ಗ್ರಾಮ ಭಾರತದ ಪುನರುಜ್ಜೀವನ
ಭಾಗ-1
ಬಡ ರೈತನ ಉದ್ಧಾರಕ್ಕೆ ಬಂದ ಧನ್ವಂತರಿ ಗಾಂಧೀಜಿ. ರೈತ ವಿಶ್ವದ ತಂದೆ ಎಂದು ಬಣ್ಣಿಸುವ ಒಂದು ಪದ್ಯವನ್ನು ಗಾಂಧಿ ಓದಿದರು. ರೈತ ಆ ದೇವರ ಕೈಯಂತೆ. ಸ್ವಾತಂತ್ರ ಅಡಗಿರುವುದು ಬಡತನ ಮತ್ತು ಅಜ್ಞಾನದಿಂದ ರೈತ ಬಿಡುಗಡೆ ಹೊಂದುವುದರಲ್ಲಿ ಎಂದು ಅವರು ಪ್ರತಿಪಾದಿಸಿದರು. ರೈತರ ಮೂಲಕವಾಗಿಯೇ ನಮ್ಮ ಉದ್ಧಾರ. ಈ ಭೂಮಿ ಅವನಿಗೆ ಸಲ್ಲಬೇಕು. ಅದು ಗೈರು ಹಾಜರಿ ಜಮೀನ್ದಾರನದಲ್ಲ. ನಗರಗಳಲ್ಲಿ ಭವ್ಯ ಕಟ್ಟಡಗಳನ್ನು ಕಂಡಾಗ ‘ಓಹ್, ಇದು ರೈತರಿಂದ ಬಂದಂತಹ ದುಡ್ಡು’ಎಂದುಉದರಿಸುತ್ತಿದ್ದರು. ಬಲವಂತದ ತೆರಿಗೆಗಳು, ಅನ್ಯಾಯವಾದ ಸುಲಿಗೆಗಳು, ಸಾಲ ಸೋಲಗಳು, ಅನಕ್ಷರತೆ, ಮೂಢನಂಬಿಕೆಗಳು ಮತ್ತು ರೋಗ ಭಾರದಿಂದ ರೈತಾಪಿ ಜನ ತತ್ತರಿಸುತ್ತಿದ್ದಾರೆ ಎಂದು ಪರಿತಪಿಸಿಕೊಳ್ಳುತ್ತಿದ್ದರು. ಸ್ವಾತಂತ್ರ ಬಂದ ಮೇಲೂ ರೈತರ ಪರಿಸ್ಥಿತಿ ಹಾಗೇ ಇದೆ. ಹಾಗಾದರೆ ಯಾರಿಗೆ ಬಂತು ಸ್ವಾತಂತ್ರ? ರಾಷ್ಟ್ರಕವಿ ಕುವೆಂಪು ಛೇಡಿಸಿರುವಂತೆ:
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದ ಹಾಕಿ ತಿವಿದರದು ಹೂವೆ?
ಈಗ ನಮ್ಮವರೇ ಹದ ಹಾಕಿ ತಿವಿಯುತ್ತಿದ್ದಾರೆ. ರೈತರನ್ನು ಹಾಡಿ ಹೊಗಳುತ್ತಲೇ ಅವರನ್ನು ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಮಾಯೆಗೆ ಸಿಲುಕಿಸಿ ಆತ್ಮಹತ್ಯೆ ಅಂಚಿಗೆ ದೂಡಿದ್ದಾರೆ-ನಮ್ಮ ಪ್ರಜಾಪ್ರತಿನಿಧಿಗಳು. ಗಾಂಧಿ ಶತಮಾನದ ಹಿಂದೆ ರೈತರ ಕುರಿತು ಆಡಿದ ಮಾತುಗಳು ಇವತ್ತಿಗೂ ಉತ್ತರ ಕಾಣದಾಗಿವೆ.
ಗಾಂಧಿ ದಕ್ಷಿಣ ಆಫ್ರಿಕದಲ್ಲಿ ಭೂಮಿಯನ್ನು ಕೊಂಡು ನೆಲ ಉತ್ತರು. ನೀರು ಸೇದಿದರು. ಹಣ್ಣು ಮತ್ತು ತರಕಾರಿ ಬೆಳೆದರು. ಆ ಭೂಮಿಯನ್ನು 10 ವರ್ಷದಲ್ಲಿ ಹಣ್ಣಿನ ತೋಟವನ್ನಾಗಿಸಿದರು. ಜೇನು ಹುಳಗಳಂತೆ ಅವರೊಟ್ಟಿಗೆ ಭಾರತೀಯ ಮಕ್ಕಳು ಸುತ್ತುವರಿದು ಕೆಲಸ ಮಾಡಿದರು. ಫೀನಿಕ್ಸ್ ಫಾರಂ ಅನ್ವರ್ಥ ನಾಮ ಪಡೆಯಿತು. ಕೃಷಿಗೆ ಬೇಕಾದ ಉಪಕರಣ ಮತ್ತು ಸಲಕರಣೆಗಳನ್ನು ಅವರು ತಯಾರಿಸಿಕೊಂಡರು.
