ಜಾರ್ಖಂಡ್ನ ಆದಿವಾಸಿಗಳಿಗೆ ವಿಶ್ವಾಸ ದ್ರೋಹ
ಜಾರ್ಖಂಡ್ನ ಖುಂಟಿ ಜಿಲ್ಲೆಯಲ್ಲಿ 2017ರಿಂದ ಆದಿವಾಸಿಗಳು ಪಾತಾಲ್ಗಡಿ ಚಳವಳಿ ಎಂದು ಕರೆಯಲಾದ ಕಲ್ಲಿನ ಮೇಲೆ ಕೆತ್ತಿ ಬರೆಯುವ ಈ ತಂತ್ರವನ್ನು ಸಂವಿಧಾನದ ಐದನೇ ಪರಿಚ್ಛೇದದಲ್ಲಿ ತಮಗೆ ನೀಡಲಾಗಿರುವ ವಿಶೇಷ ಸ್ವಾಯತ್ತತೆಯ ಅಧಿಕಾರದ ಮೇಲೆ ಬೆಳಕು ಚೆಲ್ಲಲು ಬಳಸುತ್ತಿದ್ದಾರೆ. ಆದರೆ ಇದಕ್ಕೆ ಸರಕಾರದ ಪ್ರತಿಕ್ರಿಯೆ ಆಘಾತಕಾರಿಯಾಗಿದೆ. ಜಾರ್ಖಂಡ್ ಪೊಲೀಸರು ಕನಿಷ್ಠ 10,000 ಮಂದಿಯ ಮೇಲೆ ವಿಧ್ವಂಸಕ ಕೃತ್ಯದ ಆಪಾದನೆ ಹೊರಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಇಷ್ಟೊಂದು ಬೃಹತ್ ಮಟ್ಟದ ಪೊಲೀಸ್ ದಬ್ಬಾಳಿಕೆಯ ಪ್ರಕರಣ ಇದೊಂದೇ ಇರಬಹುದು.
ವಸಾಹತುಶಾಹಿ ಆಡಳಿತದಿಂದ ಮುಕ್ತರಾದ ಜನರಿಗೆ ಹಲವಾರು ರೀತಿಯ ಹಕ್ಕುಗಳನ್ನು ನೀಡುವ ಒಂದು ಅಸಾಮಾನ್ಯ ದಾಖಲೆ ಎಂದು ಭಾರತದ ಸಂವಿಧಾನವನ್ನು ವ್ಯಾಪಕವಾಗಿ ಪರಿಗಣಿಸಲಾಗಿದೆ. ಆದರೆ ಜಾರ್ಖಂಡ್ನಲ್ಲಿ ಅದೇ ಸಂವಿಧಾನದ ಕೆಲವು ಭಾಗಗಳನ್ನು ಬೃಹತ್ ಶಿಲೆಗಳ ಮೇಲೆ ಕೊರೆದು ಬರೆದಿರುವುದಕ್ಕಾಗಿ ಆದಿವಾಸಿಗಳನ್ನು ದಂಡಿಸಲಾಗುತ್ತಿದೆ.
