ಭಗತ್ಸಿಂಗ್ರನ್ನು ಗಲ್ಲು ಶಿಕ್ಷೆಯಿಂದ ಇವರೇಕೆ ಬಚಾವ್ ಮಾಡಲಿಲ್ಲ?
ಮಾನ್ಯರೇ,
ಸಂಘ ಪರಿವಾರ ಸಾಮಾಜಿಕ ಮೀಡಿಯಾದಲ್ಲಿ ವೀಡಿಯೊ ಪ್ರಸಾರ ಮಾಡುತ್ತಾ- ‘‘ಮಹಾತ್ಮಾ ಗಾಂಧೀಜಿ ಮತ್ತು ನೆಹರೂ 1931ರಲ್ಲಿ ಬ್ರಿಟಿಷ್ ಆಡಳಿತದ ಮೇಲೆ ಒತ್ತಡ ಹೇರಿದ್ದರೆ ಭಗತ್ಸಿಂಗ್, ಸುಖದೇವ್, ರಾಜಗುರು ಈ ಮೂವರನ್ನೂ ಮರಣ ದಂಡನೆಯಿಂದ ತಪ್ಪಿಸಬಹುದಿತ್ತು, ಆದರೆ ಭಗತ್ ಸಿಂಗ್ರಿಗೆ ಗಲ್ಲು ಆಗುವುದು ಗಾಂಧೀಜಿ ಮತ್ತು ನೆಹರೂ ಇಬ್ಬರಿಗೂ ಬೇಕಿತ್ತು, ಆದುದರಿಂದ ಅವರು ಬ್ರಿಟಿಷ್ ವೈಸರಾಯ್ಗೆ ಪತ್ರ ಬರೆಯಲೇ ಇಲ್ಲ’’ ಎಂದು ನೀಚ ವಿಕೃತ ಉದ್ದೇಶವುಳ್ಳ ಸುಳ್ಳು ಕಥೆ ಪ್ರಸಾರ ಮಾಡುತ್ತಿದ್ದಾರೆ. ಭಗತ್ಸಿಂಗ್ರಿಗೆ ಗಲ್ಲು ಶಿಕ್ಷೆ ಆಗಿದ್ದು 1931ರಲ್ಲಿ, ಆದರೆ ಆರೆಸ್ಸೆಸ್ ಸ್ಥಾಪನೆಯಾಗಿದ್ದು 1925 ರಲ್ಲಿ. ಹಾಗಾದರೆ ಭಗತ್ಸಿಂಗ್ರನ್ನು ಗಲ್ಲು ಶಿಕ್ಷೆಯಿಂದ ಬಚಾವ್ ಮಾಡಲು ಆರೆಸ್ಸೆಸ್ ನೇತಾರರು 1931ರಲ್ಲಿ ಯಾಕೆ ಸ್ವಲ್ಪವೂ ಪ್ರಯತ್ನಿಸಲಿಲ್ಲ? ಅಂದರೆ ಆಗ ಆರೆಸ್ಸೆಸ್ನವರಿಗೆ ಭಗತ್ಸಿಂಗ್ ಖುಲಾಸೆಯಾಗುವುದು ಹಾಗೂ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಸುವು ಸಿಗುವುದು ಬೇಕಿರಲಿಲ್ಲವೆಂದು ಸಾಬೀತಾಯಿತು ತಾನೇ.
ಗಾಂಧೀಜಿ ಮತ್ತು ನೆಹರೂರಲ್ಲಿ ಯಾವಾಗಲೂ ಏನಾದರೊಂದು ತಪ್ಪು ಹುಡುಕಿ ‘‘ಇವರಿಬ್ಬರೂ ಭಾರತದ ಚರಿತ್ರೆಯ ಅತಿ ದೊಡ್ಡ ವಿಲನ್ ಆಗಿದ್ದರು’’ ಎಂದು ಬಿಂಬಿಸುವುದರಲ್ಲಿಯೇ ಸಂಘ ಪರಿವಾರ ಮತ್ತವರ ಪಕ್ಷ ವಿಕೃತ ಸಂತೋಷ ಪಡೆಯುತ್ತಿದೆೆ. ಆದರೆ ಇವರು ಗಾಂಧೀಜಿ ಮತ್ತು ನೆಹರೂ ಜತೆಯೇ ಇದ್ದ ಸರ್ದಾರ್ ಪಟೇಲರನ್ನು ಮಾತ್ರ ತಪ್ಪಿಯೂ ವಿಲನ್ ಮಾಡುತ್ತಿಲ್ಲ. ಯಾಕೆಂದರೆ ಗುಜರಾತ್ನಲ್ಲಿ ಅವರ ನಾಯಕ ಗೆಲ್ಲಲು ಪಟೇಲ ಜಾತಿಯ ವೋಟು ಬೇಕೇಬೇಕು ತಾನೇ. ಹಾಗಾಗಿ ಯಾವಾಗಲೂ ಕೇವಲ ಗಾಂಧೀಜಿ ಮತ್ತು ನೆಹರೂ ಮಾತ್ರ ಆರೆಸ್ಸೆಸ್ದೃಷ್ಟಿಯಲ್ಲಿ ಖಳನಾಯಕರು. ಹಾಗಾಗಿಯೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ಸಿಂಗ್ರಂತಹವರ ಹುತಾತ್ಮ ದಿನಾಚರಣೆಯಲ್ಲಿಯೂ ಕೊಳಕು ರಾಜಕೀಯ ನುಸುಳಿದೆ. ಎಷ್ಟೊಂದು ವಿಷಕಾರಿಯಾಗಿ ಹೋಗಿದೆ ನಮ್ಮ ರಾಜಕೀಯ ನೇತಾರರ ಮನಸ್ಥಿತಿ ನೋಡಿ! ಮೊನ್ನೆ ಮೊನ್ನೆ ಕೊಲೆ ಆರೋಪಿ ಗುಜರಾತಿಯೊಬ್ಬರು ಗಾಂಧೀಜಿಗೆ ‘ಚತುರ ಬನಿಯಾ’ ಎಂದು ಹೀಯಾಳಿಸಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತ್ಯಾಗವೀರರ ಬಗೆಗೂ ಒಂದಿಷ್ಟೂ ಗೌರವ ಅಭಿಮಾನಗಳಿಲ್ಲದ ಇವರಿಗೆ ಕೇವಲ ಧಾರ್ಮಿಕ ದ್ವೇಷ ಹಬ್ಬಿಸಿ ಅಧಿಕಾರ ಪಡೆಯುವುದು ಮಾತ್ರ ಗೊತ್ತು.