ಬಡ ರೈತರ ಆದಾಯವನ್ನು ಹೆಚ್ಚಿಸುವುದು ಹೇಗೆ ಎಂಬುದೇಗಾಂಧಿ ಅವರ ಸತತ ಚಿಂತೆಯಾಗಿತ್ತು. ವರ್ಷದಲ್ಲಿ ನಮ್ಮ ರೈತರು ನಾಲ್ಕರಿಂದ ಆರು ತಿಂಗಳ ಕಾಲ ಕೆಲಸವಿಲ್ಲದೇ ಇರುತ್ತಿದ್ದರು. ಕೇವಲ ಕೃಷಿ, ಆಧಾರದ ಮೇಲೆ ಅವರ ಜೀವನ ನಿರ್ವಹಣೆ ಆಗುತ್ತಿರಲಿಲ್ಲ. ಅವರ ಆಲಸ್ಯದ ಈ ದಿನಗಳನ್ನು ಸದುಪಯೋಗಪಡಿಸಲು ಪ್ರಯತ್ನಿಸಿದರು. ಅದಕ್ಕಾಗಿ ರೈತ ಮಹಿಳೆಯರ ಕೈಗೆ ನೂಲುವ ಚರಕವನ್ನು, ಪುರುಷರ ಕೈಗೆ ಮಗ್ಗಗಳನ್ನು ಒಪ್ಪಿಸಿದರು. ಅವರಿಗೆ ಸಮ ತೂಕದ ಆಹಾರವನ್ನು, ವಾಸಯೋಗ್ಯ ಮನೆಗಳನ್ನು, ಉಡಲು-ತೊಡಲು ಸಾಕಾಗುವಷ್ಟು ಬಟ್ಟೆಗಳನ್ನು ಹಾಗೂ ಸರಿಯಾದ ಶಿಕ್ಷಣವನ್ನು ಒದಗಿಸುವ ಮಟ್ಟಕ್ಕೆ ಬಡವರನ್ನು ಏರಿಸಲು ಬಯಸಿದರು. ಪ್ರತಿಭಟನಾ ಸ್ವಭಾವವನ್ನು ಅವರು ಬೆಳಸಿಕೊಳ್ಳಬೇಕೆಂದರು. ಆದ್ದರಿಂದ ಗಾಂಧೀಜಿ ಕಿಸಾನ್-ಮಜದೂರ್-ಪ್ರಜಾರಾಜ್ ಸಂಘಟನೆಯ ಪರವಾಗಿದ್ದರು. ಅನ್ಯಾಯದ ವಿರುದ್ಧ, ಆಳುವವರ ವಿರುದ್ಧ ಅಸಹಕಾರ ಚಳವಳಿ ಹೂಡಲುಅವರು ಹಿಂದೆಗೆಯಲಿಲ್ಲ.‘‘ಸ್ವರಾಜ್ಯ ಎಂದರೆ ಏನೆಂದು ಭಾರತದ ರೈತ ಸಮುದಾಯ ಅರಿತಾಗ ಅವರಿಂದ ಅದನ್ನು ದೂರವಿಡುವ ಸಾಹಸವನ್ನು ಯಾರೂ ಮಾಡಲಾರರು’’ ಗಾಂಧೀಜಿಯ ನೇತೃತ್ವದಲ್ಲಿ ರೈತರು ಉಪ್ಪಿನ ಸತ್ಯಾಗ್ರಹದಲ್ಲಿ, ತೆರಿಗೆ-ಬೇಡ ಎಂಬ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡರು. ಪ್ರಸ್ತು ತ ಊರಿಗೆ ಮರಳಿರುವ ನಮ್ಮ ವಲಸೆ ಕಾರ್ಮಿಕರು ಈ ನಿಟ್ಟಿನಲ್ಲಿ ಹೋರಾಟಕ್ಕೆ ಅಣಿಯಾಗಬೇಕು ಮತ್ತು ಸ್ವಾವಲಂಬನೆಗಾಗಿ ದುಡಿಮೆಯಲ್ಲೇ ನಿರತರಾಗಬೇಕು.
ಈಗ ನಮ್ಮ ಹಳ್ಳಿಗಳನ್ನು ಪುನರ್ ನಿರ್ಮಾಣ ಮಾಡಬೇಕು. ಅಲ್ಲಿ ನೆಲೆಸುವ ವಲಸೆ ಕಾರ್ಮಿಕರಿಗೆ ಮೊದಲು ವಾಸಯೋಗ್ಯ ಮನೆಗಳು ಆಗಬೇಕು; ವಸತಿ ಇಲ್ಲದವರಿಗೆ ಪುನರ್ವಸತಿ ಕಲ್ಪಿಸಬೇಕು. ಸ್ವಂತ ಮನೆ ಇದ್ದವರು ದುರಸ್ತಿ ಮಾಡಿಕೊಳ್ಳಲು ನೆರವು ನೀಡಬೇಕು. ಪಾಳುಬಿದ್ದ ಜಮೀನುಗಳನ್ನು ಕೃಷಿ ಯೋಗ್ಯ ಹೊಲಗಳನ್ನಾಗಿ ಮಾಡಬೇಕು. ಭೂಮಿ ಇದ್ದೂ ಹಾಳು ಬಿಟ್ಟು ನಗರ ಸೇರಿ ಈಗ ಹಿಂದಿರುಗಿರುವವರು ಪುನಃ ಬೇಸಾಯಕ್ಕೆ ತೊಡಗಿಕೊಳ್ಳಬೇಕು. ಆರಂಭ ಕೆಟ್ಟರೂ ಆರು ತಿಂಗಳ ಗಂಜಿಗೆ ಮೋಸವಿಲ್ಲ ಎಂಬ ಮಾತಿದೆ. ಆದ್ದರಿಂದ ಧೈರ್ಯ ಗುಂದದೆ ಕೃಷಿ ಕೆಲಸದಲ್ಲಿ ತೊಡಗಬೇಕು. ಸರಕಾರ ಅಂತಹವರಿಗೆ ಬೀಜ, ಗೊಬ್ಬರ, ಕೀಟನಾಶಕ ಮುಂತಾದವುಗಳನ್ನು ಪುಕ್ಕಟೆ ಒದಗಿಸಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಕಾರ್ಮಿಕರ ಮರು ವಲಸೆ ಸೃಷ್ಟಿಸಿರುವ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಎಂದರೆ:
ಮೊದಲನೆಯದಾಗಿ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲಾ ರಾಜ್ಯಗಳೂ ವ್ಯಾಪಕವಾಗಿ ಅನುಷ್ಠಾನಕ್ಕೆ ತರಬೇಕು. ಉದ್ಯೋಗ ಖಾತರಿ ಕೂಲಿಯನ್ನು ರೂ.300 ಕ್ಕೇರಿಸಿ, ಕುಟುಂಬವೊಂದಕ್ಕೆ 300 ದಿನಗಳ ಕೂಲಿಯನ್ನು ಕೊಡುವಂತಾಗಬೇಕು.
