ಮಹಿಷ ಮೈಸೂರು
ಮೈಸೂರಿನ ವಿಸ್ತಾರ
ಯದು-ಕೃಷ್ಣರ ಕಾಲಕ್ಕೆ ಮೈಸೂರು ಮೂವತ್ತಮೂರು ಹಳ್ಳಿಗಳುಳ್ಳ ಪ್ರದೇಶ. ದೇವರಾಜ ಅರಸು ಮತ್ತು ಗುಂಡೂರಾವ್ ಮುಖ್ಯಮಂತ್ರಿಯಾದ ಕಾಲಕ್ಕೆ ಮೈಸೂರು ನಗರ ಶರವೇಗದಲ್ಲಿ ಬೆಳೆಯಲಾರಂಭಿಸಿತು. ಮೈಸೂರು ಪಾರಂಪರಿಕ ಕೇರಿಗಳ ಕೂಗಳತೆಯ ದೂರದಲ್ಲಿದ್ದ ಹೊಲ, ಗದ್ದೆ, ಕುರುಚಲು ಕಾಡು ಮತ್ತು ತೋಟಗಳಲ್ಲಿ ಬಡಾವಣೆಗಳು ಎದ್ದವು. ಮೈಸೂರಿನ ಪೂರ್ವಕ್ಕೆೆ ವಿದ್ಯಾರಣ್ಯಪುರಂ, ಪಶ್ಚಿಮಕ್ಕೆ ಕುವೆಂಪುನಗರ, ಉತ್ತರಕ್ಕೆ ಬನ್ನಿಮಂಟಪ ಲೇಔಟ್, ದಕ್ಷಿಣಕ್ಕೆ ವಿದ್ಯಾರಣ್ಯಪುರಂ, ಜೆ.ಪಿ.ನಗರ ಎಂದು ಪ್ರಾರಂಭವಾದ ಬಡಾವಣೆಗಳು ಈಗ ವಿವಿಧ ಹೆಸರುಗಳಿಂದ ಸುಮಾರು 220ಕ್ಕಿಂತಲೂ ಹೆಚ್ಚು ಬಡಾವಣೆಗಳು ತಲೆ ಎತ್ತಿವೆ. ಅಂದು ಮೂವತ್ತಮೂರು ಹಳ್ಳಿಗಳಿದ್ದ ಮೈಸೂರು ಈಗ 1,362 ಹಳ್ಳಿಗಳುಳ್ಳ ವಿಶಾಲ ಪ್ರದೇಶವುಳ್ಳ ಜಿಲ್ಲೆ.
ಈಗ ರಾಜ ಪರಂಪರೆಯ ಮುಕುಟವನ್ನೊತ್ತು, ರಾಯಲ್ ಸಿಟಿ ಎಂಬ ಹಿರಿಮೆ ಗರಿಮೆಯನ್ನೊದ್ದ ಮೈಸೂರು ಈಗ ಕಣ್ಣಿಗೆ ರಾಚುವಷ್ಟು ಬೃಹತ್ತಾಗಿ ಬೆಳೆದು ನಿಂತಿದೆ. ಎತ್ತ ನೋಡಿದರೂ ಸಿರಿ ಐಸಿರಿಗಳ ಬಡಾವಣೆಗಳು, ಮಹಲುಗಳು, ಅರಮನೆ, ನೆಲಮನೆ, ರಾಜಗುರುವಿನ ಧ್ಯಾನ ಕೇಂದ್ರಗಳು, ರಾಜರುಗಳ ಕಾಲದ ಮಠಗಳು, ಪರಕಾಲಮಠಗಳು ವಿದ್ಯಾಕೇಂದ್ರಗಳು, ಕಾಂಕ್ರಿಟ್ ಕಟ್ಟಡಗಳು.
