ಸೌದಿಯಲ್ಲಿ ಮೃತಪಟ್ಟ ಪುತ್ತೂರಿನ ವ್ಯಕ್ತಿಯ ದಫನಕಾರ್ಯ ನಿರ್ವಹಿಸಿದ ಐಎಸ್ಎಫ್
ಸೌದಿ ಅರೇಬಿಯಾ, ಎ.11: ಇಲ್ಲಿನ ಅಶೀರ್ ಪ್ರಾಂತದ ಸರತ್ ಅಬೀದಾ ಎಂಬಲ್ಲಿ ಮಾ.14ರಂದು ಪುತ್ತೂರು ತಾಲೂಕಿನ ಮುಕ್ವೆ ನಿವಾಸಿ ಅಶ್ರಫ್ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಊರಿಗೆ ತರಲಾಗದಿರುವುದರಿಂದ ದಫನ ಕಾರ್ಯಕ್ಕೆ ಇಂಡಿಯನ್ ಸೋಶಿಯಲ್ ಫೋರಂ(ಐಎಸ್ಎಫ್) ಸಹಕರಿಸಿದೆ.
ಅಶ್ರಫ್ ಮೃತಪಟ್ಟ ವಿಷಯ ಅರಿತ ಕೂಡಲೇ ಐಎಸ್ಎಫ್ ಕಮೀಸ್ ಮುಶಾಯ್ತ್ ಘಟಕದ ಅಧ್ಯಕ್ಷ, ಇಂಡಿಯನ್ ಕಾನ್ಸುಲೇಟ್ ಜಿದ್ದಾ ಇದರ ಸದಸ್ಯರೂ ಆಗಿರುವ ಹನೀಫ್ ಮಂಜೇಶ್ವರ ನೇತೃತ್ವದ ತಂಡ ಅಗತ್ಯ ಕಾರ್ಯಗಳಿಗೆ ಸಂಬಂಧಿಸಿ ಕಾರ್ಯಪ್ರವೃತ್ತವಾಗಿತ್ತು. ಜಾನ್ ಪುತ್ತೂರು, ಅಶ್ರಫ್ ಬಜ್ಪೆ, ಮುಹಮ್ಮದ್ ಬಾವ ಕೆ.ಸಿ.ರೋಡ್, ಕಲಂದರ್ ನೌಷಾದ್ ಕರ್ನೀರೆ, ನಝೀರ್ ಚಿಕ್ಕಮಗಳೂರು, ಸಾದಿಕ್ ಉಳ್ಳಾಲ, ನೌಶಾದ್ ಉಳ್ಳಾಲ, ಫಾರೂಕ್ ಮನಾಲ್ ಅವರನ್ನೊಳಗೊಂಡ ಈ ತಂಡದ ಸತತ ಪ್ರಯತ್ನದ ಫಲವಾಗಿ ಸೌದಿ ಅರೇಬಿಯಾದ ಕಾನೂನಿನಂತೆ ದಫನಕ್ಕಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲಾಯಿತು. ಮೃತಪಟ್ಟ 25 ದಿನಗಳ ಒಳಗೆ ನಡೆಸಲು ದಫನ ಕಾರ್ಯ ನಿರ್ವಹಿಸಲು ನೆರವಾದರು.
ಜಮಾತುಲ್ ಖೈರಿಯ ಮಸ್ಜಿದ್ನಲ್ಲಿ ಜನಾಝ ನಮಾಝ್ ನೆರವೇರಿಸಲಾಯಿತು. ನಮಾಝ್ ನೇತೃತ್ವವನ್ನು ಜಮಾತುಲ್ ಖೈರಿಯಾ ಮಸ್ಜಿದ್ನ ಶೈಖ್ ವಹಿಸಿದ್ದರು. ನಂತರ ಸರತ್ ಅಬೀದ್ ದಫನ ಭೂಮಿಯಲ್ಲಿ ನಡೆದ ದಫನ ಕಾರ್ಯದಲ್ಲಿ ಅನಿವಾಸಿಗರೂ, ಕುಟುಂಬಿಕರು, ಗೆಳೆಯರು ಭಾಗವಹಿಸಿದ್ದರು.