹವಾಸವೂ ಕೂಡ ಆಗ್ಗಾಗ್ಗೆ ಇಲ್ಲದಿರಬೇಕು ಅಥವಾ ಮನೆಯಲ್ಲಿ ಹಿರಿಯರು ಇದ್ದರೂ ಅವರ ಪಾಡಿಗೆ ಅವರು ಕೆಲಸಗಳನ್ನು ಮಾಡಿಕೊಂಡು, ಮಕ್ಕಳನ್ನು ಅಲಕ್ಷಿಸಿರುವಂತಿರಬೇಕು. ಆದರೆ ಅವರ ಕಡೆ ಗಮನ ಹರಿಯುತ್ತಿರಬೇಕು. ಆದರೆ ಮಕ್ಕಳಿಗೆ ತಮ್ಮನ್ನು ಸಂಪೂರ್ಣ ತಮ್ಮ ಪಾಡಿಗೆ ತಾವು ಬಿಟ್ಟಿದ್ದಾರೆ, ನಾವು ಕರೆದರೂ ಅವರು ಬರುವುದಿಲ್ಲ, ನಾವು ಏನು ಕೇಳಿದರೂ ಅವರು ಕೊಡುವುದಿಲ್ಲ. ಕರೆದೊಯ್ಯುವುದಿಲ್ಲ ಎನ್ನುವ ಭಾವ ಅವರಲ್ಲಿ ಉಂಟಾಗಬೇಕು. ಇಂತಹ ವಾತಾವರಣದಲ್ಲಿ ಉಸಿರಾಡುವ, ಆಡುವ ಮತ್ತು ಬೆಳೆಯುವ ಮಕ್ಕಳಲ್ಲಿ ಹೆಚ್ಚು ಹೆಚ್ಚು ಸೃಜನಶೀಲ ಸಾಹಿತಿಗಳು ಮತ್ತು ಕಲಾವಿದರನ್ನು ನೋಡಿದ್ದೇನೆ. ಸಿದ್ಧಸೂತ್ರಗಳ ಆಧಾರಿತವಾಗಿರುವಂತಹ ಚೌಕಟ್ಟುಗಳನ್ನು ಒಡೆದು ತಮ್ಮದೇ ಹೊಸ ಪ್ರಯೋಗಗಳನ್ನು ಮಾಡುವುದನ್ನು ನೋಡಿದ್ದೇನೆ.
ಇಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳಿಗೆ ಇನ್ನೊಂದು ಅಪಾಯವೂ ಇದೆ. ಅದೇನೆಂದರೆ, ತಾವು ಮಾಡುವುದೇ ಸರಿ, ಅಥವಾ ತಾನೇ ಮಾಡಬೇಕು ಎನ್ನುವಂತಹ ಸ್ವಕೇಂದ್ರಿತ ಮನೋಭಾವ ಢಾಳಾಗುವ ಸಾಧ್ಯತೆಗಳಿವೆ. ಈ ಏಕಾಂಗಿತನವು ದೀರ್ಘಕಾಲವಾಗಿದ್ದು, ಅದರೊಂದಿಗೆ ಮಕ್ಕಳು ತೀರಾ ಹೊಂದಿಕೊಂಡುಬಿಟ್ಟರೆ ಅಂತರ್ಮುಖಿಗಳಾವುದು, ತಮ್ಮ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಹೋಗುವುದು ಇತ್ಯಾದಿ ಅಡ್ಡಪರಿಣಾಮಗಳಾಗುವುದು. ಆದ್ದರಿಂದ ಜೊತೆಗಿಲ್ಲದೇ ಏಕಾಂಗಿತನದ ಅನುಭವ ತೀರಾ ದೀರ್ಘವಾಗಿರಬಾರದು. ಹಾಗೆಯೇ, ಸದಾ ಜೊತೆಗಾರರಿಂದಲೇ ತುಂಬಿರಲೂ ಕೂಡದು ಎನ್ನುವುದೇ ಸಾರಾಂಶ. ಹಾಗಾಗಿಯೇ ಉದ್ದೇಶಪೂರ್ವಕವಾಗಿ ಕೊರತೆಗಳನ್ನು ಒಡ್ಡಿ ಎನ್ನುತ್ತಿರುವುದು ಉದ್ದೇಶಪೂರ್ವಕವೇ.