ಮಹಾರಾಜರು ಅರಮನೆಗಳಿಗೆ ಇಟ್ಟ ಹೆಸರುಗಳು ಬಲು ಆಕರ್ಷಕ, ಅವು ಇಂದಿಗೂ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಜಗನ್ಮೋಹನ ಅರಮನೆ, ಜಯಲಕ್ಷ್ಮೀ ಮಹಲ್, ಲಲಿತ ಮಹಲ್, ಕಾರಂಜಿ ಅರಮನೆ, ಟಿಪ್ಪುಸುಲ್ತಾನ್ ಬೇಸಿಗೆ ಅರಮನೆ, ಚೆಲುವಾಂಬಾ ಅರಮನೆ, ಚಿತ್ತರಂಜನ್ಮಹಲ್, ವಸಂತ ಮಹಲ್, ಮಹಾರಾಜರ ಸಮಾಧಿ ಸ್ಮಾರಕಗಳು ಮತ್ತು ಚಾಮುಂಡಿ ಬೆಟ್ಟದ ಮೇಲಿರುವ ರಾಜೇಂದ್ರ ವಿಲಾಸ್ ಅರಮನೆ, ಕೋಟೆ ಕೊತ್ತಲಗಳು, ಮದ್ದಿನ ಮನೆಗಳು, ಶಸ್ತ್ರಾಗಾರಗಳು, ಯುದ್ಧ ತರಬೇತಿ ಕೇಂದ್ರಗಳು ಈ ಎಲ್ಲವೂ ಶತಮಾನದ ಹಿಂದಿನಿಂದಲೂ ಮೈಸೂರಿಗೆ ಮೆರುಗನ್ನು ತಂದುಕೊಟ್ಟವುಗಳು.
ಮೈಸೂರು ಪಾಳೇಗಾರರ ಆಡಳಿತಕ್ಕೆ ಒಳಪಟ್ಟ ಸಂಗತಿಯನ್ನು ಇತಿಹಾಸ ಓದಿನಿಂದ ತಿಳಿಯುತ್ತದೆ. ತನ್ನ ಪ್ರಾಗೈತಿಹಾಸಿಕ ಕಾಲ ಮತ್ತು ಪ್ರಾಚೀನ ಪರಂಪರೆಯ ಕೊಂಡಿಯನ್ನು ಕಳಚಿಕೊಂಡು ವಿಜಯನಗರ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟ ಮಧ್ಯಂತರ ಕಾಲವೆಂದು ಸ್ವಷ್ಟವಾಗಿ ಗುರುತಿಸಬಹುದು. ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸೋಲುಂಡ ನಂತರ ಮೈಸೂರಿನಲ್ಲಿ ಒಡೆಯರ ಇತಿಹಾಸ ಪ್ರಾರಂಭವಾಗುತ್ತದೆ. ಯದು-ಕೃಷ್ಣರು ಕಾಲ್ಪನಿಕ ವ್ಯಕ್ತಿಗಳು. ರಾಜ ಒಡೆಯರ್ ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದು, ಮೈಸೂರಿನ ನಿಜ ಇತಿಹಾಸ ಪ್ರಾರಂಭವಾಗುವುದು ಇವರಿಂದಲೇ ಎಂಬುದಾಗಿ ಬಹಳಷ್ಟು ಇತಿಹಾಸಕಾರರು ಹೇಳುತ್ತಾರೆ.
ನರಬಲಿ ಕಾಲ
ರಾಜ ಒಡೆಯರ್ ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಮೈಸೂರು ಪ್ರಾಂತವನ್ನು ಆಳುತ್ತಿದ್ದ ಕಾಲದಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿದ್ದ ನರಬಲಿ ಆಚರಣೆಯನ್ನು ಫ್ರೆಂಚ್ ಪತ್ರಿಕೆಯ ವರದಿಗಾರ ಸಂಗ್ರಹಿಸಿದ ಮಾಹಿತಿಯನ್ನು ಕರ್ನಾಟಕ ರಾಜ್ಯ ಸರಕಾರ ಪ್ರಕಟಿತ ಕರ್ನಾಟಕ ಪರಂಪರೆ-1 ಪುಸ್ತಕದ ಪುಟ ಸಂಖ್ಯೆ629ರಲ್ಲಿ ಈ ರೀತಿ ಬರೆಯಲಾಗಿದೆ. ಶ್ರೀರಂಗಪಟ್ಟಣಕ್ಕೆ ಅತೀ ದೂರವೇನಲ್ಲದ ಬೆಟ್ಟದ ತಪ್ಪಲಿಗೆ ಸೇರಿದಂತೆ ಮೈಸೂರು ಪಟ್ಟಣವಿದೆ. ಆ ಬೆಟ್ಟದ ಮೇಲೆ ಒಂದು ಸಣ್ಣ ದೇವಾಲಯವಿದೆ. ಅದು ಈಗಲೂ ಇರುವುದನ್ನು ಕಾಣಬಹುದು. ಮೂರ್ತಿಪೂಜಕರಾದ ರಾಜರು ರಾಜ್ಯವನ್ನು ಆಳುತ್ತಿದ್ದಾಗ ಅಲ್ಲಿ ಕೊಡುತ್ತಿದ್ದ ನರಬಲಿಯ ದೆಸೆಯಿಂದ ಈ ದೇವಾಲಯ ಎಲ್ಲೆಲ್ಲೂ ಪ್ರಖ್ಯಾತವಾಗಿತ್ತು. ತಾವು ಬಾಲಕರಾಗಿದ್ದಾಗ ಈ ಘೋರ ಪದ್ಧತಿ ಆಚರಣೆಯಲ್ಲಿತ್ತೆಂದು ಮುದುಕರು ನನಗೆ ಹೇಳಿದರು. ಚಾಮುಂಡಿ ಬೆಟ್ಟಕ್ಕೆ ಆದಿಯಲ್ಲಿ ನಿಜವಾದ ಹೆಸರು ಮಹಾಬಲಗಿರಿ ಎಂದು ದಾಖಲಿಸಲಾಗಿದೆ. ಪಾಳೇಗಾರ ಮಾರನಾಯಕ ನರಬಲಿಯನ್ನು ತಡೆಯಲು ಪ್ರಯತ್ನಿಸಿದ ಎಂಬುದು ಹಲವರ ಅಭಿಮತ. ಆತ ಹದಿನಾಡಿನ ರಾಜಕುಮಾರಿಯನ್ನು ಮದುವೆಯಾಗಲು ಬಯಸಿದ. ಜಾತಿಯ ಕಾರಣದಿಂದ ಅವನಿಗೆ ಹೆಣ್ಣುಕೊಡಲಿಲ್ಲ. ಆತ ಊಟ ಮಾಡುತ್ತಿದ್ದ ಸಮಾರಂಭವೊಂದರಲ್ಲಿ ಯದು-ಕೃಷ್ಣರಿಬ್ಬರು ಆತನ ಮೇಲೆರಗಿ ಕೊಲೆ ಮಾಡಿ ಹದಿನಾಡಿನ ಪಾಳೇಯವನ್ನು ವಶಪಡಿಸಿಕೊಂಡರು ಎಂಬುದು ಉಲ್ಲೇಖನೀಯ.
ಮೈಸೂರು ಅರಸರ ಆಳ್ವಿಕೆಯ ಕಾಲವಷ್ಟೇ ಅಲ್ಲ ವೇದಗಳ ಕಾಲದಲ್ಲೂ ನರಬಲಿ ನಡೆಯುತ್ತಿತ್ತು ಎಂಬುದು ಉಲ್ಲೇಖನೀಯ. ಕಾಳಿಯ ಆರಾಧಕರು ನರಬಲಿಯಲ್ಲಿ ಹೆಚ್ಚು ನಂಬಿಕೆಯುಳ್ಳವರಾಗಿದ್ದರು ಎಂಬುದನ್ನು ಕನ್ನಡ ವಿಶ್ವಕೋಶ ಸಂಪುಟ 10 ಪುಟ ಸಂಖ್ಯೆ 100ರಲ್ಲಿ ದಾಖಲಿಸುತ್ತದೆ. ಅಷ್ಟೇ ಅಲ್ಲ ಬ್ರಿಟಿಷರಿಂದ ನಿಷೇಧಗೊಳ್ಳುವವರೆಗೂ ತಂಜಾವೂರಿನ ಶೈವ ದೇವಾಲಯವೊಂದರಲ್ಲಿ ಪ್ರತೀ ಶುಕ್ರವಾರ ಗಂಡು ಮಗುವನ್ನು ಕಾಳಿಗೆ ಬಲಿಕೊಡುತ್ತಿದ್ದರೆಂಬ ಅಂಶವನ್ನು ಅದೇ ವಿಶ್ವಕೋಶ ತಿಳಿಸುತ್ತದೆ.