ಎರಡನೆಯದಾಗಿ, ಯುವಕರನ್ನು ಕೃಷಿಗೆ ಸೆಳೆವ ಧ್ಯೇಯದಿಂದ ರೂಪಿಸಿರುವ ‘ಆರ್ಯ’ (Attracting and Retaining youth in Agriculture, ARYA) ಎಂಬ ಯೋಜನೆಯನ್ನು ಜನರಿಗೆ ತಿಳಿ ಹೇಳುವ ಹಾಗೂ ಅನುದಾನವನ್ನು ಹೆಚ್ಚಿಸುವ ಕೆಲಸ ತ್ವರಿತವಾಗಿ ಆಗಬೇಕು.
ಮೂರನೆಯದಾಗಿ, ಕೆ.ಪಿ. ಸುರೇಶ್ಅವರು‘‘ಉದ್ಯಮಶೀಲ ಭಾರತಕ್ಕೆ ನೀಲನಕ್ಷೆ’’ ಎಂಬ ಲೇಖನದಲ್ಲಿ ಸಲಹೆ ಮಾಡಿರುವಂತೆ, ‘ಸ್ಕಿಲ್ ಇಂಡಿಯಾ’ ಎಂಬ ಅರೆಮನಸ್ಸಿನ ಮೆಗಾಫ್ಲೆಕ್ಸ್ ಯೋಜನೆಗೆ ರಕ್ತಮಾಂಸ ತುಂಬಿಸಲು ಈಗ ಸದಾವಕಾಶ. 41 ಸ್ಕಿಲ್ ಕೌನ್ಸಿಲ್ಗಳಿವೆ. ಸುಮಾರು 5,000 ಉದ್ಯೋಗ ಮಾದರಿಗಳಿವೆ, ಕೃಷಿಯಲ್ಲೇ ನೂರಕ್ಕೂ ಮಿಕ್ಕಿ ಉದ್ಯೋಗಗಳನ್ನು ಗುರುತಿಸಲಾಗಿದೆ. ಇವೆಲ್ಲಾ ರೆಕ್ಕೆ ತರಿದ ಹಕ್ಕಿಗಳಂತೆ ಬಿದ್ದಿವೆ. ಇವುಗಳನ್ನು ಬದ್ಧತೆಯ ಮೂಲಕ ಅನುಷ್ಠಾನಗೊಳಿಸುವ ಪ್ರಾಮಾಣಿಕತೆಯನ್ನು ಸರಕಾರ ತೋರಬೇಕು (ಪ್ರಜಾವಾಣಿ, ಮೇ, 27, 2020). ಇದೆಲ್ಲಕ್ಕೂ ಗ್ರಾಮ ಪಂಚಾಯತ್ ಮಟ್ಟಕ್ಕೆ ಬಂಡವಾಳ ಹರಿದು ಬರಬೇಕು.ಈಗಾಗಲೇ ಅದಕ್ಕೊಂದು ಸಮರ್ಥ ಮಾದರಿಯಾಗಿ ‘ಕೆಎಂಎಫ್’ ಕೆಲಸ ಮಾಡುತ್ತಿಲ್ಲವೇ? ಮುಂಜಾನೆ ಕರೆದ ಹಾಲು ಕೆಲವೇ ಗಂಟೆಗಳಲ್ಲಿ ಹಾಳಾಗದಂತೆ ಗ್ರಾಹಕರ ಮನೆಗೆ ತಲುಪುವುದಿಲ್ಲವೇ? ಹಾಗೆಯೇ ಹಣ್ಣು ಮತ್ತು ತರಕಾರಿ ಹಾಗೂ ದಿನಸಿ ಪದಾರ್ಥಗಳೂ ಗ್ರಾಹಕರ ಮನೆ ಬಾಗಿಲಿಗೆ ಮುಟ್ಟುವ ವ್ಯವಸ್ಥೆ ಮಾಡಬಹುದು. ಅದಕ್ಕೆ ಬೇಕಾಗುವ ಮಾನವ ಸಂಪನ್ಮೂಲ ಗ್ರಾಮ ಭಾರತದಲ್ಲಿದೆ. ಮುಖ್ಯವಾಗಿ ಈಗ ಬೇಕಾದುದು ಆಳುವ ಸರಕಾರದ ಇಚ್ಛಾಶಕ್ತಿ.
