ಮಗಳು ಕಲಿಯುವ ಕೇರಳದ ಸರಕಾರಿ ಶಾಲೆಗೆ ನಗರಾಭಿವೃದ್ಧಿ ಸಚಿವರ ಭೇಟಿ
ಮಂಜೇರಿ ಶಾಲೆಯಲ್ಲಿ ಕರ್ನಾಟಕ ಸಚಿವ ಯು.ಟಿ. ಖಾದರ್
ಮಂಜೇರಿ, ಜೂ. 29: ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿ ಸರಕಾರಿ ಪ್ರೌಢಶಾಲೆಗೆ ಸಚಿವ ಯು.ಟಿ. ಖಾದರ್ ಶುಕ್ರವಾರ ಭೇಟಿ ನೀಡಿದರು.
ಸಚಿವರ ಪುತ್ರಿ ಹವ್ವಾ ನಸೀಮಾ ಈ ಶಾಲೆಯಲ್ಲಿ 9ನೆ ತರಗತಿಯ ವಿದ್ಯಾರ್ಥಿನಿ.
ಹವ್ವಾ ನಸೀಮಾ ಕರ್ನಾಟಕ ನಗರಾಭಿವೃದ್ಧಿ ಮತ್ತು ವಸತಿ ಸಚಿವರ ಪುತ್ರಿ ಎಂದು ತಿಳಿದ ವಿದ್ಯಾರ್ಥಿನಿಯರು ಆಶ್ಚರ್ಯಪಟ್ಟರು. ಈ ತನಕ ಹವ್ವಾ ಕೂಡಾ ತಾನು ಸಚಿವರ ಮಗಳೆಂದು ತೋರ್ಪಡಿಸಿರಲಿಲ್ಲ. ಸರಕಾರಿ ಶಾಲೆಯ ಬಡಮಕ್ಕಳ ಜೊತೆ ಬೆರೆತು ಕಲಿಯುತ್ತಾ, ನಲಿಯುತ್ತಾ ಖುಷಿ ಪಡುತ್ತಿದ್ದಳು.
ಸಚಿವರು ಮಗಳನ್ನು ಕಾಣಲು ಶಾಲೆಗೆ ಬರುತ್ತಾರೆಂಬ ವಿಷಯ ತಿಳಿದ ಕೂಡಲೇ ಅಲ್ಲಿನ ಶಿಕ್ಷಕರು ಸ್ವಾಗತಿಸಲು ಸರ್ವ ಸಿದ್ಧತೆಯಲ್ಲಿ ತೊಡಗಿದರು. ಸಚಿವರಿಗೆ ಸಕಲ ಗೌರವದೊಂದಿಗೆ ಸ್ವಾಗತಿಸಿ, ಸಣ್ಣ ಸಭಾ ಕಾರ್ಯಕ್ರಮ ಏರ್ಪಡಿಸಲಾಯಿತು. ತಂದೆ ಬಂದ ಖುಷಿಗೆ ಮಗಳು ಶಾಲೆಯ ಎಲ್ಲಾ ಮಕ್ಕಳಿಗೆ ಚಾಕೋಲೇಟ್ ಹಂಚಿ ಸಂಭ್ರಮಿಸಿದರು. ಶಾಲಾ ಮಕ್ಕಳು ಸಚಿವರ ಕೈ ಕುಳುಕಲು ಮುಗಿಬಿದ್ದರು.
