ಗೋರಖ್ ಪುರದಲ್ಲಿ ಆದಿತ್ಯನಾಥ್ ದ್ವೇಷಭಾಷಣ ಮಾಡಿದ್ದು ಸತ್ಯ ಎಂದ ಮಾಜಿ ಸಹಚರ
“ನಾನು ಸಾಕ್ಷಿಯಾಗುತ್ತೇನೆಂದು ಜೈಲಿಗಟ್ಟಲಾಗಿದೆ”
ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಇಂಜಕ್ಷನ್ (ತಡೆಯಾಜ್ಞೆ) ಇದ್ದರೂ, ಈಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ 2007ರ ಜನವರಿ 27ರಂದು ಪ್ರಚೋದನಕಾರಿ ಭಾಷಣ ಮಾಡಿದ್ದರು. ಗೋರಖ್ಪುರದಲ್ಲಿ ಮೊಹರಂ ಹಬ್ಬದ ವೇಳೆ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟ ಹಿಂದೂ ಹುಡುಗನ ಸಾವಿಗೆ ಪ್ರತೀಕಾರ ಮಾಡಬೇಕು ಎಂದು ಕರೆ ನೀಡಿದ್ದರು. ಆದಿತ್ಯನಾಥ್ ರನ್ನು ವಿಚಾರಣೆಗೆ ಗುರಿಪಡಿಸುವ ಪ್ರಸ್ತಾವವನ್ನು ತಿರಸ್ಕರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಈ ವರ್ಷದ ಫೆಬ್ರವರಿಯಲ್ಲಿ ಅಲಹಾಬಾದ್ ಹೈಕೋರ್ಟ್ ಆಂಗೀಕರಿಸಿತ್ತು.
ಆಗಸ್ಟ್ 20ರಂದು, ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, "ದ್ವೇಷಭಾಷಣ ಆರೋಪದ ಬಗ್ಗೆ ಆದಿತ್ಯನಾಥ್ ಅವರನ್ನು ಏಕೆ ವಿಚಾರಣೆಗೆ ಗುರಿಪಡಿಸಬಾರದು" ಎಂದು ವಿವರಣೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಸುಪ್ರೀಂಕೋರ್ಟ್ನಲ್ಲಿ ಈ ಪ್ರಕರಣ ವಿಚಾರಣೆಗೆ ಬರುವ ಕೆಲ ದಿನಗಳ ಮುನ್ನ, ಆದಿತ್ಯನಾಥ್ ಅವರ ಬಲಗೈ ಬಂಟ ಎನಿಸಿಕೊಂಡಿದ್ದ ಸುನೀಲ್ ಸಿಂಗ್ ದ್ವೇಷಭಾಷಣ ಆರೋಪ ನಿಜ ಎಂದು ಹೇಳಿಕೆ ನೀಡಿದ್ದಾನೆ. ಸುನೀಲ್ ಸಿಂಗ್ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
"ಆ ದಿನ ಸಂಜೆ ಸಭೆ ಬಿಗುವಿನ ವಾತಾವರಣದಲ್ಲಿ ನಡೆಯಿತು" ಎಂದು ಸೆಪ್ಟೆಂಬರ್ 10ರಂದು ಲಕ್ನೋ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ದೂರವಾಣಿ ಸಂಭಾಷಣೆಯಲ್ಲಿ ಸುನೀಲ್ ಸಿಂಗ್ ಘಟನೆಯನ್ನು ನೆನಪಿಸಿಕೊಂಡಿದ್ದಾನೆ. ಗೋರಖ್ಪುರ ರೈಲು ನಿಲ್ದಾಣದ ಪ್ರವೇಶದ್ವಾರದ ಬಳಿ ಇರುವ ಮಹಾರಾಣಾ ಪ್ರತಾಪ್ ಪ್ರತಿಮೆಯ ಪಕ್ಕದಲ್ಲೇ ಸಭೆ ನಡೆದಿತ್ತು. ಘರ್ಷಣೆಯಲ್ಲಿ ಮೃತಪಟ್ಟ ಬಾಲಕನ ಸ್ಮರಣಾರ್ಥವಾಗಿ ಈ ಸಭೆ ಏರ್ಪಡಿಸಲಾಗಿತ್ತು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾನೆ. "ಆದಿತ್ಯನಾಥ್ ಭಾಷಣ ಮಾಡುವ ಮೊದಲು ನಾನು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದೆ. ಆ ಭಾಷಣದ ವಿಡಿಯೊ ತುಣುಕನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನಾನು ಆ ಸ್ಥಳದಲ್ಲೇ ಇದ್ದೆ" ಎಂದು ಆತ ಹೇಳುತ್ತಾನೆ.