ಉದ್ಯೋಗ ಖಾತರಿ ಕಾರ್ಯಕ್ರಮವನ್ನು ಇನ್ನಷ್ಟು ದಕ್ಷತೆಯಿಂದಲೂ ಪ್ರಾಮಾಣಿಕವಾಗಿಯೂ ಅಚ್ಚುಕಟ್ಟಾಗಿಯೂ ಜಾರಿಗೊಳಿಸಬೇಕು. ಮಾನವ ಸಂಪನ್ಮೂಲ ಪರಮ ಪವಿತ್ರ. ಯಾವ ಕಾರಣಕ್ಕೂ ಮಾನವ ಶ್ರಮಕ್ಕೆ ಬದಲಿ ಆಗಿ ಟ್ರಾಕ್ಟರ್, ಟ್ರಕ್ಕು, ಜೆಸಿಬಿ ಬಳಸಬಾರದು. ಆಹಾರದ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ಜತೆ ಜತೆಗೆ ಕೊರೋನ ವೈರಸ್ ಹರಡದಂತೆ ಸುರಕ್ಷಿತ ಅಥವಾ ದೈಹಿಕ ಅಂತರವನ್ನು ಕಾಯ್ದುಕೊಂಡು ದುಡಿಮೆ ಮಾಡುವಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಸ್ವಚ್ಛತೆಗೆ ಆದ್ಯ ಗಮನ ನೀಡಬೇಕು. ಸ್ಯಾನಿಟೈಸರ್ಸ್ ಒದಗಿಸಬೇಕು. ಗಾಂಧಿಯವರ ಸ್ವಾವಲಂಬನೆ ಪಾಠದಲ್ಲಿ ಸ್ವಚ್ಛತೆಗೆ ಪ್ರಥಮ ಸ್ಥಾನ.
ಆದರೂ ನಮಗಿನ್ನೂ ಬುದ್ಧಿ ಬರುತ್ತಿಲ್ಲ. ಭೂಮಿ ತಾಯಿಯ ಮೇಲೆ ಅತ್ಯಾಚಾರವೆಸಗಿದ ಪಾಪದ ಫಲವನ್ನು ಕೊರೋನ ರೂಪದಲ್ಲಿ ಅನುಭವಿಸುತ್ತಿದ್ದೇವೆ ಎಂಬುದನ್ನು ನಾವಿನ್ನೂ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ‘ಇನ್ನು ನಾವು ಕೊರೋನ ಜೊತೆ ಜೊತೆಗೆ ಬದುಕು ಕಟ್ಟಿಕೊಳ್ಳಬೇಕಾಗಿದೆ’ಎಂದು ಹೇಳಿ ಲಾಕ್ಡೌನ್ ಸಡಿಲಿಸಿದ್ದಾರೆ. ಆದರೆ ತೆರವು ಆದದ್ದೇ ತಡ, ಹುಲ್ಲು ಬಣವೆಯಲ್ಲಿ ಮುಚ್ಚಿಟ್ಟ ಮಂಗಗಳಂತೆ ಜನ ಅತ್ತಿತ್ತ ಹಾರಿ ಕೊರೋನ ಉಲ್ಬಣಿಸಲು ಕಾರಣವಾಗುತ್ತಿದ್ದಾರೆ. ದೈನಂದಿನ ಚಟುವಟಿಕೆಗಳು ಬಿರುಸಿನಿಂದ ಆರಂಭಗೊಳ್ಳುವ ಸೂಚನೆಗಳಿವೆ. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಕಲ್ಲಿದ್ದಲು ಗಣಿಗಾರಿಕೆಯ ಸರಕಾರದ ಏಕಸ್ವಾಮ್ಯವನ್ನು ತೆಗೆದು ಹಾಕಿ ಖಾಸಗಿ ಕಂಪೆನಿಗಳಿಗೆ ಅವಕಾಶ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಸುಮಾರು 50 ಅದಿರು ನಿಕ್ಷೇಪಗಳನ್ನು ಸದ್ಯದಲ್ಲೇ ಹರಾಜು ಹಾಕಲಾಗುತ್ತದೆ ಎಂಬ ವರದಿಗಳಿವೆ.
ಹಾಗೆಯೇ ಅದಿರು ಲೂಟಿಯಾಗಿರುವ ಗಣಿಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಪ್ರಮಾಣವನ್ನು ಸಮೀಕ್ಷೆ ಮಾಡುವ ಕೆಲಸವೂ ಶುರುವಾಗಿದೆ. ಬಹುಶಃ ಮುಂದಿನ ಕೆಲವೇ ದಿನಗಳಲ್ಲಿ ಅದಿರುಗಣಿಗಾರಿಕೆಗೂ ಹಸಿರು ನಿಶಾನೆ ಹಾರಬಹುದು. ಕಲ್ಲಿದ್ದಲು ಮತ್ತು ಅದಿರು ಗಣಿಗಾರಿಕೆ ಸಂಬಂಧಿಸಿ ಇಲ್ಲಿ ಪ್ರಸ್ತಾಪ ಮಾಡಿದ ಕಾರಣ ಇಷ್ಟೇ, ಇವೆಲ್ಲವೂ ಭೂಮಿಗೆ ನಾವು ಮಾಡುವ ಘೋರ ಅಪರಾಧಗಳು. ಒಂದೆಡೆ ಆಕೆಯ ಮೇಲೆ ಹೆಜ್ಜೆ ಇಟ್ಟು ಓಡಾಡಲೂ ಕ್ಷಮೆಯಾಚಿಸುತ್ತೇವೆ. ಆದರೆ ಅದೇ ಕ್ಷಣದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಂಪನ್ಮೂಲಗಳಿಗಾಗಿ ಭೂಮಿಯನ್ನು ವಡವೆ ಎಂದು ಭಾವಿಸಿ ಕಡಿದೂ ಬಡಿದೂ ಒಡೆದು ಘಾಸಿಗೊಳಿಸುತ್ತೇವೆ. ಮನುಷ್ಯ ಕೇಂದ್ರಿತ ಈ ದುರ್ಬುದ್ಧಿಯ ಅಭಿವೃದ್ಧಿಗೆ ಹೇಸಿ ಉಳಿದ ಜೀವ ಕೋಟಿಯನ್ನೂ ರಕ್ಷಿಸಬೇಕಾದ ಹೊಣೆ ಹೊತ್ತ ಆ ತಾಯಿ ಬೇಸತ್ತು ತನ್ನ ಈಗ ರಕ್ಷಣೆಗೆ ಯಾವ ವಿಷ್ಣುವೂ ಅವತಾರವೆತ್ತಿ ಬರಲಾರನೆಂದು ಈ ಆಧುನಿಕ ಹಿರಣ್ಯಾಕ್ಷರ ಸಂಹಾರ ತನ್ನಿಂದಲೇ ಆಗಬೇಕೆಂದು ಬಗೆದು ಕೊರೋನ ವೈರಸ್ನಲ್ಲಿ ರೂಪಾಂತರಗೊಂಡು ನಮಗೆ ಬುದ್ಧಿ ಕಲಿಸಲು ಮೈಕೊಡವಿ ನಿಂತಿದ್ದಾಳೆಂದು ಭಾವಿಸಬೇಕು. ವಿಜ್ಞಾನಿ ಡಾರ್ವಿನ್ನ ವಿಕಾಸ ವಾದವೂ ಇದನ್ನೇ ಸಾದರಪಡಿಸುತ್ತದೆ. ಈ ಜೀವನ್ಮರಣ ಹೋರಾಟದಲ್ಲಿ ಹೆಚ್ಚಿಕೊಂಡದ್ದು ಅಳಿಯಲೇಬೇಕಲ್ಲವೇ?.
