ಇದು ಪತ್ರಿಕಾ ಧರ್ಮವೇ?
ಮಾನ್ಯರೇ,
ನಿಜವಾಗಿ ಇದು ಅನ್ಯ ಭಾಷಾ ಚಾನಲ್ಗಳಿಗೆ ಕೂಡಾ ಅನ್ವಯಿಸುತ್ತದಾದರೂ ಪ್ರಸಕ್ತ ಪತ್ರವನ್ನು ಕನ್ನಡದ ಚಾನಲ್ಗಳಿಗಷ್ಟೆ ಸೀಮಿತಗೊಳಿಸಲಾಗಿದೆ. ತಪ್ಪುಯಾರೇ ಮಾಡಿದರೂ ಅದು ತಪ್ಪೇ. ಇದನ್ನು ಹೇಳುವ ದಿಟ್ಟತನ ಮಾಧ್ಯಮಗಳಿಗೆ ಇರಲೇಬೇಕು ಮತ್ತು ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ಪ್ರಸಾರ ಮಾಡಬೇಕು. ಇದು ಅವುಗಳ ಹೊಣೆಗಾರಿಕೆ ಹಾಗೂ ಕರ್ತವ್ಯ ಕೂಡಾ. ಆದರೆ ದುರದೃಷ್ಟವಶಾತ್ ವಾಸ್ತವ ಹಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಕನ್ನಡದ ಬಹುತೇಕ ಚಾನಲ್ಗಳು ಪತ್ರಿಕಾಧರ್ಮಕ್ಕೆ ತಿಲಾಂಜಲಿ ನೀಡಿ ನಿಷ್ಪಕ್ಷಪಾತೀಯವಲ್ಲದ ಮತ್ತು ಸತ್ಯಕ್ಕೆ ದೂರವಾದ ಸುದ್ದಿಗಳ ಪ್ರಸಾರಕ್ಕೆ ಮತ್ತು ನಿರ್ದಿಷ್ಟ ರಾಜಕೀಯ ಪಕ್ಷಗಳ ಮುಖವಾಣಿಯಾಗುವುದಕ್ಕೆ ಮತ್ತು ಏಕವ್ಯಕ್ತಿ ಪೂಜೆಗೆ ಹೆಚ್ಚು ಮಹತ್ವ ನೀಡಿರುವಂತೆ ತೋರುತ್ತದೆ. ರೂ. 2,000 ನೋಟಿನಲ್ಲಿ ಚಿಪ್, ತೀರ ಇತ್ತೀಚಿನ ಕನ್ನಡ ಶಾಲೆಯಲ್ಲಿ ಕುರ್ಆನ್ ಬೋಧನೆ ಮುಂತಾದ ಎಣೆಯಿಲ್ಲದ ನಿದರ್ಶನಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತಾಗಬಹುದು! ಸದ್ಯ ಇತ್ತೀಚಿನ ಒಂದೆರಡು ಉದಾಹರಣೆಗಳನ್ನಷ್ಟೆ ನೋಡೋಣ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತನ್ನ ಭಾಷಣಗಳಲ್ಲಿ ಚಾರಿತ್ರಿಕ ಸತ್ಯಾಂಶಗಳ ಬಗ್ಗೆ ತಪ್ಪುಮಾಡಿದಾಗ ಹೆಚ್ಚುಕಡಿಮೆ ಎಲ್ಲಾ ಚಾನಲ್ಗಳೂ ಗಂಟೆಗಟ್ಟಲೆ ಚರ್ಚೆ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿ ಅವರ ಜನ್ಮ ಜಾಲಾಡುತ್ತವೆ. ಆದರೆ ಇದೇ ಪ್ರವೃತ್ತಿ ಅಥವಾ ನಿಯಮ ಪ್ರಧಾನಿ ನರೇಂದ್ರ ಮೋದಿಯವರ ಮಟ್ಟಿಗೆ ಅನ್ವಯವಾಗುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಮಘರ್ನಲ್ಲಿ ಮಾತಾಡಿದ ಮೋದಿಯವರು 15ನೇ ಶತಮಾನದಲ್ಲಿ ಬದುಕಿದ್ದ ಸಂತ ಕಬೀರ, 12ನೇ ಶತಮಾನದಲ್ಲಿ ಬದುಕಿದ್ದ ಸಂತ ಗೋರಖನಾಥ ಮತ್ತು ಸಂತ ಕಬೀರರಿಗಿಂತ ಕೆಲವು ದಶಕಗಳಷ್ಟು ಚಿಕ್ಕವರಾದ ಗುರು ನಾನಕ ಒಟ್ಟಿಗೆ ಕುಳಿತು ಆಧ್ಯಾತ್ಮಿಕತೆ ವಿಷಯದಲ್ಲಿ ವಿಚಾರವಿನಿಮಯ ನಡೆಸಿದ್ದರೆಂದು ಹೇಳಿಕೊಂಡರು. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರವೆಂದು ಯಾವ ಚಾನಲ್ಗಳೂ ಹೇಳಲಿಲ್ಲ. ಸನ್ಮಾನ್ಯ ಮೋದಿಯವರು ಇದಕ್ಕಿಂತ ಮೊದಲು ಚಂದ್ರಗುಪ್ತ ಗುಪ್ತ ವಂಶದ ಅರಸನಾಗಿದ್ದ, ತಕ್ಷಶಿಲೆ ಬಿಹಾರದಲ್ಲಿದೆ ಮುಂತಾದ ಹಲವಾರು ಯಡವಟ್ಟುಗಳನ್ನು ಮಾಡಿದ್ದಾರಾದರೂ ಅವೆಲ್ಲದರ ಬಗ್ಗೆ ಚರ್ಚೆ ಬಿಡಿ, ಸರಿಯಾಗಿ ಸುದ್ದಿಯೂ ಆಗಲಿಲ್ಲ. ಈ ರೀತಿಯ ವರ್ತನೆ ಮತ್ತು ಪ್ರವೃತ್ತಿಗಳಿಗೆ ನಿರ್ದಿಷ್ಟ ರಾಜಕೀಯ ದಿಕ್ಕಿಗೆ ವಾಲಿದ ಕಾರ್ಪೊರೇಟ್ ಮಾಲಕತ್ವ, ದೊಡ್ಡಣ್ಣನ ಭಯ, ಪಾವತಿ ಸುದ್ದಿ ಮುಂತಾದ ಹಲವು ಕಾರಣಗಳಿರಬಹುದು. ಅಂದಹಾಗೆ 2018ರ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ದಿನದ ವಿಷಯವಾಗಿದ್ದುದು ಪ್ರಭುತ್ವವನ್ನು ಅಂಕೆಯಲ್ಲಿರಿಸುವುದು: ಮಾಧ್ಯಮ, ನ್ಯಾಯ ಮತ್ತು ಕಾನೂನಿನ ಆಡಳಿತ. ತಾವೆಲ್ಲರೂ ಪತ್ರಿಕಾ ದಿನವನ್ನು ಆಚರಿಸಿಯೇ ಇರುತ್ತೀರಿ. ಆದರೆ ಆ ಸಂದರ್ಭದಲ್ಲಿ ಆತ್ಮಾವಲೋಕನದ ಕಾರ್ಯಕ್ರಮಗಳೇನಾದರೂ ನಡೆದಿವೆಯೇ?