‘ಇಂದಿರಾ ಕ್ಯಾಂಟೀನ್’ ರಾಜ್ಯದೆಲ್ಲೆಡೆ ಆರಂಭವಾಗಲಿ
ಮಾನ್ಯರೇ,
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಸಿವು ಮುಕ್ತ ರಾಜ್ಯಕ್ಕಾಗಿ ‘ಇಂದಿರಾ ಕ್ಯಾಂಟೀನ್’ ಸ್ಥಾಪಿಸುವುದರ ಮೂಲಕ ಕಡಿಮೆ ದರದಲ್ಲಿ ಜನರಿಗೆ ಆಹಾರ ನೀಡುವಂತಹ ಯೋಜನೆಯನ್ನು ಜಾರಿಗೆ ತಂದಿರುವುದು ಶ್ಲಾಘನೀಯ. ಆದರೆ ಈ ಯೋಜನೆ ಆರಂಭವಾಗಿ ಕೆಲವು ತಿಂಗಳು ಕಳೆದರೂ ರಾಜ್ಯದ ಕೆಲವೆಡೆ ಇನ್ನೂ ಇಂದಿರಾ ಕ್ಯಾಂಟೀನ್ ಆರಂಭವಾಗಿಲ್ಲ. ಲಭ್ಯವಿರುವ ಸರಕಾರಿ ಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಬೇಕು ಹಾಗೂ ಜಾಗವಿಲ್ಲದಿದ್ದರೆ ಸಂಚಾರಿ ಕ್ಯಾಂಟೀನ್ ಆದರೂ ಸ್ಥಾಪನೆ ಮಾಡಬೇಕು ಎಂಬ ಸೂಚನೆಯಿದೆ. ಇದಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಚಾಲನೆ ನೀಡಬೇಕಾಗಿದೆ. ಆದರೆ ರಾಜ್ಯದ ಕೆಲವೆಡೆ ಇಂತಹ ಯಾವುದೇ ಕ್ರಮಗಳು ಜರುಗುತ್ತಿಲ್ಲ. ಪರಿಣಾಮವಾಗಿ ಬಡವರು, ಕೂಲಿ ಕಾರ್ಮಿಕರು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಹೊರ ಉಳಿಯುವಂತಾಗಿದೆ.
ಸಂಬಂಧಿತರು ಕೂಡಲೇ ರಾಜ್ಯದೆಲ್ಲೆಡೆ ‘ಇಂದಿರಾ ಕ್ಯಾಂಟೀನ್’ ಆರಂಭಿಸಲು ಕ್ರಮ ಕೈಗೊಂಡು, ರಾಜ್ಯದ ಬಡ ಜನರಿಗೆ ಕಡಿಮೆದರದಲ್ಲಿ ಶುಚಿಯಾಗಿ ಆಹಾರ ಲಭಿಸುವಂತೆ ಮಾಡಬೇಕು. ಈ ನೂತನ ಯೋಜನೆಯಿಂದ ಬಡ ಜನತೆಯ ಹಸಿವನ್ನು ನಿವಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಈ ಯೋಜನೆ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಸಂಬಂಧಿತರು ಕ್ರಮ ಕೈಗೊಳ್ಳಿ.