ಉದ್ಯಾನ ನಗರಿ ‘ಅಸ್ತಮಾ’ ನಗರಿಯಾಯಿತೇ?!
ಮಾನ್ಯರೆ,
ಉದ್ಯಾನ ನಗರಿ ಬೆಂಗಳೂರು ಮೊದಲೇ ಟ್ರಾಫಿಕ್ ಜಾಮ್ನಿಂದ ಕೆಟ್ಟ ಹೆಸರು ಪಡೆದುಕೊಂಡಿದೆ. ಬೆಂಗಳೂರಲ್ಲಿ ವಾಸಿಸುವವರು ತಮ್ಮ ಅರ್ಧ ಆಯಸ್ಸನ್ನು ಟ್ರಾಫಿಕ್ ಜಾಮ್ನಲ್ಲೇ ಕಳೆದುಕೊಳ್ಳುವಂತಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ, ವಾಯುಮಾಲಿನ್ಯದಿಂದ ಇದೀಗ ಹೆಚ್ಚಿನ ಮಂದಿ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಬಯಲಾಗಿದೆ.
ವಾಹನ ದಟ್ಟಣೆಯ ಪರಿಣಾಮ ವಾಯುಮಾಲಿನ್ಯದಿಂದಾಗಿ ವಾತಾವರಣದಲ್ಲಿ ಬದಲಾವಣೆಯಾಗಿ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಇದು ಹೊಸ ರೋಗದ ಸೃಷ್ಟಿಗೂ ಕಾರಣವಾಗಬಹುದು. ಈ ಭೀತಿಯಿಂದ ಈಗಾಗಲೇ ಕೆಲವರು ಮುಖಕ್ಕೆ ಮಾಸ್ಕ್ ಹಾಕಿ ಓಡಾಡುತ್ತಿದ್ದಾರೆ. ಹಾಗೆಯೇ ಅಸ್ತಮಾದಿಂದ ಬಳಲುತ್ತಿರುವವರು ನಿತ್ಯ ಆಸ್ಪತ್ರೆಗೆ ಹೋಗುತ್ತಿರುವುದು ಈಗ ಹೆಚ್ಚಾಗಿ ಕಂಡು ಬರುತ್ತಿದೆ.
ಆರೋಗ್ಯ ಇಲಾಖೆ ಬೇರೆ ಬೇರೆ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ನಗರದಲ್ಲಿ ಹೆಚ್ಚುತ್ತಿರುವ ಅಸ್ತಮಾದ ಬಗ್ಗೆ ಜನಜಾಗೃತಿ ಮೂಡಿಸುತ್ತಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಶೀಘ್ರವೇ ಆರೋಗ್ಯ ಇಲಾಖೆ ವಾಯುಮಾಲಿನ್ಯವನ್ನ್ನು ಕಡಿಮೆಗೊಳಿಸುವ ಬಗ್ಗೆ ಹಾಗೂ ಅಸ್ತಮಾವನ್ನು ನಿಯಂತ್ರಿಸುವ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.