ಪ್ರಕಾಶ್ ಸಾಧನೆಗೆ ಅಡ್ಡಿಯಾಗದ ಅಂಧತ್ವ
# ಪಿಯು ಪರೀಕ್ಷೆಯಲ್ಲಿ ಸರಕಾರಿ ಬಸ್ ಚಾಲಕನ ಪುತ್ರ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ
ಮೂಡುಬಿದಿರೆ, ಮೇ 12: ಹುಟ್ಟು ಅಂಧನಾಗಿದ್ದರೂ ಇಡೀ ರಾಜ್ಯವೇ ತನ್ನೆಡೆಗೆ ಗಮನಹರಿಸುವಂತೆ ಮಾಡಿರುವ ಸಾಧಕ ಪ್ರಕಾಶ್ ಬಳಗನ್ನೂರ್. ಇವರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ. ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಇವರು 600ರಲ್ಲಿ 553 (92.17 ಶೇ.) ಅಂಕಗಳನ್ನು ಗಳಿಸುವ ಮೂಲಕ ತನ್ನಂತಹ ಹಲವು ಅಂಧ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ.
ಪ್ರಕಾಶ್ ಬಳಗನ್ನೂರ್ ಕೊಪ್ಪಳ ಜಿಲ್ಲೆ ಕುಷ್ಠಗಿಯ ಮಹಾಂತಪ್ಪಬಳಗನ್ನೂರ್ ಹಾಗೂ ಗುಂಡಮ್ಮ ದಂಪತಿಯ ಪುತ್ರ. ಈ ದಂಪತಿಯ ಇಬ್ಬರು ಪುತ್ರರು ಕೂಡಾ ಹುಟ್ಟು ಅಂಧರು. ಬಡಕುಟುಂಬದಿಂದ ಬಂದ ಪ್ರಕಾಶ್ನ ಸಾಧನೆಯ ಹಿಂದೆ ಪೋಷಕರ ಹಾಗೂ ಆಳ್ವಾಸ್ ಕಾಲೇಜು ಶಿಕ್ಷಕ ವೃಂದದ ಶ್ರಮವಿದೆ. ಇವರ ತಂದೆ ಮಹಾಂತಪ್ಪಕುಷ್ಠಗಿಯಲ್ಲಿ ಸರಕಾರಿ ಬಸ್ ಚಾಲಕರಾಗಿದ್ದಾರೆ. ತನ್ನ ಇಬ್ಬರು ಮಕ್ಕಳು ಹುಟ್ಟುತ್ತಲೇ ಅಂಧರಾಗಿದ್ದರೂ ಎದೆಗುಂದದೆ ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ.
ಪ್ರಕಾಶ್ ತನ್ನ 4ನೆ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಕುಷ್ಟಗಿಯ ಸರಕಾರಿ ಶಾಲೆಯಲ್ಲಿ ಹಾಗೂ ನಂತರ 7ನೆ ತರಗತಿಯವರೆಗೆ ಬೆಂಗಳೂರಿನ ಮಾತುೃ ಎಜುಕೇಶನಲ್ ಟ್ರಸ್ಟ್ ಫಾರ್ ಬ್ಲೈಂಡ್ನಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರೌಢಶಿಕ್ಷಣವನ್ನು ಅಂಧರಿಗಾಗಿರುವ ಶಿವಮೊಗ್ಗದ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಪಡೆದ ಪ್ರಕಾಶ್ ಎಸ್ಸೆಸ್ಸೆಲ್ಸಿಯಲ್ಲೂ 82 ಶೇ. ಅಂಕ ಗಳಿಸಿದ್ದರು. ಪ್ರಕಾಶ್ಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಲ್ಲಿನ ಶಿಕ್ಷಕರು ಮಾರ್ಗದರ್ಶನ ನೀಡಿದ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬಗ್ಗೆ ಮಾಹಿತಿ ದೊರೆತಿತ್ತು. ಬಡಕುಟುಂಬದ ಪ್ರಕಾಶ್ ವಿದ್ಯಾಭ್ಯಾಸ ಮುಂದುವರಿಸಲಾಗದ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಆಶಾಕಿರಣವಾಗಿ ಆಸರೆಯಾಗಿ ನಿಂತದ್ದು ಆಳ್ವಾಸ್ ಶಿಕ್ಷಣ ಸಂಸ್ಥೆಯ ರೂವಾರಿ ಡಾ.ಎಂ.ಮೋಹನ್ ಆಳ್ವ.
