ಪರಿಹಾರ ದೊರಕದ ಸಂತ್ರಸ್ತರು: ದ.ಕ. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ
ಮಂಗಳೂರು, ಜು.5:ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಕುಟುಂಬಗಳ ಸದಸ್ಯರು ಆರ್ಥಿಕ ಕಾರಣಗಳಿಗಾಗಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆದರೆ ಈ ಯಾವುದೇ ಪ್ರಕರಣಗಳನ್ನು ರೈತರ, ಕೃಷಿಕರ ಅಥವಾ ಕಾರ್ಮಿಕರ ಆತ್ಮಹತ್ಯೆಯಾಗಿದೆ ಎಂದು ಪರಿಗಣಿಸಲಾಗುತ್ತಿಲ್ಲ. 2017-18ರ ಸಾಲಿನಲ್ಲಿ ರಾಜ್ಯದಲ್ಲಿ 602 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 398 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಆರ್ಥಿಕ ಕಾರಣದಿಂದ ಸಾಕಷ್ಟು ಆತ್ಮಹತ್ಯೆ ನಡೆದಿದ್ದರೂ ರೈತರ ಆತ್ಮಹತ್ಯೆ ಎಂದು ದಾಖಲಾಗಿ ಪರಿಹಾರ ದೊರೆತಿರುವುದು ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ!. ಆರ್ಥಿಕ ಕಾರಣಗಳಿಗಾಗಿ ನಡೆಯುತ್ತಿರುವ ರೈತ ಕುಟುಂಬದ ಸದಸ್ಯರ ಆತ್ಮಹತ್ಯೆಗಳು ಸಾಕಷ್ಟು ತಾಂತ್ರಿಕ ಕಾರಣಗಳಿಂದ ದಾಖಲಾಗದೆ ಉಳಿದಿವೆ.
ವೀರೇಶ್ ವರದಿ: 2017ರಲ್ಲಿ ಡಾ.ಜಿ.ಕೆ.ವೀರೇಶ್ ನೇತೃತ್ವದ ಸಮಿತಿ ರೈತರ ಆತ್ಮಹತ್ಯೆಯ ಕಾರಣದ ಬಗ್ಗೆ ರಾಜ್ಯ ಸರಕಾರಕ್ಕೆ ನೀಡಿದ ವರದಿಯ ಪ್ರಕಾರ ರೈತರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಮತ್ತು ಸಾಂಸಾರಿಕ ಸಮಸ್ಯೆಗಳು ಸಾಮರ್ಥ್ಯ ಮೀರಿ ವೈಯಕ್ತಿಕ ಸಾಲ, ಬೆಳೆ ಸಾಲ, ಬೆಳೆ ನಷ್ಟ ರೈತರ ಆತ್ಮಹತ್ಯೆಯ ಪ್ರಮುಖ ಕಾರಣವೆಂದು ತಿಳಿಸಿತ್ತು.
ದ.ಕ. ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ಕೃಷಿಕರು, ರಬ್ಬರ್ ಬೆಳೆಯುವ ಬೆಳೆಗಾರರು, ಸಣ್ಣ ಹಿಡುವಳಿದಾರರು, ಬಾಡಿಗೆ ಮನೆಯಲ್ಲಿದ್ದು ಸಣ್ಣ ಪುಟ್ಟ ಉದ್ಯಮದಲ್ಲಿರುವವರು, ಸ್ವ ಉದ್ಯೋಗಕ್ಕಾಗಿ ಖಾಸಗಿ ಲೇವಾದೇವಿದಾರರಿಂದ, ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವವರು. ಅನಾರೋಗ್ಯಕ್ಕೀಡಾದ ಕೃಷಿ ಕೂಲಿ ಕಾರ್ಮಿಕರು, ಸಮರ್ಪಕ ಉದ್ಯೋಗ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಯುವಕರು, ಯುವತಿಯರು ಆತ್ಮಹತ್ಯೆ ಮಾಡಿಕೊಂಡ ಹಲವಾರು ಪ್ರಕರಣಗಳು ಜಿಲ್ಲೆಯಲ್ಲಿ ಕೃಷಿಕರ ಆತ್ಮಹತ್ಯೆಯಾಗಿ ದಾಖಲಾಗಿಲ್ಲ.
