ಸಿಬಿಐ ಮೇಲೆ ಸರ್ಜಿಕಲ್ ಸ್ಟ್ರೈಕ್!
ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ರನ್ನು ರಾತ್ರೋರಾತ್ರಿ ರಜೆ ಮೇಲೆ ಕಳಿಸಿದ್ದಕ್ಕೆ ಪ್ರಮುಖ ಕಾರಣವೇನು? ಸಿಬಿಐನಲ್ಲಿ ವಿಶೇಷ ನಿರ್ದೇಶಕರಾಗಿದ್ದ, ಮೋದಿಯವರ ಪರಮಾಪ್ತ ಎಂದು ಹೇಳಲಾದ ರಾಕೇಶ್ ಅಸ್ತಾನಾ ಮತ್ತು ನಿರ್ದೇಶಕ ಅಲೋಕ್ ಕುಮಾರ್ ನಡುವಿನ ತಿಕ್ಕಾಟವನ್ನು ನಿಯಂತ್ರಿಸಲು ಈ ಕ್ರಮ ಎಂದು ಸರಕಾರ ಹೇಳಿದ್ದನ್ನೇ ಬಹುಪಾಲು ಮಾಧ್ಯಮಗಳು ಉರು ಹೊಡೆದಿವೆ. ಆದರೆ, ರಫೇಲ್ ಡೀಲ್ಗೆ ಸಂಬಂಧಿಸಿದ ದಾಖಲೆಗಳನ್ನು ನೋಡುತ್ತಿದ್ದ ಅಲೋಕ್ ಕುಮಾರ್, ಈ ದಾಖಲೆಗಳ ಅಥೆಂಟಿಸಿಟಿಯನ್ನು ಒದಗಿಬೇಕೆಂದು ರಕ್ಷಣಾ ಇಲಾಖೆಗೆ ಬೇಡಿಕೆ ಇಟ್ಟಿದ್ದೇ ತಡ ನಡುರಾತ್ರಿಯಲ್ಲಿ ಆದೇಶ ಹೊರಡಿಸಿ, ಆ ಸ್ಥಾನದಿಂದ ಅವರನ್ನು ಹೊರ ಹಾಕಿದೆ ಮೋದಿ ಸರಕಾರ.ಕಾರ್ಯಾಚರಣೆಗೂ ಮುನ್ನ ಸಂಜೆ ವೇಳೆ ನರೇಂದ್ರ ಮೋದಿ, ಅಮಿತ್ ಶಾ, ರಕ್ಷಣಾ ಸಲಹೆಗಾರ ಅಜಿತ್ ಧೋವಲ್ ಸುದೀರ್ಘ ಚರ್ಚೆ ನಡೆಸಿದ್ದರು. ಈ ಚರ್ಚೆಯ ಫಲವೇ ಸಿಬಿಐ ಮೇಲೆ ಸರ್ಜಿಕಲ್ ಸ್ಟ್ರೈಕ್! ಇದಕ್ಕೂ ಮೊದಲು ರಫೇಲ್ ಡೀಲ್ ವಿರುದ್ಧ ತನಿಖೆಗೆ ಆಗ್ರಹಿಸಿ, ಮಾಜಿ ಸಚಿವರಾದ ಅರುಣ್ ಶೌರಿ, ಯಶವಂತ್ ಸಿನ್ಹಾ ಮತ್ತು ವಕೀಲ ಪ್ರಶಾಂತ್ ಭೂಷಣ್ ದೂರು ಸಲ್ಲಿಸಿದ್ದರು. ಈ ಮೂವರು ದೂರುದಾರರನ್ನು ಅಲೋಕ್ಕುಮಾರ್ ಭೇಟಿಗೆ ಕರೆದ ಕೂಡಲೇ, ಅವರನ್ನು ಸಿಬಿಐನಿಂದ ಹೊರಹಾಕುವ ಸಂಚು ರೂಪುಗೊಂಡಿತ್ತೆಂದು ಅಂದಾಜಿಸಬಹುದು.
