ಶೈಕ್ಷಣಿಕ ಗುಣಮಟ್ಟ ಸುಧಾರಿಸಲಿ
ಮಾನ್ಯರೇ,
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳು ಮೊನ್ನೆ ಪ್ರಕಟಗೊಂಡಿದ್ದು, ನಿರೀಕ್ಷೆಯಂತೆ ಕರಾವಳಿ ಭಾಗದ ಜಿಲ್ಲೆಗಳು ಫಲಿತಾಂಶಗಳಲ್ಲಿ ಪ್ರತಿ ವರ್ಷ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿವೆ. ಇದು ಶ್ಲಾಘನೀಯ.
ಆದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ವಿದ್ಯಾರ್ಥಿಗಳ ಸಾಧನೆ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಜಿಲ್ಲೆಗಳು ಪ್ರತೀ ವರ್ಷ ಕೆಳಗಿನ ಸ್ಥಾನಗಳಲ್ಲಿಯೇ ಇವೆ. ಇದಕ್ಕೆ ಪ್ರಮುಖ ಕಾರಣ ಬಡತನ, ಪಾಲಕರು ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸುವಲ್ಲಿ ತೋರುತ್ತಿರುವ ನಿರುತ್ಸಾಹ, ಹಾಜರಾತಿ ಮತ್ತು ಶಿಸ್ತಿನ ಕೊರತೆ. ಅಲ್ಲದೆ ಗ್ರಂಥಾಲಯ, ಬೋಧಕರ ಕೊರತೆ, ಶಾಲಾ ಕೊಠಡಿ ಒಳಗೊಂಡಂತೆ ಅನೇಕ ಮೂಲಭೂತ ಸೌಕರ್ಯಗಳ ಜ್ವಲಂತ ಸಮಸ್ಯೆಗಳು ಇಲ್ಲಿ ಸಾಮಾನ್ಯವಾಗಿವೆ. ಹೀಗಾಗಿ ಈ ಭಾಗಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಆದ್ದರಿಂದ ಸರಕಾರ, ಶಿಕ್ಷಣ ಇಲಾಖೆ ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಉತ್ತರ ಕರ್ನಾಟಕ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಪ್ರಯತ್ನಿಸಲಿ.