ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೆಮ್ಮೆಯ ಕನ್ನಡಿಗ ವಿಜ್ಞಾನಿ ಸೈಯ್ಯದ್ ಜಿ.ದಸ್ತಗೀರ್
ಪುಣೆಯ ಮುಖ್ಯ ಪ್ರಯೋಗಾಲಯದಲ್ಲಿ ವಿಜ್ಞಾನಿ
Photo: facebook/syed.g.dastager
ಬೆಂಗಳೂರು, ಎ.22: ಕೋವಿಡ್-19(ಕೊರೋನ) ಮಹಾಮಾರಿಯ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೋರಾಡುತ್ತಿದ್ದು, ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಕೊರೋನ ವ್ಯಾಪಕವಾಗಿ ಹರಡುತ್ತಿರುವ ನಡುವೆಯೇ ದೇಶದಲ್ಲಿ ಪ್ರತಿದಿನ ಸಾವಿರಾರು ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.
ಆದರೆ ದೇಶದ ಪ್ರತಿಷ್ಠಿತ ಪ್ರಯೋಗಾಲಯಗಳಲ್ಲಿ ಒಂದಾಗಿರುವ ಪುಣೆಯ ನ್ಯಾಷನಲ್ ಕಲೆಕ್ಷನ್ ಆಫ್ ಇಂಡಸ್ಟ್ರಿಯಲ್ ಮೈಕ್ರೋಓರ್ಗಾನಿಸಮ್ (ಕೈಗಾರಿಕಾ ಸೂಕ್ಷ್ಮಾನು ಜೀವಿಗಳ ರಾಷ್ಟ್ರೀಯ ಸಂಗ್ರಹ) ನಲ್ಲಿ ಪರೀಕ್ಷೆಗಳ ವರದಿಗಳನ್ನು ದೃಢಪಡಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಓರ್ವ ಕನ್ನಡಿಗ ವಿಜ್ಞಾನಿ ಡಾ.ಸೈಯ್ಯದ್ ಜಿ.ದಸ್ತಗೀರ್ ಎಂಬುದು ಹೆಮ್ಮೆಯ ಹಾಗೂ ಹಲವರಿಗೆ ತಿಳಿದಿರದ ಸಂಗತಿ.
ಮೂಲತಃ ಕೊಪ್ಪಳ ಜಿಲ್ಲೆಯವರಾದ ಡಾ.ಸೈಯದ್ ಜಿ.ದಸ್ತಗೀರ್, 2012ರಿಂದ ನ್ಯಾಷನಲ್ ಕಲೆಕ್ಷನ್ ಆಫ್ ಇಂಡಸ್ಟ್ರಿಯಲ್ ಮೈಕ್ರೋಓರ್ಗಾನಿಸಮ್ ನಲ್ಲಿ ಹಿರಿಯ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊಪ್ಪಳದ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸೂಕ್ಷ್ಮ ಜೀವಶಾಸ್ತ್ರ(ಮೈಕ್ರೋ ಬಯಾಲಜಿ) ವಿಷಯದಲ್ಲಿ ಎಂ.ಎಸ್ಸಿ ಪದವಿ ಪಡೆದು, ಪಿಎಚ್ಡಿಯನ್ನು ಪಡೆದಿದ್ದಾರೆ.
ಚೀನಾ ಹಾಗೂ ಕೊರಿಯಾ ದೇಶಗಳಲ್ಲಿ ಉನ್ನತ ಅಧ್ಯಯನ ಮಾಡಿರುವ ದಸ್ತಗೀರಿ, ಕೆಲ ಕಾಲ ಆ ದೇಶಗಳಲ್ಲಿ ಕೆಲಸವನ್ನು ಮಾಡಿದ್ದರು. ಆನಂತರ, ಸ್ವದೇಶಕ್ಕೆ ಮರಳಿದ ದಸ್ತಗೀರ್, ಕೇರಳದ ತಿರುವನಂತಪುರಂನಲ್ಲಿರುವ ಸಿಎಸ್ಆರ್ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿದರು.
ಆನಂತರ ಗೋವಾದಲ್ಲಿರುವ ಎನ್ಐವಿಯಲ್ಲಿ ಒಶಿಯನೋಗ್ರಫಿಯಲ್ಲಿ ಕೆಲಸ ಮಾಡಿದ ಅವರು, 2012ರಿಂದ ಪುಣೆಯಲ್ಲಿರುವ ಎನ್ಸಿಎಲ್ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೈಕ್ರೋ ಬಯಾಲಜಿ ಪ್ರತ್ಯೇಕ ವಿಭಾಗದ ಬಗ್ಗೆ ಸೈಯ್ಯದ್ ದಸ್ತಗೀರ್ ಅವರಿಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧಿಕಾರಿಯಾಗಿದ್ದ ಪರಿಚಯಸ್ಥರೊಬ್ಬರ ಮೂಲಕ ಈ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಮೈಕ್ರೋಬಯಾಲಜಿಯಲ್ಲಿ ಎಂ.ಎಸ್ಸಿಗೆ ಸೇರಿದರು. ಇವತ್ತು ದೇಶದ ಮಹತ್ವದ ಹುದ್ದೆಯಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಸೈಯ್ಯದ್ ಜಿ.ದಸ್ತಗೀರ್ ಮಾರ್ಗದರ್ಶನದಲ್ಲಿ ಈವರೆಗೆ ಮೂರು ಜನ ಪಿಎಚ್ಡಿ ಪಡೆದಿದ್ದಾರೆ. ಎಂಟು ಜನ ಅಧ್ಯಯನ ಮಾಡುತ್ತಿದ್ದಾರೆ.
