ಲಾಕ್ಡೌನ್: ಶಾಮಿಯಾನ ಉದ್ಯಮಕ್ಕೆ ಭಾರೀ ಹೊಡೆತ
ಬೆಂಗಳೂರು: ಮದುವೆ, ಜಾತ್ರೆ ಸೇರಿದಂತೆ ವಿವಿಧ ಸಮಾರಂಭಗಳ ಅಂದ ಹೆಚ್ಚಿಸುತ್ತಿದ್ದ ಶಾಮಿಯಾನಾ ಉದ್ಯಮ ಕೊರೋನ ಹೊಡೆತಕ್ಕೆ ಅತಂತ್ರವಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಶಾಮಿಯಾನ ಉದ್ಯಮದಲ್ಲಿ ಕೆಲಸ ಮಾಡುವವರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಶಾಮಿಯಾನ ಅಂಗಡಿಗಳಿದ್ದು, ಅದರಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಲಾಕ್ಡೌನ್ ಪರಿಣಾಮ ಇದೀಗ ಅವರ ಬದುಕು ಅತಂತ್ರವಾಗಿದೆ.
ಪ್ರತಿವರ್ಷ ಜನೆವರಿ ಆರಂಭವಾದರೆ ಸಾಲು ಸಾಲು ಮದುವೆ, ಜಾತ್ರೆಗಳು ನಡೆಯುತ್ತವೆ. ಇದರಿಂದ ಸಮಾರಂಭಗಳಿಗೆ ಶಾಮಿಯಾನಾ, ಚೇರ್, ಲೈಟ್, ಸ್ಟೇಜ್ ಸಿದ್ಧತೆ ಮಾಡುವ ಶಾಮಿಯಾನಾ ಮಾಲಕರಿಗೆ ಒಂದು ರೀತಿಯ ಸುಗ್ಗಿ ಕಾಲವೇ ಆಗಿರುತ್ತದೆ. ಆದರೆ, ಕೊರೋನ ಮಾರಿ ಒಕ್ಕರಿಸಿದ್ದರಿಂದ ಶಾಮಿಯಾನಾ ಮಾಲಕರಿಗೆ ಹಾಗೂ ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಂತಹ ಕಾರ್ಮಿಕರ ಬದುಕಿಗೆ ಕೊಳ್ಳಿಯಿಟ್ಟಂತಾಗಿದೆ.
ಕಳೆದ ಎರಡು ತಿಂಗಳಿಂದ ಕೆಲಸವಿಲ್ಲದೆ ಸಾಕಷ್ಟು ಆರ್ಥಿಕ ಸಂಕಷ್ಟದ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಏಕಾಏಕಿ ಲಾಕ್ಡೌನ್ ಘೋಷಿಸಿದರ ಪರಿಣಾಮ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಬುಕ್ಕಿಂಗ್ ರದ್ದು: ರಾಜ್ಯದಲ್ಲಿ ಅಂದಾಜು 50 ಸಾವಿರಕ್ಕೂ ಅಧಿಕ ಶಾಮಿಯಾನ ಅಂಗಡಿಗಳಿವೆ. ಎಪ್ರಿಲ್, ಮೇ, ಜೂನ್, ಜುಲೈ ಹಾಗೂ ಅಕ್ಟೋಬರ್ನಲ್ಲಿ ಅತ್ಯಧಿಕವಾಗಿ ಮದುವೆ ಸಮಾರಂಭಗಳು ನಡೆಯುತ್ತವೆ. ಅದಕ್ಕಾಗಿ ಜನವರಿ ಹಾಗೂ ಫೆಬ್ರವರಿಯಲ್ಲಿ ಬಹುತೇಕ ಬುಕ್ಕಿಂಗ್ಗಳು ಆಗಿರುತ್ತವೆ. ಆದರೆ, ಕೊರೋನವನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಅದ್ಧೂರಿ ಸಭೆ, ಸಮಾರಂಭಗಳು, ಮದುವೆಗಳ ಮೇಲೆ ನಿಯಂತ್ರಣ ಹೇರಿದ ಪರಿಣಾಮ ಮುಂಗಡ ಬುಕ್ಕಿಂಗ್ಗಳನ್ನು ರದ್ದು ಮಾಡಿದ್ದಾರೆ.
ಕೊರೋನದಿಂದ ನಲಗಿರುವ ಜನತೆ ಕೂಡ ಅದ್ದೂರಿ ಮದುವೆಗೆ ಹಿಂದೇಟು ಹಾಕಿದ್ದು, ಬುಕಿಂಗ್ ಕ್ಯಾನ್ಸಲ್ ಮಾಡಿಸಿದ್ದಾರೆ. ಅಲ್ಲದೆ, ಮುಂಗಡ ಹಣ ವಾಪಸಾತಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಮದುವೆ ಸಿದ್ಧತೆಗೆ ಬೇಕಾದ ವಸ್ತುಗಳನ್ನು ತಯಾರಿಸಲು ಹಣ ನೀಡಿದ್ದರಿಂದ ಬುಕಿಂಗ್ ಮಾಡಿಸಿದವರಿಗೆ ಹಣ ವಾಪಸ್ ಕೊಡುವುದು ಕಿರಿಕಿರಿಯಾಗಿದೆ ಎಂದು ಶಾಮಿಯಾನದ ಮಾಲಕ ಅನ್ಷದ್ ಪಾಷಾ ಅಭಿಪ್ರಾಯಪಟ್ಟಿದ್ದಾರೆ.