ಅಂದ ಹಾಗೆ ಗುಜರಾತ್ ಕೇಡರ್ನ ರಾಕೇಶ್ ಅಸ್ತಾನಾರನ್ನು ವಿಶೇಷ ನಿರ್ದೇಶಕ ಹುದ್ದೆಗೆ ನೇಮಿಸಿದ್ದು ಕೂಡ ಮೊದಲಿನಿಂದಲೂ ಆಕ್ಷೇಪಕ್ಕೆ ಒಳಗಾಗುತ್ತ ಬಂದಿದೆ. ಹಲವಾರು ಪ್ರಕರಣಗಳಲ್ಲಿ ಅಸ್ತಾನಾ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಹಲವರಿಂದ ದೊಡ್ಡ ಮೊತ್ತದ ಲಂಚ ಪಡೆದಿದ್ದರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಇದೇ ಕೇಸಿನಲ್ಲಿ ಅಸ್ತಾನಾ ಅವರ ಆಪ್ತ ಸಿಬಿಐ ಇನ್ಸ್ಪೆೆಕ್ಟರ್ ದಿನೇಶ ಕುಮಾರ್ ಅವರನ್ನು ಬಂಧಿಸಲಾಗಿದೆ. ಅಸ್ತಾನಾರನ್ನು ಸೋಮವಾರದವರೆಗೆ ಬಂಧಿಸದಿರಲು ಕೋರ್ಟ್ ಸೂಚಿಸಿದೆ. ಈಗ ಕಾಟಾಚಾರಕ್ಕೆ ಎಂಬಂತೆ ಸರಕಾರ ಅಸ್ತಾನಾರನ್ನೂ ರಜೆಯ ಮೇಲೆ ಕಳಿಸಿದೆ.
ಸುಪ್ರಿಂಕೋರ್ಟ್ನಲ್ಲಿ ಕೇಂದ್ರ ಸರಕಾರದ ಕ್ರಮ ವಿರೋಧಿಸಿ ದೂರು ಸಲ್ಲಿಸಿರುವ ಅಲೋಕ್ಕುಮಾರ್, ‘‘ನಿರ್ದೇಶಕ ಹುದ್ದೆಗೆ ಬೇಕಾದ ಎಲ್ಲ ಮಾನದಂಡಗಳನ್ನು ಪರಿಶೀಲಿಸಿ, 2017ರಲ್ಲಿ ಸಿಜೆಐ ಈ ಸ್ಥಾನಕ್ಕೆ ನನ್ನನ್ನು ನೇಮಿಸಿದೆ. ಯಾವ ಕಾರಣಕ್ಕೂ ಸಿಬಿಐ ನಿರ್ದೇಶಕರನ್ನು ಎರಡು ವರ್ಷಗಳ ಮೊದಲೇ ಅಧಿಕಾರದಿಂದ ಕೆಳಗಿಳಿಸಬಾರದು ಎಂಬ ನಿಯಮವನ್ನು ಸರಕಾರ ಗಾಳಿಗೆ ತೂರಿದೆ. ರಜೆಯ ಮೇಲೆ ಕಳಿಸುವ ವಾಮಮಾರ್ಗವೂ ನಿಯಮದ ಉಲ್ಲಂಘನೆಯೆ ಆಗಿದೆ’’ ಎಂದು ತಮ್ಮ 8 ಪುಟಗಳ ಅರ್ಜಿಯಲ್ಲಿ ವಿವರಿಸಿದ್ದಾರೆ.
‘‘ಸಿಬಿಐನ ಎಲ್ಲ ಪ್ರಮುಖ ಅಧಿಕಾರಿಗಳು ಕೆಲವು ಕೇಸುಗಳ ವಿಷಯದಲ್ಲಿ ನಿರ್ದಿಷ್ಟ ಬಗೆಯ ಕಾರ್ಯಾಚರಣೆಯನ್ನು ಮಾಡಬೇಕೆಂದು ಒಮ್ಮತಕ್ಕೆ ಬಂದ ಮೇಲೂ, ಅಸ್ತಾನಾ ಅನಗತ್ಯವಾಗಿ ಇದಕ್ಕೆ ಅಡೆತಡೆ ಸೃಷ್ಟಿಸುತ್ತ ಬಂದಿದ್ದಾರೆ’’ ಎಂದೂ ದೂರಿನಲ್ಲಿ ಅಲೋಕ್ ವಿವರಿಸಿದ್ದಾರೆ.