ಪ್ರತೀವರ್ಷ ತಮ್ಮ ಸಂಸ್ಥೆಯಲ್ಲಿ ದತ್ತಿನಿಧಿಯಡಿ ಉಚಿತ ಶಿಕ್ಷಣ ಯೋಜನೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಪ್ರಕಾಶ್ಗೆ ಅವರು ನೆರವಾದರು. ಪ್ರಕಾಶ್ ಅವರ ಅಣ್ಣ ಮಂಜುನಾಥ್ ಕೂಡಾ ಅಂಧರಾಗಿದ್ದು, ಅವರು ಆಳ್ವಾಸ್ ಕಾಲೇಜಿನಲ್ಲೇ ಉಚಿತ ಶಿಕ್ಷಣ ಯೋಜನೆಯಡಿ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಅವರು ಕೂಡಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಉತ್ತಮ ಅಂಕ ಸಾಧನೆ ಮಾಡಿದ್ದರು. ಮುಂದೆ ಪ್ರಕಾಶ್ ಕೂಡಾ ಬಿ.ಎ. ಮಾಡಬೇಕೆಂದು ನಿರ್ಧರಿಸಿದ್ದಾರೆ. ವಿದ್ಯಾಭ್ಯಾಸ ಮುಗಿದು ನಂತರ ಉಪನ್ಯಾಸಕನಾಗಿ ವೃತ್ತಿ ಜೀವನ ನಡೆಸಬೇಕೆಂಬ ಕನಸು ಆತನದು.
ಆಳ್ವಾಸ್ ಕಾಲೇಜಿನಲ್ಲಿ ಈ ಸಹೋದರರಿಗೆ ಊಟ, ವಸತಿ ಸಂಪೂರ್ಣ ಉಚಿತವಾಗಿದೆ. ಇವರಂತೆ ಇಲ್ಲಿ ನಾಲ್ವರು ಅಂಧ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕಲಿಯುತ್ತಿದ್ದಾರೆ. ಬ್ರೈಲ್ ಲಿಪಿಯ ಮೂಲಕ ಓದಿ ಅರ್ಥೈಸಿಕೊಳ್ಳುವ ಪ್ರಕಾಶ್ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳ ಜೊತೆಗೆ ಪಾಠ ಕೇಳುತ್ತಿದ್ದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲು ಮೂಡುಬಿದಿರೆಯ ಮಹಾವೀರ ಕಾಲೇಜುವಿನಲ್ಲಿ ಅವಕಾಶ ಸಿಕ್ಕಿದ್ದು, ಅಲ್ಲಿ ನಿಯಮಗಳ ಪ್ರಕಾರ ಇವರಿಗೆ ಸಹಾಯಕರನ್ನು ಒದಗಿಸಲಾಗಿತ್ತು. ಪ್ರಕಾಶ್ನನ್ನು ಅಭಿನಂದಿಸಲು ಅಥವಾ ಅವರ ಮುಂದಿನ ಶಿಕ್ಷಣಕ್ಕೆ ನೆರವಾಗಬಯಸುವವರು ಮೊ.ಸಂ. 9731413736 ಅನ್ನು ಸಂಪರ್ಕಿಸಬಹುದು.