30 ಲಕ್ಷ ರೂ. ವಹಿವಾಟು: ಶಾಮಿಯಾನಾದವರ ಕಾರ್ಯ 6 ತಿಂಗಳು ಮೊದಲೇ ಪ್ರಾರಂಭವಾಗುತ್ತದೆ. ಒಂದು ಶಾಮಿಯಾನಾ ಅಂಗಡಿಗೆ ಸುಮಾರು 50 ಕಾರ್ಯಕ್ರಮಗಳು ಬುಕ್ ಆಗಿರುತ್ತವೆ. ಆದರೆ, ಈ ಬಾರಿ ಎಲ್ಲ ಕಾರ್ಯಕ್ರಮಗಳು ರದ್ದು ಆದ ಪರಿಣಾಮ 30-40 ಲಕ್ಷದಷ್ಟು ಆದಾಯ ನಷ್ಟವಾಗಿದೆ ಎಂದು ಶಾಮಿಯಾನದ ಮಾಲಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಡಿಗೆ, ಸಂಬಳದ ಹೊರೆ: ಕೆಲವರು ಒಂದು ಅಂಗಡಿಯನ್ನು ಬಾಡಿಗೆ ನೀಡಿ ಅದನ್ನೇ ನಂಬಿಕೊಂಡು ಜೀವನ ಸಾಗಿಸುವ ಕುಟುಂಬಗಳಿಗೆ ಸರಕಾರದ ಆದೇಶ ಮುಟ್ಟುತ್ತಿಲ್ಲ. ಇಂತಹ ಬಾಡಿಗೆಯಲ್ಲಿರುವ ಶಾಮಿಯಾನ ಮಾಲಕರಿಗೆ ಈಗ ಬಾಡಿಗೆ ಕಟ್ಟುವ ಹಣ ಶಾಪವಾಗಿ ಕಾಡುತ್ತಿದೆ. ಒಂದು ರೂ.ಹಣ ಸಂಪಾದನೆಯಿಲ್ಲದೆ ಇರುವ ಸಮಯದಲ್ಲಿ ಸಾವಿರಾರು ರೂ. ಬಾಡಿಗೆ ನೀಡುವುದು ಹೇಗೆ ಎಂದು ಮಾಲಕರು ಪ್ರಶ್ನಿಸುತ್ತಿದ್ದಾರೆ.
ಶಾಮಿಯಾನ ಹಾಕುವ ಕೆಲಸಗಾರರು ದಿನಪೂರ್ತಿ ಕಷ್ಟಪಟ್ಟು ದುಡಿಯುತ್ತಾರೆ. ಅವರೆಲ್ಲರೂ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಅವರಿಗೆ ಬೇರೆ ಕೆಲಸದ ಅನುಭವ ಇರುವುದಿಲ್ಲ. ಆದರೆ, ಇವರಿಗೆ ಈಗ ಸಂಬಳ ನೀಡಲೇಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕೆಲಸಕ್ಕೆ ಬರಲ್ಲ. ಆದಾಯ ಇಲ್ಲದೇ ಸಂಬಳ ನೀಡುವುದು ಕಷ್ಟವಾಗಿದೆ.
-ವೆಂಕಟರಾಯಪ್ಪ, ಶಾಮಿಯಾನ ಅಂಗಡಿ ಮಾಲಕ
ಲಾಕ್ಡೌನ್ನಿಂದ ನಮಗೆ ಕೆಲಸವಿಲ್ಲದಂತಾಗಿದೆ. ಶಾಮಿಯಾನ ಹಾಕುವುದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೆವು. ಅದರಿಂದ ಬರುವ ಹಣದಲ್ಲಿಯೇ ಮನೆ ನಿರ್ವಹಣೆ, ಸಾಲ ತೀರಿಸುವುದನ್ನು ಮಾಡುತ್ತಿದ್ದೆವು. ಆದರೆ, ಈಗ ಕೆಲಸವಿಲ್ಲದಿದ್ದರಿಂದ ಬದುಕು ನಡೆಸೋದು ಕಷ್ಟವಾಗಿದೆ. ಇನ್ನು, ನಮ್ಮ ಮಾಲಕರು ಒಂದಷ್ಟು ಸಹಾಯ ನೀಡುವ ನಿರೀಕ್ಷೆಯಲ್ಲಿದ್ದೇವೆ.
-ಆನಂದ, ಶಾಮಿಯಾನ ಹಾಕುವ ಕಾರ್ಮಿಕ