ಮಹಿಷಾಸುರ
ಮಹಿಷಾಸುರನ ಕಾಲವೆಂದರೆ ಮೈಸೂರಿಗೆ ಸುವರ್ಣ ಯುಗದ ಕಾಲ. ಜಾತಿ, ಮತ ದ್ವೇಷವಿಲ್ಲದ, ಮೌಢ್ಯಾಚರಣೆಗೆ ಅವಕಾಶವೇ ಇಲ್ಲದ ಸಮಾನತೆಯ ಕಾಲ. ಮೈಸೂರಿನ ಪೂರ್ವ ಪ್ರಾಚೀನತೆಯನ್ನು ಅಳೆಯಬೇಕೆಂದರೆ ಮಹಿಷಾಸುರನಿಂದಲೇ ಅಳೆಯಬೇಕು. ಹಾಗೆ ನೋಡಿದರೆ ಪ್ರಾಚೀನ ಮೈಸೂರು ಮಹಿಷಾಸುರನ ರಾಜಧಾನಿ. ಮಹಿಷಾಸುರನಿಂದಲೇ ಮೈಸೂರು ಆಗಿದ್ದು. ಈಗಿನ ಮೈಸೂರನ್ನು ಅಂದು ಮಹಿಷಮಂಡಲ, ಮಹಿಸೂರನಾಡು, ಮಹಿಷನಾಡು, ಮಹಿಷಪುರವೆಂದು ಕರೆಯುತ್ತಿದ್ದರು. ಮಹಾಭಾರತ ಭೀಷ್ಮ ಪರ್ವದಲ್ಲಿ ಮೈಸೂರನ್ನು ಮಹೀಷಕಾ ಎಂದು ಕರೆಯಲಾಗಿದೆ. ಯದು-ಕೃಷ್ಣರ ಕಾಲದಲ್ಲಿ ಮೈಸೂರು ಮಯಿಸುನ್ನಾಡು ಎಂದು ಕರೆಯಲಾಗಿತ್ತು. 1499ರ ನಂತರ ಮೈಸೂರು ಎಂಬ ಹೆಸರಾಗಿದ್ದು. ಈ ಮಹಿಷಾಸುರನ ಕಾಲದಲ್ಲಿ ಮೈಸೂರು ನರ್ಮದಾ ನದಿಯ ಪ್ರಾಂತದವರೆಗೂ ಹಬ್ಬಿತ್ತು. ವಿಂಧ್ಯಾಪರ್ವತ ಕೆಳದಂಡೆಯ ಪ್ರದೇಶವನ್ನು ಮಹಿಸ್ಮತಿ ನಗರವೆಂದು ಕರೆಯಲಾಗುತ್ತಿತು ಎಂಬುದನ್ನು ಮಾರ್ಕಂಡೇಯ ಪುರಾಣ ಉಲ್ಲೇಖಿಸುತ್ತದೆ. ಅಲ್ಲದೆ ಮಹಿಷಾಸುರ ಅವಂತಿ ದೇಶದ ರಾಜಕುಮಾರಿ ಗುಣವತಿಯನ್ನು ಸ್ವಯಂವರದಲ್ಲಿ ಗೆದ್ದು ತರುತ್ತಾನೆ. ಮಹಿಷಾಸುರ ಅವಂತಿ ಅಂದರೆ ಉಜ್ಜಯಿನಿಯವರೆಗೂ ತನ್ನ ಪ್ರಭುತ್ವವನ್ನು ಛಾಪಿಸಿದ್ದ ಎಂಬುದು ಇದರಿಂದ ತಿಳಿಯುತ್ತದೆ.
