ದಲಿತ ಕುಟುಂಬಗಳ ಅನಾರೋಗ್ಯಕ್ಕೆ ಕಾರಣವಾಗಿರುವ ಇದ್ದಿಲು ಘಟಕದ ಪರ ನಿಂತ ಮಂಗಳೂರು ತಾಪಂ ನ ತಡೆಯಾಜ್ಞೆ !
ಮೂಡುಬಿದಿರೆ, ಎ.5: ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಎಂಬಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ತೆಂಗಿನ ಚಿಪ್ಪಿನ ಇದ್ದಿಲು ಘಟಕದಿಂದ ಸ್ಥಳೀಯರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಘಟಕವನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿ ನೋಟೀಸ್ ನೀಡಿದ್ದರೂ ಅದನ್ನು ಲೆಕ್ಕಿಸದೇ ಮಂಗಳೂರು ತಾಲೂಕು ಪಂಚಾಯತ್ ಅದಕ್ಕೆ ತಡೆಯಾಜ್ಞೆ ನೀಡುವ ಮೂಲಕ ದಲಿತ ಕುಟುಂಬಗಳಿಗೆ ಅನ್ಯಾಯಮಾಡಿದೆ.
ಒಲಿವಿಯಾ ಲೋಬೋ ಎಂಬವರ ಮಾಲಕತ್ವದ ಈ ಇದ್ದಿಲು ಘಟಕಕ್ಕೆ ಹಲವು ಪ್ರಭಾವಿಗಳ ಪ್ರಭಾವವಿದ್ದು, ಇಲ್ಲಿ ದಲಿತ ಹಾಗೂ ಇತರ ಸಮುದಾಯದ ಸುಮಾರು 25 ಕುಟುಂಬಗಳ ಸಂಕಷ್ಟವನ್ನು ಕೇಳುವವರಿಲ್ಲವಾಗಿದೆ. ಈ ಘಟಕದ ಸುತ್ತಮುತ್ತಲ ಪ್ರದೇಶದ ನಿವಾಸಿಗಳಲ್ಲಿ ಅದರಲ್ಲೂ ಸಣ್ಣ ಪ್ರಾಯದ ಮಕ್ಕಳು ಹಾಗೂ ವಯೋವೃದ್ಧರಲ್ಲಿ ಅಸ್ತಮಾ ರೋಗದ ಗುಣಲಕ್ಷಣಗಳು ಗೋಚರಿಸಿದ್ದು, ಈ ಬಗ್ಗೆ ವೈದ್ಯರು ಪ್ರಮಾಣ ಪತ್ರವನ್ನು ನೀಡಿದ್ದಾರೆ.
ತೆಂಗಿನ ಚಿಪ್ಪನ್ನು ಜಿಲ್ಲೆಯ ವಿವಿದೆಡೆಗಳಿಂದ ದಿನವೊಂದಕ್ಕೆ 5 ಲಾರಿಗಳಲ್ಲಿ ತಂದು ರಾಶಿಹಾಕಿ ಅವೈಜ್ಞಾನಿಕವಾಗಿ ಬೆಂಕಿಕೊಟ್ಟು ಸುಟ್ಟು ಅದರ ಮಸಿಯನ್ನು ಬೆಂಗಳೂರು ಹಾಗೂ ತಮಿಳುನಾಡಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿರುವ ಪ್ರಕರಣ ಇತ್ತೀಚಿಗೆ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಿಂದ ಬೆಳಕಿಗೆ ಬಂದಿತ್ತು. ಸ್ಥಳೀಯರ ಪರವಾಗಿ ಸಾಮಾಜಿಕ ಹೋರಾಟಗಾರ ರಮೇಶ್ ಬೋಧಿಯವರು ಈ ಬಗ್ಗೆ ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಲೋಕಾಯುಕ್ತ, ಜಲಮಂಡಳಿಗಳಿಗೆ ದೂರು ನೀಡಿದ್ದರೂ ಯಾವುದೇ ಇಲಾಖೆಯಿಂದ ಅವರಿಗೆ ನ್ಯಾಯ ಇದುವರೆಗೆ ನ್ಯಾಯ ದೊರಕಿಲ್ಲ.