ಆದಿತ್ಯನಾಥ್ ಭಾಷಣ ಮಾಡುತ್ತಿರುವಾಗಲೇ ಹಿಂಸಾಚಾರ ಆರಂಭವಾಯಿತು ಎನ್ನುವುದು ಸಿಂಗ್ ನ ವಿವರಣೆ. "ಆದಿತ್ಯನಾಥ್ ಭಾಷಣ ಮುಗಿಸುವ ಮೊದಲೇ ಸಭೆ ನಡೆದ ಸ್ಥಳದ ಎದುರು ಇದ್ದ ಹೋಟೆಲನ್ನು ಲೂಟಿ ಮಾಡಿ, ಧ್ವಂಸಗೊಳಿಸಲಾಯಿತು. ಸ್ಥಳೀಯ ಮುಸ್ಲಿಂ ಒಬ್ಬರು ಆ ಹೋಟೆಲ್ನ ಮಾಲಕ. ಈ ಪ್ರಕರಣದಲ್ಲಿ ನಾನು ಕೂಡಾ ಆರೋಪಿ. ಇಲ್ಲಿಂದ ದೊಂಬಿ ಗೋರಖ್ಪುರದ ಇತರೆಡೆಗೂ ಹಬ್ಬಿತು"
"ಆ ಬಳಿಕ ನಡೆದ ದೊಂಬಿಯಲ್ಲಿ ಇಬ್ಬರು ಜೀವ ಕಳೆದುಕೊಂಡರು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳನ್ನು ಸುಟ್ಟುಹಾಕಲಾಯಿತು. ಜನವರಿ 28ರಂದು ಅಂದರೆ ಸಭೆ ನಡೆದ ಮರುದಿನ ಗೋರಖ್ ಪುರದ ಪ್ರಕ್ಷುಬ್ಧ ಪ್ರದೇಶಕ್ಕೆ ಜಾಥಾ ಕೈಗೊಂಡ ವೇಳೆ ಆದಿತ್ಯನಾಥ್ ಹಾಗೂ ಹಿಂದೂ ಯುವ ವಾಹಿನಿಯ (ಆದಿತ್ಯನಾಥ್ 2002ರಲ್ಲಿ ಹುಟ್ಟುಹಾಕಿದ ಯುವಪಡೆ) ಹಲವು ಮಂದಿ ಮುಖಂಡರನ್ನು ಬಂಧಿಸಲಾಯಿತು. ಆದಿತ್ಯನಾಥ್ ಜತೆ ನಾನು ಕೂಡಾ ಬಂಧನಕ್ಕೊಳಗಾದೆ. ಆದಿತ್ಯನಾಥ್ 11 ದಿನಗಳ ಕಾಲ ಕಸ್ಟಡಿಯಲ್ಲಿದ್ದರೆ, ನಾನು 66 ದಿನಗಳ ಬಳಿಕ ಬಿಡುಗಡೆಯಾದೆ" ಎಂದು ಸುನೀಲ್ ಸಿಂಗ್ ವಿವರಿಸಿದ್ದಾನೆ.
ಆ ಸಂದರ್ಭದಲ್ಲಿ ಆದಿತ್ಯನಾಥ್ ರ ಅತ್ಯಂತ ವಿಶ್ವಾಸಾರ್ಹ ಲೆಫ್ಟಿನೆಂಟ್ ಎನಿಸಿಕೊಂಡಿದ್ದ ಸಿಂಗ್, ಹಿಂದೂ ಯುವ ವಾಹಿನಿಯ ರಾಜ್ಯ ಘಟಕದ ಅಧ್ಯಕ್ಷನಾಗಿದ್ದ. 2017ರ ಆರಂಭದವರೆಗೂ ಸಿಂಗ್ ಆ ಹುದ್ದೆಯಲ್ಲಿದ್ದ. ಈ ಸಂಘಟನೆಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದನ್ನು ಆದಿತ್ಯನಾಥ್ ಅಲ್ಲಗಳೆದರೂ, ಸಂಘಟನೆಯ ಪರವಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ ಕಾರಣಕ್ಕೆ ಸಿಂಗ್ ನನ್ನು ಉಚ್ಚಾಟಿಸಲಾಗಿತ್ತು.