ಆದ್ದರಿಂದ ಇನ್ನು ಮೇಲಾದರೂ ನಾವು ಜಾಗೃತರಾಗುವುದು ಲೇಸು. ಈ ಮಣ್ಣಿನ ಮೇಲೆ ಮನುಕುಲ ಉಳಿಯಬೇಕಾದರೆ ಇನ್ನು ಮುಂದಾದರೂ ಭೂಮಿಗೆ ನಾವು ಮಾಡುವ ಅಪರಾಧ ನಿಲ್ಲಬೇಕು. ಸಕಲ ಜೀವಿಗಳಿಗೆ ಲೇಸ ಬಯಸುವ ಪರಿಸರಕ್ಕೆ ಭಂಗತರಬಾರದು. ಗಾಂಧೀಜಿಯ ಸ್ವಾವಲಂಬನೆಯ ಪಾಠಗಳನ್ನು ಮನನ ಮಾಡಬೇಕು; ಮತ್ತು ಹಾಗೇ ನಡೆಯಬೇಕು. ಭೂದೇವಿ ಕೊರೋನ ಎಂಬ ಕೊನೆಯ ಗಂಟೆಯನ್ನು ಬಾರಿಸಿ ಎಚ್ಚರಿಸುತ್ತಿದ್ದಾಳೆ. ನಮ್ಮಜೀವ ಪಕ್ಷಿ‘ಹಾರುವ ದೂರವೆ ಕಿರಿದು, ಅದೂ ರೆಕ್ಕೆ ಎತ್ತಿಹುದು ನೋಡು’ ಎಂಬ ಎಚ್ಚರ ಇಲ್ಲಿದೆ!
ಕಡೆಯದಾಗಿ, ಗಾಂಧೀಜಿ ಮಾಡಿದ್ದನ್ನು ಆಡಿ ತೋರಿಸಿದರು. ‘ಸ್ವಾತಂತ್ರವು ಆಕಾಶದಿಂದ ಇಳಿದು ಬರುವುದಿಲ್ಲ. ಅದು ಭೂಮಿಯಿಂದ ಉಕ್ಕಬೇಕು(ಮಹಾತ್ಮಾಗಾಂಧಿ ಅಂತಿಮ ಹಂತ, ಸಂ.1 ಪುಟ 161) ಈ ಮಾತನ್ನು ಗಾಂಧೀಜಿ ನೀರಾವರಿ ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಲು ಬಂದ ಆಂಗ್ಲ ಅಧಿಕಾರಿ ಕ್ಯಾಸೆ ಎಂಬವರಿಗೆ ಹೇಳಿದ್ದು. ನದಿಯ ನೀರನ್ನು ಸಮುದ್ರಕ್ಕೆ ಹರಿಯಲು ಬಿಡದೆ ನೀರಾವರಿಗೆ ಬಳಸಿ ರೈತರ ಬದುಕನ್ನು ಸುಸ್ಥಿತಿಗೆ ತರಬೇಕೆಂದು ಹೇಳುವ ಸಂದರ್ಭ. ಗಾಂಧಿ ಸಂಪನ್ಮೂಲಗಳನ್ನು ಅಗತ್ಯಕ್ಕೆ ತಕ್ಕಷ್ಟು ಉಪಯೋಗಿಸಿಕೊಳ್ಳಬೇಕು ಎಂದವರು. ಯಂತ್ರ ನಾಗರಿಕತೆ ಸೈತಾನ ಮಾಟ ಎಂದು ಧಿಕ್ಕರಿಸಿ ಬಿಟ್ಟರು. ಜಗತ್ತು ಈಗ ಆ ಸೈತಾನನ ಹಿಂದೆ ಬಿದ್ದು ಈ ಸ್ಥಿತಿಗೆ ಬಂದು ಮುಟ್ಟಿದೆ. ಆದ್ದರಿಂದ ಇನ್ನು ಮುಂದಾದರೂ ಥೋರೋ, ರಸ್ಕಿನ್, ಗಾಂಧಿ ಅಂತಹವರ ಪಾಠಗಳನ್ನು ಕಲಿಯಬೇಕು.
