ನಾವು ಮೋದಿಯನ್ನು ಹೊಗಳಲೇಬೇಕು, ಇಲ್ಲದಿದ್ದರೆ......
ಮಾನ್ಯರೆ,
ದಯವಿಟ್ಟು ಯಾರೂ ನೋಟು ರದ್ದತಿಯನ್ನು ವಿಫಲ ಎಂದು ಹೇಳಬೇಡಿ. ಇಲ್ಲದಿದ್ದರೆ ಅದು ಯಶಸ್ವಿ ಆಗಿದೆ ಎಂದು ಸಾಬೀತು ಮಾಡಲು ಮೋದಿ ಮತ್ತೆ ಸರಕಾರಿ ಖಜಾನೆಯಿಂದ 5,000 ಕೋಟಿ ರೂ. ತನ್ನದೇ ಜಾಹೀರಾತಿಗೆ ಖರ್ಚು ಮಾಡುತ್ತಾರೆ. ಕೊನೆಗೆ ಈ 5,000 ಕೋಟಿ ರೂ. ತೆರಿಗೆ ರೂಪದಲ್ಲಿ ನಮ್ಮಂತಹ ಸಾಮಾನ್ಯ ತೆರಿಗೆದಾರರ ತಲೆಯ ಮೇಲೆಯೇ ಬಂದು ಬೀಳುವುದು ತಾನೇ. ನಾವು ಕೂಡ ಭಕ್ತರಂತೆ ಮೋದಿಯ ಎಲ್ಲಾ ಯೋಜನೆ ಯಶಸ್ವಿ ಆಗಿವೆ ಎಂದೇ ತುತ್ತೂರಿ ಊದಬೇಕು. ಇಲ್ಲದಿದ್ದರೆ ಮತ್ತೆ ಮೋದಿ ಯಾವುದಾದರೂ ಹೊಸ ತೆರಿಗೆ-ಸೆಸ್ ಹಾಕುತ್ತಾರೆೆ. ‘ಸ್ವಚ್ಛ ಭಾರತ್ ಅಭಿಯಾನ ವಿಫಲ’ ಎಂದು ಹೇಳಿದ್ದಕ್ಕೆ ಎಲ್ಲ ತೆರಿಗೆಗಳಲ್ಲೂ ಸ್ವಚ್ಛ ಭಾರತ್ ಸೆಸ್ ಹಾಕಲಾಯಿತು. ಮೋದಿಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನೆ ವಿಫಲ ಎಂದು ಹೇಳಿದ್ದಕ್ಕೆ ತಕ್ಷಣ ಮೋದಿ ಕೃಷಿ ಕಲ್ಯಾಣ್ ಸೆಸ್ ಹಾಕಿಬಿಟ್ಟರು. ಗ್ಯಾಸ್ ಸಬ್ಸಿಡಿ ತ್ಯಾಗ ಯೋಜನೆ ವಿಫಲ ಎಂದು ಹೇಳಿದ್ದಕ್ಕೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ದುಪ್ಪಟ್ಟು ಮಾಡಿಬಿಟ್ಟರು. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಶೇ.70ರಷ್ಟು ಕಡಿಮೆಯಾಗಿದ್ದರಿಂದ ಪೆಟ್ರೋಲ್ ಬೆಲೆ ಸಹ ಶೇ.70ರಷ್ಟು ಕಡಿಮೆ ಮಾಡಿ ಎಂದಿದ್ದಕ್ಕೆ ಪೆಟ್ರೋಲ್ ಬೆಲೆ ದಿನ ದಿನಕ್ಕೆ ಬದಲಾಯಿಸುವ (ಏರಿಸುವ) ಕಳ್ಳ ಯೋಜನೆ ಹೇರಿಬಿಟ್ಟರು. ನಮ್ಮ ದೇಶದ ಜಿಡಿಪಿ ಕುಸಿದಿದೆ ಎಂದು ಹೇಳಿದ್ದಕ್ಕೆ ನಮ್ಮ ಮೇಲೆ ಭಯಂಕರ ಜಿಎಸ್ಟಿ ಹಾಕಿ ಬಿಟ್ಟರು. ರೈಲು ಅಪಘಾತಗಳು ಹೆಚ್ಚಾದವು ಎಂದು ಹೇಳಿದ್ದಕ್ಕೆ ಪ್ರಯಾಣಿಕ ಟಿಕೆಟ್ ದರ ಶೇ.40ರಷ್ಟು ಮತ್ತು ಪ್ಲಾಟ್ಫಾರ್ಮ್ ಟಿಕೆಟ್ ದರ 5ರಿಂದ 20 ರೂ.ಗೆ ಏರಿಸಿ ಬಿಟ್ಟರು.
ಮೂಲದಲ್ಲಿ ಮೋದಿಯ ಹೆಚ್ಚಿನ ಯೋಜನೆಗಳು ಹಿಂದಿನ ಯುಪಿಎ ಸರಕಾರದ ಯೋಜನೆ ಆಗಿದ್ದರೇನಂತೆ, ಅವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅನುಷ್ಠಾನಗೊಳಿಸುವಲ್ಲಿ ಮೋದಿ ವಿಫಲರಾದರೇನಂತೆ, ಅವೆಲ್ಲಾ ಮೋದಿಯ ಭಯಂಕರ ಬುದ್ಧಿವಂತ ತಲೆಯಲ್ಲಿ ಹುಟ್ಟಿಕೊಂಡ ಅತೀ ಒರಿಜಿನಲ್ ಜನಪರ ಯೋಜನೆಗಳು ಎಂದೇ ನಾವು ಪ್ರಚಾರ ಮಾಡಬೇಕು. ಇಲ್ಲದಿದ್ದರೆ ಏನೇನೋ ನೆಪದಲ್ಲಿ ನಮ್ಮ ಮೇಲೆ ತೆರಿಗೆ-ಸೆಸ್ ಹಾಕಿ ಅದರಿಂದ ಬಂದ ಕೋಟ್ಯಂತರ ಹಣವನ್ನು ಈ ಯೋಜನೆಗಳು ಯಶಸ್ವಿ ಆಗಿವೆ ಎಂದು ತುತ್ತೂರಿ ಊದುವ ತನ್ನದೇ ಜಾಹೀರಾತಿಗೆ ಮೋದಿ ಖರ್ಚು ಮಾಡಬಹುದು. ಅದೂ ಇಲ್ಲದಿದ್ದರೆ ಕಪ್ಪು ಹಣದಿಂದ ದೇಶದೆಲ್ಲೆಡೆ ಚಿನ್ನದ ರಸ್ತೆ ಮಾಡುವ ಹೊಸ ಯೋಜನೆಯೊಂದಿಗೆ ಮೋದಿಯ ಪ್ರಚಾರಕ್ ತಂಡ ನಮ್ಮ ಮನೆಗೇ ಬಂದು ನಮಗೆ ಹುಚ್ಚು ಹಿಡಿಸಬಹುದು ಜೋಕೆ!