ಸರಳ ಮದುವೆಗೆ ಸಾಕ್ಷಿಯಾದ ‘ಅಮೃತಭೂಮಿ’
ಬೆಂಗಳೂರು, ಜೂ. 2: ಸಾವಯವ ಕೃಷಿ ಭೂಮಿಯಲ್ಲಿ ಮದುವೆ ಮಂಟಪ ಸಿಂಗಾರಗೊಂಡಿತ್ತು. ಮಂಟಪದ ಸುತ್ತಲೂ ಹಲಸು, ಮಾವು, ನಿಂಬೆ ಮರಗಳಿಂದ ತುಂಬಿದ್ದ ಹಚ್ಚ ಹಸಿರು. ಇವುಗಳ ನಡುವೆ ವಧು-ವರ ಕೈ-ಕೈ ಹಿಡಿದು ನೆರೆದಿದ್ದ ಕುಟಂಬಸ್ಥರು, ಸ್ನೇಹಿತರ ಮುಂದೆ ‘ನಾವು ಮದುವೆಯಾಗುತ್ತಿದ್ದೇವೆ. ಇನ್ನು ಮುಂದೆ ನಮ್ಮ ಬದುಕಿನಲ್ಲಿ ಎದುರಾಗಬಹುದಾದ ಸುಖ-ದುಖಃ, ನೋವು, ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನೆಡೆಯಲಿದ್ದೇವೆ’ ಎಂದು ಪ್ರಮಾಣ ಮಾಡುವ ಮೂಲಕ ಸರಳವಾಗಿ ಮದುವೆಯಾದರು.
ಅನಿಮೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ವರ ಜಿ.ಎನ್.ನರೇಂದ್ರ ಹಾಗೂ ಆಂಧ್ರಪ್ರದೇಶ ಮೂಲದ ದೇವನಹಳ್ಳಿ ನಿವಾಸಿ ಎಂಟೆಕ್ ಪದವೀಧರೆ ವಧು ಕವಿತಾ ಶುಕ್ರವಾರ ಚಾಮರಾಜನಗರದ ಹೊಂಡರಬಾಳು ಗ್ರಾಮದಲ್ಲಿರುವ ಸಾವಯವ ಕೃಷಿ ತಾಣವಾದ ರೈತ ಮುಖಂಡ ಪ್ರೊ.ಎಂ.ಡಿಎನ್(ನುಂಜುಂಡಸ್ವಾಮಿ) ಸ್ಥಾಪಿಸಿರುವ ಅಮೃತಭೂಮಿಯಲ್ಲಿ ಸರಳವಾಗಿ ಮದುವೆಯಾಗಿ ಯುವ ಜನತೆಗೆ ಮಾದರಿಯಾದರು.
ನಿಡುಮಾಮಿಡಿ ಮಹಾಸಂಸ್ಥಾನದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಧು-ವರನಿಗೆ ಸರಳ ಮದುವೆಯ ಪ್ರಮಾಣ ವಚನವನ್ನು ಬೋಧಿಸುವ ಮೂಲಕ, ಸಾವಿತ್ರಿ ಬಾಯಿಫುಲೆ ಪ್ರಾರಂಭಿಸಿದ ಸರಳ ಮದುವೆಯ ಪದ್ಧತಿ, ಸ್ವಾತಂತ್ರ ಹೋರಾಟಗಾರರ ಆದರ್ಶದ ಸರಳ ಮದುವೆಗಳು, ಆ ನಂತರ ದಲಿತ ಹಾಗು ರೈತ ಚಳವಳಿ ಮೂಲಕ ಹಾದು ಬಂದ ಸರಳ ಮದುವೆಯ ಪರಿಯನ್ನು ಅಲ್ಲಿ ನೆರೆದಿದ್ದವರಿಗೆ ತಿಳಿ ಹೇಳಿದರು.
ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಸರಳ ಮದುವೆಯಾಗಿ ಆ ಕಾಲಕ್ಕೆ ಮಾದರಿಯಾದವರು. ಅದೇ ರೀತಿಯಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ವಿದೇಶಿಯ, ಅಂತರ್ವರ್ಣಿಯ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಎಲ್ಲ ಗಡಿಗಳನ್ನು ಮೀರಿ ಮಾನವೀಯತೆಯ ತತ್ವಗಳನ್ನು ಎತ್ತಿ ಹಿಡಿದಿದ್ದಾರೆ. ಈಗ ನರೇಂದ್ರ ಹಾಗೂ ಕವಿತಾರವರು ಜಾತಿ, ಭಾಷೆಯನ್ನು ಮೀರಿ ಮದುವೆಯಾಗುವ ಮೂಲಕ ಬಸವಣ್ಣ, ಕುವೆಂಪು, ಪ್ರೊ.ನಂಜುಂಡಸ್ವಾಮಿ ಅವರ ಆಶಯಗಳನ್ನು ಮುಂದುವರೆಸುತ್ತಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ವರ ನರೇಂದ್ರ ಹಾಗೂ ವಧು ಕವಿತಾರವರು ಪುರೋಹಿತಶಾಹಿ ಆಚರಣೆಯಿಲ್ಲದೆ ಸರಳವಾಗಿ ಮದುವೆಯಾಗಲು ಅನುಮತಿ ನೀಡಿದ ಅವರ ಕುಟುಂಬಸ್ಥರಿಗೆ ಧನ್ಯವಾದ ಹೇಳಲೇಬೇಕು. ರೂಢಿಗತ ಸಂಪ್ರದಾಯ ವ್ಯವಸ್ಥೆಯಲ್ಲಿ ಕಿಂಚಿತ್ ಹೆಚ್ಚು ಕಡಿಮೆಯಾದರೂ ಬಂಧು-ಬಳಗ, ನೆರೆಹೊರೆಯವರ ತೆಗಳಿಕೆಗೆ ತುತ್ತಾಗಬೇಕಾಗುತ್ತದೆ. ಆದರೆ, ಅದೆಲ್ಲವನ್ನು ಮೀರಿ ವಧು-ವರನ ತಂದೆ ತಾಯಿ ಸರಳ ಮದುವೆಗೆ ಅನುಮತಿ ನೀಡಿದ್ದಾರೆ. ಇಂತಹ ಪೋಷಕರು ಸಂಖ್ಯೆ ದ್ವಿಗುಣವಾಗಲಿ ಎಂದು ಅವರು ಆಶಿಸಿದರು.