ದ.ಕ. ಜಿಲ್ಲೆಯ ಕೃಷಿ ಇಲಾಖೆಯಲ್ಲಿ 16 ರೈತ ಸಂಪರ್ಕ ಕೇಂದ್ರಗಳ ಮೂಲಕ ಬಂದಿರುವ ಮಾಹಿತಿಯ ಪ್ರಕಾರ 2017-18ರಲ್ಲಿ ದಾಖಲಾದ ಒಂದು ಪ್ರಕರಣ ಜುಲೈ 23, 2017ರಂದು ಪುತ್ತೂರು ತಾಲೂಕಿನ ರೆಂಜಿಲಾಡಿಯ ಕೆ.ಎಂ.ರಾಜು ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವುದು. ಇನ್ನೊಂದು ಎಪ್ರಿಲ್ 28, 2018ರಲ್ಲಿ ಸುಳ್ಯ ತಾಲೂಕಿನ ಅಲೆಟ್ಟಿ ರಂಗತ್ತಮಲೆಯ ಜನಾರ್ದನ ಆರ್.ಡಿ. ರೈತರ ಆತ್ಮಹತ್ಯೆ ಪ್ರಕರಣದ ರಾಜ್ಯ ಪಟ್ಟಿಯಲ್ಲಿ ಸೇರಿದ್ದಾರೆ. ಕೆ.ಎಂ.ರಾಜು 97 ಸಾವಿರ ಬೆಳೆ ಸಾಲ, 50 ಸಾವಿರ ಫಾರಂ ಹೌಸ್ಗೆ ಸಾಲ 50 ಸಾವಿರ ಹಸು ಖರೀದಿಗೆ ಸಾಲ ಮತ್ತು ಮನೆ ದುರಸ್ತಿಗೆ 2 ಲಕ್ಷ ರೂ. ಸಾಲ ಪಡೆದಿದ್ದರು. ಒಟ್ಟು 3.97 ಸಾವಿರ ಸಾಲ ಪಡೆದಿ ದ್ದರು. ಅಲೆಟ್ಟಿಯ ಜನಾರ್ದನ ಅವರು ಪಡೆದಿರುವ ಸಾಲಗಳ ಪೈಕಿ 1.75 ಲಕ್ಷ ಮನೆ ನಿರ್ಮಾಣಕ್ಕಾಗಿ ಪಡೆದುಕೊಂಡ ಸಾಲವಾಗಿದೆ.
ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರಿಗೆ ಪರಿಹಾರ ಒದಗಿಸಬೇಕಾದರೆ ಆತ ಸರಕಾರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಾಲ ಪಡೆದಿರಬೇಕು ಎಂಬ ನಿಯಮವಿಲ್ಲ. ಬದಲಾಗಿ ಸರಕಾರದ ಅಧಿಕೃತ ಪರವಾನಿಗೆ ಹೊಂದಿ ಹಣಕಾಸು ವ್ಯವಹಾರ ನಡೆಸುವ ಚಿಟ್ ಫಂಡ್ಗಳು, ಪಾನ್ ಬ್ರೋಕರ್ಗಳ ಅಂಗಡಿಗಳು, ಖಾಸಗಿ ಲೇವಾದೇವಿದಾರರು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವುದನ್ನು ಪರಿಗಣಿಸಬಹುದಾಗಿದೆ ಎಂದು ಕಳೆದ ಸರಕಾರ ತೀರ್ಮಾನ ಕೈಗೊಂಡಿತ್ತು. ಸರಕಾರದ ವರದಿಯ ಪ್ರಕಾರ ರಾಜ್ಯದಲ್ಲಿ 2014-15ರಲ್ಲಿ 101, 2015-16ರಲ್ಲಿ 1031, 2016-17ರಲ್ಲಿ 893, 2017-18ರಲ್ಲಿ 398 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ದಾಖಲಾಗಿದೆ. 2003ರಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಸಂತ್ರಸ್ತ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡಲಾಗಿತ್ತು. ಈ ಪರಿಹಾರದ ಮೊತ್ತವನ್ನು 2016ರಲ್ಲಿ ಗರಿಷ್ಠ 5ಲಕ್ಷಕ್ಕೆ ಏರಿಸಲಾಗಿದೆ.
ನೂತನ ಸಮ್ಮಿಶ್ರ, ಕೇಂದ್ರ ಸರಕಾರದಿಂದ ಹೊಸ ನಿರೀಕ್ಷೆ: ರೈತರ ಆತ್ಮಹತ್ಯೆ ತಡೆಗೆ ನೂತನ ಸರಕಾರ, ಕೇಂದ್ರ ಸರಕಾರದಿಂದ ಹೊಸ ಯೋಜನೆಗಳೇನು ಎನ್ನುವ ನಿರೀಕ್ಷೆ ರಾಜ್ಯದ ಜನತೆಯಲ್ಲಿದೆ. ಹಿಂದಿನ ಸರಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ, ಬೆಳೆ ವಿಮೆ, ಪ್ರಕೃತಿ ವಿಕೋಪ ಪರಿಹಾರ, ಸಾಮಾಜಿಕ ಭದ್ರತೆ, ಕನಿಷ್ಠ ಪರಿಕರ ಬಳಸಿ ಕೃಷಿ, ಸಮಗ್ರ ಬೇಸಾಯ ಪದ್ಧತಿಯನ್ನು ಮಹಾತ್ಮಾ ಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಒಗ್ಗೂಡಿಸುವಿಕೆಯ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆಗೆ ಕಾರಣವಾಗುವ ಆರ್ಥಿಕ ಕಾರಣಗಳಿಗೆ ಪರಿಹಾರವಾಗುವ ಯೋಜನೆಗಳು ಈ ಬಾರಿಯ ನೂತನ ಸರಕಾರದಿಂದ ದೊರೆಯಬಹುದೇ ಎಂಬ ನಿರೀಕ್ಷೆ ಜಿಲ್ಲೆಯ ಹೆಚ್ಚಿನ ಕೃಷಿಕರಲ್ಲಿದೆ.