ಇತ್ತೀಚಿಗೆ ಗ್ರಾಮಸ್ಥರು ಸೇರಿಕೊಂಡು ಘಟಕದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆಗ ಎಚ್ಚೆತ್ತುಕೊಂಡಿದ್ದ ನೆಲ್ಲಿಕಾರು ಗ್ರಾಮ ಪಂಚಾಯತ್ ಘಟಕವನ್ನು ಮುಚ್ಚುವಂತೆ ಆದೇಶಿಸಿ ಘಟಕದ ಮಾಲಕರಿಗೆ ನೋಟೀಸ್ ನೀಡಿತ್ತು. ಆದರೆ ಪಿಡಿಒ ನೀಡಿದ್ದ ಈ ನೋಟೀಸ್ಗೆ ಬೆಲೆ ನೀಡದ ಘಟಕದ ಮಾಲಕರು ಅಕ್ರಮವನ್ನು ಮುಂದುವರಿಸಿಕೊಂಡು ಬಂದಿದ್ದರು. ಮೂರು ದಿನ ಕಾದು ನಂತರ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕರಿಗೆ ಘಟಕವನ್ನು ಪೊಲೀಸ್ ಬಲದಿಂದ ಮುಚ್ಚುವಂತೆ ನೆಲ್ಲಿಕಾರು ಗ್ರಾಮ ಪಂಚಾಯತ್ ಪರವಾಗಿ ಮಾರ್ಚ್ 24ರಂದು ಪಿಡಿಒ ದೂರು ನೀಡಿದ್ದರು.
ಆದರೆ ಮಾರ್ಚ್ 25ರಂದು ಘಟಕದ ಮಾಲಕರು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿ ಪಂಚಾಯತ್ ನೋಟೀಸ್ಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದು, ಈ ಹಿನ್ನೆಲೆಯಲ್ಲಿ ಘಟನೆಯ ಬಗ್ಗೆ ಯಾವುದೇ ಪರಿಶೀಲನೆ ನಡೆಸದೇ ತಕ್ಷಣವೇ ತಾ.ಪಂ. ತಡೆಯಾಜ್ಞೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ. ಮಂಗಳೂರು ತಾಪಂನ ಕಾರ್ಯನಿರ್ವಹಣಾಧಿಕಾರಿಯವರು ನೀಡಿರುವ ತಡೆಯಾಜ್ಞೆಯಲ್ಲಿ ತಿಳಿಸಿರುವಂತೆ ಇದ್ದಿಲು ಘಟಕದವರು ಯಾವುದೇ ನಿರ್ಲಕ್ಷ್ಯ ತೋರಿರುವುದಿಲ್ಲವೆಂದಿದೆ.
ತಾಪಂನ ಯಾವುದೇ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡದೇ ಈ ರೀತಿ ತಡೆಯಾಜ್ಞೆ ನೀಡಿರುವುದು ಸರಿಯೇ ಎಂದು ಸಂತ್ರಸ್ತರು ಕೇಳುತ್ತಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಯಾವುದೇ ತಪಾಸಣೆ ನಡೆಸಿರುವ ಬಗ್ಗೆ ಉಲ್ಲೇಖಿಸದೇ ಇದ್ದಿಲು ಘಟಕದ ಮಾಲಕರ ಅರ್ಜಿಯನ್ನು ಸೂಚಿಸಿ ಜಾಣತನದಿಂದ ತಡೆಯಾಜ್ಞೆ ನೀಡಿರುವ ಬಗ್ಗೆಯೂ ಸ್ಥಳೀಯರು ಆಕ್ರೋಶಿತಗೊಂಡಿದ್ದಾರೆ.
ಈ ಇದ್ದಿಲು ಘಟಕದಿಂದ ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಮಸಿ ಲಾರಿಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದು ಒಂದೇ ಒಂದು ಕಚೇರಿಯಾಗಲೀ ಅಥವಾ ಘಟಕಕ್ಕೆ ಒಂದು ಸೂಕ್ತ ರೀತಿಯ ಕಟ್ಟಡವಾಗಲೀ ಇಲ್ಲದೇ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಜಾಣತನದಿಂದ ವರ್ತಿಸಿ ಅಕ್ರಮ ವ್ಯವಹಾರಗಳನ್ನು ಸಲೀಸಾಗಿ ನಡೆಯಲು ಬಿಡುತ್ತಿರುವುದು ಆತಂಕಕಾರಿಯಾಗಿದೆ.
ಘಟಕ 500 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 15 ದಲಿತರು ವಾಸವಿದ್ದು ಎಲ್ಲರೂ ಬಡವರ್ಗದವರಾಗಿದ್ದಾರೆ. ಇದರ ಜೊತೆಗೆ ಇತರ ಸಮುದಾಯದ ಸುಮಾರು 25 ಮನೆಗಳಿದ್ದು, ಈ ಎಲ್ಲಾ ಮನೆಗಳ ನಿವಾಸಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.