ಕೈರಾನಾ ಫಲಿತಾಂಶ ಎಚ್ಚರಿಕೆಯ ಗಂಟೆ
ಮಾನ್ಯರೇ,
ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದ ಕೈರಾನಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಎದುರಾಳಿಯಾಗಿ ರಾಷ್ಟ್ರೀಯ ಲೋಕದಳ್ (ಆರ್ಎಲ್ಡಿ) ಅಭ್ಯರ್ಥಿ ತಬಸ್ಸುಮ್ ಹಸನ್ ಭರ್ಜರಿ ಜಯ ಸಾಧಿಸಿರುವುದು ಇದು ಬಿಜೆಪಿ ಪಾಲಿಗೆ ಮುಂದಿನ ಲೋಕ ಸಭಾ ಚುನಾವಣೆಯ ಪೂರ್ವದ ಎಚ್ಚರಿಕೆ ಕರೆಗಂಟೆಯಾಗಿದ್ದು, ಜನರು ಇವರ ದುರಾಡಳಿತದಿಂದ ಬೇಸತ್ತು ಬದಲಾವಣೆಯ ಹಾದಿಯಲ್ಲಿದ್ದಾರೆಂದು ತೋರ್ಪಡಿಸುತ್ತಿದ್ದಾರೆ. ಒಂದೆಡೆ ಜನರು ಬಡತನ, ನಿರುದ್ಯೋಗಗಳಂತಹ ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ ಮಗದೊಂದಡೆ ಮೋದಿ ಸರಕಾರ ಕಾರ್ಪೊರೇಟ್ ಕುಳಗಳ ಹಿತ ಕಾಯುವಲ್ಲಿ ಮಗ್ನವಾಗಿದೆ. ಕೇವಲ ಮಾತಿನಿಂದ ಜನರ ಹೊಟ್ಟೆಯನ್ನು ತುಂಬಿಸಲು ಸಾಧ್ಯವಿಲ್ಲ, ಅವರ ನೋವಿಗೆ ಸ್ಪಂದಿಸುವ ಬದಲು ಗಾಯದ ಮೇಲೆ ಬರೆ ಎನ್ನುವಂತೆ ಆರ್ಥಿಕ ಕ್ಷೇತ್ರವನ್ನು ದಿವಾಳಿತನಕ್ಕೆ ದೂಡಲಾಗಿದೆ.
ಯಾರ ಕೈಯಲ್ಲಿ ಅಧಿಕಾರವನ್ನು ಕೊಡಬಾರದಿತ್ತೋ, ಅಂತಹವರ ಕೈಯಲ್ಲಿ ದೇಶ ನಡೆಸಲು ಅವಕಾಶವನ್ನು ನೀಡಿ ಇಂದು ದೇಶದ ಜನರು ಪಶ್ಚಾತ್ತಾಪವನ್ನು ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಈ ನಡುವೆ ಕೇಂದ್ರ ಸರಕಾರವು ವಿವಿಧ ಮಾಧ್ಯಮಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅವುಗಳ ಮೂಲಕ ಜನರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದೆ. ಗ್ಯಾಸ್ ಸಿಲಿಂಡರ್ ದರ, ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ದೇಶದ ಹಿತಕ್ಕಾಗಿಯೇ ಎಂದು ಕೆಲವು ಚಾನೆಲ್ಗಳು ದಿನವಿಡೀ ಬೊಬ್ಬೆ ಹಾಕುತ್ತಿವೆ. ಇನ್ನು ಜಾಹೀರಾತಿನ ಮೂಲಕ ಜನರ ಗಮನವನ್ನು ತಮ್ಮೆಡೆಗೆ ಸೆಳೆಯಲು ಎಲ್ಲಿಲ್ಲದ ಕಸರತ್ತು ಮೋದಿ ಸರಕಾರ ಮಾಡುತ್ತಿದೆ. ಜನರು ಎಲ್ಲವನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾ, ಮುಂದಿನ ವರ್ಷದ ಲೋಕಸಭಾ ಚುನಾವಣೆಯನ್ನು ಕಾಯುತ್ತಿದ್ದು, ಸರಕಾರ ನಡೆಸುವ ಪಕ್ಷಕ್ಕೆ ಧೈರ್ಯವಿದ್ದರೆ ಇವಿಎಂ ಯಂತ್ರ ಪಕ್ಕಕ್ಕಿಟ್ಟು ಬ್ಯಾಲೆಟ್ ಪೇಪರ್ ಮುಖಾಂತರ ಚುನಾವಣೆಯನ್ನು ಎದುರಿಸಲಿ. ಮುಂದಿನ ದಿನಗಳಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.