ಮನರಂಜನಾ ಸಾಮಗ್ರಿಗಳ ಕೊರತೆ
ಮಕ್ಕಳಿಗೆ ಆಡಲು ಕೆಲವು ವಸ್ತುಗಳು ಬೇಕು. ಅವರ ಆಟದ ಚಟುವಟಿಕೆಗಳ ಭಾಗವಾಗಿ ಹಲವು ವಸ್ತುಗಳು, ಗೊಂಬೆಗಳು ಬಹಳ ಮುಖ್ಯವಾಗಿರುತ್ತವೆ. ಅದರಿಂದ ಅವರು ಆಡುವುದರಲ್ಲಿನ ಏಕತಾನತೆಯನ್ನು ನಿವಾರಿಸಿಕೊಳ್ಳುವರು.
ಆಟಕ್ಕೆ ಬಳಕೆಯಾಗುವ ಗೊಂಬೆಗಳು ಮತ್ತು ವಸ್ತುಗಳು ಮಕ್ಕಳಿಗೆ ಹಲವು ರೀತಿಗಳಲ್ಲಿ ನೆರವಾಗುತ್ತವೆ. ವಸ್ತುಗಳ ಜೊತೆಗೆ ಸಂಬಂಧಗಳನ್ನು ಬೆಸೆದುಕೊಳ್ಳುವ ಸಮಯವೂ ಕೂಡ ಈಗಲೇ ಆಗಿರುತ್ತದೆ. ಆ ವಸ್ತುಗಳು ಕೆಲವೊಮ್ಮೆ ಅವರ ಉಪಯೋಗಿಸಿ ಬಿಸಾಡುವಂತಹ ವಸ್ತುಗಳಾಗಿರದೇ, ಅತ್ಯಂತ ಮುಖ್ಯವಾದ, ಅದನ್ನು ತಮ್ಮ ಜೀವನ ಪೂರ್ತಿ ಇಟ್ಟುಕೊಳ್ಳುತ್ತೇವೆಂಬಂತಹ ವರ್ತನೆ ತೋರುತ್ತಿರುತ್ತಾರೆ. ಆದರೆ ತಾವು ಬೆಳೆದಂತೆ ತಮ್ಮ ಬೆಳವಣಿಗೆಯ ವಯೋಮಾನಗಳ ಹಂತಗಳಿಗೆ ತಕ್ಕಂತೆ ಒಲವು, ನಿಲುವುಗಳೂ ಬದಲಾಗುತ್ತವೆ.
ಆಗ ಯಾವಾಗಲೋ ಒಮ್ಮೆ ಅದೆಷ್ಟೋ ಜತನದಿಂದ ಕಾದುಕೊಂಡಿದ್ದ ವಸ್ತುಗಳು ಮೂಲೆಗುಂಪಾಗಿರುತ್ತವೆ. ಆದರೆ ಆ ವಸ್ತುಗಳ, ಗೊಂಬೆಗಳ ಜೊತೆಗೆ ವರ್ತಿಸುವಾಗ ಮಕ್ಕಳಿಗೆ ಉಂಟಾಗುವ ಭಾವನೆಗಳು ಅವರ ದೀರ್ಘಕಾಲದ ಮನಸ್ಥಿತಿಗಳನ್ನು ಉಂಟು ಮಾಡುತ್ತವೆ. ಅವರ ವ್ಯಕ್ತಿತ್ವದ ಮೇಲೆ ನೇರ ಪರಿಣಾಮ ಉಂಟುಮಾಡುತ್ತವೆ. ಹಾಗಾಗಿ ಗೊಂಬೆಗಳ ಮತ್ತು ವಸ್ತುಗಳ ಜೊತೆಗೆ ಮಕ್ಕಳು ಏಕಾಂತದಲ್ಲಿ ಹೇಗೆ ವರ್ತಿಸುತ್ತಾರೆ ಮತ್ತು ಪರಿಗಣಿಸುತ್ತಾರೆ ಎಂಬುದು ಮುಖ್ಯವಾದ ಅಂಶ.
ತಮ್ಮ ಆಟಕ್ಕೆ ಬೇಕಾದಂತಹ ನಿರ್ದಿಷ್ಟ ಗೊಂಬೆಗಳು ಅಥವಾ ಪರಿಕರಗಳು ಸಿಗದೇ ಹೋದಾಗ ಸಾಮೂಹಿಕವಾಗಲಿ ಅಥವಾ ಒಬ್ಬೊಂಟಿಯಾಗಲಿ ಮಕ್ಕಳು ಅಥವಾ ಮಗುವು ಪರ್ಯಾಯ ವಸ್ತುಗಳನ್ನು ಅರಸುತ್ತವೆ. ಯಾವುದೋ ವಸ್ತುವಿಗೆ ಇನ್ನಾವುದೋ ವಸ್ತುವಿನ ಗುಣವನ್ನು ಆರೋಪಿಸುವುದು, ಇನ್ನಾವುದೋ ಉದ್ದೇಶಕ್ಕಿರುವ ವಸ್ತುವನ್ನು ಇನ್ನಾವುದೋ ಉದ್ದೇಶಕ್ಕೆ ಬಳಸುವುದು ಇತ್ಯಾದಿಗಳನ್ನು ಮಾಡುವ ಮಕ್ಕಳಲ್ಲಿ ವಸ್ತುಗಳ ಗರಿಷ್ಠ ಬಳಕೆಯ ಕೌಶಲ್ಯ ಬೆಳೆಯುತ್ತದೆ. ಅದಿಲ್ಲದೇ ಬೆಳೆವ ಮಕ್ಕಳಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ತಕ್ಕ ವಸ್ತು ಸಿಗದೇ ಹೋದಾಗ ಕೆಲಸವನ್ನೇ ನಿಲ್ಲಿಸುತ್ತಾರೆ. ಆ ನಿರ್ದಿಷ್ಟ ವಸ್ತು ಇಲ್ಲ ಎಂಬುದು ಕೆಲಸ ನಿಂತಿರುವುದಕ್ಕೆ ಕಾರಣವಾಗಿಸಿಕೊಳ್ಳುತ್ತಾರೆ.
ಪ್ರಯೋಗಶೀಲತೆ, ಸೃಜನಶೀಲತೆ ಬೆಳೆಯುವುದೇ ಇಲ್ಲಿ. ಯಾವ ಒಬ್ಬ ವಿಜ್ಞಾನಿ, ಕಲಾವಿದ, ಸಾಹಿತಿಗಳು ಸಾಮಾನ್ಯವಾಗಿ ರೂಪುಗೊಳ್ಳುವುದೇ ಅವರು ಒಂಟಿಯಾಗಿರುವ ಸಂದರ್ಭಗಳಲ್ಲಿ. ಆಗ ಸೃಷ್ಟಿಯಾದಂತಹ ವಿಷಯಗಳು ಸಮೂಹಗಳಲ್ಲಿ ವಿಕಾಸವಾಗುತ್ತವೆ, ಬೇರೆ ಬೇರೆ ಹಂತಗಳಲ್ಲೂ ಕೂಡ ಬೆಳೆಯುವುದು. ಅವುಗಳನ್ನು ತಾವು ತಾವಾಗಿ ಅಥವಾ ಇತರ ಜೊತೆಗೆ ಪ್ರಯೋಗಿಸುವಾಗ ಅದರ ಯಶಸ್ಸು ಅಥವಾ ವೈಫಲ್ಯಗಳನ್ನು ಕಾಣುತ್ತಾರೆ. ಯಶಸ್ಸಾದರೆ ಪ್ರಯೋಗಶೀಲತೆ ವಿಷಯದ ಬಗ್ಗೆ ವಿಸ್ತಾರವಾಗುತ್ತದೆ. ವಿಫಲವಾದರೆ ವುತ್ತೊಂದು ಪ್ರಯೋಗವಾಗುತ್ತದೆ.
