ಮರಳು ಖರೀದಿಗೆ ನಾಗರಿಕರ ಪರದಾಟ
ಶಿವಮೊಗ್ಗದಲ್ಲಿ ನಿಲ್ಲದ ಮರಳು ಲೂಟಿ
ಶಿವಮೊಗ್ಗ, ಆ.1: ಬಳ್ಳಾರಿಯ ಅಕ್ರಮ ಗಣಿಗಾರಿಕೆ ಮೀರಿಸುವ ಮಟ್ಟದಲ್ಲಿ ಜಿಲ್ಲೆಯಲ್ಲಿ ಮರಳು ದಂಧೆ ನಡೆಯುತ್ತಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಮರಳು ಖರೀದಿ ಮಾಡಲು ಸಾಮಾನ್ಯ ನಾಗರಿಕರು ಪರದಾಡುವಂತಾಗಿದೆ. ಕಳೆದ ಹಲವು ವರ್ಷಗಳಿಂದ ಎಲ್ಲ ದಿನಗಳಲ್ಲಿಯೂ ನದಿಪಾತ್ರಗಳಿಂದ ಮರಳು ಲೂಟಿ ಮಾಡಲಾಗುತ್ತಿದ್ದು, ಇದನ್ನು 40ರಿಂದ 50 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಅತೀ ಹೆಚ್ಚು ಮರಳು ಲಭ್ಯವಾಗುವ ಜಿಲ್ಲೆಗಳಲ್ಲೊಂದಾದ ಶಿವಮೊಗ್ಗದಲ್ಲಿಯೇ ನಾಗರಿಕರು ಮರಳು ಪಡೆಯಲು ಹರಸಾಹಸ ನಡೆಸುವಂತಹ ದುಃಸ್ಥಿತಿ ನಿರ್ಮಾಣವಾಗಿದೆ.
ಅಕ್ರಮ ಮರಳು ಲೂಟಿಗೆ ಕಡಿವಾಣ ಹಾಕಲು ಹಾಗೂ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸುಲಭವಾಗಿ ಮರಳು ದೊರಕಿಸಿಕೊಡಲು ಸರಕಾರ, ಸ್ಥಳೀಯಾಡಳಿತಗಳು ಹತ್ತು ಹಲವು ಕ್ರಮಕೈಗೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮತ್ತೊಂದೆಡೆ ಮರಳು ಲೂಟಿ ತಡೆಗಟ್ಟಬೇಕಾದ ಕೆಲ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳೇ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ.
ಇತ್ತೀಚೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮರಳು ಅಭಾವಕ್ಕೆ ಸಂಬಂಧಿಸಿದಂತೆ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕೆಲ ಜಿಪಂ ಸದಸ್ಯರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಗುರುತರ ಆರೋಪಗಳನ್ನು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಮಾಡಿದ್ದರು.
ಅಕ್ರಮ ಮರಳು ಲೂಟಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕಾದ ಪೊಲೀಸ್ ಇಲಾಖೆ ಕಠಿಣ ಕ್ರಮ ಜರಗಿಸುತ್ತಿಲ್ಲ. ಕೆಲ ಪೊಲೀಸ್ ಅಧಿಕಾರಿಗಳು ರಾಜಾರೋಷವಾಗಿ ಮರಳು ಲೂಟಿ ದಂಧೆಕೋರರಿಗೆ ಬೆಂಗಾವಲಾಗಿ ನಿಂತುಕೊಂಡಿದ್ದಾರೆ. ಹಿರಿಯ ಅಧಿಕಾ ರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಜಿಪಂ ಸದಸ್ಯರು ಜಿಲ್ಲಾಡಳಿತದ ವಿರುದ್ಧ ತೀವ್ರ ಸಿಡಿಮಿಡಿ ವ್ಯಕ್ತಪಡಿಸಿದ್ದರು.
ಭಾರೀ ವ್ಯವಹಾರ: ಶಿವಮೊಗ್ಗದ ಕೆಲ ನದಿ ಪಾತ್ರಗಳಲ್ಲಿ ದೊರಕುವ ಮರಳಿಗೆ ಬೆಂಗಳೂರು ಮತ್ತಿತರ ನಗರಗಳಲ್ಲಿ ಸಖತ್ ಡಿಮ್ಯಾಂಡ್ ಇದೆ. ಒಂದು ಲಾರಿ ಲೋಡ್ ಮರಳಿಗೆ 50 ಸಾವಿರ ರೂ. ಮೇಲ್ಪಟ್ಟು ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಹಗಲು-ರಾತ್ರಿಗಳ ಪರಿವೆಯೇ ಇಲ್ಲದೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಮೂಲಕ ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ನಡೆಸಲಾಗುತ್ತಿರುವ ಆರೋಪ ಜನಸಾಮಾನ್ಯರಲ್ಲಿದೆ. ಆದರೆ ಈ ರಸ್ತೆಗಳಲ್ಲಿರುವ ಚೆಕ್ಪೋಸ್ಟ್, ವ್ಯಾಪ್ತಿಯ ಪೊಲೀಸ್ ಠಾಣೆಗಳ ಗಮನಕ್ಕೆ ಬರದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.