ಹವ್ವಾ ವಿದ್ಯಾರ್ಥಿ ಕಂ ಶಿಕ್ಷಕಿ
ಯು.ಟಿ.ಖಾದರ್ ಅವರ ಏಕೈಕ ಪುತ್ರಿ ಹವ್ವಾ ನಸೀಮಾ ಹಾಫಿಳತ್ (ಸಂಪೂರ್ಣ ಕುರ್ಆನ್ ಕಂಠಪಾಠ) ಕೋರ್ಸ್ ಮಾಡಿದ ಬಳಿಕ ಹೆಚ್ಚಿನ ಧಾರ್ಮಿಕ ವಿಧ್ಯಾಭ್ಯಾಸಕ್ಕಾಗಿ ಕಡಲುಂಡಿ ಖಲೀಲ್ ತಂಙಳ್ ಅವರ ಮಲಪ್ಪುರಂ ಮಂಜೇರಿಯ ಮಅದಿನ್ ಕ್ಯೂಲ್ಯಾಂಡ್ ಸಂಸ್ಥೆಯಲ್ಲಿ ದೌರಾತ್ ಹಾಗೂ ಆಲಿಮಾ ಪದವಿ ತರಗತಿ ಪಡೆಯುತ್ತಿದ್ದಾಳೆ. ಹವ್ವಾ ಅಲ್ಲೇ ಹಾಸ್ಟೆಲ್ ನಲ್ಲಿ ತಂಗುವುದಲ್ಲದೇ ತನ್ನ ಕಿರಿಯ ವಿದ್ಯಾರ್ಥಿಗಳಿಗೆ ಧಾರ್ಮಿಕ ಸಹ ಶಿಕ್ಷಕಿಯಾಗಿ ದಅವಾ ತರಗತಿ ನಡೆಸುತ್ತಿದ್ದಾಳೆ. ತರಬೇತಿ ಪಡೆಯುವುದು ಮತ್ತು ತರಗತಿ ನಡೆಸುವ ಮಧ್ಯೆಯೂ ಲೌಕಿಕ ವಿದ್ಯೆಗೆ ಪ್ರಾಶಸ್ತ್ಯ ಕೊಟ್ಟು ಮಂಜೇರಿ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದಾಳೆ.
ಸಚಿವರು ಅಂದ ಮೇಲೆ ಅವರ ಮಕ್ಕಳು ಉನ್ನತ ವಿದ್ಯಾಸಂಸ್ಥೆಗಳಲ್ಲಿ ಅಥವಾ ವಿದೇಶದಲ್ಲಿ ಕಲಿಯುವುದು ಸರ್ವೇ ಸಾಮಾನ್ಯ. ಆದರೆ ಯು.ಟಿ.ಖಾದರ್ ಅವರ ಏಕೈಕ ಮಗಳು ಇವಕ್ಕೆಲ್ಲಾ ತದ್ವಿರುದ್ಧ. ಆಡಂಬರದ ಜೀವನ ಶೈಲಿಗೆ ಮಣಿಯದೆ ಸರಳ ಬದುಕಿನತ್ತ ದೃಷ್ಟಿ ಹಾಯಿಸಿದ್ದಾರೆ. ಬಡ ಅಶಕ್ತ ಮಕ್ಕಳ ಜೊತೆ ಬೆರೆಯುತ್ತಾ ಅವರ ನೋವು ನಲಿವನ್ನು ಹತ್ತಿರದಿಂದ ಅರ್ಥೈಸಿಕೊಂಡಿದ್ದಾಳೆ. ಆಡಂಬರದ ಉಡುಗೆ ತೊಡುಗೆ, ಚಿನ್ನಾಭರಣಗಳ ವ್ಯಾಮೋಹವಿಲ್ಲದ ಹವ್ವಾ ನಸೀಮಾ ತಂದೆಯಂತೆ ಸಿಂಪ್ಲಿಸಿಟಿ ಲೈಫ್ ಗೆ ಒಗ್ಗಿಕೊಂಡಿದ್ದಾರೆ.
ಶುಕ್ರವಾರ ಮಂಜೇರಿಯ ಪ್ರೌಢಶಾಲೆಗೆ ತೆರಳುವ ಮುನ್ನ ಸಚಿವ ಯು.ಟಿ.ಖಾದರ್ ಅವರು ಖಲೀಲ್ ತಂಙಳ್ ಅವರ ಕ್ಯೂಲ್ಯಾಂಡ್ ವಿದ್ಯಾಸಂಸ್ಥೆಗೆ ಭೇಟಿ ನೀಡಿದರು. ಬಳಿಕ ಶೈಖ್ ಅಲಿ ಹುಸೈನ್ ಸಅದಾ ಮಸ್ಜಿದ್ ನಲ್ಲಿ ಜುಮಾ ನೆರವೇರಿಸಿದರು.