ವಾಟರ್ ಮಾಫಿಯಾ!
ಮಾನ್ಯರೇ,
ಮಾರ್ಚ್ ತಿಂಗಳು ಆಗಮಿಸಿದೆ. ಅದರ ಜೊತೆಗೆ ಬಿಸಿಲ ಧಗೆ ಕೂಡಾ ಹೆಚ್ಚಾಗತೊಡಗಿದೆ. ನೆತ್ತಿ ಮೇಲೆ ಬಿಸಿಲು ಸುಡುತ್ತಿದೆ. ಮಹಾನಗರಿ ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ. ಜೊತೆಗೆ ನೀರಿನ ಸಮಸ್ಯೆ ಕೂಡಾ ಹೆಚ್ಚುತ್ತಿದೆ.
ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತಿದ್ದಂತೆ ‘ನೀರಿನ ಉದ್ಯಮ’ವೂ ಸಹ ಬಿರುಸಾಗಿದೆ. ಟ್ಯಾಂಕರ್, ಬಾಟಲಿಗಳಲ್ಲಿ ನೀರು ತುಂಬಿಸಿ ಮಾರಾಟ ಮಾಡುವವರು ಹೆಚ್ಚಾಗುತ್ತಿದ್ದಾರೆ. ನಗರಗಳಲ್ಲಿ ಬೋರ್ವೆಲ್ ಸೌಲಭ್ಯ ಇಲ್ಲದವರು ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾಗಿದೆ. ಬೇಸಿಗೆ ಸಮಯದಲ್ಲಿ ನೀರಿಗಾಗಿ ದುಬಾರಿ ದುಡ್ಡು ಕೊಡಬೇಕಾಗಿದೆ. ನಿಗದಿಗಿಂತ ಹೆಚ್ಚು ದರ ವಸೂಲಿಯಲ್ಲದೆ, ಅನುಮತಿ ಇಲ್ಲದೇ ನೀರು ಮಾರಾಟ ಹಾಗೂ ಅಶುದ್ಧ ನೀರನ್ನು ಮಾರಾಟ ಮಾಡುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಆದ್ದರಿಂದ ಬೇಸಿಗೆಯಲ್ಲಿ ಸಕ್ರಿಯವಾಗುವ ಇಂತಹ ವಾಟರ್ ಮಾಫಿಯಾಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು, ನಗರಗಳಿಗೆ ನೀರಿನ ಪೂರೈಕೆಗಾಗಿ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.