ಕಾರ್ಕಳ: ನಿಷ್ಪ್ರಯೋಜಕವಾಗುತ್ತಿರುವ ಬಯೋಗ್ಯಾಸ್ ಪ್ಲಾಂಟ್
ಕಾರ್ಕಳ, ಎ.8: ರಾಜ್ಯದಲ್ಲಿಯೇ ಪ್ರಪ್ರಥಮ ಎಂಬಂತೆ ಕಾರ್ಕಳ ಪುರಸಭೆಯು ಹಸಿ ತ್ಯಾಜ್ಯ ಬಳಸಿ ಅನಿಲ ಉತ್ಪಾದನೆಗೆ ಘಟಕವೊಂದನ್ನು ಸ್ಥಾಪಿಸಿದ್ದು, ಅದು ಇದೀಗ ನಿಷ್ಪಯೋಜಕ ವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಕಾರ್ಕಳ ಪುರಸಭೆಯು 13ನೆ ಹಣಕಾಸು ಯೋಜನೆಯಡಿಯಲ್ಲಿ ನಗರದ ಶಬರಿ ಆಶ್ರಮದಲ್ಲಿ ಬಯೋಗ್ಯಾಸ್ ಪ್ಲಾಂಟ್ ನಿರ್ಮಾಣಕ್ಕೆ ಮುಂದಾಗಿತ್ತು. ಇದಕ್ಕಾಗಿ 32 ಲಕ್ಷ ರೂ. ವೆಚ್ಚ ಮಾಡಿದೆ. 2015 ಸೆಪ್ಟಂಬರ್ 14ರಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಇದಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. 2017 ಜನವರಿ 9ರಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬಯೋ-ಗ್ಯಾಸ್ ಘಟಕ ಉದ್ಘಾಟಿಸಿದ್ದಾರೆ. ಮೂರು ತಿಂಗಳು ಕಳೆಯುತ್ತಾ ಬಂದಿದ್ದರೂ ಅದರ ಪ್ರಯೋಜನವಾಗುತ್ತಿಲ್ಲ. ಮುಖ್ಯಾಧಿಕಾರಿ ರಾಯಪ್ಪ ಅವರ ಮುತುವರ್ಜಿ: ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದ ಮುಖ್ಯಾಧಿಕಾರಿ ರಾಯಪ್ಪ ಅವರ ಮುತುವರ್ಜಿಯಿಂದಾಗಿ ಬಯೋ-ಗ್ಯಾಸ್ ಪ್ಲಾಂಟ್ ನಿರ್ಮಾಣಕ್ಕೆ ಕಾರಣವೆಂದು ತಿಳಿದುಬಂದಿದೆ.
ಬಯೋಗ್ಯಾಸ್ ಶಿಲಾನ್ಯಾಸದ ಸಂದರ್ಭ ಕರ್ತವ್ಯದಲ್ಲಿ ಇದ್ದ ರಾಯಪ್ಪ ನೂತನವಾಗಿ ರಚನೆಗೊಂಡ ಕಾಪು ಪುರಸಭೆಗೆ ವರ್ಗಾವಣೆ ಗೊಂಡಿದ್ದಾರೆ. ಉದ್ಘಾಟನೆಯ ಸಂದರ್ಭ ಮುಖ್ಯಾಧಿ ಕಾರಿಯಾಗಿ ಮೇಬಲ್ ಡಿಸೋಜ ನಿಯುಕ್ತಿ ಯಾಗಿದ್ದಾರೆ. ಬಯೋಗ್ಯಾಸ್ ಘಟಕ ನಿರ್ಮಾಣದ ಸಂದರ್ಭ ಅಧಿಕಾರಿ ವರ್ಗದವರಲ್ಲಿ ಹಾಗೂ ಜನ ಪ್ರತಿನಿಧಿಗಳಲ್ಲಿ ಇದ್ದ ಹುಮ್ಮಸ್ಸು ಇದೀಗ ಕುಗ್ಗಿರುವುದು ಘಟಕ ಕಾರ್ಯಗತಗೊಳ್ಳದಿರಲು ಕಾರಣವೆಂದರೂ ತಪ್ಪಾಗಲಾರದು. ಪ್ರತಿದಿನ 10 ಟನ್ ತ್ಯಾಜ್ಯ ಸಂಗ್ರಹ