ಕಾನೂನುಬದ್ಧ್ದವಾಗಿ ಮರಳು ಸಾಗಾಟವಾದರೆ ಯಾರಿಗೂ ‘ಮಾಮೂಲಿ’ ಗಿಟ್ಟುವುದಿಲ್ಲ. ನಾಗರಿಕರಿಗೆ ಮಾತ್ರ ಅನುಕೂಲವಾಗುತ್ತದೆ. ಅದೇ ಕಾನೂನುಬಾಹಿರ ಮರಳು ಸಾಗಾಟವಾದರೆ ಎಲ್ಲರಿಗೂ ನಿಯಮಿತ ವಾಗಿ ‘ಮಾಮೂಲಿ’ ಲಭ್ಯವಾಗುತ್ತದೆ. ಇದರಿಂದ ಕಾನೂನು ಬಾಹಿರ ಮರಳು ಗಣಿಗಾರಿಕೆಯ ಬಗ್ಗೆಯೇ ಎಲ್ಲರಿಗೂ ಆಸಕ್ತಿ ಹೆಚ್ಚು’ ಎಂದು ಹೆಸರು ಬಹಿರಂಗ ಡಿಸಲಿಚ್ಛಿಸದ ಕಂದಾಯ ಇಲಾಖೆಯ ಅಧಿಕಾರಿಯೋರ್ವರು ಅಭಿಪ್ರಾಯ ಪಡುತ್ತಾರೆ. ಮರಳು ಮಾಫಿಯಾವನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲು ಜಿಲ್ಲಾಡಳಿತ ಪ್ರಾಮಾಣಿಕ ಗಮನಹರಿಸಬೇಕು.
ನಾಗರಿಕರಿಗೆ ಸುಲಭಗತಿಯಲ್ಲಿ ಮರಳು ಲಭ್ಯವಾಗುವ ವ್ಯವಸ್ಥೆ ಮಾಡಲು ಮುಂದಾಗಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
ತಹಶೀಲ್ದಾರ್ಗಳ ವಿರುದ್ಧ ಜಿಲ್ಲಾಧಿಕಾರಿ ಆಕ್ರೋಶ
ಮರಳು ಗಣಿಗಾರಿಕೆಗೆ ಸಂಬಂಧಿಸಿದ ವಿಷಯದಲ್ಲಿ ಕೆಲ ತಹಶೀಲ್ದಾರ್ಗಳ ಕಾರ್ಯವೈಖರಿಯನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಶಿವಮೊಗ್ಗ ತಹಶೀಲ್ದಾರ್ ಸತ್ಯನಾರಾಯಣರವರು ಮರಳು ಕೋರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವ ಬಗ್ಗೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಸೂಕ್ತ ನಿಗಾವಹಿಸುವಂತೆ ಸೂಚಿಸಿದರು. ಸಾಗರ ತಹಶೀಲ್ದಾರ್ ಮಾತನಾಡಿ, ತಮ್ಮಲ್ಲಿ 120 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಇದರ ಮಾಲಕರು ಯಾರು ಎಂಬುದು ಗೊತ್ತಿಲ್ಲ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಡಿ.ಸಿ.ಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತನಿಖೆ ಮಾಡದಿದ್ದರೆ ಇದೇ ಪರಿಸ್ಥಿತಿ ಎದುರಾಗುತ್ತದೆ. ಅಕ್ರಮ ಸಾಗಾಟದಾರರನ್ನು ಏಕೆ ಬಂಧಿಸಿಲ್ಲ, ಪ್ರಕರಣ ದಾಖಲಿಸಿಲ್ಲ, ವಿಚಾರಣೆ ನಡೆಸಿಲ್ಲ, ಚಾಲಕರನ್ನು ವಿಚರಣೆಗೊಳಪಡಿಸಿ ಮಾಲಕರಾರು ಎನ್ನುವ ಮಾಹಿತಿ ಪಡೆಯಬೇಕು’ ಎಂದು ತಹಶೀಲ್ದಾರ್ರನ್ನು ತರಾಟೆಗೆ ತೆಗೆದುಕೊಂಡರು.
