ಕೊರೋನ ಕಾಲದಲ್ಲಿ ಹೆಚ್ಚಾದ ಮಕ್ಕಳ ಅಪೌಷ್ಟಿಕತೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 17: ರಾಜ್ಯದಲ್ಲಿ ಲಾಕ್ಡೌನ್ ಅವಧಿಯಲ್ಲಿ ಗರ್ಭಿಣಿಯರು ಮಾತ್ರವಲ್ಲದೇ ಮಕ್ಕಳು ಕೂಡಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಮಕ್ಕಳ ಮರಣ ಸಂಖ್ಯೆಯೂ ಅಧಿಕವಾಗಿದೆ. ಇದೀಗ ಎಚ್ಚೆತ್ತ ರಾಜ್ಯ ಸರಕಾರ ತಾಲೂಕು ಆಸ್ಪತ್ರೆಗಳಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ಸ್ಥಾಪಿಸಿದ್ದು, ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ಸೂಚಿಸಿದೆ.
ಪ್ರತಿ ಜಿಲ್ಲೆಗಳಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ತೆರಯಲಾಗಿದ್ದು, ಕೊರೋನ ಹಿನ್ನೆಲೆ ಜಿಲ್ಲಾಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದೆ. ಇದರಿಂದಾಗಿ ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ದಾಖಲಿಸುವುದು ರದ್ದಾಗಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸುತ್ತೋಲೆ ಹೊರಡಿಸಿದ್ದಾರೆ.
ಅಪೌಷ್ಟಿಕ ಮಕ್ಕಳ ಚಿಕಿತ್ಸೆಗಾಗಿ ತಾಲೂಕು ಪೌಷ್ಟಿಕ ಪುನಶ್ಚೇತನ ಕೇಂದ್ರಗಳಲ್ಲಿ ಪ್ರತ್ಯೇಕ 5 ಹಾಸಿಗೆಯುಳ್ಳ ಬೆಡ್ ಹಾಕಲಾಗಿದೆ. ತಿಂಗಳಿಗೆ 10 ಮಕ್ಕಳಂತೆ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಯವರು ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳಲ್ಲಿ ಗುರುತಿಸಲಾಗಿರುವ ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ಚಿಕಿತ್ಸೆಗಾಗಿ ಸೂಚಿಸಿ ಕಳುಹಿಸಿಕೊಡಲು ಸರಕಾರ ಆದೇಶಿಸಿದೆ.
ಮನೆಗೆ ಆಹಾರ ಧಾನ್ಯ ವಿತರಣೆ: ರಾಜ್ಯದಲ್ಲಿ 6 ತಿಂಗಳಿಂದ 6 ವರ್ಷದ 30 ಲಕ್ಷಕ್ಕೂ ಅಧಿಕ ಮಕ್ಕಳಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ಮನೆ ಬಾಗಿಲಿಗೆ ಮೊಟ್ಟೆ, ಹಾಲಿನ ಪುಡಿ, ಪೌಷ್ಟಿಕಾಂಶಯುಕ್ತ ಕಾಳುಗಳು ಸೇರಿದಂತೆ ಅಗತ್ಯ ವಸ್ತುಗಳು ಹೊಂದಿರುವ ಆಹಾರ ಧಾನ್ಯ ಕಿಟ್ ವಿತರಿಸಿದೆ. ಆದರೂ ಕೂಡ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಯಾಗುತ್ತಿಲ್ಲ.
ಪೊಷಕರು ಹಿಂದೇಟು: ದೇಶದಲ್ಲಿ ಮಹಾಮಾರಿ ಕೊರೋನದಿಂದ ಸಾರ್ವಜನಿಕರು ಕೆಂಗೆಟ್ಟಿದ್ದು, ಕೊರೋನ ವೈರಸ್ ಮಕ್ಕಳಿಗೆ ಬೇಗನೆ ಹರಡುವ ಹಿನ್ನೆಲೆ ಅಪೌಷ್ಟಿಕ ಮಕ್ಕಳನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಹಿಂದೇಟು ಹಾಕುತ್ತಿದ್ದಾರೆ.
ಎರಡು ತಿಂಗಳಿಂದ ಮಕ್ಕಳ ಎತ್ತರ, ತೂಕ ಮಾಡಿಲ್ಲ...
6 ತಿಂಗಳಿಂದ 6 ವರ್ಷದ ವರೆಗಿನ ಮಕ್ಕಳನ್ನು ಅಂಗನವಾಡಿಗೆ ಕರೆತಂದು ಮಗುವಿನ ತೂಕ ಮತ್ತು ಎತ್ತರ ಅಳತೆ ಮಾಡಲಾಗುತ್ತದೆ. ಮಕ್ಕಳು ಯಾವ ವರ್ಷದಲ್ಲಿ ಎಷ್ಟು ತೂಕ ಮತ್ತು ಎತ್ತರ ಇರಬೇಕು ಎಂಬ ಮಾನದಂಡವನ್ನು ಸರಕಾರ ರಚಿಸಿದ್ದು, ಪ್ರತಿ ತಿಂಗಳ ಪರೀಕ್ಷೆಯಲ್ಲಿ ಮಗು ಪೌಷ್ಟಿಕವೇ? ಅಪೌಷ್ಟಿಕವೇ? ಎಂದು ತಿಳಿಯಬಹುದು. ಜನವರಿ ತಿಂಗಳಲ್ಲಿ ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಮಕ್ಕಳು ತೂಕ ಸಮಸ್ಯೆಯಿಂದ ಬಳಲುತ್ತಿದ್ದವು. ಅದರಲ್ಲಿ ಬಹುಭಾಗ ಕಲ್ಯಾಣ ಕರ್ನಾಟಕ ಮಕ್ಕಳಾಗಿದ್ದರು. ಮಾರ್ಚ್ ತಿಂಗಳಿಂದ ಮಕ್ಕಳ ತೂಕ ಮತ್ತು ಎತ್ತರ ಅಳೆಯಲಾಗಿಲ್ಲ. ಲಾಕ್ಡೌನ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅಧಿಕ ಕೆಲಸವೂ ಕಾರಣವಾಗಿದೆ. ಲಾಕ್ಡೌನ್ ಅವಧಿಯಲ್ಲಿ ಹೆಚ್ಚಿನ ಮಕ್ಕಳ ಅಪೌಷ್ಟಿಕತೆಯಿಂದ ಬಳಲುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
********************************************
ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವು ದಿಟ್ಟ ಕ್ರಮ ಕೈಗೊಂಡಿದೆ. ವಿವಿಧ ಯೋಜನೆಗಳನ್ನು ಮುಂದುವರಿಸಲಾಗಿದೆ. ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳಲ್ಲಿ ಗುರುತಿಸಲಾಗಿರುವ ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ಚಿಕಿತ್ಸೆಗಾಗಿ ಸೂಚಿಸಿ ಕಳುಹಿಸಿಕೊಡಲು ಸರಕಾರ ಆದೇಶಿಸಿದೆ.
-ಕೆ.ಎ.ದಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ನಿರ್ದೇಶಕ