ಅದೇ ರೀತಿ ವಸ್ತುಗಳ ಕೊರತೆಯು ಮಕ್ಕಳ ಸಮೂಹದಲ್ಲಿ ಉಂಟಾದಾಗ ಮಕ್ಕಳಲ್ಲಿ ಪರಸ್ಪರ ಸಹಕಾರದ ಮನೋಭಾವವೂ ಕೂಡ ಬೆಳೆಯುತ್ತದೆ. ಹಾಗಾಗಿ ಮಕ್ಕಳ ಗುಂಪಿಗಾಗಲಿ, ಒಬ್ಬೊಂಟಿ ಮಗುವಿಗಾಗಲಿ ಆಡಲು ಅಗತ್ಯವಿರುವ ಎಲ್ಲಾ ವಸ್ತುಗಳೂ ದೊರಕಿಬಿಡಬಾರದು. ಹಾಗೆಯೇ ಇದನ್ನು ಗಮನಿಸಿಕೊಂಡು ಪೂರಕವಾಗಿ ಕಚ್ಚಾವಸ್ತುಗಳನ್ನು ಗುರುತಿಸುವಂತೆ ಮಾಡುವುದು, ಅಥವಾ ಒದಗಿಸುವುದು ಪೋಷಕರ ಮತ್ತು ಶಿಕ್ಷಕರ ಜಾಣ್ಮೆಗೆ ಮತ್ತು ಗ್ರಹಿಕೆಗೆ ಬಿಟ್ಟದ್ದು.
ಓದಿನ ಪುಟಗಳು, ಚಿತ್ರದ ಪಟಗಳು
ಇನ್ನು ಮಕ್ಕಳು ಜೊತೆಗಾರರಿಲ್ಲದೇ ಒಬ್ಬೊಂಟಿಯಾಗಿದ್ದಾಗ ಅವರಿಗೆಟಕುವ ಹಾಗೆ ಯಾವುದೇ ಆಗಲಿ ಒಂದಷ್ಟು ಪುಸ್ತಕಗಳು, ಅದರಲ್ಲಿಯೂ ಚಿತ್ರಗಳಿರುವ ಪುಸ್ತಕಗಳು, ಹಳೆಯ ಚಿತ್ರ ಪಟಗಳು ಸಿಗಬೇಕು. ಮಕ್ಕಳು ಒಂಟಿಯಾಗಿದ್ದಾಗ ಮಾತ್ರ ಇವೆಲ್ಲಾ ಸಾಧ್ಯ. ಮಗುವು ಎಷ್ಟು ಇತರರೊಡನೆ ಬೆರೆಯುವುದು ಮುಖ್ಯವೋ, ಒಂಟಿಯಾಗಿ ತನ್ನ ಅಗತ್ಯಗಳನ್ನು ನಿಬಾಯಿಸಿಕೊಳ್ಳುವುದೂ, ತನ್ನನ್ನು ತಾನು ಚಟುವಟಿಕೆಗಳಿಂದಿ ಟ್ಟುಕೊಳು್ಳವುದೂ ಕೂಡಾ ಮುಖ್ಯವಾಗುತ್ತದೆ.
