ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ
ಬೆಂಗಳೂರು: ಕೊರೋನ ಸೋಂಕು ನಿವಾರಣೆಯ ಸಲುವಾಗಿ ರಾಜ್ಯ ಸರಕಾರ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಪರಿಣಾಮ ರಾಜ್ಯದಲ್ಲಿ ಹಲವು ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಅನೇಕ ಭಾಗಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ.
ಸಾಮಾನ್ಯವಾಗಿ ಮಾರ್ಚ್ ಕೊನೆ ಅಥವಾ ಎಪ್ರಿಲ್ ಆರಂಭದಲ್ಲಿಯೇ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಕಳೆದ ಬಾರಿ ಸುರಿದ ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಂತರ್ಜಲ ಮಟ್ಟ ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿದೆ. ಇದನ್ನೇ ನೆಪವಾಗಿಸಿಕೊಂಡಿರುವ ಆಡಳಿತ ಯಂತ್ರ ಮೈಮರೆತಿದೆ. ಆದರೆ, ಕೊರೋನ ನಡುವೆ ರಾಜ್ಯಾದ್ಯಂತ ಭೀಕರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಸರಕಾರಕ್ಕೆ ಎರಡೆರಡು ತಲೆನೋವು ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಒಟ್ಟು 2,609 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಕೋಶ ಗುರುತು ಮಾಡಿದೆ. ಆದರೆ, ಪರಿಹಾರದ ಭರವಸೆಯ ಕ್ರಮಗಳೂ ಚುರುಕು ಪಡೆಯಬೇಕಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಎಪ್ರಿಲ್ ತಿಂಗಳಿನಾದ್ಯಂತ ನೀರಿನ ಸಮಸ್ಯೆ ಬಿಗಡಾಯಿಸುವ ಆತಂಕ ಸೃಷ್ಟಿಯಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕಲಬುರಗಿ, ಯಾದಗಿರಿ, ಬಳ್ಳಾರಿ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಶೇ.70-80ರಷ್ಟು ಅಂತರ್ಜಲ ಮಟ್ಟ ಕುಸಿದಿದೆ. ಚಿತ್ರದುರ್ಗ, ಚಾಮರಾಜನಗರ ಸೇರಿ ಕೆಲವು ಜಿಲ್ಲೆಗಳಲ್ಲಿ ಶೇ.65ರಷ್ಟು ನೀರು ಬತ್ತಿಹೋಗಿವೆ. 12 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಜಲಾಶಯಗಳಲ್ಲಿ ನೀರಿದ್ದರೂ ಈ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯ ನೀಗಿಲ್ಲ. ಕೊಳವೆಬಾವಿ ಅವಲಂಬನೆ ಸಮಸ್ಯೆಯ ತೀವ್ರತೆ ಹೆಚ್ಚಿಸಿದೆ.
ಸಿಇಒಗಳಿಗೆ ಹೊಣೆ: ಕಾರ್ಯಪಡೆಗಳಿಗೆ ಬಿಡುಗಡೆ ಮಾಡಿರುವ ಅನುದಾನ, ಡಿಸಿಗಳ ಪಿಡಿ ಖಾತೆ ಹಣ ಬಳಸಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಬೇಕು. ಪಂಚಾಯತ್ಗಳ ಅನುದಾನದಲ್ಲಿ ಶೇ.25ರಷ್ಟು ಮೊತ್ತ ಬಳಕೆಗೂ ಅವಕಾಶವಿರುವ ಕಾರಣ ಹೆಚ್ಚಿನ ತೊಂದರೆ ಇಲ್ಲ. ಪರಿಸ್ಥಿತಿ ನಿಭಾಯಿಸುವ ಪೂರ್ಣ ಹೊಣೆಗಾರಿಕೆಯನ್ನು ಜಿಲ್ಲಾ ಪಂಚಾಯತ್ಗಳ ಸಿಇಒಗಳಿಗೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದುರಸ್ತಿಯಾಗದ ಕೈಪಂಪು: ರಾಜ್ಯದಲ್ಲಿ ಒಟ್ಟು 64,170 ಕೈ ಪಂಪು ಕೊಳವೆ ಬಾವಿಗಳಿದ್ದು, ಬಹಳಷ್ಟು ಕೈ ಪಂಪುಗಳು ಕೆಟ್ಟು ನಿಂತಿವೆ. 51,120 ಕಿರು ನೀರು ಸರಬರಾಜು ಯೋಜನೆಗಳ ಪೈಕಿ ಕೆಲವು ರಿಪೇರಿ ಆಗಬೇಕಿದೆ. ಕಾರ್ಯಪಡೆಗಳಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಈಗಷ್ಟೇ ತಲಾ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಯಾವುದನ್ನು ರಿಪೇರಿ ಮಾಡುವುದು ಯಾವುದನ್ನು ಬಿಡುವುದು ಎಂಬ ಸಂಕಷ್ಟದ ಸ್ಥಿತಿ ಕಾರ್ಯಪಡೆಗಳಿಗೆ ಎದುರಾಗಿದೆ.
