ಕನ್ನಡ ಮಾಧ್ಯಮದವರಿಗೆ ಬೆಲೆ ಇಲ್ಲವೇ?
ಮಾನ್ಯರೆ, ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸರಕಾರಿ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಇತ್ತೀಚೆಗೆ ಅರ್ಜಿಗಳನ್ನು ಕರೆಯಲಾಗಿತ್ತು. ಈ ವೇಳೆ ಅರ್ಜಿ ಸಲ್ಲಿಸುವವರು ತಮ್ಮ ಪದವಿ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪೂರೈಸಿರಬೇಕೆಂದು ಹೇಳಲಾಗಿತ್ತು. ನಿಜಕ್ಕೂ ಇದು ಅಪಮಾನದ ಸಂಗತಿ. ನಮ್ಮ ಮಾತೃಭಾಷೆ ಕನ್ನಡವಾದರೂ ರಾಜ್ಯ ಸರಕಾರ ಇದಕ್ಕೆ ಬೆಲೆ ಕೊಡದೇ ತಾರತಮ್ಯವೆಸಗಿರುವುದು ಅಕ್ಷಮ್ಯ.
ಹಾಗಾದರೆ ಇಲಾಖೆಯ ಪ್ರಕಾರ ಕೇವಲ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದವರು ಮಾತ್ರ ಬುದ್ದಿವಂತರೇ..? ಕನ್ನಡ ಮಾಧ್ಯಮದಲ್ಲಿ ಪದವಿ ಕಲಿತವರು ಸರಕಾರಿ ಉದ್ಯೋಗ ಮಾಡಲು ಅಸಮರ್ಥರೇ..? ಇವರು ಪ್ರತಿಭಾವಂತರಲ್ಲವೇ..? ಸ್ವತಃ ಸರಕಾರವೇ ಭಾಷಾ ತಾರತಮ್ಯ ಮಾಡುತ್ತಿದ್ದರೆ ಉಳಿದವರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ತಿರಸ್ಕರಿಸದೆ ಇರುತ್ತಾರೆಯೇ? ಖಾಲಿ ಇರುವ 309 ಪ್ರಾಂಶುಪಾಲರು, 165 ಗಣಿತ ಶಿಕ್ಷಕರು, 271 ವಿಜ್ಞಾನ ಶಿಕ್ಷಕರು ಹಾಗೂ 239 ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಕನ್ನಡದಲ್ಲಿ ಪದವಿ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಕುರಿತು ಮುಖ್ಯಮಂತ್ರಿಗಳು ಗಂಭೀರ ಕ್ರಮ ತೆಗೆದು ಕೊಳ್ಳಬೇಕಾಗಿದೆ.