ತಾವೊಬ್ಬರೇ ತಮ್ಮ ಪಾಡಿಗೆ ತಾವು ಇರುವ ಮಗುವು ಉದ್ದೇಶಪೂರ್ವಕವಾಗಲ್ಲದೇ ತೆರೆಯುವ ಪುಸ್ತಕದ ಸಾಲುಗಳು, ಚಿತ್ರದ ಪಟಗಳು ಅವರ ಅಂತರಾಳದಲ್ಲಿ ಸೂಕ್ಷ್ಮವಾದಂತಹ ಸ್ಥಾನಗಳನ್ನು ಪಡೆಯುತ್ತವೆ. ಅವು ಮುಂದೆ ಯಾವುದ್ಯಾವುದೋ ರೀತಿಯಲ್ಲಿ ಅವರಿಗೆ ಒಳ ನೋಟಗಳನ್ನು ಕೊಡಲು ಸಾಧ್ಯವಾಗುತ್ತದೆ. ಈ ಬಾಲ್ಯದಲ್ಲಿ ಉಂಟಾಗುವ ಭಾವುಕ ಮನಸ್ಥಿತಿಗಳು ದೊಡ್ಡವರಾದ ಮೇಲೂ ನಕಾರಾತ್ಮಕವಾಗಿದ್ದರೆ ಕಾಡಿಸುತ್ತವೆ, ಸಕಾರಾತ್ಮಕವಾಗಿದ್ದರೆ ಕಾಪಾಡುತ್ತವೆ. ಇನ್ನೂ ಕೆಲವೊಮ್ಮೆ ಸಕಾರ, ನಕಾರ ಯಾವ ಪಕ್ಕಗಳಿಗೂ ಜಾರದೇ ಏನೋ ಒಂದು ರೀತಿಯಲ್ಲಿ ಕಾಡುತ್ತವೆ.
ಹಾಗಾಗಿ ಮಗುವಿನ ವಿವಿಧ ಬೆಳವಣಿಗೆಯ ಹಂತಗಳಲ್ಲಿ ಕೊರತೆಗಳು ಕಾಣುತ್ತಿರಬೇಕು ಮತ್ತು ಏಕಾಂಗಿತನದ ಅನುಭವವಂತೂ ಆಗ್ಗಿಂದಾಗ್ಗೆ ಆಗುತ್ತಿರಲೇಬೇಕು.
ವಾಹನ ಸೌಲಭ್ಯದ ಕೊರತೆ
ಎಲ್ಲಿಗಾದರೂ ಹೋಗುವಾಗ ಸರ್ರನೆ ವಾಹನದಲ್ಲಿ ಹೋಗಿ ಬರ್ರನೆ ವಾಪಸಾಗುವ ವೇಗ ವ್ಯಕ್ತಿತ್ವ ಮತ್ತು ಗುಣಾವಳಿಗಳು ನಿರ್ಮಾಣವಾಗುವ ಹಂತದಲ್ಲಿರುವ ಮಕ್ಕಳಿಗಂತೂ ಒಳ್ಳೆಯದೇ ಅಲ್ಲ. ಅಂಗಡಿಗೆ ಅಥವಾ ಇನ್ನೇನೇ ಕಾರಣಕ್ಕೆ ಹತ್ತಿರಕ್ಕೆ ಹೋಗುವ ಪ್ರಮೇಯ ಒದಗಿದರೆ ಹತ್ತು ಹನ್ನೆರಡು ದಾಟಿರುವ ಮಕ್ಕಳು ತಟ್ಟನೆ ದ್ವಿಚಕ್ರವನ್ನು ಎತ್ತಿಕೊಂಡು ಹೋಗಿಬಿಡುತ್ತಾರೆ. ಅವರು ಅದನ್ನು ಉದ್ದೇಶ ಪೂರ್ವಕವಾಗಿ ಕಲಿಯಲಿ, ಮೈದಾನದಲ್ಲಿ ಅಭ್ಯಾಸ ಮಾಡಲಿ. ಆದರೆ ವಾಹನ ಓಡಿಸುವ ಖುಷಿಯನ್ನು ಪಡೆದುಕೊಳ್ಳಲು ಪದೇ ಪದೇ ಮಕ್ಕಳು ವಾಹನದಲ್ಲಿ ಓಡಾಡುತ್ತಿದ್ದಂತೆ ಅನೇಕ ಸೂಕ್ಷ್ಮತೆಗಳಿಂದ ವಂಚಿತರಾಗುತ್ತಾರೆ.