ಕೊರೋನ ಬಗ್ಗೆ ಮಾಹಿತಿ: "ಒಬ್ಬ ಪಾಸಿಟಿವ್ ವ್ಯಕ್ತಿ ನಾಲ್ಕು ದಿನಗಳಲ್ಲಿ ಕನಿಷ್ಠ 450 ಜನರಿಗೆ ಸೋಂಕು ಹರಡಬಲ್ಲ. ಉಷ್ಣಾಂಶ 25 ಡಿ.ಸೆ. ಗಿಂತ ಕಡಿಮೆ ಇರುವ ಕಡೆ ಈ ವೈರಸ್ ಬೆಳೆಯುತ್ತೆ. ಆದುದರಿಂದ, ಮೂಗು ಹಾಗೂ ಗಂಟಲನ್ನು ಆಶ್ರಯಿಸುತ್ತೆ" ಎಂದು ಸೈಯ್ಯದ್ ಜಿ.ದಸ್ತಗೀರ್ ತಿಳಿಸಿದ್ದಾರೆ.
ದೇಶ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಲಾಗುತ್ತಿರುವ ಸೋಂಕು ನಿರೋಧಕ ಟನಲ್ಗಳಿಗೆ ಅಧಿಕೃತ ಮಾನ್ಯತೆ ಇಲ್ಲ ಎಂದು ಹೇಳುವ ದಸ್ತಗೀರ್, ಇದರಲ್ಲಿ ಬಹುತೇಕ ಹೈಬ್ರೋಕ್ಲೋರೈಡ್ ದ್ರಾವಣವನ್ನು ಬಳಸಲಾಗುತ್ತದೆ. ವಾಸ್ತವವಾಗಿ ಇದು .05 ಪ್ರಮಾಣದಲ್ಲಿ ಬಳಸಬೇಕು. ಅಲ್ಲದೆ, ಇಂತಹ ಟನಲ್ಗಳಲ್ಲಿ ಪ್ರವೇಶ ಮಾಡುವಾಗ ಮಾಸ್ಕ್ ಹಾಗೂ ಕನ್ನಡಕ ಧರಿಸಿರಬೇಕು. ಪ್ರವೇಶ ಮಾಡಿದ 10 ಸೆಕೆಂಡ್ಗಳಲ್ಲಿ ಹೊರ ಬರಬೇಕು ಎಂದು ಹೇಳಿದ್ದಾರೆ.
ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು: ಇದುವರೆಗೆ ಜಗತ್ತಿನ ಎಲ್ಲ ಪ್ರಯೋಗಾಲಯಗಳು ಬಿಎಸ್ಎಲ್ 3ವರೆಗೆ ಮಾತ್ರ ಸಂಶೋಧನೆ ಮಾಡಿವೆ. ಈ ವೈರಾಣು ಬಿಎಸ್ಎಲ್4 ಹಂತಕ್ಕೆ ಸಂಬಂಧಿಸಿದೆ. 15 ಕ್ರಿಯಾಶೀಲ ಔಷಧಿಯ ಪ್ರಯೋಗ ನಿರಂತರವಾಗಿ ನಡೆಯುತ್ತಿದೆ ಎಂದು ಸೈಯ್ಯದ್ ಜಿ.ದಸ್ತಗೀರ್ ತಿಳಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ಜನ ಸ್ಟಿರಾಯಿಲ್ನಿಂದಾಗಿ ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ. ಆದರೆ, ಭಾರತೀಯರಲ್ಲಿ ಮೆಲನಿನ್ ಪ್ರಮಾಣ ಇರುವ ಕಾರಣ ಕಪ್ಪಾಗಿರುತ್ತಾರೆ. ಹುಟ್ಟುತ್ತಲೆ ಮಣ್ಣಿನಲ್ಲಿ ಆಡಿ ಬೆಳೆದಿರುತ್ತೇವೆ. ಇದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಏಷ್ಯನ್ ದೇಶಗಳಲ್ಲಿ ಬಿಸಿಜಿ ವ್ಯಾಕ್ಸಿನ್ ಹಾಕಿರುವುದರಿಂದ ರಕ್ಷಣಾ ಪರದೆ ನಮಲ್ಲಿ ಬೆಳೆದಿದೆ. ಇದೀಗ, ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇನ್ನೊಮ್ಮೆ ಬಿಸಿಜಿ ಹಾಕುವ ಬಗ್ಗೆ ಚಿಂತನೆ ನಡೆದಿದೆ. ಎಬೋಲಾ, ಸಾರ್ಸ್ಗೆ ನೀಡಿದ ಲಸಿಕೆಯನ್ನೆ ಇನ್ನಷ್ಟು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿವೆ ಎಂದು ದಸ್ತಗೀರ್ ತಿಳಿಸಿದ್ದಾರೆ.