ಸಮಾಜ ಅನುವು ಮಾಡಿಕೊಡಬೇಕು. ಹಳ್ಳಿಯಲ್ಲಿ ನೆಲೆಸುವ ಕಾರ್ಮಿಕರಿಗೆ ಆರಂಭದ ಅಗತ್ಯಗಳನ್ನು ಪೂರೈಸುವುದು ಸರಕಾರದ ಆದ್ಯ ಕರ್ತವ್ಯ. ಅವರಿಗೆ ವಾಸಯೋಗ್ಯ ಮನೆಗಳುಂಟೆ? ಎಂದು ಗಣತಿ ಮಾಡಬೇಕು. ಇಲ್ಲವಾಗಿದ್ದರೆ ತಾತ್ಕಾಲಿಕ ಷೆಡ್ಡುಗಳನ್ನೊ, ಷೀಟ್ ಮನೆಗಳನ್ನೊ ನಿರ್ಮಿಸಿ ಕೊಡಬೇಕು. ಇದಕ್ಕೂ ಮೊದಲು ದೊಡ್ಡ ಜಮೀನ್ದಾರರ ಬಳಿ ಹಾಗೂ ಪಾಳು ಬಿದ್ದಿರುವ ಕಂದಾಯ ಭೂಮಿಯನ್ನು ಸರ್ವೇ ಮಾಡಿಸಿ ಪ್ರತಿ ಕುಟುಂಬಕ್ಕೆ ಒಂದು ಎಕರೆಯನ್ನಾದರೂ ಹಂಚಬೇಕು. ಆರಂಭ ಮಾಡಲು ಬೇಕಾದ ಉಪಕರಣಗಳು, ಬೀಜ, ಗೊಬ್ಬರ ಮುಂತಾಗಿ ಒದಗಿಸಬೇಕು. ನಾಲ್ಕಾರು ಕುಟುಂಬಗಳು ಕೂಡಿ ಮಾಡುವ ಸಮುಚ್ಚಯ ಕೃಷಿ ಪದ್ಧತಿಯನ್ನು ಜಾರಿಗೊಳಿಸಬೇಕು. ಇನ್ನು ಕೆಲವರು ದೊಡ್ಡ ಜಮೀನ್ದಾರರಲ್ಲಿ ಒಪ್ಪಂದದ ಮೇಲೆ ಭೂಮಿಯನ್ನು ಪಡೆದು ಆರಂಭ ಮಾಡಬಹುದು ಅಥವಾ ಕೃಷಿ ಕಾರ್ಮಿಕರಾಗಿ ದುಡಿಯಬಹುದು. ಪಟ್ಟಣದ ಕಾರ್ಖಾನೆಗಳಲ್ಲಿ ನಿಗದಿತ ಟೈಮಿನಲ್ಲಿ ದುಡಿಯುತ್ತಿದ್ದವರು ಈಗ ಸ್ವಂತ ಹೊಲಗಳಲ್ಲಿ ವೇಳೆಯ ಪರಿವೆ ಇಲ್ಲದೆ ದುಡಿಯಬಹುದು ಮತ್ತು ಆಯಾಸವಾದರೆ ವಿಶ್ರಾಂತಿ ಪಡೆಯಬಹುದು.ಒಟ್ಟಾರೆ ಯಾರ ಹಂಗಿಲ್ಲದೆ ಸ್ವತಂತ್ರನಾಗಿ ತನ್ನ ಅನ್ನವನ್ನು ತಾನೇ ದುಡಿದು ತಿನ್ನುವ ಕಾರ್ಯ ಕೌಶಲವನ್ನು ಬೆಳಸಿಕೊಳ್ಳಬೇಕು.ಇದು ಸ್ವಾತಂತ್ರದೆಡೆಗೆ ನಡೆವ ನಡೆ!
ಹಳ್ಳಿಗಳಲ್ಲಿ ನೆಲೆ ನಿಂತಾಗ ಉದ್ಭವಿಸುವ ಸಾಮಾಜಿಕ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳಬಾರದು. ‘ನಾವೆಲ್ಲಾ ಒಂದೇ ಜಾತಿ ಒಂದೇ ಮತ, ನಾವು ಮನುಜರು’ ಎಂಬ ಧ್ಯೇಯ ವಾಕ್ಯವನ್ನು ಮರೆಯಬಾರದು. ಮದುವೆ, ಹುಟ್ಟುಹಬ್ಬ, ತಿಥಿ ಮುಂತಾದವುಗಳಿಗೆ ದುಂದುವೆಚ್ಚ ಮಾಡಿ ಭಿಕಾರಿಗಳಾಗಬಾರದು. ಕೊರೋನ ಮಾರಿಯನ್ನು ಅಂತರದಲ್ಲಿಟ್ಟು ಸ್ವತಂತ್ರರಾಗಿ ಬದುಕುವುದನ್ನು, ಕಾರ್ಮಿಕರು ಒಗ್ಗಟ್ಟಾಗಿ ದುಡಿದುಣ್ಣುವುದನ್ನು ಕಲಿತು ಸ್ವಾವಲಂಬಿಗಳಾದರೆ ಹಳ್ಳಿಗಳು ಪುನರುಜ್ಜೀವನ ಪಡೆದಂತೆಯೇ. ಡಾ. ರಾಜೇಗೌಡ ಹೊಸಳ್ಳಿಯವರ ಅನುಭವ ಕಥನ ಇದಕ್ಕೆ ಪುಷ್ಟಿ ಕೊಡುತ್ತದೆ: ‘ಜಗದ ಸಂಸಾರವು ಗಾಂಧಿ ದಾರಿ ಬಿಟ್ಟು ನಡೆದ ಪರಂಪರೆಯ ಮಣ್ಣಿನ ದಾರಿಯು ಸವೆದು ಹೋಗಿ ಮಣ್ಣು ಹುಣ್ಣಾದ ಕಥನ. ಗಾಂಧೀಜಿ ಜೀವನದ ರಥಯಾತ್ರೆಯಲ್ಲಿ ಎಂದೂ ದುಃಖಿತರಾದುದಿಲ್ಲ. ದುಃಖವಿದ್ದರೆ ಅದು ಸಂತೋಷದ ದಾರಿಯ ಚಲನೆ. ಆ ಸಂತೋಷದ ಹಾದಿ ಅಹಿಂಸೆ-ಸತ್ಯ ಎಂಬ ಅರಿವಿನದು. ಈ ಅರಿವು ಮಾನವತ್ವದ ಅರಿವು. ಅದಕ್ಕೆ ಏಸುವಿನ, ಬುದ್ಧನ ಹೆಜ್ಜೆಗಳಿವೆ. ಗಾಂಧಿಯು ಅಂತಿಮದಲ್ಲಿ ಶ್ರೀರಾಮನೊಡನೆ ಒಂದಾಗುವಾಗ: ‘ರಾಮರಾಮ’ಎಂದ ಜಗದೇಕರಾಮನ ದನಿಯ ಕಥನಗಳಿವೆ. ಅದೇ ಗಾಂಧಿ ಎಂಬ ಮೌಲ್ಯ’ (ಲೇಖಕರ ಮಾತು. ಗಾಂಧಿ ಸಂಕಥನ, ಗಾಂಧಿಯಾನ ಟ್ರಸ್ಟ್, ಬೆಂ.)
