ಕಳಚಿದ ಹೈದರಾಬಾದ್ ಕರ್ನಾಟಕದ ಮತ್ತೊಂದು ಕೊಂಡಿ: ಖಮರುಲ್ ಇಸ್ಲಾಮ್
ತನ್ನ ಸಮುದಾಯದ ಹಿತ ಕಾಪಾಡುವ ಭರವಸೆ, ಅಬ್ಬರದ ಮಾತುಗಳನ್ನಾಡುತ್ತಲೇ ರಾಜಕಾರಣ ಪ್ರವೇಶಿಸಿದ ಖಮರುಲ್ ನಂತರದ ದಿನಗಳಲ್ಲಿ ಬೆಳೆಯುತ್ತ ತನ್ನನ್ನು ತಾನೇ ಸೆಕ್ಯುಲರ್ ನಾಯಕನಾಗಿ ರೂಪಿಸಿಕೊಳ್ಳಲು ಸತತ ಪ್ರಯತ್ನ ಮಾಡಿದವರು.
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅಗಲಿಕೆಯ ಆಘಾತದಿಂದ ಇನ್ನೂ ಚೇತರಿಸದಿರುವ ಹೈದರಾಬಾದ್ ಕರ್ನಾಟಕವು ವರ್ಣರಂಜಿತ ವ್ಯಕ್ತಿತ್ವದ ಮಾಜಿ ಸಚಿವ ಖಮರುಲ್ ಇಸ್ಲಾಮ್ ನಿಧನ ದೊಂದಿಗೆ ತನ್ನ ಮತ್ತೊಂದು ರಾಜಕೀಯ ಕೊಂಡಿಯನ್ನು ಕಳಚಿಕೊಂಡಂತಾ ಗಿದೆ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ವಾಲಿಬಾಲ್, ಹಾಕಿ, ಕ್ರಿಕೆಟ್ ಆಟದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಯುವಕ ಖಮರುಲ್ ಚರ್ಚೆ ಮತ್ತು ಭಾಷಣ ಸ್ಪರ್ಧೆಗಳಲ್ಲಿಯೂ ಮುಂದಿರುತ್ತಿದ್ದರು. ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು.
ಕಾಲೇಜು ದಿನಗಳಿಂದಲೇ ನಾಯಕತ್ವದ ರುಚಿ ಕಂಡಿದ್ದ ಖಮರುಲ್ ಅವರು ನಂತರದ ದಿನಗಳಲ್ಲಿಯೂ ‘ರಾಜಕೀಯ’ ದ ಆಟ ಮುಂದುವರಿಸಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾದ ಮೊದಲ ಮತ್ತು ಕೊನೆಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕ ಅವರಾಗಿದ್ದರು. ವಿದ್ಯಾಭ್ಯಾಸ ಮುಗಿದ ತಕ್ಷಣ ನೌಕರಿ ಮಾಡಲೇ ಬೇಕಾದ ಅನಿವಾರ್ಯ ಸ್ಥಿತಿಯೂ ಅವರ ಎದುರಿಗಿತ್ತು. ಇಂಜಿನಿಯರಿಂಗ್ ಪದವೀಧರರಾಗಿದ್ದ ಖಮರುಲ್ ಆಗ ತಮ್ಮದೇ ಸಮುದಾಯದ ಪ್ರಮುಖ ನಾಯಕನಾಗಿದ್ದ ಸಾರಿಗೆ ಸಚಿವ ಮುಹಮ್ಮದ್ ಅಲಿ ಅವರ ಬಳಿಗೆ ನೌಕರಿಗಾಗಿ ಶಿಫಾರಸು ಪತ್ರ ನೀಡುವಂತೆ ಕೇಳಿ ಕೈ ಕಟ್ಟಿ ನಿಂತಿದ್ದರು. ಮುಹಮ್ಮದ್ ಅಲಿ ಅವರು ಶಿಫಾರಸು ಪತ್ರ ನೀಡುವ ಬದಲಿಗೆ ‘ಅವಮಾನ’ಕರ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಅದನ್ನೇ ಛಲವಾಗಿ ಸ್ವೀಕರಿಸಿ ಅವರದೇ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದೆ ಎಂದು ಅವರು ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದರು. ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರೂ ಆಗಿದ್ದ ಸಾರಿಗೆ ಸಚಿವ ಮುಹಮ್ಮದ್ ಅಲಿ ಅವರ ವಿರುದ್ಧ ಖಮರುಲ್ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದರು. ಹಾಗೆ ಸ್ಪರ್ಧಿಸುವುದಕ್ಕೆ ಕಾರಣ ತಾನು ‘ಗೆಲ್ಲಬೇಕು’ ಎನ್ನುವುದಕ್ಕಿಂತ ಮುಹಮ್ಮದ್ ಅಲಿ ಅವರನ್ನು ಸೋಲಿಸುವ ಹಠವೇ ಮುಖ್ಯವಾಗಿತ್ತು. ಮುಸ್ಲಿಮ್ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದ ಖಮರುಲ್ ಅವರಿಗೆ ಕೇವಲ ಮುಹಮ್ಮದ್ ಅಲಿ ಮಾತ್ರ ಎದುರಾಳಿಯಾಗಿರಲಿಲ್ಲ. ಜನಪ್ರಿಯ ನಾಯಕರಾಗಿದ್ದ ಹಿರಿಯ ಕಾಮ್ರೆಡ್ ಗಂಗಾಧರ ನಮೋಶಿ ಕೂಡ ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದರು. ತ್ರಿಕೋನ ಸ್ಪರ್ಧೆಯಲ್ಲಿ ಉಭಯ ಪ್ರಮುಖರನ್ನೂ ಸೋಲಿಸಿ ಗೆಲುವು ತನ್ನದಾಗಿಸಿಕೊಂಡ ಖಮರುಲ್ ನಂತರದ ರಾಜಕೀಯ ಜೀವನದಲ್ಲಿ ಹಿಂದಿರುಗಿ ನೋಡಿದ್ದು ಕಡಿಮೆ.
