ಮರಳಿನ ಸಮಸ್ಯೆ: ಎಂ. ಸ್ಯಾಂಡ್ಗೂ ತೀವ್ರ ಅಭಾವ
80 ಕ್ಕೂ ಅಧಿಕ ಜಲ್ಲಿ ಕ್ರಷರ್ಗಳ ಸ್ಥಗಿತದ ಎಫೆಕ್ಟ್!
ಶಿವಮೊಗ್ಗ, ಜು.17: ಮರಳಿನ ಕೊರತೆಯ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಎಂ. ಸ್ಯಾಂಡ್ ಬಳಕೆ ಹೆಚ್ಚಾಗುತ್ತಿದೆ. ಸ್ವತಃ ರಾಜ್ಯ ಸರಕಾರ ಕೂಡ ಎಂ. ಸ್ಯಾಂಡ್ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ಮರಳಿನ ಬೆಲೆ ದುಬಾರಿಯಾಗುತ್ತಿರುವ ಕಾರಣದಿಂದ ನಾಗರಿಕರು ಕೂಡ ಎಂ. ಸ್ಯಾಂಡ್ ಬಳಕೆಯತ್ತ ಹೆಚ್ಚಿನ ಒಲವು ತೋರಲಾರಂಭಿಸಿದ್ದಾರೆ.
ಈ ನಡುವೆ ಆಡಳಿತಾತ್ಮಕ ಕಾರಣಗಳಿಂದ ಕಳೆದ ಸರಿಸುಮಾರು ಒಂದೂವರೆ ತಿಂಗಳಿನಿಂದ ಜಿಲ್ಲೆಯ ವಿವಿಧೆಡೆ ಕಾರ್ಯಾಚರಿಸುತ್ತಿರುವ ಜಲ್ಲಿ ಕ್ರಷರ್ಗಳು ಸ್ಥಗಿತಗೊಂಡಿವೆ. ಇದರಿಂದ ಎಂ. ಸ್ಯಾಂಡ್ಗೆ ತತ್ವಾರ ಉಂಟಾಗಿದೆ. ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಇದರಿಂದ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ನಾಗರಿಕರಿಗೆ ತೀವ್ರ ತೊಂದರೆಯುಂಟಾಗುವಂತಾಗಿದೆ.
ಪರಿಸರ ಸೂಕ್ಷ್ಮ ಪ್ರದೇಶ ವಲಯದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ನಡೆಸಲು ಅನುಮತಿ ನಿರಾಕರಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಸಂಪೂರ್ಣ ಬಂದ್ ಆಗಿದ್ದು, ಸುಮಾರು 80 ಕ್ಕೂ ಅಧಿಕ ಜಲ್ಲಿ ಕ್ರಷರ್ಗಳು ಕೆಲಸ ಸ್ಥಗಿತಗೊಳಿಸಿವೆ. ಪ್ರಸ್ತುತ ಬೆರಳೆಣಿಕೆಯ ಕ್ರಷರ್ಗಳು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿವೆ.
ಇದರಿಂದ ಜಲ್ಲಿ ಹಾಗೂ ಎಂ. ಸ್ಯಾಂಡ್ ಪೂರೈಕೆಯ ಮೇಲೆ ಪರಿಣಾಮ ಉಂಟು ಮಾಡಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರದ ಮೇಲೆ ಪರಿಣಾಮ ಬೀರುವಂತಾಗಿದೆ. ಎಂ. ಸ್ಯಾಂಡ್ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಬೇಡಿಕೆಗೆ ಅನುಗುಣವಾಗಿ ದೊರಕುತ್ತಿಲ್ಲ. ಮತ್ತೊಂದೆಡೆ ಬೆಲೆಯಲ್ಲಿ ದಿಢೀರ್ ಹೆಚ್ಚಳ ಕೂಡ ಉಂಟಾಗಿದೆ.
ಅನುಮತಿ ನೀಡುತ್ತಿಲ್ಲ: ಕಲ್ಲು ಗಣಿಗಾರಿಕೆ ಪ್ರದೇಶವು ಪರಿಸರ ಸೂಕ್ಷ್ಮ ವಲಯದಿಂದ 10 ಕಿ.ಮೀ. ದೂರದಲ್ಲಿರಬೇಕು ಎಂಬ ನಿಯಮದ ಆಧಾರದ ಮೇಲೆ, ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನಿರಾಕರಣೆ ಮಾಡಲಾಗಿದೆ.
