ಯುಪಿಓಆರ್ ಯೋಜನೆ ಸರ್ವರ್ ಡೌನ್: ಶಿವಮೊಗ್ಗದಲ್ಲಿ ಸ್ಥಿರಾಸ್ತಿ ನೋಂದಣಿ ಕಾರ್ಯ ಸಂಪೂರ್ಣ ಸ್ಥಗಿತ
ನಾಗರಿಕರ ಪರದಾಟ
ಶಿವಮೊಗ್ಗ, ಜು. 16: ಶಿವಮೊಗ್ಗದಲ್ಲಿ ಪ್ರಾಪರ್ಟಿ ಕಾರ್ಡ್ (ಪಿ.ಆರ್.) ಗೊಂದಲ ಮುಂದುವರಿದಿದೆ. ಉಪಗ್ರಹ ಆಧಾರಿತ ನಗರ ಸ್ಥಿರಾಸ್ತಿ ಮಾಲೀಕತ್ವ (ಯುಪಿಓಆರ್) ಯೋಜನೆ ಸರ್ವರ್ ಡೌನ್ ಆಗಿರುವುದರಿಂದ, ನಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಪಿ.ಆರ್. ಕಾರ್ಡ್ ಆಧಾರಿತ ಸ್ಥಿರಾಸ್ತಿ ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ನಾಗರಿಕರು ಪರದಾಡುವಂತಾಗಿದೆ.
ಸ್ಥಿರಾಸ್ತಿ ನೊಂದಣಿಗೆ ದೂರದೂರುಗಳಿಂದ ಆಗಮಿಸಿರುವ ನಾಗರಿಕರು, ವಿನೋಬನಗರದಲ್ಲಿರುವ ಸಬ್ ರಿಜಿಸ್ಟಾರ್ ಕಚೇರಿಗೆ ಅಲೆದಾಡುವಂತಾಗಿದೆ. ಸ್ಪಷ್ಟ ಮಾಹಿತಿಯಿಲ್ಲದೆ, ಗಂಟೆಗಟ್ಟಲೆ ಕಚೇರಿಯಲ್ಲಿ ಕಾದು ಕುಳಿತುಕೊಳ್ಳುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ನಾಗರಿಕರ ಅಮೂಲ್ಯ ಸಮಯ - ಹಣ ಪೋಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
'ಕಳೆದ ಶುಕ್ರವಾರದಿಂದ ಯುಪಿಓಆರ್ ಯೋಜನೆಯ ಸರ್ವರ್ ಡೌನ್ ಆಗಿದೆ. ಸಬ್ ರಿಜಿಸ್ಟಾರ್ ಕಚೇರಿಯ ಕಂಪ್ಯೂಟರ್ ಗಳಲ್ಲಿ ಯುಪಿಓಆರ್ ವೆಬ್ಸೈಟ್ ಓಪನ್ ಆಗುತ್ತಿಲ್ಲ. ಸೋಮವಾರ ಕೂಡ ಇದೇ ಸ್ಥಿತಿಯಿದೆ. ಪ್ರಸ್ತುತ ಎದುರಾಗಿರುವ ತಾಂತ್ರಿಕ ಸಮಸ್ಯೆಯ ಬಗ್ಗೆ, ಯುಪಿಓಆರ್ ಕಚೇರಿಯಿಂದ ಸಬ್ ರಿಜಿಸ್ಟಾರ್ ಕಚೇರಿಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ' ಎಂದು ಜಿಲ್ಲಾ ಪತ್ರ ಬರಹಗಾರರ ಸಂಘದ ಪ್ರಮುಖ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಎಂ.ಸುರೇಶ್ಬಾಬು ಆರೋಪಿಸುತ್ತಾರೆ.