ಮಹಾಬೌದ್ಧ ಬಿಕ್ಕು
ಮೈಸೂರಿನ ಪ್ರಾಗೈತಿಹಾಸಿಕ ಕಾಲದಲ್ಲಿ ಅನೇಕ ಮಹಿಷಾಸುರರು ಆಗಿಹೋಗಿದ್ದಾರೆ. ಆದರೆ ಅಶೋಕನ ಕಾಲದ ಮಹಿಷಾಸುರ ಮಹಾ ಬೌದ್ಧ್ದ ಬಿಕ್ಕು. ಕ್ರಿ. ಪೂ. 3ನೆ ಶತಮಾನದಲ್ಲಿ ಮೌರ್ಯ ದೊರೆ ಸಾಮ್ರಾಟ್ ಅಶೋಕನ ಕಾಲದಲ್ಲಿ ಮಹಾ ಸಮ್ಮೇಳನವನ್ನು ಆಯೋಜಿಸಿದ್ದ ಬೌದ್ಧ್ದಗುರು ಮೋಗ್ಗಲಿತಿಸ್ನ ಎಂಬವನು ಬೌದ್ಧ್ದ ಧರ್ಮ ಪ್ರಚಾರಕ್ಕೆ ಮಹಿಷಮಂಡಲಕ್ಕೆ ಮಹಾದೇವ ಎಂಬವನನ್ನು, ಬನವಾಸಿಗೆ ರಕ್ಷಿತ ಎಂಬವನನ್ನು ಕಳುಹಿಸಿದ ಅಲ್ಲದೆ ಅಶೋಕನ ಮಗಳು ಸಂಗಮಿತ್ರೆ, ಮಗ ಮಹೇಂದ್ರನು ಬೋಧಿ ವೃಕ್ಷದ ಕೊಂಬೆಯೊಡನೆ ಧರ್ಮ ಪ್ರಚಾರಕ್ಕಾಗಿ ಸಿಲೋನಿಗೆ ಹೋಗುತ್ತಾರೆ. ಬೌದ್ಧ್ದರ ಬಗ್ಗೆ ಅನಾಧರ ಹೊಂದಿದ್ದ ವೈದಿಕರು ಮಹಿಷಮಂಡಲಕ್ಕೆ ಬಂದ ಮಹಾದೇವನನ್ನೇ ಮಹಿಷಾಸುರನಾಗಿ ತಮ್ಮ ಕೃತಿಗಳಲ್ಲಿ ಚಿತ್ರಿಸಿ ಆತನ ಹುಟ್ಟಿನ ಬಗ್ಗೆ ಕೆಟ್ಟದಾಗಿ ಹಲುಬಿಕೊಂಡಿರಬಹುದು, ಇಲ್ಲವೇ ಈ ಹಿಂದಿನ ಮಹಿಷಾಸುರನನ್ನು ಆ ರೀತಿಯ ಚಿತ್ರಣಕ್ಕೆ ಒಳಪಡಿಸಿರಬಹುದು.
ಪಕ್ಷಾಚರಣೆ ಚಾತುರ್ವರ್ಣ ಪ್ರತಿಪಾದಿತ ವೈದಿಕ ದೇವರುಗಳೊಂದಿಗೆ ಹೋರಾಡಿ ಆ ದೇವರುಗಳನ್ನು ಸದೆಬಡಿದು ವಿಜಯ ಸಾಧಿಸಿದ ಮಹಿಷಾಸುರ ತನ್ನ ಸಾಮ್ರಾಜ್ಯದಲ್ಲಿ ಸ್ವಾಭಿಮಾನ ಪಿತೃಪೂಜೆಯ ಆಚರಣೆಯನ್ನು ಜಾರಿಗೆ ತಂದು ಶೋಷನೆಗೈದವರನ್ನು ದೇವರೆಂದು ಪೂಜಿಸುವುದನ್ನು ನಿಲ್ಲಿಸಿ ತಮ್ಮ ಪೂರ್ವಿಕರನ್ನು ಪೂಜಿಸುವಂತೆ ತನ್ನ ರಾಜ್ಯದ ಜನರಿಗೆ ಕರೆ ನೀಡಿದ. ಇವತ್ತಿನ ಪಕ್ಷಾಚರಣೆೆ ಎರಡು ಸಾವಿರದ ಐದುನೂರು ವರ್ಷಗಳ ಹಿಂದಿನದು.
ಅಂದು ಮಹಿಷಮಂಡಲದ ತುಂಬೆಲ್ಲಾ ಪಿತೃಪಕ್ಷಾಚರಣೆ ಜಾರಿಯಲ್ಲಿತ್ತು. ದಸರಾ ಎಂದರೆ ಸತ್ತ ಪೂರ್ವಿಕರನ್ನು ಪೂಜಿಸಿ ಪರ ಮಾಡಿ ಬಂಧು ಬಳಗವನ್ನು ಆಹ್ವಾನಿಸಿ ಊಟ ಹಾಕಿಸುವುದು. ಈ ಹಬ್ಬ ಅಂದು ದಶ ದಿಕ್ಕುಗಳಲ್ಲೂ ನಡೆಯುತ್ತಿತ್ತು. ದಶ ದಿಕ್ಕುಗಳಲ್ಲಿ ನಡೆಯುತ್ತಿದ್ದ ಈ ಪರ ಆಚರಣೆ ದಶಪರ ಎಂದು ಆಗ ಪ್ರಖ್ಯಾತವಾಗಿತ್ತು. ಮುಂದೆ ಇದು ದಸರಾ ಆಗಿ ಪರಿವರ್ತನೆ ಆಗಿದೆ.