ಈ ಮಿತಿಯನ್ನು 1 ಕಿ.ಮೀ. ವ್ಯಾಪ್ತಿಗೆ ಇಳಿಕೆ ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ರಾಜ್ಯ ಮನವಿ ಮಾಡಿದೆ. ಆದರೆ ಇದಕ್ಕೆ ಇಲ್ಲಿಯವರೆಗೂ ಕೇಂದ್ರದಿಂದ ಅನುಮತಿ ದೊರಕಿಲ್ಲ. ಸರಕಾರದ ಸ್ಪಷ್ಟ ಸೂಚನೆ ನೀಡುವವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಜರಗಿಸಲು ಸಾಧ್ಯವಿಲ್ಲವೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ.
ಕಗ್ಗಂಟು: ದಿನದಿಂದ ದಿನಕ್ಕೆ ಈ ಪ್ರಕರಣ ಕಗ್ಗಂಟಾಗಿ ಪರಿಣಮಿಸುತ್ತಿದ್ದು, ಸದ್ಯಕ್ಕೆ ಪರಿಹಾರವಾಗುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ. ಬಾಗಿಲು ಮುಚ್ಚಿರುವ ಜಲ್ಲಿ ಕ್ರಷರ್ ಘಟಕಗಳು ಪುನಾರಂಭಗೊಳ್ಳುವ ಲಕ್ಷಣಗಳು ಇಲ್ಲವಾಗಿದೆ. ಸರಕಾರದ ಹಿರಿಯ ಅಧಿಕಾರಿಗಳಿಗೂ ಕ್ರಷರ್ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಯಾವ ರೀತಿಯಲ್ಲಿ ಸಮಸ್ಯೆ ಪರಿಹರಿಸಬೇಕೆಂಬ ಚಿಂತನೆ ನಡೆಸುತ್ತಿದ್ದಾರೆ.
ಈಗಾಗಲೇ ಸ್ಟೋನ್ ಕ್ರಷರ್ ಮಾಲಕರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಪ್ರದೇಶ ಆವರಣದಲ್ಲಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ್ ಕುಲಕರ್ಣಿಯವರು ಸೂಕ್ತ ಕ್ರಮ ಜರಗಿಸುವ ಭರವಸೆ ನೀಡಿದ್ದರು.
ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯನ್ನು 10 ಕಿ.ಮೀ.ನಿಂದ 1 ಕಿ.ಮೀ.ಗೆ ಇಳಿಸಬೇಕೆಂಬ ರಾಜ್ಯದ ಕೋರಿಕೆಗೆ ಕೇಂದ್ರದಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ. ಇದರಿಂದ ಯಾವುದೇ ಕ್ರಮಕೈಗೊಳ್ಳಲಾಗುತ್ತಿಲ್ಲವೆಂದು ಸಚಿವರು ಹೇಳುತ್ತಾರೆ ಎಂದು ಕ್ರಷರ್ ಮಾಲಕರೊಬ್ಬರು ಹೇಳುತ್ತಾರೆ.
ಜಿಲ್ಲಾಡಳಿತ ಸಮಸ್ಯೆ ಪರಿಹರಿಸಲಿ: ಮಾಲಕರ ಮನವಿ
ಬಂದ್ ಆಗಿರುವ ಕಲ್ಲು ಗಣಿಗಾರಿಕೆ ಪುನಾರಂಭಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳ ಬಹುದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ನಿಯಾಮಾನುಸಾರ ಅನುಮತಿ ನೀಡಬಹುದಾಗಿದೆ. ಈಗಾಗಲೇ ಕ್ರಷರ್ ಮಾಲಕರು ಜಿಲ್ಲಾಧಿಕಾರಿಯನ್ನು ೇಟಿಯಾಗಿ ಮನವಿ ಮಾಡಿದ್ದು, ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಡಿಸಿ ಕೈಗೊಳ್ಳುವ ನಿರ್ಧಾರ ದತ್ತ ಚಿತ್ತ ಹರಿಸಿದ್ದೇವೆ. ಸಮಸ್ಯೆ ಪರಿಹಾರವಾಗದಿ ದ್ದರೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಕ್ರಷರ್ ಸಂಘಟನೆಯ ಮುಖಂಡರಾದ ಸೋಮಸುಂದರಂ ಹಾೂ ಮಂಜು ನಾಥ್ ಸ್ಪಷ್ಟಪಡಿಸಿದ್ದಾರೆ.