ಏನೀದು ಯೋಜನೆ?: ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ, ಶಿವಮೊಗ್ಗ ನಗರದಲ್ಲಿ ಯುಪಿಓಆರ್ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಪ್ರತಿಯೊಂದು ಆಸ್ತಿಗೂ ಪ್ರಾಪರ್ಟಿ ಕಾರ್ಡ್ (ಪಿ.ಆರ್.) ನೀಡಲಾಗುತ್ತದೆ. ಸ್ಥಿರಾಸ್ತಿ ನೊಂದಣಿಯ ವೇಳೆ ಈ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿದೆ. ಯುಪಿಓಆರ್ ಯೋಜನೆಯ ಸರ್ವರನ್ನು ಸಬ್ ರಿಜಿಸ್ಟಾರ್ ಕಚೇರಿಯ ಸರ್ವರ್ ಗೆ ಸಂಪರ್ಕಿಸಲಾಗಿದೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೇ ಸ್ಥಿರಾಸ್ತಿ ನೊಂದಣೆ ಮಾಡಬೇಕಾದರೆ, ಪಿ.ಆರ್. ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.
ಸ್ಥಿರಾಸ್ತಿ ನೊಂದಣಿಗೆ ಪಿ.ಆರ್.ಕಾರ್ಡ್ ಕಡ್ಡಾಯಗೊಳಿಸಿದ ಆದೇಶ ರದ್ದತಿಗೆ ಈ ಹಿಂದೆ ನಾಗರಿಕರು ಆಗ್ರಹಿಸಿದ್ದರು. ಮುಖ್ಯಮಂತ್ರಿ, ಕಂದಾಯ ಇಲಾಖೆ ಸಚಿವರ ಬಳಿಗೂ ನಿಯೋಗ ಕೊಂಡೊಯ್ಯಲಾಗಿತ್ತು. ಆದರೆ ರಾಜ್ಯ ಸರ್ಕಾರ ಮಾತ್ರ ತನ್ನ ನಿಲುವಿಗೆ ಅಂಟಿಕೊಂಡಿತ್ತು. ಕಡ್ಡಾಯ ಆದೇಶ ಹಿಂಪಡೆದಿರಲಿಲ್ಲ. ನಾಗರಿಕರು ಕೂಡ ಕ್ರಮೇಣ ಈ ಯೋಜನೆಗೆ ಹೊಂದಿಕೊಳ್ಳಲಾರಂಭಿಸಿದ್ದರು. ಸ್ಥಿರಾಸ್ತಿಗಳಿಗೆ ಪಿ.ಆರ್. ಕಾರ್ಡ್ ಮಾಡಲಾರಂಭಿಸಿದ್ದರು.
ಸಮಸ್ಯೆಯೇನು?: ಆದರೆ ನಿರಂತರವಾಗಿ ಯುಪಿಓಆರ್ ಯೋಜನೆಯ ಸರ್ವರ್ ಡೌನ್ ಆಗಿ, ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಸ್ಥಿರಾಸ್ತಿ ನೊಂದಣಿಗೆ ಅಡೆತಡೆ ಉಂಟಾಗುತ್ತಿರುವುದಕ್ಕೆ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಯುಪಿಓಆರ್ ಯೋಜನೆಯ ಸರ್ವರ್ ಡೌನ್ ಆಗಿರುವುದರಿಂದ, ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಣಿ ಕಾರ್ಯ ಸ್ಥಗಿತಗೊಂಡಿದೆ. ಸ್ಥಿರಾಸ್ತಿ ನೊಂದಣಿಗೆಂದು ಆಗಮಿಸುವ ನಾಗರಿಕರು ಕಚೇರಿಯಲ್ಲಿ ಬೀಡುಬಿಡುವಂತಾಗಿದೆ. ಅದರಲ್ಲಿಯೂ ದೂರದೂರುಗಳಿಂದ ಆಗಮಿಸುವ ನಾಗರಿಕರ ಪಾಡಂತೂ ಹೇಳತೀರದಂತಾಗಿದೆ.