ಬೋರ್ವೆಲ್ ಮೂಲಕ ನೀರು ಪೂರೈಕೆ: ಹಲವು ಭಾಗಗಳಲ್ಲಿ ನೀರಿನ ಹಾಹಾಕಾರ ಅಧಿಕವಾಗಿರುವ ಹಿನ್ನೆಲೆಯಲ್ಲಿ ಬೋರ್ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ರಾಜ್ಯದ ಬಹುತೇಕ ಗ್ರಾಮಗಳಲ್ಲಿನ ಬೋರ್ವೆಲ್ಗಳು ಸ್ಥಗಿತವಾಗಿದ್ದು, ಉಳಿದ ಬೋರ್ವೆಲ್ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.
ಮಲೆನಾಡಿನ ಜನತೆ ನಿರಾಳ!
ಹಿಂದಿನ ವರ್ಷಗಳಿಗೆ ಹೋಲಿಸಿ ಕೊಂಡರೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ವರ್ಷ ನೀರಿನ ಅಭಾವ ವ್ಯಾಪಕವಾಗಿ ಕಾಣಿಸಿಕೊಂಡಿಲ್ಲ. ಜಿಲ್ಲೆಯ ಕೆರೆ ಕಟ್ಟೆಗಳಲ್ಲಿ ಈಗಲೂ ನೀರಿದೆ. ಇದು ಅಂತರ್ಜಲ ಹೆಚ್ಚಿಸಿ ನೀರಿನ ಅಭಾವವನ್ನು ಮುಂದೂಡಿದೆ. ಕೆಲವು ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ವರ್ಷ ವ್ಯಾಪಕ ಮಳೆ ಆಗಿರುವುದರಿಂದ ಬಯಲು ಸೀಮೆಯ ಕಡೂರು ಸೇರಿದಂತೆ ಹಲವು ಭಾಗದಲ್ಲಿ ನೀರಿಗೆ ಸಮಸ್ಯೆಯಿಲ್ಲ.
ಅಂತರ್ಜಲ ಮಟ್ಟವನ್ನು 40ವರ್ಷಗಳ ಹಿಂದಿನ ಮಟ್ಟಕ್ಕೆತಲುಪಿಸುವ ಮಹತ್ವಾಕಾಂಕ್ಷಿಅಂತರ್ಜಲ ಚೇತನಯೋಜನೆಯನ್ನು ನರೇಗಾ ವ್ಯಾಪ್ತಿಗೆ ಸೇರಿಸಲಾಗಿದೆ. ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಹಲವು ಕೃಷಿ ಕಾರ್ಯಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಕೆ.ಎಸ್.ಈಶ್ವರಪ್ಪ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ
ವಾರಕ್ಕೊಮ್ಮೆ ನೀರು!
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಭೀಕರವಾಗಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಈಗ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಈ ಎರಡೂ ಜಿಲ್ಲೆಗಳಲ್ಲಿ ಅಂದಾಜು ವಾರಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಭೀಕರ ನೀರಿನ ಅಭಾವ ಎದುರಾಗಿದ್ದು, ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ನಗರ ಪ್ರದೇಶಗಳಲ್ಲೂ ಸಮಸ್ಯೆ
ಗ್ರಾಮೀಣ ಪ್ರದೇಶದಲ್ಲಿ ಅಷ್ಟೇ ಅಲ್ಲದೆ ನಗರ ಪ್ರದೇಶದಲ್ಲಿಯೂ ಅಪಾರ ಪ್ರಮಾಣದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಇರುವ ಕೊಳವೆ ಬಾವಿಗಳಲ್ಲಿ ಸಮರ್ಪಕ ನೀರು ಸರಬರಾಜಾಗುತ್ತಿಲ್ಲ. ರಾಜ್ಯದ ನಗರ ಪ್ರದೇಶದಲ್ಲಿ ಬಹುತೇಕ ಕಡೆಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಫಿಲ್ಟರ್ಗಳ ಮೇಲೆ ಅವಲಂಬಿತರಾಗುವ ನಗರದ ಜನತೆಯ ನಡುವೆಯೂ ಬೋರ್ವೆಲ್ಗಳಲ್ಲಿ ಬರುವ ನೀರನ್ನೇ ನಂಬಿಕೊಂಡಿರುವವರೂ ಇದ್ದಾರೆ.