ಮುಸ್ಲಿಮ್ ಸಮುದಾಯದ ಪ್ರತಿಷ್ಠಿತ ರಾಜಕೀಯ ನಾಯಕ ಮುಹಮ್ಮದ್ ಅಲಿ ಅವರಿಗೆ ಖಮರುಲ್ ಪರ್ಯಾಯ ಆಗಿ ಕಾಣಿಸಿದ್ದು ಅಚ್ಚರಿಯ ಸಂಗತಿ. ಅದಕ್ಕಾಗಿ ಖಮರುಲ್ ಸಮುದಾಯದ ಹಿತ ಕಾಯುವ ‘ಆಶಾಕಿರಣ’ದಂತೆ ಕಾಣಿಸುವ ಕಾರ್ಡ್ ಬಳಸಿದ್ದರು ಎಂಬುದು ಗುಟ್ಟಿನ ಸಂಗತಿಯೇನಲ್ಲ. ಅದನ್ನು ಖಮರುಲ್ ಕೂಡ ಮುಚ್ಚಿಡುತ್ತಿರಲಿಲ್ಲ. 1978ರಲ್ಲಿ ಗುಲ್ಬರ್ಗ ಕ್ಷೇತ್ರದಿಂದ ವಿಧಾನ ಸಭೆ ಪ್ರವೇಶಿಸಿದ ಖಮರುಲ್ ಅವರದು ಏರಿಳಿತದ ರಾಜಕೀಯ ಜೀವನ. 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಕಾರ್ಮಿಕ ಮುಖಂಡ ಎಸ್.ಕೆ. ಕಾಂತಾ ಅವರಿಗೆ ಸ್ಥಾನ ಬಿಟ್ಟುಕೊಟ್ಟ ಖಮರುಲ್ 1985ರ ಚುನಾವಣೆಯಲ್ಲಿಯೂ ಪರಾಭವ ಅನುಭವಿಸಿದರು. 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಖಮರುಲ್ ನಂತರ ನಡೆದ 1994ರ ಚುನಾವಣೆಯಲ್ಲಿಯೂ ಗೆಲುವು ತಮ್ಮದಾಗಿಸಿಕೊಂಡರು. ಆದರೆ, 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಸಂಸದ ಬಿ.ಜಿ.ಜವಳಿ (ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಅಳಿಯ) ವಿರುದ್ಧ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ನಂತರ 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಖಮರುಲ್ ಅವರು ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಅವರ ವಿರುದ್ಧ ಪರಾಜಿತಗೊಂಡಿದ್ದರು. ಲೋಕಸಭೆ ಪ್ರವೇಶಿಸುವ ಕಾರಣಕ್ಕಾಗಿ ಖಮರುಲ್ ರಾಜೀನಾಮೆ ನೀಡಿದ್ದ ಸ್ಥಾನಕ್ಕೆ ಕೈಸರ್ ಮಹಮೂದ್ ಮಣಿಯಾರ್ ಆಯ್ಕೆಯಾಗಿದ್ದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಖಮರುಲ್ ಚುನಾಯಿತರಾದರು, ಮಾತ್ರವಲ್ಲ ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಗೃಹ ನಿರ್ಮಾಣ ಮತ್ತು ಕಾರ್ಮಿಕ ಖಾತೆ ಸಚಿವರಾಗಿದ್ದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಚಂದ್ರಶೇಖರ ಪಾಟೀಲ್ ರೇವೂರ ಅವರ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ನಂತರದ 2008 ಮತ್ತು 2013ರ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಮತದಾರರೇ ಹೆಚ್ಚಾಗಿರುವ ಗುಲ್ಬರ್ಗ ಉತ್ತರ ಮತಕ್ಷೇತ್ರದಿಂದ ಸತತ ಎರಡು ಬಾರಿ ಚುನಾಯಿತರಾಗಿದ್ದರು.
