ಶುದ್ಧ ನೀರಿನ ಘಟಕಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲಿ
ಮಾನ್ಯರೇ,
ರಾಜ್ಯ ಸರಕಾರವು ರಾಜ್ಯಾದ್ಯಂತ ಎಲ್ಲರಿಗೂ ಶುದ್ಧ್ದ ಕುಡಿಯುವ ನೀರು ಪೂರೈಸುವ ಗುರಿಯೊಂದಿಗೆ ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 11 ಸಾವಿರ ಶುದ್ಧ್ದ ನೀರಿನ ಘಟಕಗಳನ್ನು ಸ್ಥಾಪಿಸಿರುವುದು ಉತ್ತಮವಾದ ಯೋಜನೆಯಾಗಿದೆ. ಆದರೆ ಅನುಷ್ಠಾನ ಲೋಪ ಹಾಗೂ ಆಡಳಿತಾಧಿಕಾರಿಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಈ ವ್ಯವಸ್ಥೆಯು ಗುರಿ ಮುಟ್ಟದೆ ಇರುವುದು ವಿಷಾದನೀಯ ಸಂಗತಿಯಾಗಿದೆ. ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಕುಡಿಯುವ ನೀರಿನ ಘಟಕಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೂ ಜಲ ಘಟಕಗಳಲ್ಲಿ ಸುಮಾರು ಅರ್ಧದಷ್ಟು ನೀರು ನಿರ್ವಹಣೆಯ ಕೊರತೆಯಿಂದಾಗಿ ನಿಂತುಹೋಗಿವೆ. ಪರಿಣಾಮವಾಗಿ ರಾಜ್ಯದೆಲ್ಲೆಡೆ ನೀರಿನ ಹಾಹಾಕಾರವು ಹೆಚ್ಚಾಗುತ್ತಿದೆ. ರಾಜಧಾನಿ ಸೇರಿದಂತೆ ರಾಜ್ಯದ ಬಹುತೇಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಶುದ್ಧ್ದ ನೀರಿನ ಘಟಕಗಳಿವೆ. ಈ ಘಟಕಗಳು ಸಮರ್ಪಕವಾಗಿಲ್ಲದ ಕಾರಣ ಸಾರ್ವಜನಿಕರು ಇತರೆಡೆಗಳಿಂದ ನೀರು ತರಲು ಪ್ರಯತ್ನಿಸುತ್ತಿದ್ದಾರೆ. ಪರಿಣಾಮವಾಗಿ ಅವರು ಬಳಸುವಂತಹ ಆ ನೀರು ಕಲುಷಿತವಾಗಿದ್ದು, ಅದರ ಗುಣಮಟ್ಟ ಸರಿಯಿಲ್ಲದಿದ್ದರೂ ಅನಿವಾರ್ಯವಾಗಿ ಬಳಸುವಂತಹ ಪರಿಸ್ಥಿತಿ ಏರ್ಪಟ್ಟಿದೆ. ಇದರ ದುಷ್ಪರಿಣಾಮವಾಗಿ ಅನೇಕ ಕಾಯಿಲೆಗಳಿಗೆ ದಾರಿಯಾಗುತ್ತಿವೆ. ಅಷ್ಟೇ ಅಲ್ಲದೆ ರಾಜ್ಯಾದಾದ್ಯಂತ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕಾಲರಾಕ್ಕೆ ಕೆಲವರು ಬಲಿಯಾಗಿದ್ದಾರೆ ಹಾಗೂ ಫೆಬ್ರವರಿ ತಿಂಗಳಿನಲ್ಲಿ 6,931 ಟೈಫಾಯ್ಡಾ ಪ್ರಕರಣಗಳು ಬಯಲಿಗೆ ಬಂದಿವೆ. ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿಯೇ ಹೆಚ್ಚಿನ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಬೇಸಿಗೆಯ ಸಂದರ್ಭದಲ್ಲಿಯೇ ಹೆಚ್ಚಿನ ಜಾತ್ರೆ, ಉತ್ಸವ, ಮದುವೆ ಇತ್ಯಾದಿ ಸಮಾರಂಭಗಳು ನಡೆಯುತ್ತವೆ. ಹಾಗಾಗಿ ಜನ ಸಂದಣಿ ಇರುವ ಕಡೆ ಕಲುಷಿತ ನೀರಿನ ಬಳಕೆ ಹಾಗೂ ಅದರ ಸೇವನೆ ಸಾಮಾನ್ಯ ಎನ್ನುವಂತಿದೆ. ಇನ್ನೊಂದೆಡೆ ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಶುದ್ಧ್ದ ನೀರಿನ ಘಟಕಗಳಲ್ಲಿ ಕೇಂದ್ರಗಳು ಇದ್ದೂ ಇಲ್ಲದಂತಹ ಪರಿಸ್ಥಿತಿ ಏರ್ಪಟ್ಟಿದೆ.
ಅಸಮರ್ಪಕ ನಿರ್ವಹಣೆ, ವಹಿಸಲಾದ ಏಜೆನ್ಸಿಗಳ ವೈಫಲ್ಯದಿಂದಾಗಿ ಉತ್ತಮ ಜನಪರ ಯೋಜನೆ ಯೊಂದು ಜನತೆಗೆ ಉಪಯೋಗವಾಗುತ್ತಿಲ್ಲ. ಆದ್ದರಿಂದ ಜನಪ್ರತಿನಿಧಿಗಳು ಸದ್ಯದಲ್ಲೇ ನಡೆಯಲ್ಲಿರುವ ವಿಧಾನಸಭೆ ಚುನಾವಣೆಯ ಕಡೆ ಗಮನ ನೀಡುತ್ತಿರುವುದರ ಜೊತೆಗೆ ಸಾರ್ವಜನಿಕರ ಕುಂದು ಕೊರತೆಗಳ ನಿವಾರಿಸುವ ಬಗ್ಗೆಯೂ ಗಮನ ನೀಡಬೇಕಾಗಿದೆ. ಮುಂದಿನ ಎರಡು ತಿಂಗಳುಗಳಲ್ಲಿ ಬಿಸಿಲಿನ ತಾಪಮಾನ ಬಹಳಷ್ಟು ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಪರಿಣಾಮವಾಗಿ ಆಡಳಿತ ನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ನಿವಾರಣೆಯ ಬಗ್ಗೆ ಗಮನಹರಿಸಲಿ ಹಾಗೂ ಶುದ್ಧ್ದ ನೀರಿನ ಘಟಕವು ಸರಿಯಾದಂತಹ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಕ್ರಮಕೈಗೊಂಡು ಸಾರ್ವಜನಿಕರಿಗೆ ಸರಿಯಾದಂತಹ ರೀತಿಯಲ್ಲಿ ಶುದ್ಧ್ದ ನೀರು ದೊರೆಯುವಂತೆ ಕಾರ್ಯಾಚರಿಸಲಿ.
-ರಾಮು ಎಲ್.ಪಿ., ಲಕ್ಕವಳ್ಳಿ