ಲಾರಿಗಳಿಗೆ ಜಿಪಿಎಸ್ ಕಡ್ಡಾಯ: ಜಿಲ್ಲಾಧಿಕಾರಿ
ಶಿವಮೊಗ್ಗ: ಅನಧಿಕೃತ ಮರಳುಗಾರಿಕೆ ತಡೆಗೆ ಜಿಲ್ಲಾಡಳಿತ ಕೊನೆಗೂ ಮುಂದಾಗಿದೆ. ಮರಳುಗಾರಿಕೆ ಮಾಡುವ ಸ್ಥಳದಲ್ಲಿ ಸಿಸಿ ಟಿವಿ ಅವಳವ ಡಿಕೆ ಹಾಗೂ ಮರಳು ಸಾಗಾಟ ಮಾಡುವ ಲಾರಿಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲು ನಿರ್ಧರಿಸಿದೆ.
ಮಂಗಳವಾರ ನಗರದ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮರಳು ನಿರ್ವಹಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಇಷ್ಟು ದಿನ ಮರಳು ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿತ್ತು. ಆದರೆ ಈಗ ಮರಳು ಅಕ್ರಮ ಸಾಗಾಟ ನಡೆಯುತ್ತಿರುವುದು ಮತ್ತು ಅಗತ್ಯವಿದ್ದವರಿಗೆ ಸಿಗದಿರುವುದು ದೊಡ್ಡ ಸಮಸ್ಯೆಯಾಗಿದೆ. ಅಕ್ರಮ ಮರಳು ಗಣಿಗಾರಿಕೆ ತಡೆಗೆ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಗಮನಹರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಉಪವಿಭಾಗಾಧಿಕಾರಿ ಮಟ್ಟದಲ್ಲಿ ರಚಿಸಲಾಗಿರುವ ತಾಲೂಕು ಸಮಿತಿ ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ಮರಳುಗಾರಿಕೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ಅಧಿಕಾರಿಗಳ ತಂಡ ನಿರಂತರ ಗಸ್ತು ನಡೆಸಬೇಕು. ಅನಧಿಕೃತ ಮರಳುಗಾರಿಕೆ ಬಗ್ಗೆ ದೂರು ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಬೇಕು. ಅನಧಿಕೃತ ಮರಳುಗಾರಿಕೆ ಪತ್ತೆಯಾದರೆ ಸಂಬಂಧಪಟ್ಟವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಐದು ಮಂದಿಗೆ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಇವರು ಕಡ್ಡಾಯವಾಗಿ ಮರಳುಗಾರಿಕೆ ಸ್ಥಳದಲ್ಲಿ ಸಿ.ಸಿ. ಟಿವಿ ಅಳವಡಿಸಬೇಕು. ಸೈಟ್ ಆಫೀಸ್ ತೆರೆಯಬೇಕು. ಮರಳು ಸಾಗಾಟ ಮಾಡುವ ಲಾರಿಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಜಿಪಿಎಸ್ ಅಳವಡಿಸದೇ ಮರಳು ಸಾಗಿಸುವ ವಾಹನಗಳನ್ನು ಜಪ್ತಿ ಮಾಡಿ ದೂರು ದಾಖಲಿಸಬೇಕು. ಈ ಷರತ್ತುಗಳನ್ನು ಪಾಲಿಸದ ಮರಳು ಪರವಾನಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಶ್ರಯ ಯೋಜನೆಯಂತಹ ಸರಕಾರಿ ಯೋಜನೆ ಗಳಲ್ಲಿ ಮನೆಗಳನ್ನು ನಿರ್ಮಿಸಲು ಫಲಾನುಭವಿಗಳಿಗೆ ಮರಳಿನ ಕೊರತೆ ಉಂಟಾಗುತ್ತಿದೆ ಎಂದು ನಿರಂತರ ದೂರುಗಳು ಬರುತ್ತಿವೆ. ಯಾವುದೇ ಕಾರಣಕ್ಕೂ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಮರಳು ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು.
ಈ ಕುರಿತು ಈಗಾಗಲೇ ಎಲ್ಲ್ಲ ಪಿಡಿಒಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಡಿಒಗಳು ಪ್ರಮಾಣ ಪತ್ರ ನೀಡಿದರೆ ಸೂಕ್ತ ಮರಳನ್ನು ಒದಗಿಸಲಾಗುವುದು. ಸರಕಾರಿ ಯೋಜನೆಗಳಿಗೆ ಹಾಗೂ ಜನಸಾಮಾನ್ಯರಿಗೆ ಮರಳಿನ ಕೊರತೆಯಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ ಖರೆ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಹಿರಿಯ ಭೂವಿಜ್ಞಾನಿ ರಶ್ಮಿ, ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್ಗಳು ಸಭೆಯಲ್ಲಿ ಉಪಸ್ಥಿತರಿದ್ದರು.