23 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಕಾರ್ಕಳ ಪುರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡ್ಗಳಿದ್ದು, 25,800 ಜನಸಂಖ್ಯೆಯನ್ನು ಒಳಗೊಂಡಿದೆ. ಪ್ರತಿದಿನ 10 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ ಸುಮಾರು 6 ಟನ್ ಹಸಿ ತ್ಯಾಜ್ಯ ಸಂಗ್ರಹವಾಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಬಯೋಗ್ಯಾಸ್ ಪ್ಲಾಂಟ್ನ ಹೊಸ ಯೋಜನೆಗೆ ಅಂದು ಪುರಸಭೆ ಮುಂದಾಗಿತ್ತು. ಅದಕ್ಕಾಗಿ ಶಬರಿ ಆಶ್ರಮವನ್ನೇ ಮೊದಲಾಗಿ ಆಯ್ಕೆ ಮಾಡಲಾಗಿತ್ತು.
ಮೆಟ್ರಕ್ ನಂತರದ ಬಾಲಕಿಯರ ನಿಲಯ ಇದಾಗಿದ್ದು, ಒಟ್ಟು 107 ಮಂದಿ ವಿದ್ಯಾರ್ಥಿಗಳು ಇಲ್ಲಿ ಉಳಿದುಕೊಂಡು ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಯೋಗ್ಯಾಸ್ ಘಟಕ ಕಾರ್ಯಗತ ಗೊಂಡಲ್ಲಿ ಶಬರಿ ಆಶ್ರಮಕ್ಕೆ ಅಗತ್ಯ ವಿದ್ಯುತ್, ಅಡುಗೆ ಅನಿಲ ಇದರಲ್ಲೇ ಪೊರೈಕೆ ಯಾಗುತ್ತದೆ. ಇದಕ್ಕಾಗಿ ಕೆಲ ಪರಿಕರಗಳ ಜೋಡಣೆಕಾರ್ಯ ಪೂರ್ಣಗೊಂಡಿದೆ. ಘಟಕ ಕಾರ್ಯಾರಂಭ ಮಾತ್ರ ಇನ್ನೂ ಮರೀಚಿಕೆಯಾಗಿ ಉಳಿದಿದೆ.
ಬಯೋಗ್ಯಾಸ್ ಘಟಕ ಉದ್ಘಾಟನೆಯ ಸಂದರ್ಭ ಕಂಟ್ರಾಕ್ಟರ್ದಾರರಿಗೆ ಸ್ಪಷ್ವ ಸೂಚನೆ ನೀಡಲಾಗಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮೇಬಲ್ ಡಿಸೋಜ, ಮುಖ್ಯಾಧಿಕಾರಿ ಕಾರ್ಕಳ
ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಕಾರ್ಕಳ ಪುರಸಭೆ
ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದ ಕಾರ್ಕಳ ಪುರಸಭೆ 2016 ಜ.22ರಂದು ಕ್ಲೀನ್ ಇಂಡಿಯಾ ಪ್ರಶಸ್ತಿಗೆ ಪಾತ್ರವಾಗಿತ್ತು. ಮುಂಬೈನ ಲಲಿತ ಮಹಲ್ನಲ್ಲಿ ಜರಗಿದ್ದ ಸಮಾರಂಭದಲ್ಲಿ ಅಂದಿನ ಮುಖ್ಯಾಧಿಕಾರಿ ರಾಯಪ್ಪ ಹಾಗೂ ಅಧ್ಯಕ್ಷೆ ರಹಮತ್ ಎಸ್.ಶೇರ್ಖ ಮೊದಲಾದವರು ಪ್ರಶಸ್ತಿಯನ್ನು ಸ್ವೀಕರಿಸಿದ್ದರು.