ಅಂಧರ ಸಾಧನೆಗೆ ಸಂಗೀತ ಕ್ಷೇತ್ರಕ್ಕಷ್ಟೇ ಸೀಮಿತವಾಗದಿರಲಿ
ಅಂಧರ ಸಾಧನೆಯೆಂದರೆ ಬರೇ ಸಂಗೀತ ಒಂದೇ ಎಂಬುದಲ್ಲ. ಹೆಚ್ಚಿನ ಅಂಧರು ಸಂಗೀತ ಕ್ಷೇತ್ರದತ್ತ ಒಲವು ತೋರಿಸುತ್ತಿದ್ದು, ಇನ್ನಿತರ ಕ್ಷೇತ್ರಗಳತ್ತವೂ ಗಮನ ನೀಡಬೇಕಿದೆ. ಒಳ್ಳೆಯ ವಿದ್ಯಾಭ್ಯಾಸ ಪಡೆಯುವುದು ಅಂಧರಿಗೆ ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು. ನನ್ನ ಈ ಸಾಧನೆಗೆ ಪ್ರೇರಣೆ ನನ್ನ ತಂದೆ-ತಾಯಿ, ಡಾ.ಎಂ. ಮೋಹನ ಆಳ್ವ ಹಾಗೂ ನನ್ನ ಶಿಕ್ಷಕರು.
-ಪ್ರಕಾಶ್ ಬಳಗನ್ನೂರ್
ಪ್ರಕಾಶ್ ಬಳಗನ್ನೂರ್ ಶೇಕಡ ನೂರರಷ್ಟು ಅಂಧ ವಿದ್ಯಾರ್ಥಿಯಾಗಿದ್ದು, ಇತರ ವಿದ್ಯಾರ್ಥಿಗಳಿಗೆ ಕಡಿಮೆ ಇಲ್ಲದಂತೆ ಸಾಧನೆ ಮಾಡಿರುವುದು ಖುಷಿ ತಂದಿದೆ. ನಮ್ಮಲ್ಲಿ ಒಟ್ಟು 10 ಅಂಧ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಒಟ್ಟು 40 ಶೇ. ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣಗೊಂಡಿದ್ದರೆ, ನಮ್ಮ ಸಂಸ್ಥೆಯಲ್ಲಿ ಈ ಪ್ರಮಾಣ 95 ಶೇ. ಆಗಿದೆ. ಪೋಲಿಯೋ ಪೀಡಿತ ದೀಕ್ಷಿತ್ ಶೆಟ್ಟಿ 573 ಅಂಕಗಳನ್ನು ಗಳಿಸಿದ್ದು ಇನ್ನಿತರ ಕ್ರೀಡಾಪಟುಗಳ ಸಾಧನೆಯು ಸಂಸ್ಥೆಗೆ ಹೆಮ್ಮೆ ಉಂಟುಮಾಡಿದೆ.
- ಡಾ.ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
ಮಕ್ಕಳಿಬ್ಬರ ಅಂಧತ್ವ ಅವರ ವಿದ್ಯಾಭ್ಯಾಸಕ್ಕೆ ತೊಡಕಾಗಿಲ್ಲ. ನಮ್ಮದು ನೂರೆಂಟು ಸಮಸ್ಯೆಗಳಿದ್ದರೂ ಮಕ್ಕಳಿಬ್ಬರಿಗೂ ಯಾವುದೇ ಕಷ್ಟವಾಗದ ರೀತಿಯಲ್ಲಿ ನೆರವಾಗಿದ್ದೇವೆ. ಮಗನ ಸಾಧನೆಯು ಖುಷಿ ನೀಡಿದ್ದು, ಎಷ್ಟೇ ಕಷ್ಟಪಟ್ಟಾದರೂ ಅವನ ವಿದ್ಯಾಭ್ಯಾಸವನ್ನು ಮುಂದವರಿಸುವ ಇಚ್ಛೆ ಇದೆ.
- ಗುಂಡಮ್ಮ, ಪ್ರಕಾಶ್ನ ತಾಯಿ
___________________________________________________________