ಮೊದಲನೆಯದಾಗಿ ಭೌತಿಕವಾಗಿ ತಾವು ಮುನ್ನುಗ್ಗುವುದರ ಬಗ್ಗೆ ಪರಾವಲಂಬತನ ಕಾಡುತ್ತದೆ. ಅಲ್ಲದೇ ದೇಹಕ್ಕೆ ಸಿಗಬೇಕಾಗಿರುವ ಸರಳ ವ್ಯಾಯಾಮದಿಂದ ವಂಚಿತರಾಗುತ್ತಾರೆ. ದಾರಿಯಲ್ಲಿ, ದಾರಿಯ ಬದಿಯಲ್ಲಿ ಗಮನಿಸಬಹುದಾಗಿರುವ ಪ್ರಾಣಿಗಳು, ಕಲ್ಲುಗಳು, ಗಿಡ ಮೂಳಿಕೆಗಳು, ಇನ್ನಾವುದೇ ಸಂಗತಿಗಳು; ಇವೆಲ್ಲಾ ತಪ್ಪಿಹೋಗುತ್ತವೆ. ದಿನನಿತ್ಯ ಎಡತಾಕುವ ಮಾರ್ಗಗಳಲ್ಲಿ ಆಕಸ್ಮಾತ್ ಗಮನಿಸುವ ಅನೇಕ ಸಂಗತಿಗಳು ಮತ್ತು ವಸ್ತುಗಳು ಮಕ್ಕಳಲ್ಲಿ ದೀರ್ಘಕಾಲದ ವಿಷಯಗಳನ್ನು ದಾಖಲು ಮಾಡುವಂತಹ ಸೂಕ್ಷ್ಮತೆಗಳನ್ನು ಹೊಂದಿರುತ್ತವೆ.
ವಾಹನದಲ್ಲಿ ಹೋದರೆ, ಅವರು ಎಚ್ಚರಿಕೆಯಿಂದ ದಾರಿಯನ್ನುನೋಡಿಕೊಂಡು ಹೋಗಿ ಅವರ ಉದ್ದೇಶವನ್ನು ನೆರವೇರಿಸಿಕೊಂಡು ಬರುವುದಷ್ಟೇ ಆಗಿರುತ್ತದೆ. ರಸ್ತೆಯ ವಾಹನ ಸಂಚಾರಿ ಎಚ್ಚರಿಕೆಯನ್ನಷ್ಟೆೀ ಅವರು ಗಮನಿಸಬೇಕಾಗುತ್ತದೆ.
ರಸ್ತೆಯ ಬದಿಯಲ್ಲಿ ಅವರಿಗೆ ಸಿಗುವ ಯಾವುದೋ ಕಲ್ಲು, ಇನ್ನಾವುದೋ ಗರಿ, ಪುಕ್ಕ, ಎಂತದ್ದೋ ಗಿಡ, ಮತ್ತೆಂತದ್ದೋ ಹೂವು ಇವುಗಳನ್ನು ಗುರುತಿಸುವ, ಪ್ರಶಂಸಿಸುವ ಮತ್ತು ಅವುಗಳನ್ನು ಮುಟ್ಟುವ, ಅನುಭವಿಸುವ ಅನೇಕ ಸೂಕ್ಷ್ಮತೆಗಳು ಯಾಂತ್ರಿಕ ಓಡಾಟಗಳಲ್ಲಿ ಕಳೆದುಹೋಗುತ್ತವೆ. ಇನ್ನು ಮಕ್ಕಳಂತೂ ತಮ್ಮ ಬಾಲ್ಯದಲ್ಲಿ ಇವುಗಳನ್ನು ಕಳೆದುಕೊಳ್ಳಲೇ ಬಾರದು.