ದಲಿತರು ಮನುಷ್ಯರಲ್ಲವೇ?
ಮಾನ್ಯರೇ,
ದಲಿತರೊಬ್ಬರು ರಚಿಸಿದ ಭವ್ಯ ಸಂವಿಧಾನದಡಿ ಬದುಕುತ್ತಿರುವ ಭಾರತದಲ್ಲಿ ದಲಿತರಿಗೇ ಉಸಿರಾಡಲು ಕಷ್ಟವಾಗುತ್ತಿವೆ. ಮೇಲ್ಜಾತಿಯ ಹುಡುಗಿ ದಲಿತನನ್ನು ವರಿಸಿದಳು ಎಂಬ ಕಾರಣಕ್ಕಾಗಿ ದಲಿತ ಯುವಕನನ್ನೇ ಹತ್ಯೆ ಮಾಡುವುದು, ಹುಡುಗಿಯ ಕೈಯನ್ನು ತನ್ನ ತಂದೆಯೇ ಕತ್ತರಿಸುವಂತಹ ಘಟನೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ಇದು ಭಾರತಕ್ಕೇನು ಹೊಸದಲ್ಲ. ನಮ್ಮ ಪೂರ್ವಜರ ಕಾಲದಿಂದಲೂ ನಡೆದು ಕೊಂಡು ಬಂದಂತಹ ಅನಿಷ್ಟ ಪದ್ಧತಿ ಇದು. ಭಾರತ ಹಲವಾರು ಮಜಲುಗಳಲ್ಲಿ ಪ್ರಗತಿ ಕಂಡಿದ್ದರೂ ಈ ಅನಿಷ್ಟ ಪದ್ಧತಿಯಿಂದ ಇನ್ನೂ ಮುಕ್ತಿ ಕಂಡಿಲ್ಲ. ದೇಶದಲ್ಲಿ ಮೇಲ್ಜಾತಿಯವರು ದಲಿತರನ್ನು ಇನ್ನೂ ತಮ್ಮವರು ಎಂದು ಒಪ್ಪಿಕೊಳ್ಳುವ ಮನಸ್ಥಿತಿಗೆ ಬಂದಿಲ್ಲ. ದಲಿತರ ವೀಸಲಾತಿಯ ಬಗ್ಗೆ ಪ್ರಶ್ನಿಸಲಾಗುತ್ತಿದೆ, ಮೀಸಲಾತಿ ರದ್ದುಪಡಿಸಲು ಒತ್ತಾಯಿಸಲಾಗುತ್ತಿದೆ. ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಾತ್ರ ದಲಿತರ ಓಲೈಕೆ ಮಾಡುತ್ತಾ, ಚುನಾವಣಾ ಸಮಯದಲ್ಲಿ ದಲಿತರ ಮನೆಯಲ್ಲಿ ಊಟ ಮಾಡುವ ನಾಟಕವಾಡುವ ರಾಜಕಾರಣಿಗಳು ದಲಿತರನ್ನು ಕೈಗೊಂಬೆಗಳಂತೆ ಉಪಯೋಗಿಸುತ್ತಿರುವುದು ದೇಶದ ದುರಂತ. ದೇಶದ ಪ್ರಜ್ಞಾವಂತ ಪ್ರಜೆಗಳು ದಲಿತರ ಏಳಿಗೆಗಾಗಿ ಧ್ವನಿಗೂಡಿಸಿದರೆ ಮಾತ್ರ ಭಾರತವನ್ನು ಸಂಪೂರ್ಣ ಜಾತ್ಯತೀತ ರಾಷ್ಟ್ರ ಎಂದು ಒಪ್ಪಿಕೊಳ್ಳಲು ಸಾಧ್ಯ.