ಪ್ರಸ್ತುತ ಹಳ್ಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಗಾಂಧೀಜಿಯ ಸ್ವಾವಲಂಬನೆಯ ಪಾಠವನ್ನು ಬೋಧಿಸುವ ಕೆಲಸ ಮೊದಲು ಆಗಬೇಕು. ಅವರು ಪ್ರತಿಯೊಂದಕ್ಕೂ ಸರಕಾರ ಅಥವಾ ಶ್ರೀಮಂತರ ಹಂಗಿಗೆ ಕೈ ಚಾಚುವುದನ್ನು ನಿಲ್ಲಿಸುವಂತೆ, ಅವರಲ್ಲಿ ಆತ್ಮಗೌರವ ಹುಟ್ಟುವಂತೆ ಮಾಡಬೇಕು. ಮನುಷ್ಯ ಸತ್ತರೂ ಚಿಂತೆ ಇಲ್ಲ. ಗೌರವ ಘನತೆಯಿಂದ ಬಾಳಬೇಕು. ಅದು ಸ್ವಾವಲಂಬನೆಯ ಪ್ರಥಮ ಪಾಠ.
ಗಾಂಧೀಜಿ ದರ್ಜಿಯಂತೆ ಬಟ್ಟೆ ಕತ್ತರಿಸಿ ಹೊಲಿದುಕೊಂಡರು; ಅಗಸನಂತೆ ಬಟ್ಟೆ ಒಗೆದು ಇಸತ್ತ್ರಿ ಮಾಡಿಕೊಂಡರು; ಕ್ಷೌರಿಕನಂತೆ ತಮ್ಮ ಕ್ಷೌರವನ್ನು ತಾವೇ ಮಾಡಿಕೊಂಡರು; ಸಫಾಯಿ ಕರ್ಮಚಾರಿಯಂತೆ ತಮ್ಮ ಮನೆಯ ಕಕ್ಕಸು ತಾವೇ ಸ್ವಚ್ಛಗೊಳಿಸಿಕೊಂಡರು; ಚಮ್ಮಾರನಂತೆ ನೇಗಿಲ ಗುಳಗಳನ್ನು ತಾನೇ ಕಾಸಿ ಬಡಿದು ಬಗ್ಗಿಸಿ ಜೋಡಿಸಿಕೊಂಡರು; ಕೃಷಿಗೆ ಬೇಕಾದ ಕುಡುಗೋಲು, ಕೊಡಲಿಗಳನ್ನು ತಟ್ಟಿ ಹರಿತಗೊಳಿಸಿಕೊಂಡರು; ಬಾಣಸಿಗನಾಗಿ ತಮ್ಮ ಆಶ್ರಮದಲ್ಲಿ ಅಡಿಗೆ ಮಾಡುತ್ತಿದ್ದರು. ಆಶ್ರಮ ವಾಸಿಗಳಿಗೆ ತಂಡಗಳಲ್ಲಿ ಅಡಿಗೆ ಮಾಡುವ, ಬಡಿಸುವ, ಸಫಾಯಿ ಮಾಡಲು ತರಬೇತಿ ಕೊಟ್ಟರು. ನೇಕಾರನಂತೆ ನೂಲು ತೆಗೆದರು; ಬಟ್ಟೆ ನೆಯ್ದರು; ಶಿಕ್ಷಕನಾಗಿ ಆಶ್ರಮ ಶಾಲೆಯಲ್ಲಿ ಕಲಿಸಿದರು; ವೈದ್ಯನಂತೆ ರೋಗಿಗಳಿಗೆ ಔಷಧೋಪಚಾರ ಮಾಡಿದರು; ಪುರೋಹಿತನಾಗಿ ಆಶ್ರಮ ವಾಸಿ ಹುಡುಗ ಹುಡುಗಿಯರಿಗೆ ಸರಳ ವಿವಾಹ ಮಾಡಿಸಿದರು. ಭಿಕ್ಷುಕನಂತೆ ಪಕ್ಷ ಸಂಘಟನೆಗೆ ಚಂದಾ ಎತ್ತಿದರು; ಪತ್ರಕರ್ತ, ಲೇಖಕನಾಗಿ ಬರೆದರು ಮತ್ತು ಪ್ರಕಟಿಸಿದರು. ಅಗತ್ಯ ಬಿದ್ದಾಗ ಹತ್ತಾರು ಮೈಲಿ ದೂರ ನಡೆಯುತ್ತಿದ್ದರು, ಒಟ್ಟಾರೆ ಗಾಂಧಿ ಒಬ್ಬ ಶ್ರಮಜೀವಿ, ವಿದೇಶಿ ಸಂದರ್ಶಕರೊಂದಿಗೆ ಸಂಭಾಷಣೆ ನಡೆಸುತ್ತಲೇ ಚರಕದಿಂದ ನೂಲು ತೆಗೆಯುತ್ತಿದ್ದರು.
