ಪುತ್ರನನ್ನು ಚುನಾವಣಾ ಅಖಾಡಕ್ಕಿಳಿಸಲು ಬಿಎಸ್ವೈ ಹಿಂದೇಟು!
ಲೋಕಸಭೆ ಚುನಾವಣಾ ಕಣಕ್ಕಿಳಿಸಲು ನಿರ್ಧಾರ?
ಶಿವಮೊಗ್ಗ, ಮಾ.26: ವಿಧಾನಸಭಾ ಚುನಾವಣಾ ಅಖಾಡಕ್ಕಿಳಿಯುವ ಹಾಲಿ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ರಾಘವೇಂದ್ರ ನಿರ್ಧಾರಕ್ಕೆ ಬಿ.ಎಸ್. ಯಡಿಯೂರಪ್ಪರಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣ ಬಹುತೇಕ ಬಿ.ವೈ. ರಾಘವೇಂದ್ರ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಅನುಮಾನವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ.ಎಸ್. ಯಡಿಯೂರಪ್ಪ, ನಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶಿಕಾರಿಪುರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿ.ವೈ. ರಾಘವೇಂದ್ರ ಆಯ್ಕೆಯಾಗಿದ್ದರು. ಈ ಬಾರಿ ಕೂಡ ವಿಧಾನಸಭೆ ಚುನಾವಣಾ ಕಣಕ್ಕಿಳಿಯಲು ಬಿ.ವೈ. ರಾಘವೇಂದ್ರ ನಿರ್ಧರಿಸಿದ್ದರು. ಈ ನಡುವೆ ಯಡಿಯೂರಪ್ಪ ಉತ್ತರ ಕರ್ನಾಟಕದ ಕ್ಷೇತ್ರವೊಂದರಿಂದ ಕಣಕ್ಕಿಳಿಯಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಇದರಿಂದ ಬಿವೈಆರ್ ಶಿಕಾರಿಪುರದಿಂದ ಮತ್ತೆ ಕಣಕ್ಕಿಳಿಯಲಿದ್ದಾರೆಂದು ಹೇಳಲಾಗಿತ್ತು. ಆದರೆ ಬಿಎಸ್ವೈ ಶಿಕಾರಿಪುರದಿಂದ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದರು. ಈ ಕಾರಣದಿಂದ ಬಿವೈಆರ್ ಸೂಕ್ತ ಕ್ಷೇತ್ರದ ಹುಡು ಕಾಟ ನಡೆಸಲಾರಂಭಿಸಿದ್ದರು.
ರಾಣೆಬೆನ್ನೂರು ಅಥವಾ ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದರು. ಈ ಕಾರಣದಿಂದಲೇ ಈ ಎರಡು ಕ್ಷೇತ್ರಗಳತ್ತ ಬಿವೈಆರ್ ಸಾಕಷ್ಟು ಗಮನಹರಿಸಿದ್ದರು. ಪುತ್ರನ ಸ್ಪರ್ಧೆಗೆ ಮೊದಲು ಸಹಮತಿ ವ್ಯಕ್ತಪಡಿಸಿದ್ದ ಬಿ.ಎಸ್ವೈ, ಬದಲಾದ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಕಣಕ್ಕಿಳಿಯದಂತೆ ಸೂಚನೆ ನೀಡಿದ್ದಾರೆ. ಬದಲಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆಯಬಹುದಾದ ಉಪಚುನಾವಣೆ ಹಾಗೂ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾ ವಣೆಗೆ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ತಂದೆಯ ಸೂಚನೆಯಂತೆ ಬಿವೈಆರ್ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿಯಲು ನಿರ್ರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇಲುಸ್ತುವಾರಿ: ಬಿಎಸ್ವೈರನ್ನು ಈಗಾಗಲೇ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಅವರು ಇಡೀ ರಾಜ್ಯಾದ್ಯಂತ ಸುತ್ತಾಡಬೇಕಾಗಿದೆ. ಇದರಿಂದ ಅವರು ಸ್ಪರ್ಧಿಸುತ್ತಿರುವ ಶಿಕಾರಿಪುರ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬಿವೈಆರ್ ಕೂಡ ಚುನಾವಣಾ ಕಣಕ್ಕಿಳಿದರೆ ಶಿಕಾರಿಪುರದಲ್ಲಿ ಪಕ್ಷದ ಸಂಘಟನೆ, ಚುನಾವಣಾ ಮೇಲ್ವಿಚಾರಣೆ ಮಾಡುವುದು ಸಾಕಷ್ಟು ದುಸ್ತರವಾಗಿ ಪರಿಣಮಿಸಲಿದೆ. ಇದು ಮತಗಳಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಹೆಚ್ಚುಕಮ್ಮಿಯಾದರೆ ಪ್ರತಿಪಕ್ಷಗಳೇ ಮೇಲುಗೈ ಸಾಧಿ ಸಬಹುದು. ಕ್ಷೇತ್ರದತ್ತಲೇ ಹೆಚ್ಚಿನ ಗಮನಹರಿಸಬೇಕಾದ ಸ್ಥಿತಿಯೂ ಉದ್ಭವವಾಗಬಹುದು ಎಂಬ ಆತಂಕ ಬಿಎಸ್ವೈ ಅವರದ್ದಾಗಿದೆ. ಈ ಎಲ್ಲ ಕಾರಣಗಳಿಂದ ಪುತ್ರನಿಗೆ ಶಿಕಾರಿಪುರ ಹಾಗೂ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಬಿಎಸ್ವೈ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಇತ್ತೀಚೆಗೆ ಬಿವೈಆರ್ ಶಿಕಾರಿಪುರ ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ನಡೆಸುತ್ತಿದ್ದಾರೆ. ಬಿಎಸ್ವೈ ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿಯೂ ಪಕ್ಷದ ಚುನಾವಣಾ ಬೆಳವಣಿಗೆ ಗಮನಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.
ಲೋಕಸಭೆಗೆ: ವಿಧಾನಸಭೆ ಚುನಾವಣೆಗೆ ಆಯ್ಕೆಯಾಗಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ನಂತರ ನಡೆಯಲಿರುವ ಉಪಚುನಾವಣೆಗೆ ಹಾಗೂ 2019ರಲ್ಲಿ ಲೋಕಸಭೆಗೆ ನಡೆಯಲಿರುವ ಚುನಾವಣೆಗೆ ಪುತ್ರನನ್ನು ಕಣಕ್ಕಿಳಿಸುವ ಚಿಂತನೆ ಬಿಎಸ್ವೈ ಅವರದ್ದಾಗಿದೆ. ಬಿವೈಆರ್ ಕೂಡ ಅಭ್ಯರ್ಥಿಯಾಗಲು ಸಮ್ಮತಿ ವ್ಯಕ್ತಪಡಿಸಿದ್ದಾರೆಂದು ಆಪ್ತ ಮೂಲಗಳು ತಿಳಿಸುತ್ತವೆ.
ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ?
ಶಿಕಾರಿಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹಲವರ ಹೆಸರು ಕೇಳಿಬರುತ್ತಿವೆ. ಈ ನಡುವೆ ಇತ್ತೀಚೆಗೆ ದಿಢೀರ್ಆಗಿ ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಹೆಸರು ಚರ್ಚೆಯ ಮುನ್ನೆಲೆಗೆ ಬಂದಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಜುನಾಥ ಭಂಡಾರಿಯನ್ನು ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಸುವ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ಭಂಡಾರಿ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಾಳಯದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. ಮತ್ತೊಂದೆಡೆ ಮಂಜುನಾಥ ಭಂಡಾರಿ ವಿಧಾನಸಭಾ ಚುನಾವಣಾ ಕಣಕ್ಕಿಳಿಯಲು ನಿರಾಸಕ್ತಿ ವ್ಯಕ್ತಪಡಿಸಿ, ಲೋಕಸಭೆ ಚುನಾವಣೆಯತ್ತ ಒಲವು ವ್ಯಕ್ತಪಡಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.