ಪುರೋಶಾಹಿ ಕುತಂತ್ರ
ಮಹಿಷಾಸುರನ ಹುಟ್ಟಿನ ಕುರಿತು ವೈದಿಕಶಾಹಿ ಗ್ರಂಥಗಳು ತೀರ ಅಸಹ್ಯವಾಗಿ ಚಿತ್ರಿಸಿಕೊಂಡಿವೆ. ಮಾರ್ಕಂಡೇಯ ಪುರಾಣದಲ್ಲಿ ದಿತಿ, ಅದಿತಿ ಎಂಬ ಇಬ್ಬರು ಮಹಾ ತಾಯಂದಿರು ಬರುತ್ತಾರೆ. ದಿತಿಯ ಮಕ್ಕಳು ರಾಕ್ಷಸರಾದರೆ ಅದಿತಿಯ ಮಕ್ಕಳು ದೇವತೆಗಳು. ದಿತಿಯ ಮಕ್ಕಳನ್ನು ದೇವತೆಗಳು ಸೋಲಿಸಿಬಿಡುತ್ತಾರೆ. ಇದರಿಂದ ಮಕ್ಕಳಿಲ್ಲದಂತಾದ ದಿತಿ ತಪಸ್ಸಿಗೆ ಹೋಗುತ್ತಾಳೆ. ಸುಪಾರ್ಸವ ಮುನಿಯ ಆಶ್ರಮದ ಬಳಿ ಎಮ್ಮೆಯಂತೆ ನಿಂತು ತಪಸ್ಸನ್ನು ಆಚರಿಸಿದಳಂತೆ. ಆಗ ಆ ಮುನಿಯು ಎಮ್ಮೆಯಂತಿರುವ ಮಗುವನ್ನು ಪಡೆಯುವೆ ಎಂದು ಆಶೀರ್ವದಿಸಿದನಂತೆ. ಇದರಿಂದ ಕಂಗಾಲಾದ ದಿತಿ ಬ್ರಹ್ಮನನ್ನು ಕುರಿತು ಪ್ರಾರ್ಥಿಸಿದಾಗ ಮುಖ ಮಾತ್ರ ಎಮ್ಮೆಯಂತೆ ದೇಹ ಮನುಷ್ಯನಂತೆ ಇರುತ್ತದೆ ಎಂದು ಆಶೀರ್ವದಿಸಿ ಮಾಯವಾಗುತ್ತಾನೆ. ಎಮ್ಮೆಯ ಮುಖವುಳ್ಳವನೇ ಮಹಿಷಾಸುರ ಎಂದು ಪುರಾಣವು ವಿಕೃತ ದ್ವೇಷವನ್ನು ಕಾರಿಕೊಂಡಿದೆ.
ಮಹಿಷಾಸುರನ ತಂದೆ ರಂಬಾ ಒಂದು ಹೆಣ್ಣು ಎಮ್ಮೆಯೊಂದಿಗೆ ಮಿಲನಕ್ರಿಯೆ ನಡೆಸಿದ ಫಲವಾಗಿ ಮಹಿಷಾಸುರ ಹುಟ್ಟಿದ ಎಂದು ವೈದಿಕಶಾಹಿಗಳು ಬಿಂಬಿಸಿದ್ದಾರೆ. ಹೀಗೆ ಮಹಾ ಬೌದ್ಧ್ಧ ಬಿಕ್ಕು ಆಗಿರುವ ಮಹಿಷಾಸುರನ ಕುರಿತು ಹೀನಾಯವಾದ ಹುಟ್ಟನ್ನು ಕಟ್ಟುತ್ತಾರೆ. ಇದಕ್ಕೆ ಕಾರಣ ಬೌದ್ಧ್ಧರ ಬಗ್ಗೆ ವೈದಿಕಶಾಹಿ ವೈರತ್ವವನ್ನು ಬೆಳೆಸಿಕೊಂಡ ಕ್ರಿಸ್ತ ಪೂರ್ವ ಮೂರನೆ ಶತಮಾನದ ವೈರತ್ವ. ಇದೆಲ್ಲಾ ಮೌರ್ಯ ಸಾಮ್ರಾಜ್ಯವನ್ನು ಪತನಗೊಳಿಸಿದ ಪುಷ್ಯಮಿತ್ರ ಶುಂಗನ ನಂತರ ನಡೆದ ವೈದಿಕ ಶಾಹಿ ಬರವಣಿಗೆಗಳು.