ಗಾಂಧೀಜಿಯವರದು ಸರ್ವೋತೋಮುಖ ವ್ಯಕ್ತಿತ್ವ. ಅವರು ಏಕಕಾಲಕ್ಕೆ ಕೃಷಿಕನೂ, ಉಪದೇಶಕನೂ, ಮಾಂತ್ರಿಕನೂ, ಕರ್ಮಚಾರಿಯೂ, ವ್ಯಾಪಾರಿಯೂ, ರಾಜಕಾರಣಿಯೂ, ಸತ್ಯಶೋಧಕನೂ, ಅಹಿಂಸಾ ಸಾಧಕನೂ, ಸತ್ಯಾಗ್ರಹ ವ್ರತಪಾಲಕನೂ, ಸಂಸಾರಿಯೂ, ಬ್ರಹ್ಮಚಾರಿಯೂ, ಸನಾತನಿಯೂ, ಆಧುನಿಕನೂ ಆಗಿದ್ದರು. ಗಾಂಧಿ ಎಂದರೆ 1869ರಲ್ಲಿ ಹುಟ್ಟಿ 1948ರಲ್ಲಿ ಗೂಡ್ಸೆ ಗುಂಡಿನಿಂದ ಹತ್ಯೆಗೊಳಗಾದ ಒಬ್ಬರಕ್ತ ಮಾಂಸದಿಂದ ಕೂಡಿದ ವ್ಯಕ್ತಿಯಲ್ಲ; ಗಾಂಧಿ ಎಂದರೆ ಶತಶತಮಾನಗಳಲ್ಲಿ ಭಾರತವೆಂಬ ಈ ರಾಷ್ಟ್ರದಲ್ಲಿ ಸಫಾಯಿ ಕರ್ಮಚಾರಿಯಿಂದ ಮೊದಲುಗೊಂಡು ಸಂತ ಫಕೀರನ ತನಕ ಜನಪದರು ಬದುಕಿ ಬಾಳಿ ಕಂಡ ಸತ್ಯದ ಸಾಕ್ಷಾತ್ಕಾರ. ಅದೊಂದು ಬದುಕಿನ ವಿಧಾನ; ವಿದ್ಯಮಾನ. ಅದು ಭಾರತೀಯ ಜನಪದದ ಸಮೂಹ ಪ್ರಜ್ಞೆ.ಅದಕ್ಕೆ ಯುಗಯುಗಗಳ ನೆನಪು ಇದೆ; ಭಾವಿ ಭಾರತ ಹಾಗೂ ಜಾಗತಿಕ ವಿಶ್ವದ ಭವಿಷ್ಯತ್ ದರ್ಶನವಿದೆ; ಅದೊಂದು ಸಾಕ್ಷಿ ಪ್ರಜ್ಞೆ.‘‘ಇವನು ನೆನ್ನೆ ಮೊನ್ನೆಯವನಲ್ಲ, ನಮ್ಮ ಪಿತೃಪಿತಾಮಹ ಅಜ್ಜ; ಶುದ್ಧ ಹಳ್ಳಿ ಗಮಾರ; ಕಸ್ತೂರಿ ಬಾ ಗರಡಿಮನೆಯಲಿ ನುರಿತ ಪೈಲ್ವಾನ.’’ಗಾಂಧಿ ಚಹರೆಯ ಇಂತಹ ಮಂದಿ ಎಲ್ಲ ಕಾಲದಲ್ಲೂ ಎಲ್ಲ ದೇಶದಲ್ಲೂ ಕಾಣ ಸಿಗುವರು. ಇದು ಗಾಂಧಿಯ ಹೆಗ್ಗಳಿಕೆ. ಯುವ ಜನಾಂಗಕ್ಕೆ ಇದು ಆದರ್ಶ ಆಗಬೇಕು.
ಈ ಪರಿಯ ಗಾಂಧಿ ನಾಡಿಗೆ ಮತ್ತೀಗ ಕಾರ್ಪೊರೇಟ್ ಕಂಪೆನಿಗಳು ಏನಾದರೂ ಹೊಕ್ಕವು ಎಂದರೆ, ಆಗ ರೈತರು ತಮ್ಮ ಹಿಡುವಳಿಗಳನ್ನು ಅವರಿಗೆ ಒಪ್ಪಿಸಿ, ಅವರು ಕೊಡುವ ಗುತ್ತಿಗೆ ಹಣವನ್ನು ಪಡೆದು, ಪುನಃ ಅವರಲ್ಲಿಯೇ ಸಂಬಳದ ಆಳಾಗಿ, ಗೇಟ್ ಕೀಪರ್ ಆಗಿ ದುಡಿವ ಪ್ರಮೇಯ ಉದ್ಭವ ಆಗುತ್ತದೆ. ಇದುವರೆಗೆ ಊಳಿಗಮಾನ್ಯ ಒಡೆತನದಲ್ಲಿ ದುಡಿದ ಕೃಷಿ ಕೂಲಿಕಾರರು ಇನ್ನು ಮೇಲೆ ಬಂಡವಾಳಶಾಹಿ ಶ್ರೀಮಂತರ ಆಳಾಗಿ ದುಡಿಯಬೇಕಾಗುತ್ತದೆ. ಮುಖ ಬೇರೆ ಬೇರೆ, ಶ್ರಮದ ಶೋಷಣೆ ಅದೇ. ಎಲ್ಲರೂ ಜಿಗಣಿಗಳೆ ಅವನ ನೆತ್ತರಿಗೆ. ಈಗ ಬೇಕಾದುದು ಸ್ವಾತಂತ್ರ, ಸಮಾನತೆ, ಸೋದರತ್ವ.