ಸರಕಾರಿ ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ದುಬಾರಿ ಬಾಡಿಗೆ ವಸೂಲಿ: ಆರೋಪ
ಶಿವಮೊಗ್ಗ, ಆ.27: ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನುದಾನ ಪಡೆದ, ನಾಗರಿಕರ ತೆರಿಗೆ ಹಣದಲ್ಲಿ ನಿರ್ಮಿತವಾದ ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳಲ್ಲಿ ಸಾರ್ವಜನಿಕರಿಂದ ಭಾರೀ ಮೊತ್ತದ ಬಾಡಿಗೆ ವಸೂಲಿ ಮಾಡುತ್ತಿರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರವು ಸೂಕ್ತ ನಿಯಮಾವಳಿ, ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಬೇಕು. ನಿಯಮಿತವಾಗಿ ಲೆಕ್ಕಪತ್ರ ತಪಾಸಣೆಗೊಳಪಡಿಸಿ, ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗುವ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆೆ, ವಿಧಾನ ಪರಿಷತ್ ಸದಸ್ಯರ ನಿಧಿ ಒಳಗೊಂಡಂತೆ ಸರಕಾರಿ ಹಂತದ ಸಾರ್ವಜನಿಕರ ಅಮೂಲ್ಯ ತೆರಿಗೆ ಹಣ ಬಳಕೆ ಮಾಡಿಕೊಂಡು ವಿವಿಧ ಸಂಘಸಂಸ್ಥೆಗಳು ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಾಣ ಮಾಡುತ್ತಿರುವುದು ಹೆಚ್ಚಾಗುತ್ತಿದೆ.
ಆದರೆ ಈ ರೀತಿಯ ಅನುದಾನದಡಿ ನಿರ್ಮಾಣವಾಗುವ ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳಲ್ಲಿ ಭಾರೀ ಪ್ರಮಾಣದಲ್ಲಿ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಹಣ ಮಾಡುವ ಕೇಂದ್ರಗಳಾಗಿ ಪರಿವರ್ತಿತವಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ಇವುಗಳ ಸಮರ್ಪಕ ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯೇ ಆಡಳಿತ ವ್ಯವಸ್ಥೆಯಲ್ಲಿ ಇಲ್ಲವಾಗಿದೆ. ಸರಕಾರದಿಂದ ಲಕ್ಷ ಲಕ್ಷ ರೂ. ಅನುದಾನ ಪಡೆದು ನಿರ್ಮಾಣವಾಗಿದ್ದರೂ ಸರಕಾರದ ಹಿಡಿತವೇ ಇವುಗಳ ಮೇಲೆ ಇಲ್ಲವಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಯಾಗಿದೆ. ಇದು ಆಡಳಿತಗಾರರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಸಾರ್ವಜನಿಕರಿಂದ ಸಂಗ್ರಹಿಸಿದ ಅಮೂಲ್ಯ ತೆರಿಗೆ ಹಣದ ದುರ್ಬಳಕೆಯಾಗಿದೆ.
ದುಬಾರಿ ಬಾಡಿಗೆ: ಬದಲಾದ ಕಾಲಘಟ್ಟದಲ್ಲಿ ಹಾಗೂ ಕಿಷ್ಕಿಂಧೆಯಂತಾಗಿರುವ ನಗರ ಪ್ರದೇಶಗಳಲ್ಲಿ ಮನೆಗಳಲ್ಲಿ ಮದುವೆ ಮತ್ತಿತರ ಶುಭ ಸಮಾರಂಭ ಆಯೋಜನೆ ಮಾಡುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಮುಕ್ಕಾಲು ಪಾಲು ನಾಗರಿಕರು ಸಮುದಾಯ ಭವನ, ಕಲ್ಯಾಣ ಮಂಟಪಗಳ ಮೊರೆ ಹೋಗುತ್ತಾರೆ. ಇದರಿಂದ ಕಲ್ಯಾಣ ಮಂಟಪ-ಸಮುದಾಯ ಭವನಗಳಿಗೆ ಡಿಮ್ಯಾಂಡ್ ಕಂಡುಬರುತ್ತಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಹಲವು ತಿಂಗಳುಗಳಿಗಿಂತಮೊದಲೇ ಮುಂಗಡವಾಗಿ ಬುಕ್ ಮಾಡಬೇಕಾದಂತಹ ಸ್ಥಿತಿಯಿದೆ. ಆದರೆ ಕೆಲ ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳಲ್ಲಿ ದುಬಾರಿ ಮೊತ್ತದ ದರ ನಿಗದಿ ಮಾಡಲಾಗುತ್ತಿದೆ. ವಿವಾಹ ಕಾರ್ಯಕ್ರಮ ನಡೆಸಲು ಕನಿಷ್ಠ 40 ಸಾವಿರದಿಂದ ಹಿಡಿದು 1 ಲಕ್ಷ ರೂ. ಮೇಲ್ಪಟ್ಟು ಬಾಡಿಗೆ ವಸೂಲಿ ಮಾಡಲಾಗುತ್ತಿದೆ.
ಇದು ಬಡ-ಮಧ್ಯಮ ವರ್ಗದವರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಸಮುದಾಯ ಭವನ, ಕಲ್ಯಾಣ ಮಂಟಪದ ಬಾಡಿಗೆಗೆಂದೇ ಸಾವಿರಾರು ರೂ. ವೆಚ್ಚ ಮಾಡುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಇನ್ನಾದರೂ ರಾಜ್ಯ ಸರಕಾರ, ಜಿಲ್ಲಾಡಳಿತಗಳು ಸರಕಾರಿ ಅನುದಾನದಲ್ಲಿ ನಿರ್ಮಾಣಗೊಳ್ಳುವ ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳ ಮೇಲೆ ಕಣ್ಗಾವಲಿಡುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯೋನ್ಮುಖವಾಗಬೇಕಾಗಿದೆ ಎನ್ನುವುದು ನಾಗರಿಕರ ಒಕ್ಕೊರಲ ಆಗ್ರಹವಾಗಿದೆ.