ಗೂಡಿನೊಳಗೆ ದಿನ ದೂಡುತ್ತಿರುವ ರಾಜಾಸೀಟು ಪುಟಾಣಿ ರೈಲು
‘ಕಾವೇರಿ ಎಕ್ಸ್ಪ್ರೆಸ್’ ಇಲ್ಲದೆ ಪ್ರವಾಸಿಗರ ಪ್ರಯಾಣ ಬೋರು
ಮಡಿಕೇರಿ, ಅ.27: ಕೊಡಗಿಗೆ ರೈಲು ಮಾರ್ಗ ಬರಲಿದೆ ಎನ್ನುವ ಮಾತು ಕಳೆದ ಹತ್ತು ವರ್ಷಗಳಿಂದ ಜನಪ್ರತಿನಿಧಿಗಳಿಂದ ಕೇಳಿ ಬರುತ್ತಲೇ ಇದೆ. ಆದರೆ ಪುಟಾಣಿ ರೈಲನ್ನೇ ಓಡಿಸಲಾಗದ ಆಡಳಿತ ವ್ಯವಸ್ಥೆ ಜಿಲ್ಲೆಯಲ್ಲಿದೆ ಎನ್ನುವ ಅಸಮಾಧಾನ ಜನರಲ್ಲಿದೆ. ಕಾರಣ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನದ ಬಳಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ‘ಕಾವೇರಿ ಎಕ್ಸ್ಪ್ರೆಸ್’ ಇಂದು ಹಳಿ ಬಿಟ್ಟು ಗೂಡು ಸೇರಿದೆ.
ಕೊಡಗಿನ ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯ ರಾಜಾಸೀಟು ಉದ್ಯಾನವನ ನೈಸರ್ಗಿ ಕ ದೃಶ್ಯ ಸೊಬಗಿನಿಂದ ಪ್ರವಾಸಿಗರನ್ನು ಕೈಚಾಚಿ ಕರೆಯುತ್ತದೆ. ತಂಪಾದ ಹವಾಮಾನ, ಪ್ರಶಾಂತ ವಾತಾವರಣದೊಂದಿಗೆ ಏಕಾಂತವನ್ನು ಬಯಸುವವರ ಪಾಲಿಗೂ ರಾಜಾಸೀಟು ಹೇಳಿ ಮಾಡಿಸಿದಂತಿದೆ.
ರಾಜಾಸೀಟಿಗೆ ಆಗಮಿಸುವ ಪ್ರವಾಸಿಗರಿಗೆ ‘ಕಾವೇರಿ ಎಕ್ಸ್ಪ್ರೆಸ್’ ಎಂಬ ಪುಟಾಣಿ ರೈಲು ಅದೆಷ್ಟೋ ವರ್ಷಗಳಿಂದ ಜಾಲಿರೈಡ್ ಹೆಸರಿನಲ್ಲಿ ಮುದ ನೀಡುತ್ತಿತ್ತು. ಮಕ್ಕಳು, ವಯೋವೃದ್ಧ್ದರು, ನವ ವಿವಾಹಿತರು, ಯುವ ಪ್ರೇಮಿಗಳು ಎನ್ನುವ ಯಾವ ಭೇದವಿಲ್ಲದೆ ಎಲ್ಲರೂ ಈ ಕಾವೇರಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸಿ ರಾಜಾಸೀಟು ಪ್ರವಾಸಿ ತಾಣದ ಸೊಬಗು ಸವಿಯುತ್ತಿದ್ದರು.
ಆದರೆ ಆಗಸ್ಟ್ ತಿಂಗಳಿನಲ್ಲಿ ಮಡಿಕೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಣಾಮ ಕಾವೇರಿ ಎಕ್ಸ್ಪ್ರೆಸ್ಗೂ ತಟ್ಟಿದೆ. ಅತೀವ ಮಳೆಯಿಂದಾಗಿ ‘ಕಾವೇರಿ ಎಕ್ಸ್ ಪ್ರೆಸ್’ ಸಂಚರಿಸುವ ಹಳಿಗಳು ತುಕ್ಕು ಹಿಡಿದಿದ್ದು, ಹಳಿಗಳಿಗೆ ಅಳವಡಿಸಿದ್ದ ಮರದ ದಿಮ್ಮಿಗಳು ಗೆದ್ದಲು ಹಿಡಿದಿವೆೆ. ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಜಿಲ್ಲೆಯ ಕಡೆ ಪ್ರವಾಸಿಗರು ಆಗಮಿಸಲು ಹಿಂದೇಟು ಹಾಕಿದ್ದರಿಂದ ಪ್ರವಾಸಿಗರಿಗಾಗಿ ಕಾಯುತ್ತಿದ್ದ ‘ಕಾವೇರಿ ಎಕ್ಸ್ಪ್ರೆಸ್’ ತನ್ನ ಸಂಚಾರದ ವೇಳಾಪಟ್ಟಿಯನ್ನು ರದ್ದುಗೊಳಿಸಿ ಗೂಡು ಸೇರಿದೆ.
ಪುಟಾಣಿ ರೈಲನ್ನು ಹರಾಜು ಮೂಲಕ ಗುತ್ತಿಗೆ ನೀಡಿ ಹಣ ಸಂಗ್ರಹಿಸುವ ಮಡಿಕೇರಿ ನಗರಸಭೆಗೆ ರೈಲು ಹಳಿಗಳ ನಿರ್ವಹಣೆ, ರೈಲು ಸಂಚಾರ ಮಾರ್ಗದಲ್ಲಿ ಕಾಡು ಕಡಿಸಿ ಸ್ವಚ್ಛತೆ ಕಾಪಾಡುವ ಕಾರ್ಯ ಮರೆತು ಹೋಯಿತೆ ಅಥವಾ ನಿರ್ಲಕ್ಷ್ಯ ಭಾವನೆ ಮೂಡಿದೆಯೇ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.