ರಾಷ್ಟ್ರಕವಿ ಕುವೆಂಪು ತನ್ನ ಮಗ ಪೂರ್ಣಚಂದ್ರ ತೇಜಸ್ವಿಯ ಅಂತರ್ಜಾತಿ ಮದುವೆಗೆ ತಾವೇ ಖುದ್ದಾಗಿ ಮಂತ್ರ ಮಾಂಗಲ್ಯ ಎಂಬ ಸೂತ್ರ ಬರೆದು ಪುರೋಹಿತಶಾಹಿ ರಹಿತ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಪದ್ಧತಿಯಲ್ಲಿ ಮದುವೆ ಮಾಡಿದರು. ಇವತ್ತು ನಡೆಯುತ್ತಿರುವ ನರೇಂದ್ರ -ಕವಿತಾ ರವರ ಮದುವೆ ಪೂರ್ಣಚಂದ್ರ ತೇಜಸ್ವಿ ಹಾಗೂ ರಾಜೇಶ್ವರಿರವರ ಮದುವೆಯನ್ನು ನೆನೆಪಿಸುತ್ತಿದೆ ಎಂದು ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿರುವ ಹಲವು ಆತ್ಮಹತ್ಯೆ ಪ್ರಕರಣಗಳು ಮದುವೆಗಾಗಿ ಮಾಡಿದ ಸಾಲವನ್ನು ತೀರಿಸದ ಕಾರಣಕ್ಕಾಗಿ ನಡೆಯುತ್ತವೆ ಎಂಬುದು ರೈತ ಸಂಘಟನೆಗಳು ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ. ಹೀಗಾಗಿ ಯಾವುದೆ ಆಡಂಬರ ವಿಲ್ಲದೆ ಸರಳವಾಗಿ ಮದುವೆಯಾಗುವ ಮೂಲಕ ಬದುಕನ್ನು ಮತ್ತಷ್ಟು ಸುಂದರವಾಗಿಸಿಕೊಳ್ಳಲು ಯುವ ಜನತೆ ಹಾಗೂ ಪೋಷಕರು ಮುಂದಾಗಬೇಕು ಎಂದು ಅವರು ಆಶಿಸಿದರು.
ಈ ವೇಳೆ ಅಮೃತಭೂಮಿ ಸಂಸ್ಥೆಯ ಚುಕ್ಕಿ ನಂಜುಂಡಸ್ವಾಮಿ, ರೈತ ಸಂಘದ ನಂದಿನಿ , ನಾಗೇಂದ್ರ, ದೀನಬಂಧ ಸಂಸ್ಥೆಯ ಜಯದೇವ ಹಾಗೂ ವರ ನರೇಂದ್ರನ ತಂದೆ ಗೋವಿಂದಪ್ಪ, ತಾಯಿ ಸುಶೀಲಮ್ಮ, ವಧು ಕವಿತಾರವರ ತಂದೆ ನಾರಾಯಣಸ್ವಾಮಿ, ತಾಯಿ ರಮಾದೇವಿ ಹಾಗೂ ಸ್ನೇಹಿತರು, ಕುಟುಂಬಸ್ಥರು ಉಪಸ್ಥಿತರಿದ್ದರು.
ಪುರೋಹಿತಶಾಹಿ ಆಚರಣೆಯಿಲ್ಲದೆ ಸರಳವಾಗಿ ಮದುವೆಯಾಗಲು ಇಚ್ಚಿಸುವ ಯುವಕ-ಯುವತಿಯರಿಗೆ ಅಮೃತಭೂಮಿಯಲ್ಲಿ ಉಚಿತ ಮದುವೆಗೆ ಅವಕಾಶ ಕಲ್ಪಿಸಲಾಗುವುದು. ಆ ಮೂಲಕ ರಾಷ್ಟ್ರಕವಿ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಪ್ರೊ.ನಂಜುಂಡಸ್ವಾಮಿ ಆಶಯಗಳು ಯುವ ಜನತೆಯ ಬದುಕಿನಲ್ಲಿ ನೆಲೆ ನಿಲ್ಲಬೇಕೆಂಬುದು ನಮ್ಮ ಆಶಯವಾಗಿದೆ.
-ಚುಕ್ಕಿ ನಂಜುಂಡಸ್ವಾಮಿ, ಅಮೃತಭೂಮಿ ಮುಖ್ಯಸ್ಥೆ