ಆತ್ಮಹತ್ಯೆ ಮಾಡಿಕೊಂಡ ರೈತರಿಗೆ, ಕೃಷಿ ಕೂಲಿಕಾರರ ಕುಂಟುಂಬದವರಿಗೂ ಪರಿಹಾರ ನೀಡಬೇಕು ಎನ್ನುವುದು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಸಿದ್ದೇವೆ. ರೈತರ ಆತ್ಮಹತ್ಯೆಯ ವಿಚಾರದಲ್ಲಿ ನಿಯಮಾವಳಿಗಳನ್ನು ಸರಳಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅದನ್ನು ಕೃಷಿ ಇಲಾಖೆಯ ಮೂಲಕ ಸಮರ್ಪಕವಾಗಿ ಅನುಷ್ಠಾನ ಗೊಳ್ಳಬೇಕಾಗಿದೆ.
ಮಾರುತಿ ಮಾನ್ಪಡೆ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ
‘‘ಕೃಷಿಯಿಂದ ನಷ್ಟ ಹೊಂದಿದ ರೈತ ಕುಟುಂಬಗಳಿಗೆ ಸರಕಾರ ಪರಿಹಾರ ನೀಡಬೇಕು. ಉಳಿದ ಆರ್ಥಿಕ ಕಾರಣಗಳಿಂದ ಆತ್ಮಹತ್ಯೆಮಾಡಿಕೊಂಡವರ ಕುಟುಂಬಗಳನ್ನು ರಕ್ಷಣೆ ಮಾಡುವಂತಹ ಅಗತ್ಯವಿದೆ. ದ.ಕ. ಜಿಲ್ಲೆಯ ಹೆಚ್ಚಿನ ಕುಟುಂಬಗಳು ಕೃಷಿ ಮೂಲದಿಂದಲೇ ಬಂದವುಗಳಾಗಿವೆ. 2001ರಿಂದ 2018ರವರೆಗೆ ಸುಮಾರು 27 ರೈತರು ಆತ್ಮಹತ್ಯೆ ನಡೆದಿದೆ. ಇತ್ತೀಚೆಗೆ ಕಡಿಮೆಯಾಗಿದೆ. ಕಳೆದ ವರ್ಷ ರೈತರ ಆತ್ಮಹತ್ಯೆ ಜಿಲ್ಲೆಯಲ್ಲಿ 10ರ ಗಡಿದಾಟಿಲ್ಲ. ಜಿಲ್ಲೆಯಲ್ಲಿ ಕೊಳೆರೋಗ, ಬೆಳೆನಾಶದಿಂದ, ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ತಾಂತ್ರಿಕ ಕಾರಣಗಳಿಗಾಗಿ ತಿರಸ್ಕರಿಸದೆ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗಿದೆ.
ರವಿಕಿರಣ ಪುಣಚ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಮುಖಂಡ
ರೈತರ ಆತ್ಮಹತ್ಯೆಗೆ ಪರಿಹಾರ ನೀಡಲು ಪರಿಗಣಿಸುವಾಗ 2014ರಿಂದ ಕೆಲವೊಂದು ನಿಯಮಗಳನ್ನು ಸಡಿಸಲಾಗಿದೆ. ಕೃಷಿಗೆ ಸಂಬಂಧಿಸಿದಂತೆ ಯಾವುದೇ ಸಂಸ್ಥೆಯಲ್ಲಿ ಸಾಲ ಮಾಡಿದ್ದರೂ, ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಲೇವಾದೇವಿದಾರರಿಂದ ಸಾಲ ಪಡೆದಿದ್ದರೂ ಅಂತಹ ರೈತ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ರೈತ ಆತ್ಮಹತ್ಯೆ ಎಂದು ಪರಿಗಣಿಸುತ್ತೇವೆ. ಆತ್ಮಹತ್ಯೆ ನಡೆದ ಸಂದರ್ಭದಲ್ಲಿ ಪೊಲೀಸ್ ವರದಿ, ವೈದ್ಯರ ಪೋಸ್ಟ್ ಮಾಟಮ್ ರಿಪೋರ್ಟ್ ಸೇರಿಂದತೆ ತಾಲೂಕುಗಳಲ್ಲಿ ಎಸಿಯವರ ನೇತೃತ್ವದಲ್ಲಿರುವ ಅಧಿಕಾರಿಗಳ ಸಮಿತಿಯ ಪ್ರಕರಣದ ಬಗ್ಗೆ ತೀರ್ಮಾನಿಸಲಾಗುತ್ತದೆ.
ಆ್ಯಂಟೊನಿ ಮರಿಯಾ ಇಮ್ಯಾನುವೆಲ್, ದ.ಕ. ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