ಡಾ. ಕಂಬಾರರ ಆಯ್ಕೆ ಸ್ವಾಗತಾರ್ಹ
ಮಾನ್ಯರೇ,
ಧಾರವಾಡ ಜಿಲ್ಲೆಯಲ್ಲಿ ಡಿಸೆಂಬರ್ 7, 8, 9ರಂದು ಮೂರು ದಿನಗಳ ಕಾಲ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಬೆಳಗಾವಿ ಜಿಲ್ಲೆಯ ಘೋಡಗೇರಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ನಿರ್ಧಾರ.
ಕನ್ನಡ ಸಾಹಿತ್ಯ, ರಂಗಭೂಮಿ, ಜಾನಪದ, ಸಿನೆಮಾ ಕ್ಷೇತ್ರಕ್ಕೆ ಡಾ.ಚಂದ್ರಶೇಖರ ಕಂಬಾರರ ಕೊಡುಗೆ ಅಪಾರ. ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿರುವ ಡಾ. ಕಂಬಾರರು ಕವಿ, ಕಥೆಗಾರ, ಕಾದಂಬರಿಕಾರರಷ್ಟೇ ಅಲ್ಲದೆ ಬಹುಮುಖ ಪ್ರತಿಭೆಗಳನ್ನು ಹೊಂದಿರುವ ಕನ್ನಡದ ಶ್ರೇಷ್ಠ ವಿದ್ವಾಂಸರು. ಕನ್ನಡ ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ. ಕಥೆ, ಕಾವ್ಯ, ನಾಟಕ, ಸಂಶೋಧನಾ ಗ್ರಂಥ, ಕಾದಂಬರಿ ಸೇರಿದಂತೆ ಎಲ್ಲಾ ಬಗ್ಗೆಯ ಸಾಹಿತ್ಯವನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಕೃಷಿಗೆ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಅನೇಕ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ದೊರೆತಿವೆ. ಸದಾ ಕನ್ನಡ ನಾಡು ನುಡಿ, ನೆಲ ಜಲಕ್ಕಾಗಿ ಶ್ರಮಿಸುತ್ತಿರುವ ಕಂಬಾರರು ಅವನತಿಯತ್ತ ಸಾಗುತ್ತಿರುವ ಕನ್ನಡ ಶಾಲೆಗಳ ಉಳಿವಿಗಾಗಿ ಧ್ವನಿ ಎತ್ತುವ ಮೂಲಕ ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ನಿರತರಾಗಿದ್ದಾರೆ. ಇಂತಹ ಪ್ರತಿಭಾವಂತರ ಆಯ್ಕೆ ಸೂಕ್ತ ಮತ್ತು ಅಭಿನಂದನಾರ್ಹವಾಗಿದೆ.