ಜಾರ್ಖಂಡ್ನ ಖುಂಟಿ ಜಿಲ್ಲೆಯಲ್ಲಿ 2017ರಿಂದ ಆದಿವಾ ಸಿಗಳು ಪಾತಾಲ್ಗಡಿ ಚಳವಳಿ ಎಂದು ಕರೆಯಲಾದ ಕಲ್ಲಿನ ಮೇಲೆ ಕೆತ್ತಿ ಬರೆಯುವ ಈ ತಂತ್ರವನ್ನು ಸಂವಿಧಾನದ ಐದನೇ ಪರಿಚ್ಛೇದದಲ್ಲಿ ತಮಗೆ ನೀಡಲಾಗಿರುವ ವಿಶೇಷ ಸ್ವಾಯತ್ತತೆಯ ಅಧಿಕಾರದ ಮೇಲೆ ಬೆಳಕು ಚೆಲ್ಲಲು ಬಳಸುತ್ತಿದ್ದಾರೆ. ಆದರೆ ಇದಕ್ಕೆ ಸರಕಾರದ ಪ್ರತಿಕ್ರಿಯೆ ಆಘಾತಕಾರಿಯಾಗಿದೆ. ಜಾರ್ಖಂಡ್ ಪೊಲೀಸರು ಕನಿಷ್ಠ 10,000 ಮಂದಿಯ ಮೇಲೆ ವಿಧ್ವಂಸಕ ಕೃತ್ಯದ ಆಪಾದನೆ ಹೊರಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಇಷ್ಟೊಂದು ಬೃಹತ್ ಮಟ್ಟದ ಪೊಲೀಸ್ ದಬ್ಬಾಳಿಕೆಯ ಪ್ರಕರಣ ಇದೊಂದೇ ಇರಬಹುದು. ಇದಕ್ಕೆ ಪ್ರತಿಕ್ರಿಯಿಸುತ್ತ ರಾಹುಲ್ ಗಾಂಧಿ ಈ ಸಾಮೂಹಿಕ ಮೊಕದ್ದಮೆಗಳ ಘಟನೆ ‘‘ನಮ್ಮ ರಾಷ್ಟ್ರದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಬೇಕಿತ್ತು’’ ಎಂದಿದ್ದಾರೆ. ಆದಿವಾಸಿ ನಾಯಕಿ ದಯಾಮಣಿ ಬರ್ಲ ಸರಕಾರದ ಈ ಕ್ರಮದಿಂದ ಆದಿವಾಸಿಗಳಿಗೆ ಪ್ರಜಾಪ್ರಭುತ್ವದಲ್ಲಿರುವ ನಂಬಿಕೆಯೇ ಕಳೆದುಹೋಗಬಹುದೆಂದು ಎಚ್ಚರಿಸಿದ್ದಾರೆ.
2011ರ ತೀರ್ಪೊಂದರಲ್ಲಿ ಸುಪ್ರೀಂ ಕೋರ್ಟು ಆದಿವಾಸಿಗಳನ್ನು ‘‘ಭಾರತದ ಮೂಲ ನಿವಾಸಿಗಳು’’ ಎಂದು ಕರೆದಿತ್ತು. ಆದರೆ ಆಧುನಿಕ ಭಾರತವು ಈ ಮೂಲ ನಿವಾಸಿಗಳಿಗೆ ಬಹುತೇಕ ವಿಶ್ವಾಸದ್ರೋಹಗೈದಿದೆ.
1940ರ ದಶಕದಲ್ಲಿ ಸಾಂವಿಧಾನಿಕ ಸಭೆಯಲ್ಲಿ ಆದಿವಾಸಿ ಹಿತಾಸಕ್ತಿಗಳ ವಕ್ತಾರರಾಗಿದ್ದ ಜೈಪಾಲ್ ಸಿಂಗ್ ಆದಿವಾಸಿ ಪ್ರದೇಶಗಳಲ್ಲಿ ಬುಡಕಟ್ಟು ಸಮಿತಿಗಳಿಗೆ ಮಹತ್ವಪೂರ್ಣ ಅಧಿಕಾರಗಳನ್ನು ನೀಡುವ ಒಂದು ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದರು. ಈ ಅಧಿಕಾರಗಳು ಅಡಕವಾಗಿರಬೇಕೆಂದು ಸೂಚಿಸಲಾಗಿತ್ತು.
ಅದೇನಿದ್ದರೂ, ಸಂವಿಧಾನದಲ್ಲಿ ಅಂತಿಮವಾಗಿ ಆದಿವಾಸಿಗಳ ಪ್ರದೇಶಗಳನ್ನು ಮೀರಿ ರಾಜ್ಯ ಸರಕಾರಗಳಿಗೇ ಗಣನೀಯ ಪ್ರಮಾಣದ ಅಧಿಕಾರಗಳನ್ನು ನೀಡಲಾಯಿತು. ಅಲ್ಲದೆ ಸಾಂವಿಧಾನಿಕ ಸಭೆಯಲ್ಲಿ ಮಂಡಿಸಲಾದ ಐದನೇ ಪರಿಚ್ಛೇದವು ಜೈಪಾಲ್ಸಿಂಗ್ ಪ್ರಸ್ತಾಪಿಸಿದ್ದ ವ್ಯವಸ್ಥೆಯ ತೀರ ಸರಳ ರೂಪವಾಗಿತ್ತು.