ಸಿಬಿಐ ನಿರ್ದೇಶಕರನ್ನು ಎರಡು ವರ್ಷಗಳ ಕಾಲ ಬದಲಿಸುವಂತಿಲ್ಲ. ಸಿಬಿಐನಲ್ಲಿ ನಡೆಯುತ್ತಿದ್ದ ಆಂತರಿಕ ಕಿತ್ತಾಟವನ್ನು ತಡೆಯಲು ಅಲೋಕ್ ಮತ್ತು ಅಸ್ತಾನಾರನ್ನು ರಜೆ ಮೇಲೆ ಕಳಿಸುವುದು ಅನಿವಾರ್ಯವಾಗಿತ್ತು ಎಂದು ಸರಕಾರ ಕೋರ್ಟಿನಲ್ಲಿ ವಾದಿಸಬಹುದು. ಆದರೆ ಕೋರ್ಟ್ ಇದನ್ನು ಒಪ್ಪದೇ ಹೋದರೆ ಸರಕಾರಕ್ಕೆ ತಪರಾಕಿ ಕೊಡುವುದಂತೂ ಖಚಿತ.
ಈಗ ಸದ್ಯಕ್ಕೆ ನಿರ್ದೇಶಕರ ಸ್ಥಾನದಲ್ಲಿ ನಾಗೇಶ್ವರ್ ರಾವ್ರನ್ನು ಸರಕಾರ ತಂದು ಕೂರಿಸಿದೆ. ರಾವ್ರನ್ನು ಈ ಮೊದಲು ಜಂಟಿ ನಿರ್ದೇಶಕರನ್ನಾಗಿ ನೇಮಿಸಿದ್ದರು. ಭ್ರಷ್ಟಾಚಾರದ ಕೆಲವು ಪ್ರಕರಣಗಳಿಗಾಗಿ ಅವರ ಮೇಲೂ ಅಲೋಕ್ ಕ್ರಮ ಕೈಗೊಳ್ಳಲು ಯತ್ನಿಸಿದ್ದರು. ಇದಕ್ಕೆ ಮೋದಿಯವರಿಂದ ನೇಮಿತರಾಗಿರುವ ಮುಖ್ಯ ಜಾಗೃತ ಆಯುಕ್ತ ಕೆ.ವಿ. ಚೌಧರಿ ತಡೆಯೊಡ್ಡಿದ್ದರು. ಅಂದಂತೆ ವಿಜಯ ಮಲ್ಯ ಕೇಸಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೋದಿಯವರ ಆಪ್ತ ರಾಕೇಶ್ ಅಸ್ತಾನಾ ಮಲ್ಯಗೆ ಲಂಡನ್ ಕೋರ್ಟಿನ ವಿಚಾರಣೆಯಲ್ಲಿ ನೆರವಾಗುವಂತಹ ನಿರ್ಣಯ ಕೈಗೊಂಡ ಆರೋಪವನ್ನೂ ಎದುರಿಸುತ್ತಿದ್ದಾರೆ!
ಇನ್ನೊಂದು ಕಡೆ, ರಫೇಲ್ ಡೀಲ್ ಕುರಿತ ವಿಚಾರಣೆಯೂ ಕೋರ್ಟಿನ ಮುಂದೆ ಬರಲಿದೆ. ಎಲ್ಲವೂ ಒಂದಕ್ಕೊಂದು ತಳಕು ಹಾಕಿಕೊಂಡಂತಿವೆ. ಮೋದಿ, ಶಾರ ಸರ್ವಾಧಿಕಾರ, ದುರಾಡಳಿತ ಈ ಮೂಲಕವಾದರೂ ಜನತೆಗೆ ತಿಳಿಯುವಂತಾಗಲಿ.