ಗಮನಹರಿಸಲಿ: ಯುಪಿಓಆರ್ ಯೋಜನೆಯ ಸರ್ವರ್ ಡೌನ್ ಕಾರಣದಿಂದ ಹಲವು ಸಮಸ್ಯೆ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಗಮನಹರಿಸಬೇಕು. ಸಮಸ್ಯೆಗೆ ಕಾರಣ ಪತ್ತೆ ಹಚ್ಚಿ, ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮುಖಂಡ ಜಿ.ಎಂ. ಸುರೇಶ್ ಬಾಬುರವರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಜಾರಿಗೆ ಬಂದಿರುವ ಯುಪಿಓಆರ್ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಗಮನಹರಿಸಬೇಕಾಗಿದೆ. ನಾಗರಿಕರಿಗೆ ಅಗುತ್ತಿರುವ ಅನಾನುಕೂಲ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಗಮನಹರಿಸುವುದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಹೋರಾಟ ಅನಿವಾರ್ಯ: ಜಿ.ಎಂ.ಸುರೇಶ್ಬಾಬು
'ಯುಪಿಓಆರ್ ಯೋಜನೆಯ ತಾಂತ್ರಿಕ ಸಮಸ್ಯೆಯಿಂದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಕಳೆದ ಕೆಲ ತಿಂಗಳ ಹಿಂದೆಯೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ತಕ್ಷಣವೇ ಜಿಲ್ಲಾಡಳಿತ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನಾಗರಿಕರ ಜೊತೆಯಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ' ಎಂದು ಜಿಲ್ಲಾ ಅಧಿಕೃತ ಪತ್ರ ಬರಹಗಾರರ ಸಂಘದ ಮುಖಂಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಎಂ.ಸುರೇಶ್ಬಾಬು ಎಚ್ಚರಿಕೆ ನೀಡಿದ್ದಾರೆ.
ಸಬ್ ರಿಜಿಸ್ಟಾರ್ ಆಫೀಸ್ನಲ್ಲಿ ಜನಜಂಗುಳಿ
ಸರ್ವೇಸಾಮಾನ್ಯವಾಗಿ ಆಷಾಢ ಮಾಸದಲ್ಲಿ ನೊಂದಣಿ ಕಾರ್ಯ ಕಡಿಮೆಯಿರುತ್ತದೆ. ಆದರೆ ಪ್ರಸ್ತುತ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜನಜಂಗುಳಿ ಕಂಡುಬರುತ್ತಿದೆ. ಇತರೆ ದಿನಗಳ ರೀತಿಯಲ್ಲಿಯೇ ನೊಂದಣಿ ಕಾರ್ಯ ನಡೆಯುತ್ತಿದೆ. ಆದರೆ ಯುಪಿಓಆರ್ ಯೋಜನೆಯ ತಾಂತ್ರಿಕ ಸಮಸ್ಯೆಯ ಕಾರಣದಿಂದ ಪ್ರಸ್ತುತ ನೊಂದಣಿ ಕಾರ್ಯ ನಡೆಯದಿರುವುದರಿಂದ ನಾಗರಿಕರು ತೊಂದರೆಗೆ ಸಿಲುಕುವಂತಾಗಿದೆ. ಮತ್ತೊಂದೆಡೆ ಸಬ್ ರಿಜಿಸ್ಟಾರ್ ಕಚೇರಿಯ ಸಿಬ್ಬಂದಿಗಳ ಜೊತೆ ನಾಗರಿಕರು ಮಾತಿನ ಚಕಮಕಿಗಿಳಿಯುತ್ತಿರುವುದು ಕಂಡುಬರುತ್ತಿದೆ. ಯುಪಿಓಆರ್ ಸರ್ವರ್ ಡೌನ್ ಸಮಸ್ಯೆಯಿಂದ ಸಬ್ ರಿಜಿಸ್ಟಾರ್ ಕಚೇರಿ ಸಿಬ್ಬಂದಿಗಳು ತೊಂದರೆಗೆ ಸಿಲುಕುವಂತಾಗಿದೆ.