ಅಲ್ಲದೆ, ಆ ಸರಳರೂಪದ ಅಧಿಕಾರಗಳನ್ನು ಕೂಡ ಯಾವತ್ತೂ ಅನುಷ್ಠಾನಗೊಳಿಸಲಿಲ್ಲ. ರಾಜ್ಯಪಾಲರು ರಾಜ್ಯದ ಬುಡಕಟ್ಟು ಸಲಹಾ ಸಮಿತಿಯೊಂದಿಗೆ ಚರ್ಚಿಸಿ, ಆದಿವಾಸಿ ಪ್ರದೇಶಗಳಿಗೆ ಕಾನೂನುಗಳನ್ನು ಮಾಡಬಹುದಾಗಿದೆ. ಆದರೆ ರಾಜ್ಯಪಾಲರು ಈ ಅಧಿಕಾರಗಳನ್ನು ಬಳಸಿದ್ದು ತೀರ ಅಪರೂಪ. ಬುಡಕಟ್ಟು ಸಲಹಾ ಸಮಿತಿಗಳ ಮೂಲ ಉದ್ದೇಶ ರಾಜ್ಯ ಸರಕಾರಗಳಿಂದ ಅಧಿಕಾರವನ್ನು ದೂರ ಒಯ್ದು ಬುಡಕಟ್ಟು ಸಲಹಾ ಸಮಿತಿಗಳ ಕೈ ಬಲಪಡಿಸುವುದೆ ಆಗಿತ್ತು. ಆದರೆ ಹಲವು ರಾಜ್ಯಗಳಲ್ಲಿ ರಾಜ್ಯದ ಮುಖ್ಯ ಮಂತ್ರಿಯೇ ಸಲಹಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಪರಿಣಾಮವಾಗಿ ಪರಸ್ಪರ ಹಿತಾಸಕ್ತಿಗಳ ಘರ್ಷಣೆ ಉಂಟಾಗುತ್ತದೆ.
ಇಷ್ಟು ಸಾಲದು ಎಂಬಂತೆ, ಭಾರತ ಸರಕಾರವು ಆದಿವಾಸಿ ಪ್ರದೇಶಗಳಲ್ಲಿ ಮಿತಿಮೀರಿದ ಅಧಿಕಾರವನ್ನು ಚಲಾಯಿಸಿದೆ. ಎಡ ಪಂಥೀಯ ತೀವ್ರಗಾಮಿತ್ವವನ್ನು ಎದುರಿಸುವಾಗ ವಿಶೇಷವಾಗಿ ಈ ಅಧಿಕಾರ ಚಲಾಯಿಸಲಾಗಿದೆ.
‘‘ಖನಿಜ ಸಂಪನ್ಮೂಲಗಳಿಗಾಗಿ ಆದಿವಾಸಿಗಳ ವಿರುದ್ಧ ಇದು ಮೊದಲೇ ಯೋಜಿಸಿ ಮಾಡುವ ಯುದ್ಧ’’ ಎಂದಿದ್ದಾರೆ ಆದಿವಾಸಿ ಹಕ್ಕು ಕಾರ್ಯಕರ್ತ ಗ್ಲಾಡ್ಸನ್ ಡಂಗ್ ಡಂಗ್.