ಆದಿತ್ಯನಾಥ್ 2017ರ ಮಾರ್ಚ್ನಲ್ಲಿ ಮುಖ್ಯಮಂತ್ರಿಯಾದ ಬಳಿಕ, ಸ್ವಲ್ಪ ಸಮಯ ಸಿಂಗ್ ತೆರೆಮರೆಯಲ್ಲಿದ್ದ. ಆದರೆ ಹಿಂದೂ ಯುವವಾಹಿನಿಯ ವಿವಿಧ ಜಿಲ್ಲಾಮಟ್ಟದ ಮುಖಂಡರು ಮತ್ತು ಕಾರ್ಯಕರ್ತರು ಹೇಳುವಂತೆ, ಸಿಂಗ್ ಈಗಲೂ ಸಂಘಟನೆಯ ಪದಾಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಏಕೆಂದರೆ ಈ ಸಂಘಟನೆಗೆ ಬಹಳಷ್ಟು ಮುಖಂಡರನ್ನು ಸೇರಿಸಿದ್ದೇ ಸಿಂಗ್.
2017ರ ಕೊನೆಗೆ, ಸಂಘಟನೆಯ ಕಾರ್ಯಕರ್ತರು ಹೇಳಿದಂತೆ, ಪದಾಧಿಕಾರಿಗಳು ಸಿಂಗ್ ನತ್ತ ನಾಯಕತ್ವಕ್ಕಾಗಿ ದೃಷ್ಟಿ ಇಟ್ಟರು. ಆರೆಸ್ಸೆಸ್ಸನ್ನು ಓಲೈಸುವ ಸಲುವಾಗಿ ಆದಿತ್ಯನಾಥ್ ತಾವೇ ಹುಟ್ಟುಹಾಕಿದ ಸಂಘಟನೆಯನ್ನು ಮೂಲೆಗುಂಪು ಮಾಡಿದರು. ಇದಕ್ಕೆ ಸಹಕರಿಸದ ಹಲವು ಜಿಲ್ಲಾಮಟ್ಟದ ಘಟಕಗಳನ್ನು ವಿಸರ್ಜಿಸಿದರು. ಆರೆಸ್ಸೆಸ್ ನ ಒತ್ತಡ ಆದಿತ್ಯನಾಥ್ ಅವರ ನಿಷ್ಠೆಗೆ ಅಗ್ನಿಪರೀಕ್ಷೆ ಎನಿಸಿತು. ಈ ಹಿಂದೂ ಸಂಘಟನೆಯ ರಾಜಕೀಯ ಆಕಾಂಕ್ಷೆಗಳು ಬಿಜೆಪಿ ಜತೆ ಸಂಘರ್ಷಕ್ಕೆ ಇಳಿಯುವುದಿಲ್ಲ ಎನ್ನುವುದನ್ನು ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ನಿರೂಪಿಸಬೇಕಿತ್ತು. ಆದಿತ್ಯನಾಥ್ ಸದಾ ಬಿಜೆಪಿ ಟಿಕೆಟ್ನಲ್ಲೇ ಸ್ಪರ್ಧಿಸಿದರೂ, ಹಿಂದೂ ಯುವವಾಹಿನಿ ಮಾತ್ರ ಸಂಘ ಪರಿವಾರದ ಹೊರಗಿದ್ದುಕೊಂಡೇ ಅಸ್ತಿತ್ವ ಉಳಿಸಿಕೊಂಡಿತ್ತು.
ಈ ಉದ್ವಿಗ್ನತೆಗಳ ಕಾರಣದಿಂದ ರಾಜ್ಯದ ಹಲವು ಭಾಗಗಳು ಹಲವು ಮಂದಿ ಸ್ಥಳೀಯ ಮುಖಂಡರು ಈ ಸಂಘಟನೆಯಿಂದ ಅಂತರ ಕಾಯ್ದುಕೊಂಡರು. ಮೇ ತಿಂಗಳಲ್ಲಿ ಭಿನ್ನಮತೀಯರು ಲಕ್ನೋದಲ್ಲಿ ಸಭೆ ಸೇರಿ, ಹಿಂದೂ ಯುವವಾಹಿನಿ (ಭಾರತ) ಎಂಬ ಹೆಸರಿನ ಹೊಸ ಸಂಘಟನೆಯನ್ನು ಹುಟ್ಟುಹಾಕಿದರು. ಸುನೀಲ್ ಸಿಂಗ್ ಇದರ ರಾಷ್ಟ್ರೀಯ ಅಧ್ಯಕ್ಷನಾದ. ಎರಡು ಪ್ರತಿಸ್ಪರ್ಧಿ ಬಣಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ನಡೆಯಿತು. ಇದಾದ ಬಳಿಕ ಜುಲೈ 31ರಂದು ಗೋರಖ್ಪುರದ ರಾಜಘಾಟ್ ಪೊಲೀಸ್ ಠಾಣೆಯಲ್ಲಿ ಸಣ್ಣ ಕಾದಾಟ ನಡೆಯಿತು. ಈ ಹಿನ್ನೆಲೆಯಲ್ಲಿ ಸುನೀಲ್ ಸಿಂಗ್ ಹಾಗೂ ಹಿಂದೂ ಯುವವಾಹಿನಿ ಕಾರ್ಯಕರ್ತರನ್ನು ವಿವಿಧ ಆರೋಪಗಳಡಿ ಬಂಧಿಸಲಾಯಿತು. ಎರಡು ದಿನಗಳ ಬಳಿಕ ಕ್ರೂರ ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಸಿಂಗ್ ವಿರುದ್ಧ ದೂರು ದಾಖಲಾಯಿತು. ಬಳಿಕ ಆತನನ್ನು ಲಕ್ನೋ ಕೇಂದ್ರೀಯ ಕಾರಾಗೃಹಕ್ಕೆ ಕಳುಹಿಸಲಾಯಿತು.
