ಹೊನ್ನಾವರ ರೀತಿಯಲ್ಲಿ ಶಿವಮೊಗ್ಗದಲ್ಲಿ ಅಶಾಂತಿ ಸೃಷ್ಟಿಗೆ ಹುನ್ನಾರ?
ಗಲಭೆ ಉಂಟು ಮಾಡಿ ಮತ ಧ್ರುವೀಕರಣಕ್ಕೆ ಮತೀಯ ಸಂಘಟನೆಗಳ ವ್ಯವಸ್ಥಿತ ಸಂಚು?
ಫೈಲ್ ಚಿತ್ರ
ಎಚ್ಚರ ತಪ್ಪದಿರಲಿ ಪೊಲೀಸ್ ಇಲಾಖೆ
ಶಿವಮೊಗ್ಗ, ಡಿ. 18: ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು, ಸ್ವಾರ್ಥ ರಾಜಕೀಯ ಹಿತಾಸಕ್ತಿಗಾಗಿ, ಕೆಲ ಮತೀಯವಾದಿ ಸಂಘಟನೆಗಳು ನಗರದಲ್ಲಿ ಕೋಮು ಗಲಭೆ ಸೃಷ್ಟಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಸಣ್ಣಪುಟ್ಟ ಘಟನೆಗಳಿಗೆ, ವೈಯಕ್ತಿಕ ಕಾರಣದ ಗಲಾಟೆಗಳಿಗೂ ‘ಕೋಮು ಬಣ್ಣ’ ಹಚ್ಚುವ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿ ನಗರದಲ್ಲಿ ನೆಲೆಸಿರುವ ಸೌಹಾರ್ದ ವಾತಾವರಣಕ್ಕೆ ಬೆಂಕಿ ಹಚ್ಚುವ ಕೆಲಸದಲ್ಲಿ ಕೆಲ ರಾಜಕೀ ಯ ನಾಯಕರು ತೊಡಗಿದ್ದಾರೆ. ತಮ್ಮ ಈ ಸಂಚಿಗೆ ಯುವ ಸಮುದಾಯವನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಕಳೆದ ಕೆಲ ದಿನಗಳ ಹಿಂದೆ ನಗರದ ಕಾಲೇಜ್ವೊಂದರಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಹಾಗೂ ತದನಂತರ ಉದ್ಯಾನವನದಲ್ಲಿ ವಿದ್ಯಾರ್ಥಿಯೋರ್ವನಿಗೆ ಚೂರಿ ಇರಿತದ ಪ್ರಕರಣವನ್ನೇ ಕೆಲ ಸಂಘಟನೆಗಳು ವೈಭವೀಕರಣಗೊಳಿಸುತ್ತಿವೆ. ರಾಜಕಾರಣಗಳು ಮನಸೋ ಇಚ್ಚೆ, ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಕಾಲೇಜ್ ಕ್ಯಾಂಪಸ್, ಪೊಲೀಸ್ ಠಾಣೆ ಹಂತದಲ್ಲಿ ಇತ್ಯರ್ಥವಾಗಬೇಕಾಗಿದ್ದ ಈ ಸೂಕ್ಷ್ಮ ಪ್ರಕರಣವನ್ನು ಅಕ್ಷರಶಃ ಹಾದಿ ಬೀದಿ ರಂಪವಾಗಿ ಮಾರ್ಪಡಿಸಲಾಗುತ್ತಿದೆ. ಈ ಪ್ರಕರಣವನ್ನೇ ಮುಂದಿಟ್ಟುಕೊಂಡು ಶಾಂತಿ ಕದಡುವ ಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳೂ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಮೊದಲಿನಿಂದಲೂ ಸಂಚು: ‘ಕಳೆದ ಕೆಲ ವರ್ಷಗಳಿಂದ ನಗರದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಹಲವು ಘಟನೆಗಳು ನಡೆದುಕೊಂಡು ಬರುತ್ತಿವೆ. ಆದರೆ, ಪೊಲೀಸ್ ಇಲಾಖೆಯ ಸಕಾಲಿಕ ಕ್ರಮದಿಂದಾಗಿ ಮತೀಯವಾದಿಗಳ ಕುಕೃತ್ಯಕ್ಕೆ ಆಸ್ಪದ ಸಿಗದಂತಾಗಿದೆ. ಇದಕ್ಕೆ ಕಾರಣ ಹುಡುಕ ಹೊರಟರೇ ರಾಜಕೀಯ ಹಿತಾಸಕ್ತಿ ಇದರ ಹಿಂದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ’ ಎಂಬುವುದು ಪ್ರಗತಿಪರ ಮುಖಂಡರೊಬ್ಬರ ಅಭಿಪ್ರಾಯವಾಗಿದೆ.
ಅವಕಾಶ ನೀಡದಿರಲಿ: ನಗರದಲ್ಲಿ ಕೋಮು ಗಲಭೆ ಸೃಷ್ಟಿಸಲು ಕಾಣದ ಕೈಗಳು ಹುನ್ನಾರ ನಡೆಸುತ್ತಿವೆ. ಮತೀಯ ಗೂಂಡಾಗಳು ಸಕ್ರಿಯವಾಗಿದ್ದಾರೆ. ಇಂತಹ ಸೂಕ್ಷ್ಮಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿ ಅಂತವರ ಮೇಲೆ ಹದ್ದಿನ ಕಣ್ಣಿಡಬೇಕಾಗಿದೆ. ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವವರು ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
‘ಸಹಬಾಳ್ವೆಗೆ ಧಕ್ಕೆ ತರುವುದು ಬೇಡ’
ನಗರದಲ್ಲಿ ಶಾಂತಿಯ ವಾತಾವರಣ ನೆಲೆಸಿದೆ. ಎಲ್ಲ ವರ್ಗದವರು ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದೆವೆ. ಇದಕ್ಕೆ ಧಕ್ಕೆ ತರುವಂತಹ ಕುಕೃತ್ಯಗಳನ್ನು ಕೆಲವರು ಮಾಡುತ್ತಿದ್ದಾರೆ. ಇದಕ್ಕೆ ಆಸ್ಪದವಾಗದಂತೆ ನಾಗರೀಕರು ಎಚ್ಚರವಹಿಸಬೇಕಾಗಿದೆ. ರಾಜಕಾರಣಿಗಳು ಕೂಡ ಸ್ವಾರ್ಥ ಹಿತಾಸಕ್ತಿಗಾಗಿ ಸಹಬಾಳ್ವೆಗೆ ಭಂಗ ಉಂಟು ಮಾಡಬಾರದು’ ಎಂದು ಪತ್ರಕರ್ತ ಮುಹಮ್ಮದ್ ಲಿಯಾಕತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.