ಸಿದ್ದರಾಮಯ್ಯ ನೇತೃತ್ವದ ಮಂತ್ರಿಮಂಡಲದಲ್ಲಿ ಪೌರಾಡಳಿತ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯಲ್ಲಿ ಕೈಬಿಟ್ಟಿದ್ದರಿಂದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪ್ರಮುಖ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಖಮರುಲ್ ಬಂಡಾಯದ ಬಾವುಟ ಹಾರಿಸಿದ್ದರು. ಖಮರುಲ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗೂ ಕೇರಳ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವಹಿಸಲಾಗಿತ್ತು.
ಉಗ್ರ ಭಾಷಣಗಳ ಮೂಲಕ ತನ್ನ ಸಮುದಾಯದ ಮತದಾರರನ್ನು ಜೊತೆಗಿರುವುದು ಅನಿವಾರ್ಯವಾಗುವಂತೆ ಮಾಡುತ್ತಿದ್ದ ಖಮರುಲ್ ಮುಸ್ಲಿಮ್ ಲೀಗ್ನಿಂದ ಸ್ಪರ್ಧಿಸಿ ಸೋಲುಂಡ ನಂತರ ರಾಜಕಾರಣದ ‘ಭಾಷೆ’ ಕಲಿತರು. ಮುಸ್ಲಿಮ್ ಲೀಗ್ನಿಂದ ಜನತಾದಳ ನಂತರ ಕಾಂಗ್ರೆಸ್ ಸೇರಿದರು. ಅದರೊಂದಿಗೆ ಮಾತಿನ ಶೈಲಿ, ಭಾಷೆಯ ಬಳಕೆ ಬದಲಿಸಿಕೊಂಡರು. ಶೋಷಿತರು, ದಲಿತರು ಕೂಡ ತನ್ನ ರಾಜಕೀಯದ ಭಾಗ ಆಗುವಂತೆ ನೋಡಿಕೊಂಡರು. ರಾಜಕೀಯ ದಾಳ ಉರುಳಿಸುವ ಪಾಠವನ್ನು ಜಿಲ್ಲೆಯ ಹಿರಿಯ ರಾಜಕಾರಣಿಗಳಿಂದ ಕಲಿತ ಖಮರುಲ್ ಅವರಿಗೆ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ ರೂಪುಗೊಂಡ ಗುಲ್ಬರ್ಗ ಉತ್ತರ ಕ್ಷೇತ್ರವು ವರವಾಗಿ ಪರಿಣಮಿಸಿತು. ಆ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಅಲ್ಪಸಂಖ್ಯಾತ ಸಮುದಾಯದ ಜನರ ಸಂಪೂರ್ಣ ಬಲ-ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸಂಸತ್ತಿನ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದ ನಾಸಿರ್ ಹುಸೈನ್ 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದಾಗ ಅವರು ತೀವ್ರ ಪೈಪೋಟಿ ಎದುರಿಸಬೇಕಾಯಿತು. ನಾಸಿರ್ ಕಾಂಗ್ರೆಸ್ ಪಕ್ಷದೊಳಕ್ಕೆ ಸೇರಿದರೆ ತನ್ನ ರಾಜಕೀಯ ಭವಿಷ್ಯಕ್ಕೆ ಸಂಚಕಾರ ಬರುತ್ತದೆ ಎಂದು ಭಾವಿಸಿದ ಖಮರುಲ್ ಅದು ನಡೆಯದಂತೆ ಒತ್ತಡ ಹೇರುವಲ್ಲಿ ಸಫಲರಾಗಿದ್ದರು. ನಾಸೀರ್ ಅವರ ಸಮೂಹವನ್ನು ಗಮನದಲ್ಲಿಟ್ಟುಕೊಂಡೇ ಖಮರುಲ್ ಅವರ ಸಚಿವ ಸ್ಥಾನ ಕೈ ತಪ್ಪುವಂತೆ ಕಾಂಗ್ರೆಸ್ ನಾಯಕರು ಮಾಡಿದ್ದೀಗ ಗುಟ್ಟಾಗಿ ಉಳಿದಿಲ್ಲ.
ತನ್ನ ಸಮುದಾಯದ ಹಿತ ಕಾಪಾಡುವ ಭರವಸೆ, ಅಬ್ಬರದ ಮಾತುಗಳನ್ನಾಡುತ್ತಲೇ ರಾಜಕಾರಣ ಪ್ರವೇಶಿಸಿದ ಖಮರುಲ್ ನಂತರದ ದಿನಗಳಲ್ಲಿ ಬೆಳೆಯುತ್ತ ತನ್ನನ್ನು ತಾನೇ ಸೆಕ್ಯುಲರ್ ನಾಯಕನಾಗಿ ರೂಪಿಸಿಕೊಳ್ಳಲು ಸತತ ಪ್ರಯತ್ನ ಮಾಡಿದರು. ಹಳೆಯ ಆವರಣದಿಂದ ಕಳಚಿಕೊಂಡು ಹೊಸ ರೂಪು ತಳೆಯಲು ಅವರು ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗುವಂತಹದು.
ಕೃಪೆ: ensuddi.com