"ನಾನು ದ್ವೇಷಭಾಷಣ ಪ್ರಕರಣಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎನ್ನುವುದು ಆದಿತ್ಯನಾಥ್ ಗೆ ತಿಳಿದಿರುವುದರಿಂದ ನನ್ನನ್ನು ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಗೋರಖ್ಪುರ ರೈಲ್ವೆ ನಿಲ್ದಾಣದ ಹೊರಗೆ ನಡೆದ ಸಭೆಯಲ್ಲಿ ಆದಿತ್ಯನಾಥ್ ಪ್ರಚೋದನಕಾರಿ ಭಾಷಣ ಮಾಡಿದ ಸ್ಥಳದಲ್ಲಿ ನಾನು ಇದ್ದೆ" ಎಂದು ಆತ ಸ್ಪಷ್ಟಪಡಿಸುತ್ತಾನೆ.
ಇಷ್ಟು ವರ್ಷವೂ ಸಿಂಗ್ ಈ ಪ್ರಕರಣದ ಬಗ್ಗೆ ಮೌನವಾಗಿದ್ದ. 2017ರ ವಿಧಾನಸಭಾ ಚುನಾವಣೆಗೆ ಮುನ್ನ ಆದಿತ್ಯನಾಥ್ ಜತೆಗಿನ ಸಂಬಂಧ ಹಳಸಿದರೂ, ಈ ಬಗ್ಗೆ ಅಪ್ರೂವರ್ ಆಗದಿರಲು ನಿರ್ಧರಿಸಿದ್ದ. ಈಗ ಹಾಗೆ ಮಾಡುತ್ತೀರಾ ಎಂದು ನಾನು ಕೇಳಿದಾಗ, "ಹೌದು; ನಾನು ಪ್ರಕರಣದಲ್ಲಿ ಅಪ್ರೂವರ್ ಆಗಲಿದ್ದೇನೆ" ಎಂದು ಉತ್ತರಿಸಿದರು. "ಹಿಂದೆ ಆದಿತ್ಯನಾಥ್ ಜತೆಗಿನ ನನ್ನ ಭಿನ್ನಾಭಿಪ್ರಾಯ ರಾಜಕೀಯ ಕಾರಣದ್ದಾಗಿತ್ತು. ಆದರೆ ಈಗ ನಾನು ಜೈಲಿನಲ್ಲಿ ಎಲ್ಲ ಬಗೆಯ ಚಿತ್ರಹಿಂಸೆಗೆ ಗುರಿಯಾಗಿದ್ದೇನೆ. ಇದು ಪ್ರತಿಯೊಂದನ್ನೂ ಬದಲಾಯಿಸಿದೆ. ಈಗ ಭಿನ್ನಾಭಿಪ್ರಾಯಗಳು ವೈಯಕ್ತಿಕವಾಗಿವೆ. ಇದರಿಂದಾಗಿ ಈಗ ನನ್ನದು ಒಂದೇ ಅಭಿಪ್ರಾಯ: ನನಗೆ ಅವಕಾಶ ನೀಡಿದರೆ ನ್ಯಾಯಾಲಯಕ್ಕೆ ನಿಜ ಹೇಳಬೇಕು ಎನ್ನುವುದು" ಎಂದು ಸುನೀಲ್ ಸಿಂಗ್ ಹೇಳುತ್ತಾನೆ.