ಇವೆಲ್ಲದರ ಒಟ್ಟು ಅರ್ಥ: ಭಾರತದ ಬುಡಕಟ್ಟು ಜನರು, ಆದಿವಾಸಿಗಳು ಆಘಾತಕಾರಿಯಾದ ಬಡತನದಲ್ಲಿ ಬದುಕುತ್ತಿದ್ದಾರೆ. ಶೇ.45.9ರಷ್ಟು ಬುಡಕಟ್ಟು ಜನರು ಭಾರತದಲ್ಲಿ ಅತ್ಯಂತ ಬಡವರು. ಇವರ ಬಳಿಕದ ಕಡುಬಡವರು ದಲಿತರು (ಶೇ.26.6). ಬುಡಕಟ್ಟು ಜನ ಸಮುದಾಯದಲ್ಲಿ ಶಿಶು ಮರಣದ ಸಂಖ್ಯೆ ಭಾರತದ ತಲಾ ಶಿಶುಮರಣದ ಎರಡರಷ್ಟಿದೆ. ಇದು ವಿಶ್ವದಲ್ಲೇ ಯಾವುದೇ ಜನ ಸಮುದಾಯದ ಶಿಶು ಮರಣದ ಗರಿಷ್ಠ ಸಂಖ್ಯೆಗಳಲ್ಲಿ ಒಂದಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಶೇ. 3.6 ಆದಿವಾಸಿ ಮಕ್ಕಳು ಎಂದೂ ತಮ್ಮ 14ನೇ ಜನ್ಮದಿನವನ್ನು ತಲಪುವುದೇ ಇಲ್ಲ.
ಸಾಂವಿಧಾನಿಕ ಸಭೆಯ ಆರಂಭದಲ್ಲಿ ಜೈಪಾಲ್ ಸಿಂಗ್ ಸಭೆಯನ್ನುದ್ದೇಶಿಸಿ ತಾನೊಬ್ಬ ‘‘ಜಂಗ್ಲಿ, ಆದಿವಾಸಿ’’ ಎಂದು ಆರಂಭಿಸಿ, ಆದಿವಾಸಿ ಇತಿಹಾಸವು ಹೇಗೆ ‘‘ಸತತವಾದ ಶೋಷಣೆ ಮತ್ತು ಭಾರತದ ಮೂಲ ನಿವಾಸಿಗಳಿಲ್ಲದ ಇತರರಿಂದ ಪರಿತ್ಯಕ್ತವಾದ’’ ಜನ ಸಮುದಾಯದ ಒಂದು ಇತಿಹಾಸವೆಂದು ವಿವರಿಸಿದ್ದರು. ಅಲ್ಲದೆ ಆ ಇತಿಹಾಸದ ಅವಧಿಯಲ್ಲಿ ಆಗಾಗ ನಡೆದ ದಂಗೆಗಳು ಹಾಗೂ ಅವ್ಯವಸ್ಥೆ ಹೇಗೆ ಇದ್ದವು ಎಂದೂ ಹೇಳಿದ್ದರು. ಆದರೂ ಸಿಂಗ್ರವರು ತುಂಬ ಆಶಾವಾದಿಯಾಗಿದ್ದರು. ‘‘ನಾವು ಈಗ ಒಂದು ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇವೆ; ಅವಕಾಶಗಳಲ್ಲಿ ಸಮಾನತೆ ಇರುವ, ಯಾರನ್ನೂ ಕಡೆಗಣಿಸದಿರುವ ಸ್ವತಂತ್ರ ಭಾರತದ ಒಂದು ಅಧ್ಯಾಯವಾಗಿರುತ್ತದೆ ಅದು ಎಂಬ ನಿಮ್ಮ ಮಾತನ್ನು ನಾನು ನಂಬುತ್ತೇನೆ’’ ಎಂದು ಅವರು ಹೇಳಿದರು.
ಆದರೆ ಸಿಂಗ್ರವರು ಈ ಆಶಾವಾದವನ್ನು ಅಭಿವ್ಯಕ್ತಿಸಿದ ಬಳಿಕದ ಏಳು ದಶಕಗಳಲ್ಲಿ ಭಾರತವು ಆ ಭರವಸೆಯನ್ನು ಸುಳ್ಳುಮಾಡಿದೆ ಎಂಬುದು ಈಗ ಸ್ಪಷ್ಟವಾಗಿದೆ.
ಕೃಪೆ: scroll.in